
ಯಾವುದೇ ಸಂಘ ಸಂಸ್ಥೆಗಳ ಸದಸ್ಯರಲ್ಲಿ ನಮ್ಮದು ಎಂಬ ಅಭಿಮಾನ ಬೆಳೆದಾಗ ಆ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯವಾಗುವುದು. ಕರಾಟೆ ಕಲೆ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಆತ್ಮವಿಶ್ವಾಸವನ್ನು ಸದೃಢಗೊಳಿಸುತ್ತದೆ. ವಿದ್ಯಾರ್ಥಿಗಳು ಸಾಧನೆಯ ಉತ್ತುಂಗಕ್ಕೇರಲು ತಂದೆ ತಾಯಿಯ ಪೋತ್ಸಾಹ, ಮಾರ್ಗದರ್ಶನ ಅತೀ ಅಗತ್ಯ. ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸುವ ಜೊತೆಗೆ ಮುಂದಿನ ಸಾಧನೆಗೆ ಸ್ಫೂರ್ತಿ ನೀಡುತ್ತದೆ. ಕರಾಟೆ ಮುಖ್ಯ ಶಿಕ್ಷಕ ವಾಮನ್ ಪಾಲನ್ ರವರ ಶಿಸ್ತುಬದ್ಧ ತರಬೇತಿಯಿಂದ ಪಳಗಿರುವ ಕರಾಟೆ ಪಟುಗಳ ಸಾಧನೆ ಅಭಿನಂದನಾರ್ಹ ಎಂದು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಬೂಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಉಡುಪಿ ಇದರ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಶ್ರೀ ಭವಾನಿ ಮಂಟಪದಲ್ಲಿ ನಡೆದ ಪ್ರಶಸ್ತಿ ವಿಜೇತ ಕರಾಟೆ ಪಟುಗಳ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬ್ರಹ್ಮಾವರ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ರೆವರೆಂಟ್ ಫಾದರ್ ಜೋಸ್ಲಿ ಡಿ’ಸಿಲ್ವ ಮಾತನಾಡಿ, ಪ್ರತಿಭಾ ವಿಕಸನಕ್ಕೆ ಕರಾಟೆ ಒಂದು ಉತ್ತಮ ಮಾಧ್ಯಮ. ಶಿಕ್ಷಣ ಮತ್ತು ಕರಾಟೆ ಎಂಬುದು, ವೃತ್ತಿ ಮತ್ತು ಪ್ರವೃತ್ತಿ ಇದ್ದಂತೆ. ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಮೂಲಕ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ಈ ನಿಟ್ಟಿನಲ್ಲಿ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ತಂಡದ ಕರಾಟೆ ಪಟುಗಳ ಸಾಧನೆ ಪ್ರಶಂಸನೀಯ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ರಾಜ್ ಕಿರಣ್, ಕಿಶನ್, ಅಮಾನುಲ್ಲಾ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿ ಪಡೆದ ಕಾರ್ತಿಕ್ ಪಾಲನ್ ಮತ್ತು ಆದಿತ್ಯ ಕೆ. ಹಾಗೂ ಕರಾಟೆ ಬ್ಲ್ಯಾಕ್ ಬೆಲ್ಟ್ ಪಡೆದ 23 ಮಂದಿ ಕರಾಟೆ ಪಟುಗಳನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬಿ.ಕೆ.ಎಸ್.ಕೆ. ವತಿಯಿಂದ ನಡೆದ ಕರಾಟೆಯ ವಿವಿಧ ಶ್ರೇಣಿಯ ಕಲರ್ ಬೆಲ್ಟ್ ಪರೀಕ್ಷೆಗಳಲ್ಲಿ ತೇರ್ಗಡೆಯಾದ 60 ಮಂದಿ ಕರಾಟೆ ಪಟುಗಳಿಗೆ ಕಲರ್ ಬೆಲ್ಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾಫಲ್ಯ ಟ್ರಸ್ಟ್(ರಿ.) ಉಡುಪಿ ಪ್ರವರ್ತಕಿ ಕೆ.ನಿರುಪಮಾ ಪ್ರಸಾದ್ ಶೆಟ್ಟಿ, ಶ್ರೀ ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಉಪಾಧ್ಯಕ್ಷೆ ವಿಜಯಾ ಗೋಪಾಲ್ ಬಂಗೇರ, ಚೈತನ್ಯ ಸೋಷಿಯಲ್ ವೆಲ್ಫೇರ್ ಫೌಂಡೇಶನ್(ರಿ.) ಆಡಳಿತ ಟ್ರಸ್ಟಿ ಸುನಿಲ್ ಸಾಲ್ಯಾನ್ ಕಡೆಕಾರು, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಬಿಜೆಪಿ ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಬಿರುವೆರ್ ಕುಡ್ಲ ಉಡುಪಿ ಘಟಕ ಅಧ್ಯಕ್ಷ ಕಿಶೋರ್ ಪೂಜಾರಿ, ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಉಪ್ಪೂರು ಕೋಶಾಧಿಕಾರಿ ಕುಶಲ್ ಜತ್ತನ್,
ಕಿರುತೆರೆ ನಟ ಪ್ರದೀಪ್ ಚಂದ್ರ ಕುತ್ಪಾಡಿ, ಸ್ವಸ್ತಿ ಕ್ರಿಕೆಟರ್ಸ್ ಅಧ್ಯಕ್ಷ ಅಜಿತ್ ಕಪ್ಪೆಟ್ಟು ಉಪಸ್ಥಿತರಿದ್ದರು.
ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಕರಾಟೆ ಮುಖ್ಯ ಶಿಕ್ಷಕ ವಾಮನ್ ಪಾಲನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಕೆ.ಎಸ್.ಕೆ. ಸಂಘಟನಾ ಕಾರ್ಯದರ್ಶಿ ಪವನ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮೇಘ ವಂದಿಸಿದರು.