ಉಡುಪಿ: ಕೇರಳ ರಾಜ್ಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಕಮ್ಯೂನಿಸ್ಟ್ ಸರಕಾರದ ಲೋಪದಿಂದಾಗಿ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ವಿಶ್ವವಂಧ್ಯ ಶ್ರೇಷ್ಠ ಸಂತರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಸಿಗದಿರುವುದು ಎಲ್ಲರಿಗೂ ನಿರಾಸೆ ಮೂಡಿಸಿರುವುದು ವಾಸ್ತವ. ಆದರೆ ಸದಾ ಹಿಂದೂ ವಿರೋಧಿ ನೀತಿ ಅನುಸರಿಸುವ ಕಾಂಗ್ರೆಸ್ ಕೇವಲ ರಾಜಕೀಯ ಕಾರಣಕ್ಕಾಗಿ ಈ ವಿಚಾರವನ್ನು ವಿವಾದವನ್ನಾಗಿಸಲು ಹವಣಿಸುತ್ತಿರುವುದು ಶೋಚನೀಯ. ತನ್ನ ಆಡಳಿತಾವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಪಾಲಿಸುತ್ತಿದ್ದ ಹಿಂದೂ ಯುವಕರ ಹತ್ಯೆ ನಡೆದಾಗ ಸುಮ್ಮನಿದ್ದ, ಒಂದೇ ವರ್ಗವನ್ನು ಓಲೈಸುವ ಕಾಂಗ್ರೆಸ್ ನಿಂದ ಹಿಂದುತ್ವದ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ಅಮೃತ ವಾಣಿಯನ್ನು ನಾಡಿಗೆ ನೀಡಿರುವ, ಹಿಂದೂ ಧರ್ಮದ ಪ್ರತಿಪಾದಕರು, ಶಿಕ್ಷಣ ಮತ್ತು ಸಂಘಟನೆಯ ಸಾರವನ್ನು ನಾಡಿಗೆ ಪಸರಿಸುವ ಮೂಲಕ ಮತಾಂತರವನ್ನು ವಿರೋಧಿಸಿ, ಶೋಷಿತ ವರ್ಗದ ದೀನ ದಲಿತೋದ್ಧಾರಕರಾಗಿ, ಅಸಮಾನತೆ ಮೂಡನಂಬಿಕೆ ಅಸ್ಪ್ರಶ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರರೆನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು. ಶ್ರೀ ಗುರುವರ್ಯರ ಗೌರವಾರ್ಥವಾಗಿ ಜ.26ರಂದು ಜಿಲ್ಲೆಯಾದ್ಯಂತ ನಡೆಯುವ ಜಾಥಾವನ್ನು ಬಿಜೆಪಿ ಬೆಂಬಲಿಸಲಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಸುದೀರ್ಘ ಆಡಳಿತಾವಧಿಯಲ್ಲಿ ಒಮ್ಮೆಯಾದರೂ ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ದಿವ್ಯ ಚೇತನಗಳಿಗೆ ಗೌರವ ತಂದು ಕೊಡುವಂತಹ ಸತ್ಕಾರ್ಯವನ್ನು ಮಾಡದೇ ಇದ್ದರೂ ಪ್ರಸಕ್ತ ಪರಿಸ್ಥಿತಿಯ ದುರ್ಲಾಭ ಪಡೆಯಲು ಹರಸಾಹಸ ಪಡುತ್ತಿರುವುದು ವಿಷಾದನೀಯ. ಸರಕಾರವನ್ನು ಟೀಕಿಸಲು ಯಾವುದೇ ಅಸ್ತ್ರವಿಲ್ಲದೇ ಸೊರಗಿರುವ ಕಾಂಗ್ರೆಸ್ ಜನತೆಯ ದಾರಿ ತಪ್ಪಿಸುವ ವಿಫಲ ಯತ್ನದಲ್ಲಿ ನಿರತವಾಗಿರುವುದು ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ ಎಂದು ಬಿಂಬಿಸಲು ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರು ನೀಡಿದ ಬಾಲಿಶ ಹೇಳಿಕೆಯು ಅರ್ಥಹೀನವಾಗಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ಅಮೃತ ವಾಣಿಯನ್ನು ನಾಡಿಗೆ ನೀಡಿರುವ ದೀನ ದಲಿತೋದ್ಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು ರಾಷ್ಟ್ರ ಕಂಡ ಶ್ರೇಷ್ಠ ದಾರ್ಶನಿಕರು. ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಕೇರಳ ಸರಕಾರ ಪ್ರಾಯೋಜಿತ ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ನಿಗದಿತ ತಾಂತ್ರಿಕ ಕಾರಣಗಳಿಂದ ಅವಕಾಶ ಸಿಗದೇ ಇರುವ ಬಗ್ಗೆ ವಸ್ತುಸ್ಥಿತಿಯ ಅರಿವಿದ್ದರೂ ಉದ್ದೇಶಪೂರ್ವಕವಾಗಿ ಕೇರಳದ ಕಮ್ಯೂನಿಸ್ಟ್ ಸರಕಾರ ಅನಗತ್ಯ ವಿವಾದವನ್ನು ಹುಟ್ಟುಹಾಕಿರುವುದು ಮತ್ತು ಈ ಸಂಚಿನಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷವೂ ಭಾಗಿಯಾಗಿರುವುದು ಖೇದಕರ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ದೇಶದೆಲ್ಲೆಡೆ ಜನತೆಯಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್, ಪ್ರಸಕ್ತ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಆಡಳಿತವನ್ನು ವಿರೋಧಿಸಲು ಯಾವುದೇ ಅಜೆಂಡಾ ಇಲ್ಲದೇ ಹತಾಶೆ ಸ್ಥಿತಿಯಲ್ಲಿದ್ದು ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಿ ಸಮಾಜವನ್ನು ಒಡೆಯುವ ಕೀಳು ರಾಜಕಾರಣಕ್ಕೆ ಮುಂದಾಗಿರುವುದು ಖಂಡನೀಯ. ಇದರ ಲಾಭ ಪಡೆಯಲು ಎಸ್ಡಿಪಿಐ ನಂತಹ ಮೂಲಭೂತವಾದಿ ಮತೀಯ ಸಂಘಟನೆಗಳು ಹವಣಿಸುತ್ತಿರುವ ವಿಚಾರ ಅತ್ಯಂತ ಕಳವಳಕಾರಿಯಾಗಿದೆ.
