ರಾಜ್ಯವನ್ನು ಅತಿ ಹೆಚ್ಚು ಸಾಲಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ಧರಾಮಯ್ಯ ನೈತಿಕತೆಯ ಪಾಠ ಅನಗತ್ಯ – ಜಿಲ್ಲಾ ಬಿಜೆಪಿ

ತನ್ನ ಆಡಳಿತಾವಧಿಯಲ್ಲಿ ಸಾಲ ಪಡೆಯುವುದರಲ್ಲಿ ಹಿಂದಿನ ಎಲ್ಲಾ ಮುಖ್ಯ ಮಂತ್ರಿಗಳನ್ನು ಮೀರಿಸಿ ರಾಜ್ಯವನ್ನು ಅತಿ ಹೆಚ್ಚು ಸಾಲದ ಕೂಪಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ದರಾಮಯ್ಯ ನೈತಿಕತೆಯ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಹೇಳಿದೆ.

ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್ ಸದನದಲ್ಲಿ ಪೂರ್ವ ನಿರ್ಧರಿತವಾಗಿದ್ದ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಸಭಾತ್ಯಾಗ ಮಾಡಿದ್ದು, ರಾಜ್ಯ ಬಜೆಟ್ ಮಂಡನೆಯ ಸಂದರ್ಭದಲ್ಲೂ ಕ್ಷುಲ್ಲಕ ಕಾರಣ ನೀಡಿ ಸಭಾತ್ಯಾಗ ಮಾಡಿರುವುದು ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇತರರಿಗೆ ಬೆರಳು ತೋರುವ ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠರ ಸಹಿತ ಕೆಲವು ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದು ಬೇಲ್ ಮೇಲೆ ತಿರುಗಾಡುತ್ತಿರುವುದನ್ನು ಮರೆತಂತಿದೆ.

ಕೊರೋನಾ ಸಂಕಷ್ಟ ಹಾಗೂ ಆರ್ಥಿಕ ಹಿಂಜರಿತದ ನಡುವೆಯೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನತೆಗೆ ಯಾವುದೇ ಹೊಸ ತೆರಿಗೆಯ ಭಾರ ಹೊರಿಸದೆ ಸರ್ವಸ್ಪರ್ಷಿ ಸರ್ವವ್ಯಾಪಿ ಅಭಿವೃದ್ಧಿ ಪರ ಬಜೆಟ್ ಮಂಡಿಸಿರುವುದನ್ನು ಅರಗಿಸಿಕೊಳ್ಳಲಾಗದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹತಾಶ ಮನೋಭಾವದ ವರ್ತನೆ ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್ ಕುಂಜಿಬೆಟ್ಟು ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started