
ಇಂದು ಉಡುಪಿ ಜಿಲ್ಲೆಯಲ್ಲಿ 45 ಮಂದಿಗೆ ಕೊರೊನಾ ದೃಢಪಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 947 ಕ್ಕೆ ಏರಿದೆ. ಎಲ್ಲಾ 45 ಸೋಂಕಿತರು ಮುಂಬಯಿಯಿಂದ ಆಗಮಿಸಿದ್ದರು. ಖುಷಿಯ ವಿಚಾರವೆಂದರೆ, ಇಂದು ಒಂದೇ ದಿನದಲ್ಲಿ 215 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ತನ್ಮೂಲಕ ಇಲ್ಲಿಯವರೆಗೆ ಒಟ್ಟು 318 ಮಂದಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯ ಒಟ್ಟು ಕ್ರಿಯಾಶೀಲ ಪ್ರಕರಣಗಳ (active cases) ಸಂಖ್ಯೆ ವ್ಯಾಪಕವಾಗಿ ಇಳಿಮುಖವಾಗಿದ್ದು ಒಟ್ಟು 628 ಕ್ರಿಯಾಶೀಲ ಪ್ರಕರಣಗಳಿವೆ.
ಇಂದು ರಾಜ್ಯದಲ್ಲಿ ಒಟ್ಟು 308 ಮಂದಿಗೆ ಕೊರೊನಾ ಬಲೆ ಬೀಸುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5760 ಕ್ಕೆ ಏರಿದೆ. ಕಲಬುರಗಿಯಲ್ಲಿ 99 ಮಂದಿಗೆ ಸೋಂಕು ತಗುಲುವ ಮೂಲಕ ಇಂದು ರಾಜ್ಯದಲ್ಲಿಯೇ ಅತ್ಯಧಿಕ ಪಾಸಿಟಿವ್ ಕೇಸ್ ಗಳಿರುವ ಜಿಲ್ಲೆಯಾಗಿದೆ. ಯಾದಗಿರಿಯಲ್ಲಿ 66, ಬೀದರ್ 48, ಬೆಂಗಳೂರು ನಗರ 18, ಬಳ್ಳಾರಿ 8, ಗದಗ 6, ಶಿವಮೊಗ್ಗ 4, ಧಾರವಾಡ 4, ಹಾಸನ 3, ದಕ್ಷಿಣ ಕನ್ನಡ 3, ಬಾಗಲಕೋಟೆ 2, ಕೊಪ್ಪಳ ಮತ್ತು ರಾಮನಗರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಉಳಿದ 15 ಜಿಲ್ಲೆಗಳಲ್ಲಿ ಇಂದು ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡುಬರಲಿಲ್ಲ. ಕಾಫೀ ನಾಡು ಚಿಕ್ಕಮಗಳೂರು ಕೊರೊನಾ ಮುಕ್ತ ಜಿಲ್ಲೆಯಾಗಿ ಹೆಗ್ಗಳಿಕೆ ಪಡೆದಿದೆ. ಮೈಸೂರು, ತುಮಕೂರು ಹಾಗೂ ಕೊಡಗು ಅತಿ ಶೀಘ್ರದಲ್ಲಿ ಕೊರೊನಾ ಮುಕ್ತ ಜಿಲ್ಲೆಗಳಾಗಿ ಮೂಡಿ ಬರಲಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ 2519 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.