ಮಂಗಳೂರಿನ ಲೇಡಿ ಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವ ಮಂಗಳೂರು ಮಹಾ ನಗರಪಾಲಿಕೆಯ ಪ್ರಸ್ತಾವಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸಿರುವುದನ್ನು ಜನತೆ ಮರೆತಿಲ್ಲ. ಕೇರಳದಲ್ಲಿ ನಡೆದ ಅನೇಕ ಹಿಂದೂಗಳ ಕಗ್ಗೊಲೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಭಗ್ನ ಸಂದರ್ಭದಲ್ಲಿ ಗಾಢ ಮೌನ ವಹಿಸಿದ್ದ, ಹಿಂದೂ ಧರ್ಮ ಮತ್ತು ದೇವರ ಬಗ್ಗೆ ನಂಬಿಕೆ ಇಲ್ಲದ ಕಮ್ಯೂನಿಸ್ಟರು ಇದೀಗ ದಿಡೀರ್ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ವಿಶೇಷ ಭಕ್ತಿ ಭಾವ ಮೂಡಿರುವಂತೆ ನಟಿಸಿ ಸ್ತಬ್ದಚಿತ್ರ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ಅನಗತ್ಯ ಗುಲ್ಲೆಬ್ಬಿಸಿರುವ ಹಿನ್ನೆಲೆಯನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರ್ಥೈಸಿಕೊಂಡಿದ್ದಾರೆ.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕೇರಳದ ಶಿವಗಿರಿಗೆ ಬೇಟಿ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಅನಾವರಣಗೊಳಿಸಿ, ‘ಸಂಘಟನೆಯಿಂದ ಬಲಾಯುತರಾಗಿರಿ; ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ’ ಎಂಬ ಗುರುವರ್ಯರ ಗುರುವಾಣಿಯ ಗುಣಗಾನಗೈದಿರುವುದು ಪ್ರಶಂಸನೀಯ. ಇಂತಹ ಉದಾತ್ತ ಚಿಂತನೆಯ ಸಾಮಾಜಿಕ ಹರಿಕಾರರು, ಶ್ರೇಷ್ಠ ಸಂತರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಸಮಾಜದಲ್ಲಿ ಪ್ರಚಲಿತಗೊಳಿಸಿ ಗೌರವ ತರುವಂತಹ ಸತ್ಕಾರ್ಯವನ್ನು ಕೇರಳದ ಕಮ್ಯೂನಿಸ್ಟ್ ಮತ್ತು ಕಾಂಗ್ರೆಸ್ ಸರಕಾರ ಮಾಡಬೇಕಿದೆ.
ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಗೌರವಾರ್ಥವಾಗಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜ.26ರಂದು ಉಡುಪಿ ಜಿಲ್ಲೆಯಾದ್ಯಂತ ನಡೆಯಲಿರುವ ಜಾಥಾಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ, ಕಾಪು ಭಾಗಗಳಿಂದ ರಾ.ಹೆ. ಮೂಲಕ ಜಾಥಾದೊಂದಿಗೆ ಆಗಮಿಸಿ ಸಂಜೆ ಗಂಟೆ 4.00ಕ್ಕೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸಮಾಪನಗೊಂಡು ನಡೆಯುವ ಸಾಮೂಹಿಕ ಗುರುಪೂಜೆಯಲ್ಲಿ ಭಾಗವಹಿಸುವ ಸಲುವಾಗಿ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತ ಬಂಧುಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತವೃಂದದೊಂದಿಗೆ ಗುರುವರ್ಯರಿಗೆ ಗೌರವ ಸೂಚಿಸುವ ಉದಾತ್ತ ಕಾರ್ಯಕ್ರಮದಲ್ಲಿ ಭಾಗಿಗಳಾಗೋಣ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಉಡುಪಿಯ ಅಲಂಕಾರ್ ಥಿಯೇಟರ್ ಹಿಂಬದಿ ಎ . ಜೆ ಆಲ್ಸೆ ರಸ್ತೆಯಲ್ಲಿ ರುವ ಇಂಚರ ಸರ್ಜಿಕಲ್ ಕ್ಲಿನಿಕ್ ನ ಸಂಚಾಲಕತ್ವದಲ್ಲಿ ಹಾಗೂ ಡಾ ವೈ ಸುದರ್ಶನ ರಾವ್ ನೇತೃತ್ವದ ಶ್ರೀ ಎಲ್ಲೂರು ಲಕ್ಷ್ಮೀ ನಾರಾಯಣ ರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಉಡುಪಿ ಪರಿಸರದಲ್ಲಿನ ತೀರಾ ಅಶಕ್ತ ಹಾಗೂ ಆಸ್ಪತ್ರೆಗೆ ತರಲಾಗದ ಪರಿಸ್ಥಿತಿಯಲ್ಲಿರುವ ರೋಗಿಗಳ ಶುಶ್ರೂಷೆ ಯನ್ನು ಅವರವರ ನಿವಾಸದಲ್ಲಿಯೇ ಒದಗಿಸುವ ಉದ್ದೇಶ ದಿಂದ ಸೇವಾತಂಡವೊಂದನ್ನು ರಚಿಸಲಾಗಿದೆ . ಈ ಸೇವಾತಂಡದಲ್ಲಿ ಓರ್ವ ಪರಿಣಿತ ಶುಶ್ರೂಷಕರು, ( ನರ್ಸ್) ಹಾಗೂ ಓರ್ವ ಸಹಾಯಕರಿದ್ದು ಅವರಿಗೆ ದಿ| ಕಾಪು ಮೋಹನ್ ರಾವ್ ಹಾಗೂ ಅವರ ಪತ್ನಿ ದಿ| ರೋಹಿಣಿ ಬಾಯಿ ಸ್ಮರಣಾರ್ಥ ಒಂದು ಅಂಬ್ಯುಲೆನ್ಸ್ ನ್ನು ಒದಗಿಸಲಾಗಿದೆ. ತಂಡವು ಡಾ ವೈ ಸುದರ್ಶನ ರಾವ್ ರವರ ಮಾರ್ಗದರ್ಶನದಲ್ಲಿ ಗ್ಲುಕೋಸ್ / ಸಲೈನ್ ದ್ರಾವಣ ಅಳವಡಿಕೆ, ಬೆಡ್ ಸೋರ್ (bed sore) ಇತ್ಯಾದಿ ದೇಹದ ವ್ರಣಗಳ ಬ್ಯಾಂಡೇಜ್, ಮೂತ್ರದ ನಳಿಕೆ ಬದಲಾವಣೆ, ಮೂಗಿನ ಮೂಲಕ ಆಹಾರ ಕೊಡುವ ನಳಿಕೆಯ ಬದಲಾವಣೆ, ರಕ್ತ ಪರೀಕ್ಷೆ ಗಾಗಿ ಸಂಗ್ರಹ ಇತ್ಯಾದಿ ಶುಶ್ರೂಷೆಗಳು, ಆಮ್ಲಜನಕದ ಸಿಲಿಂಡರ್ ಅಥವಾ ಆಕ್ಸಿಜನ್ ಕಾಂನ್ಸನ್ ಟ್ರೇಟರ್ ಒದಗಿಸುವುದು, ಆಸ್ಪತ್ರೆಗೆ ರೋಗಿಯನ್ನು ಸಾಗಿಸುವುದು ಇತ್ಯಾದಿ ಸೇವೆಗಳನ್ನು ಮಿತದರದಲ್ಲಿ ಒದಗಿಸಲಿದೆ.
ನಾಗರಿಕರು ಅಗತ್ಯಬಿದ್ದಲ್ಲಿ ಈ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ| ವೈ ಸುದರ್ಶನ ರಾವ್ ತಿಳಿಸಿದ್ದಾರೆ. ಸೇವೆ ಲಬ್ಯವಿರುವ ಸಮಯ ಬೆಳೆಗ್ಗೆ 9 ರಿಂದ ಸಂಜೆ ಏಳುಸಂಪರ್ಕ ಸಂಖ್ಯೆ 7676799859, 8431022052, 9845136322 -ಡಾ. ವೈ ಸುದರ್ಶನ ರಾವ್ , ಇಂಚರ ಸರ್ಜಿಕಲ್ ಕ್ಲಿನಿಕ್ , ಎ.ಜೆ ಆಲ್ಸೆ ರಸ್ತೆ, ಅಲಂಕಾರ್ ಥಿಯೇಟರ್ ಹಿಂಬದಿ , ಪ್ರಸಾದ ನೇತ್ರಾಲಯ ಎದುರು, ಉಡುಪಿ 576101
ಉಡುಪಿ: ಖ್ಯಾತ ವ್ಯಾಯಾಮ ಶಿಕ್ಷಕರಾಗಿದ್ದ ಅಂಬಲಪಾಡಿ ದಿ! ಕುಸ್ತಿ ಐತಪ್ಪ ಸುವರ್ಣರವರಿಂದ ಸ್ಥಾಪಿಸಲ್ಪಟ್ಟಿದ್ದ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ನವೀಕೃತ ಶ್ರೀ ರಾಮಾಂಜನೇಯ ಪೂಜಾ ಮಂದಿರ (ವ್ಯಾಯಾಮ ಶಾಲೆ) ಇದರ ಪುನರ್ ಪ್ರತಿಷ್ಠೆ, ಪ್ರವೇಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜ.17ರಂದು ಕುತ್ಪಾಡಿ ಕಾನಂಗಿ ಬಾಲಕೃಷ್ಣ ಭಟ್ ರವರ ಪೌರೋಹಿತ್ಯದಲ್ಲಿ ಸರಳ ರೀತಿಯಲ್ಲಿ ನೆರವೇರಿತು.
ಶ್ರೀ ನಾರಾಯಣ ಗುರು ಭಜನಾ ಮಂಡಳಿ ಕಿದಿಯೂರು ಇವರಿಂದ ಭಜನಾ ಸೇವೆ ನಡೆಯಿತು. ಮಹಾಪೂಜೆಯ ಬಳಿಕ ಅನ್ನ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದಿ! ಕುಸ್ತಿ ಐತಪ್ಪ ಸುವರ್ಣರವರ ಶಿಷ್ಯ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮಿ! ಇಂಡಿಯಾ ಗೋವರ್ಧನ್ ಎನ್. ಬಂಗೇರ, ರಾಷ್ಟ್ರೀಯ ದೇಹದಾರ್ಢ್ಯ ಪಟು ಮಿ! ಕರ್ನಾಟಕ ನಿತ್ಯಾನಂದ ಕೋಟ್ಯಾನ್, ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಚಂದ್ರಹಾಸ್ ಕಾಂಚನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಮಾಜಿ ಅಧ್ಯಕ್ಷ ಕೆ.ಮಂಜಪ್ಪ ಸುವರ್ಣ, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಶ್ರೀ ರಾಮಾಂಜನೇಯ ಪೂಜಾ ಮಂದಿರ ಹಾಗೂ ವ್ಯಾಯಾಮ ಶಾಲೆಯ ಗೌರವ ಸಂಚಾಲಕ ಶೇಖರ್ ಎ. ಜತ್ತನ್, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿ ಕೇಶವ ಎ. ಜತ್ತನ್, ಸಹ ಸಂಚಾಲಕರಾದ ಮಹೇಂದ್ರ ಕೋಟ್ಯಾನ್, ವಿಠ್ಠಲ ಜತ್ತನ್, ಪೂಜಾ ಮಂದಿರ ನಿರ್ಮಾಣದ ಗುತ್ತಿಗೆದಾರ ಅವಿನಾಶ್ ಪೂಜಾರಿ ಅಂಬಲಪಾಡಿ ಹಾಗೂ ಪರಿಸರದ ಭಕ್ತಾದಿಗಳು ಉಪಸ್ಥಿತರಿದ್ದರು.
ಉಡುಪಿ: ನಿಖರವಾಗಿ ಒಂದು ವರ್ಷದ ಹಿಂದೆ ಭಾರತವು ಲಸಿಕೆ ಹಾಕುವ ಪ್ರಯಾಸಕರ ಅಭಿಯಾನವನ್ನು ಪ್ರಾರಂಭಿಸಿತು. ಭೀಕರ ಕೋವಿಡ್ ಸಾಂಕ್ರಾಮಿಕದ ಮಧ್ಯೆ 135 ಕೋಟಿ ದೇಶವಾಸಿಗಳು ಸಿಲುಕುವ ಅಪಾಯವಿತ್ತು. ಆದರೆ, ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಅಸಾಧ್ಯ ಅಂದುಕೊಂಡಿದ್ದ ಮಹತ್ಕಾರ್ಯವು ಸುಲಭ ಸಾಧ್ಯವಾಯಿತು. ಇಡೀ ಜಗತ್ತು ನಮ್ಮನ್ನು ಮೆಚ್ಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಅವರ ನೇತೃತ್ವದ ಇಡೀ ತಂಡದ ಅದ್ವಿತೀಯ ಸಾಧನೆ ಅಭಿನಂದನೀಯ. ಈ ಬೆಳವಣಿಗೆಯಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಹೊಸ ಭಾಷ್ಯ ಬರೆದಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
ನಮ್ಮ ವಿಜ್ಞಾನಿಗಳ ಏಕೀಕೃತ ಪ್ರಯತ್ನಗಳೊಂದಿಗೆ ವ್ಯಾಕ್ಸಿನೇಷನ್ ಕ್ಷೇತ್ರದಲ್ಲಿ ವಿನೂತನ ಅಧ್ಯಾಯ ಸಾಧ್ಯವಾಯಿತು. ಉದ್ಯಮಿಗಳು, ಮುಂಚೂಣಿ ಕೆಲಸಗಾರರು ಮತ್ತು ಆರೋಗ್ಯ ಕಾರ್ಯಕರ್ತರು ಇದಕ್ಕೆ ಕೈಜೋಡಿಸಿದ್ದಾರೆ.
• ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವದ ಅತಿ ದೊಡ್ಡ ಮತ್ತು ವೇಗದ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಕಾರಣಕರ್ತರು. ಇದಕ್ಕಾಗಿ ಅವರಿಗೆ ಮತ್ತು ಎಲ್ಲಾ ವಿಜ್ಞಾನಿಗಳು, ಉದ್ಯಮಿಗಳು, ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆಗಳು. ಆರೋಗ್ಯ ಕ್ಷೇತ್ರದ ಸಿಬ್ಬಂದಿ, ವೈದ್ಯರು ಸದ್ದಿಲ್ಲದೆ ದುಡಿದಿದ್ದಾರೆ. ಅವರ ಕಠಿಣ ಕೆಲಸ ಕಷ್ಟಕರ ಕೆಲಸಕ್ಕಾಗಿ ವಂದನೆಗಳು. ಇಷ್ಟು ದೊಡ್ಡ ಪ್ರಮಾಣದಲ್ಲಿ ನಾಗರಿಕರಿಗೆ ಉಚಿತ ಲಸಿಕೆಗಳನ್ನು ಒದಗಿಸುವುದು ಒಂದು ದೊಡ್ಡ ಸಾಧನೆಯಾಗಿದೆ. ಸ್ವತಃ. ಇದು ನಮ್ಮ ಪ್ರಧಾನಿಯವರ ಸೇವೆ ಕುರಿತ ಸೂಕ್ಷ್ಮತೆ, ದೂರದೃಷ್ಟಿಯ ಚಿಂತನೆ ಆಲೋಚನೆಗಳು ಮತ್ತು ನಿರ್ಣಯವನ್ನು ಒತ್ತಿಹೇಳುತ್ತದೆ.
ದೇಶದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಅಭಿಯಾನದ ಒಂದು ವರ್ಷ ಪೂರ್ಣಗೊಂಡಿದೆ. ಇದುವರೆಗೆ 157 ಕೋಟಿಗೂ ಹೆಚ್ಚು ಲಸಿಕೆ ಡೋಸ್ಗಳನ್ನು ನೀಡಲಾಗಿದೆ. ಇಂದು ಸುಮಾರು 66 ಕೋಟಿ ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಮೊದಲ ಡೋಸ್ ಅನ್ನು 91 ಕೋಟಿ ಜನರಿಗೆ ನೀಡಲಾಗಿದೆ. ಕೊರೋನಾ ಲಸಿಕೆ ಅಭಿಯಾನವನ್ನು ಕಳೆದ ವರ್ಷ ಪ್ರಾರಂಭಿಸಲಾಯಿತು. ಸರಾಸರಿ 43 ಲಕ್ಷ ಡೋಸ್ಗಳನ್ನು ಪ್ರತಿದಿನ ನಿರ್ವಹಿಸಲಾಗುತ್ತಿದೆ.
76 ಕೋಟಿಗೂ ಹೆಚ್ಚು ಮಹಿಳೆಯರಿಗೆ ಲಸಿಕೆ ಹಾಕಲಾಗಿದೆ. ಕೋವಿಡ್ ಲಸಿಕೆ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲಿ 99 ಕೋಟಿ ಡೋಸ್ ನೀಡಿವೆ. ಇದಲ್ಲದೇ 3.69 ಲಕ್ಷಕ್ಕೂ ಹೆಚ್ಚು ತೃತೀಯ ಲಿಂಗಿಗಳಿಗೆ (ಟ್ರಾನ್ಸ್ಜೆಂಡರ್) ಲಸಿಕೆ ಡೋಸ್ಗಳನ್ನು ನೀಡಲಾಯಿತು. ಇದರೊಂದಿಗೆ, ಮುಂಚೂಣಿಯ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಬೂಸ್ಟರ್ ಡೋಲ್ಗಳನ್ನು ಪಡೆಯುತ್ತಿದ್ದಾರೆ.
ಕೈಯಲ್ಲೊಂದು ಗುರುತು ಚೀಟಿಯೂ ಇಲ್ಲದ ಇಲ್ಲಿಯವರೆಗೆ, 67 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಕೈದಿಗಳಿಗೆ ಲಸಿಕೆ ಹಾಕಲಾಗಿದೆ
• ಇದೇ ಸಮಯದಲ್ಲಿ, ಬುಡಕಟ್ಟು ಜನರಿರುವ ಜಿಲ್ಲೆಗಳಲ್ಲಿ 11 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಈ ನಡುವೆ 40 ಕೋಟಿಗೂ ಹೆಚ್ಚು ಲಸಿಕೆ ಡೋಸ್ಗಳನ್ನು ಮನೆಯ ಸಮೀಪ ಕೋವಿಡ್ ಲಸಿಕೆ ಕೇಂದ್ರಗಳ ಸಮಯದಲ್ಲಿ ನೀಡಲಾಯಿತು.
• 15 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಾರಂಭವಾದ ಕೇವಲ 10 ದಿನಗಳಲ್ಲಿ 30 ಮಿಲಿಯನ್ಗಿಂತ ಹೆಚ್ಚು ಮಕ್ಕಳಿಗೆ ಮೊದಲ ಡೋಸ್ ಗಳನ್ನು ನೀಡಲಾಯಿತು. ಇಲ್ಲಿಯವರೆಗೆ ಮೊದಲ ಡೋಸ್ ಅನ್ನು 15 ರಿಂದ 17 ವರ್ಷ ವಯಸ್ಸಿನ 3.31 ಕೋಟಿ ಮಕ್ಕಳಿಗೆ ನೀಡಲಾಗಿದೆ.
ಸೆಪ್ಟೆಂಬರ್ ತಿಂಗಳು ಅಭಿಯಾನಕ್ಕೆ ಅತ್ಯುತ್ತಮವಾಗಿದ್ದು, ಇದರಲ್ಲಿ ಸುಮಾರು 24 ಕೋಟಿ ಜನರಿಗೆ ಲಸಿಕೆ ಹಾಕಲಾಯಿತು. ಸರಾಸರಿ 68 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಕಳೆದ ವರ್ಷ ಕೇವಲ 36 ದಿನಗಳ ದಾಖಲೆ ಸಮಯದಲ್ಲಿ ಡಿಸೆಂಬರ್ 1 ರಿಂದ ಪ್ರತಿದಿನ 250 ಮಿಲಿಯನ್ ಲಸಿಕೆಗಳನ್ನು ನೀಡಲಾಯಿತು.
ಸೆಪ್ಟೆಂಬರ್ 17 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದಂದು, ಭಾರತವು ಕೋವಿಡ್ ಲಸಿಕೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ದಿನ, ಇಡೀ ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ವ್ಯಾಕ್ಸಿನೇಷನ್ ಭಾರತದಲ್ಲಿ ನಡೆಯಿತು. 2.5 ಕೋಟಿಗೂ ಹೆಚ್ಚು ಲಸಿಕೆಗಳನ್ನು ಒಂದೇ ದಿನದಲ್ಲಿ ನೀಡಲಾಯಿತು. ಒಂದು ದಿನದಲ್ಲಿ ಒಂದು ಕೋಟಿಗೂ ಹೆಚ್ಚು ವ್ಯಾಕ್ಸಿನೇಷನ್ ಹಲವು ಬಾರಿ ನೀಡಲಾಗಿದೆ.
ಕಳೆದ ವರ್ಷ ಅಕ್ಟೋಬರ್ 21ರಂದು ಭಾರತವು 100 ಕೋಟಿ ವ್ಯಾಕ್ಸಿನೇಷನ್ ಗಳನ್ನು ಸಾಧಿಸಿತ್ತು. ಆಗಸ್ಟ್ 7, 2021ರಂದು, ದೇಶದಲ್ಲಿ ವ್ಯಾಕ್ಸಿನೇಷನ್ 50 ಕೋಟಿಗಳನ್ನು ಮುಟ್ಟಿತು. ಅಂದರೆ, ಸುಮಾರು 80 ದಿನಗಳಲ್ಲಿ ದೇಶದ 50 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಅಭಿಯಾನದ ಪ್ರಾರಂಭದ ನಂತರ 278 ದಿನಗಳಲ್ಲಿ 100 ಕೋಟಿ ಡೋಸ್ ಗಳನ್ನು ನೀಡಲಾಯಿತು.
ವಿಶ್ವದ ಅತಿ ದೊಡ್ಡ ವ್ಯಾಕ್ಸಿನೇಷನ್ ಅಭಿಯಾನವು ಜನವರಿ 16, 2021ರಿಂದ ಭಾರತದಲ್ಲಿ ಪ್ರಾರಂಭವಾಗಿದೆ. 9 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಭಾರತವು ವಿಶ್ವ ದರ್ಜೆಯ ಎರಡು ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಅಭಿವೃದ್ಧಿಪಡಿಸಿತು ಮತ್ತು ಭಾರತದ ಬದ್ಧತೆಗೆ ಹೊಸ ಭಾಷ್ಯ ಬರೆಯಿತು.
ಮೋದಿ ಸರ್ಕಾರವು ಲಸಿಕೆಯನ್ನು ತರುವಲ್ಲಿ ಹಾಗೂ ಭಾರತದಲ್ಲಿ ತಯಾರಿಸಿದ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದ ದೇಶದ ಮೊದಲ ಸರ್ಕಾರ ಎಂಬ ಹೆಮ್ಮೆಗೆ ಪಾತ್ರವಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ ಲಸಿಕೆ ದೇಶಕ್ಕೆ ಬರಲು 83 ವರ್ಷ ಬೇಕಾಗಿತ್ತು. 1930ರಲ್ಲಿ ಈ ಲಸಿಕೆ ಜಗತ್ತಿಗೆ ಬಂದಿತು. ಆದರೆ ಅದು ಭಾರತಕ್ಕೆ ಬರಲು 83 ವರ್ಷಗಳನ್ನು ತೆಗೆದುಕೊಂಡಿತು.
ಪೋಲಿಯೋದಂತಹ ಪ್ರಮುಖ ಲಸಿಕೆ ಭಾರತವನ್ನು ತಲುಪಲು 23 ವರ್ಷಗಳನ್ನು ತೆಗೆದುಕೊಂಡಿತ್ತು. ಧನುರ್ವಾಯು ಲಸಿಕೆ ಜಗತ್ತಿಗೆ ಬಂದ 54 ವರ್ಷಗಳ ನಂತರ ಭಾರತಕ್ಕೆ ಲಸಿಕೆ ಬರಲು ಸಾಧ್ಯವಾಯಿತು. ಕೋವಿಡ್ ಲಸಿಕೆಯನ್ನು ಮೊದಲು ಇಂಗ್ಲೆಂಡ್ನಲ್ಲಿ ಡಿಸೆಂಬರ್ 2020ರಲ್ಲಿ ಮತ್ತು ಭಾರತದಲ್ಲಿ ಜನವರಿ 3, 2021ರಲ್ಲಿ ಪರಿಚಯಿಸಲಾಯಿತು.
ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಲಸಿಕೆ ಕಾರ್ಯಪಡೆ’ಯನ್ನು ರಚಿಸಿದ್ದರು. ಕೋವಿಡ್ ಲಸಿಕೆ ಕುರಿತು ಏಪ್ರಿಲ್ 14, 2020, ಏಪ್ರಿಲ್ 30, 2021 ರವರೆಗೆ, 30 ಸಭೆಗಳು ನಡೆದವು. ಲಸಿಕೆ ಕಾರ್ಯಪಡೆ ರಚನೆಯಾದ 15 ದಿನಗಳಲ್ಲಿ ಲಸಿಕೆ ತಯಾರಿಕೆಯಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ.
ನವೆಂಬರ್ 28, 2020ರಂದು, ಗೌರವಾನ್ವಿತ ಪ್ರಧಾನ ಮಂತ್ರಿಗಳು ಭಾರತ್ ಸೀರಮ್ ಇನ್ಸ್ಟಿಟ್ಯೂಟ್ಗೆ ಭೇಟಿ ನೀಡಿದರು. ಬಯೋಟೆಕ್ ಮತ್ತು ಡಸ್ ಬಯೋಟೆಕ್, ಇಲ್ಲಿ ಕೋವಿಡ್ ಲಸಿಕೆ ತಯಾರಿಸಲು ಬೇಕಾದ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.
ಅವರ ಪ್ರಯತ್ನ ಮಾತ್ರವಲ್ಲದೆ ವಿಜ್ಞಾನಿಗಳನ್ನು ಉತ್ತೇಜಿಸಿದರು. ನಾಗರಿಕರಲ್ಲಿ ಆತ್ಮವಿಶ್ವಾಸವನ್ನು ತುಂಬಿದರು. ಪರಿಣಾಮವಾಗಿ ಲಸಿಕೆ ತಯಾರಿಕೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿರುವ ದೇಶವೆನಿಸಿತು. ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಿಂದ ಅಪಪ್ರಚಾರ ನಿರಂತರವಾಗಿತ್ತು. ಲಸಿಕೆ ಅಭಿಯಾನದ ವಿರುದ್ಧ ಹಲವು ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರು ಅನುಮಾನ ವ್ಯಕ್ತಪಡಿಸಲು ಪ್ರಯತ್ನಿಸಿದರು. ಇದು ವ್ಯಾಕ್ಸಿನೇಷನ್ ವೇಗವನ್ನು ನಿಧಾನಗೊಳಿಸಿತು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಏಕಾಏಕಿ ಲಸಿಕಾ ಕೇಂದ್ರದ ಮೇಲೆ ದಾಳಿ ನಡೆಸಲಾರಂಭಿಸಿದರು.
ಜನವರಿ 2, 2021ರಂದು ‘ನಾನು ಲಸಿಕೆ ಪಡೆಯುವುದಿಲ್ಲ’ ಎಂದು ಅಖಿಲೇಶ್ ಯಾದವ್ ಅವರು ಹೇಳಿಕೆ ನೀಡಿದರು. ‘ಬಿಜೆಪಿಯ ಲಸಿಕೆ’ ಇದೆಂದು ಟೀಕಿಸಿದರು. ಸಮಾಜವಾದಿ ಪಕ್ಷ ಸರ್ಕಾರ ರಚನೆಯಾದ ನಂತರ ಎಲ್ಲರಿಗೂ ಉಚಿತ ಲಸಿಕೆಗಳನ್ನು ವಿತರಿಸಲಾಗುವುದು ಎಂದವರು ಈಗ ಲಸಿಕೆ ಲಸಿಕೆ ಎಂದು ಬೊಬ್ಬಿಡುತ್ತಿದ್ದಾರೆ.
• ಕಾಂಗ್ರೆಸ್ನ ಆನಂದ್ ಶರ್ಮಾ ಅವರು ಲಸಿಕೆಗಳನ್ನು ಖರೀದಿಸಲು ರಾಜ್ಯ ಸರ್ಕಾರಗಳಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಬಳಿಕ ಮೋದಿ ಸರ್ಕಾರ ಪ್ರಕ್ರಿಯೆಯನ್ನು ವಿಕೇಂದ್ರಿಕರಣಗೊಳಿಸಿದೆ ಎಂದು ಅವರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು. ಇನ್ನೊಂದು ಕಡೆ ಆನಂದ್ ಶರ್ಮಾ ಅವರು ಲಸಿಕೆಯನ್ನು ಅನುಮೋದಿಸಿದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಡಿಸಿಜಿಐ (ಡ್ರಗ್ ಕಂಟ್ರೋಲರ್ ಜನರಲ್) ಲಸಿಕೆ ಕಾಂಗ್ರೆಸ್ನ ಶಶಿ ತರೂರ್ ಲಸಿಕೆಯ ಪ್ರಯೋಜನ ಹಾಗೂ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದರು. ಲಸಿಕೆಗಳು ಅಪಕ್ವವಾಗಿವೆ ಮತ್ತು ಭಾರತೀಯರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದರು.
ಲಸಿಕೆ ಸಂಗ್ರಹಣೆ ಮತ್ತು ವಿತರಣೆಗಾಗಿ ರಾಜ್ಯಗಳಿಗೆ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಮೊದಲು ಪ್ರಧಾನಿಗೆ ಪತ್ರ ಬರೆದು ಆಗ್ರಹಿಸಿದರು. ನಂತರ ಒಂದು ತಿಂಗಳಲ್ಲಿ ಅವರು ವಿರುದ್ಧಾರ್ಥದ ಮಾತನಾಡಿದರು.
ಪಿ.ಚಿದಂಬರಂ ಅವರಂತಹ ವಿರೋಧ ಪಕ್ಷಗಳ ಅನೇಕ ನಾಯಕರು ಉದ್ದೇಶಪೂರ್ವಕವಾಗಿ ಎಲ್ಲರಿಗೂ ಲಸಿಕೆಯನ್ನು ನೀಡದ ಕರಿತು ಟೀಕಿಸಿದರು. ಎಲ್ಲರಿಗೂ ಲಸಿಕೆ ಸಿಗಲಾರಂಭಿಸಿದಾಗ, ಅವರು ಲಸಿಕೆ ಕೊರತೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಶಶಿ ತರೂರ್ ಈ ಹಿಂದೆ ಲಸಿಕೆ ಸ್ನೇಹವನ್ನು ಟೀಕಿಸಿ ನಂತರ ಟ್ವಿಟ್ ಮಾಡಿದ್ದರು. ಲಸಿಕೆ ರಫ್ತುಗಳನ್ನು ನಿಷೇಧಿಸುವ ಭಾರತದ ನಿರ್ಧಾರವನ್ನು ಖಂಡಿಸಿದ್ದರು.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಲಸಿಕೆಯ ಅಡ್ಡ ಪರಿಣಾಮಗಳನ್ನು ಪ್ರಶ್ನಿಸುತ್ತಿದ್ದಾರೆ. ಕೋವಿಡ್ ಲಸಿಕೆ ಮತ್ತು ಲಸಿಕೆಯ ಪರಿಣಾಮಕಾರಿತ್ವವನ್ನು ತೆಗೆದುಕೊಳ್ಳಬೇಕೆಂಬ ವಾದವನ್ನು ಎನ್ ಸಿ ಪಿ ವಕ್ತಾರ ನವಾಬ್ ಮುಂದಿಟ್ಟಿದ್ದರು.
ಲಸಿಕೆ ಪರೀಕ್ಷೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಶೀದ್ ಕೂಡ ಲಸಿಕೆ ಪಿತೂರಿ ಎಂದು ಹೇಳಿದರು. ವಿರೋಧ ಪಕ್ಷದ ನಾಯಕರ ವಿರುದ್ಧ ಮೋದಿ ಸರ್ಕಾರ ಪಿತೂರಿ ಮಾಡುತ್ತಿದೆ ಎಂದು ಎಡರಂಗದ ಸೀತಾರಾಂ ಯೆಚೂರಿ ಧ್ವನಿ ಎತ್ತಿದ್ದರೆ, ಸಮಾಜವಾದಿ ಪಕ್ಷದ ಮತ್ತೊಬ್ಬ ನಾಯಕ ವ್ಯಾಕ್ಸಿನೇಷನ್ ಸಂತಾನಶಕ್ತಿ ಹರಣಕ್ಕೆ ಕಾರಣ ಎಂದಿದ್ದರು.
ಛತ್ತೀಸ್ಗಢದ ಕಾಂಗ್ರೆಸ್ ಸರ್ಕಾರ ಲಸಿಕೆಗಳ ಪೂರೈಕೆಯನ್ನು ನಿಲ್ಲಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿತ್ತು.
ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಕೂಡ ಲಸಿಕೆಗಳ ಬಳಕೆಯನ್ನು ನಿಷೇಧಿಸಿತ್ತು. ಎಡರಂಗದ ಕೇರಳ ಸರ್ಕಾರವು ಕೋವ್ಯಾಕ್ಸಿನ್ ಬದಲು ನಾವು ಕೋವೀಲೆ ಆದ್ಯತೆ ನೀಡುತ್ತೇವೆ ಎಂದಿತ್ತು.
ಜಾರ್ಖಂಡ್ ಆರೋಗ್ಯ ಸಚಿವರು ಅಭಿಯಾನದ ಆರಂಭದ ಮರುದಿನವೇ ಈ ದೇಶದ ಜನರನ್ನು ಇಲಿಗಳಂತೆ ಪ್ರಯೋಗಕ್ಕೆ ಬಳಸುತ್ತಿದ್ದಾರೆ ಎಂದಿದ್ದರು. ಆರಂಭಿಕ ವ್ಯಾಕ್ಸಿನೇಷನ್ ವೇಳೆ ಅವರು ಪ್ರಶ್ನೆಗಳನ್ನು ಎತ್ತಿದರು.
ಮಾರ್ಚ್ 17ರಂದು ಛತ್ತೀಸ್ಗಡ ಮತ್ತು ಬಂಗಾಳದ ಮುಖ್ಯಮಂತ್ರಿಗಳು ಲಸಿಕೆ ಅಭಿಯಾನದ ಪ್ರಮುಖ ಸಭೆಯಲ್ಲಿ ಭಾಗವಹಿಸಲಿಲ್ಲ. ಅವರು ಅಂತಹ ಅನೇಕ ಸಭೆಗೆ ಬರಲೇ ಇಲ್ಲ.
ರಾಹುಲ್ ಗಾಂಧಿಯವರು ಮೇಡ್ ಅನ್ ಇಂಡಿಯಾ ಲಸಿಕೆ ತುಂಬಾ ವಿಳಂಬವಿದೆ ಎಂದು ಸುಳ್ಳುಗಳನ್ನು ಹಬ್ಬಿಸುತ್ತಲೇ ಇದ್ದರು. ಕೇಂದ್ರ ಸರಕಾರ ಉಚಿತ ಲಸಿಕೆ ನೀಡಲಿ ಎಂದು ಒತ್ತಾಯಿಸಿದ್ದರು.
• ಡಿಎಂಕೆ ನಾಯಕರು ಕೂಡ ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ನಾಯಕರು ನಾನು ಒಬ್ಬ ಕಾಂಗ್ರೆಸ್, ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಇದನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ದೂರಿದ್ದರು.
• ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ನಾಯಕರು ಲಸಿಕೆ ಸಂಗ್ರಹಣೆ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸಲು ಒತ್ತಾಯಿಸಿದರು. ಅರವಿಂದ್ ಕೇಜ್ರಿವಾಲ್, ಛತ್ತೀಸ್ಗಢ ಕಾಂಗ್ರೆಸ್ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರವು ಇದರಲ್ಲಿ ಕೈಜೋಡಿಸಿತು. ಮಮತಾ ಬ್ಯಾನರ್ಜಿ ರಾಜ್ಯಗಳು ನೇರವಾಗಿ ಲಸಿಕೆ ಖರೀದಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕರು ಅಭಿಷೇಕ್ ಮನು ಸಿಂಘಿ, ಶಶಿ ತರೂರ್, ಡಿ ಕೆ ಶಿವಕುಮಾರ್ ಮುಂತಾದವರು ಇದನ್ನು ಪ್ರತಿಪಾದಿಸಿದರು.
• ಭಾರತ ಸರ್ಕಾರವು ಸಂಗ್ರಹಣೆಯ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಿದಾಗ ಲಸಿಕೆಯನ್ನು ಕೇಂದ್ರ ಖರೀದಿಸಿ ರಾಜ್ಯಗಳಿಗೆ ನೀಡಬೇಕು ಎಂದು ಕಾಂಗ್ರೆಸ್, ಎಎಪಿ ಮತ್ತು ತೃಣಮೂಲ ಕಾಂಗ್ರೆಸ್ ಆಡಳಿತದ ರಾಜ್ಯಗಳು ಒತ್ತಾಯ ಹೇರಿದವು.
*ಲಸಿಕೆ ವ್ಯರ್ಥ*:
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಮತ್ತು ರಾಹುಲ್ ಗಾಂಧಿ ಲಸಿಕೆ ಕೊರತೆ ಬಗ್ಗೆ ಪ್ರತಿದಿನ ಮೊಸಳೆ ಕಣ್ಣೀರು ಸುರಿಸುತ್ತಿರುವಾಗ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿನಿತ್ಯ ಕೊರೋನಾ ಲಸಿಕೆಗಳು ವ್ಯರ್ಥವಾಗುತ್ತಿತ್ತು.
• ಜಾರ್ಖಂಡ್ 37.3%, ಛತ್ತೀಸ್ಗಡದಲ್ಲಿ 30.2% ಮತ್ತು ತಮಿಳುನಾಡಿನಲ್ಲಿ 15.5% ಲಸಿಕೆ ವ್ಯರ್ಥವಾಗಿದೆ. ಮಾಧ್ಯಮ ವರದಿಗಳನ್ನು ಆಧರಿಸಿದ ಅಂದಾಜಿನ ಪ್ರಕಾರ, ರಾಜಸ್ಥಾನದಲ್ಲಿ 25% ರಷ್ಟು ಲಸಿಕೆಗಳು ವ್ಯರ್ಥವಾಯಿತು. ಪಂಜಾಬ್ನಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಉಚಿತ ಲಸಿಕೆಯನ್ನು ಹೆಚ್ಚು ಹಣ ಪಡೆದು ಆಡಳಿತದ ಅನುಮತಿಯಡಿ ಬಳಸುತ್ತಿದ್ದರು ಎಂಬುದೂ ಪತ್ತೆಯಾಗಿದೆ.
• ಕೆಲವೇ ದಿನಗಳ ಹಿಂದೆ, ರಾಜಸ್ಥಾನದಲ್ಲಿ 11.5 ಲಕ್ಷ ಡೋಸ್ ಕರೋನಾ ಲಸಿಕೆ ವ್ಯರ್ಥವಾಗಿದೆ ಎಂದು ಪ್ರತಿಷ್ಠಿತ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮತ್ತೊಂದು ಪ್ರತಿಷ್ಠಿತ ದಿನಪತ್ರಿಕೆ ಕಸದ ತೊಟ್ಟಿಗಳಲ್ಲಿ 2,500ಕ್ಕೂ ಹೆಚ್ಚು ಡೋಸ್ ಲಸಿಕೆ ಕಂಡು ಬಂದಿದೆ ಎಂದು ಬಹಿರಂಗಪಡಿಸಿತ್ತು. ರಾಜ್ಯದ 10 ಜಿಲ್ಲೆಗಳಲ್ಲಿ 35 ಲಸಿಕಾ ಕೇಂದ್ರಗಳಲ್ಲಿ ಆಶ್ಚರ್ಯಕರವಾಗಿ ಹೆಚ್ಚಿನ ಬಾಟಲುಗಳು ಸಿಕ್ಕಿದ್ದು, ಕೆಲವು ಬಾಟಲುಗಳನ್ನು ನೆಲದಲ್ಲಿ ಹೂಳಲಾಯಿತು.
*ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾರವರ ಟ್ವೀಟ್* :
1. ನಿಖರವಾಗಿ ಒಂದು ವರ್ಷದ ಹಿಂದೆ, ಕೋವಿಡ್ ಸಾಂಕ್ರಾಮಿಕದ ಹೆಚ್ಚಳದ ನಡುವೆ 135 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕುವ ಪ್ರಯಾಸಕರ ಪ್ರಯಾಣವನ್ನು ಭಾರತವು ಪ್ರಾರಂಭಿಸಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಸಾಧ್ಯವಾದುದು ಸಾಧ್ಯವಾಗಿದ್ದು, ಜಗತ್ತು ಎದ್ದು ನಿಂತು ನಮ್ಮನ್ನು ಶ್ಲಾಘಿಸುವಂತಾಗಿದೆ.
2. ಭಾರತವು ಇದುವರೆಗೆ 156 ಕೋಟಿ ಲಸಿಕೆ ಡೋಸ್ಗಳನ್ನು ನೀಡಿದೆ, ಅದರಲ್ಲಿ 99 ಕೋಟಿ ಡೋಸ್ಗಳನ್ನು ಗ್ರಾಮೀಣ ಭಾರತದಲ್ಲಿ ನೀಡಲಾಗಿದೆ. ನಮ್ಮ ವಯಸ್ಕರ ಜನಸಂಖ್ಯೆಯ 70% ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದೆ. ಕಾರ್ಯಕ್ರಮ ಪ್ರಾರಂಭವಾದಾಗಿನಿಂದ 3 ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮೊದಲ ಡೋಸ್ ಪಡೆದಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟವನ್ನು ಭಾರತ ಮುನ್ನಡೆಸಿದೆ.
3. ಕಳೆದ ವರ್ಷದಲ್ಲಿ, ಕೋವಿಡ್-19 ವಿರುದ್ಧದ ಈ ಹೋರಾಟದಲ್ಲಿ ಭಾರತ ಒಗ್ಗೂಡಿ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಹಿತ ಅವರ ನೇತೃತ್ವದ ಲಕ್ಷಾಂತರ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, ವೈದ್ಯರು ಮತ್ತು ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಬೇಕು. ಎಲ್ಲರ ಸಂಘಟಿತ ಪ್ರಯತ್ನಗಳಿಂದಾಗಿ ನಮ್ಮ ದೇಶದಲ್ಲಿ ಬೃಹತ್ ವ್ಯಾಕ್ಸಿನೇಷನ್ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಉ.ಪ್ರ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇಂದು ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಕ್ಪುರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದರೆ, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸಿರಾತು ಕ್ಷೇತ್ರದಿಂದ ಅಭ್ಯರ್ಥಿಯಾಗಲಿದ್ದಾರೆ.
ಯೋಗಿ ಆದಿತ್ಯನಾಥ್ ಈ ಹಿಂದೆ ಗೋರಕ್ಪುರ್ ಲೋಕಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದು, ಬಳಿಕ ಶಾಸಕರಾಗಿ ಆಯ್ಕೆಯಾಗುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು.
ಉಡುಪಿ: ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಕೂಡಾ ವಿವಿಧ ವಿನೂತನ ಜಾಲಗಳ ಮೂಲಕ ಜನರ ಹಾಗೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ಉಡುಪಿ ಜಿಲ್ಲೆಯಾದ್ಯಂತ ಗೋಕಳ್ಳತನ, ಅಕ್ರಮ ಗೋಸಾಗಾಟ, ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
ಇದೇ ರೀತಿ ಆಕ್ರಮ ಗೋಕಳವು, ಗೋಹತ್ಯೆ ಮುಂದುವರಿದರೆ ಸಮಾಜದಲ್ಲಿ ಶಾಂತಿ ಭಂಗವಾಗುವ ಎಲ್ಲಾ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಲ್ಲಾ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸುವ ಮೂಲಕ ಶಂಕಿತರ ಪೂರ್ವಾಪರ ದಾಖಲೆಗಳನ್ನು ಪರಿಶೀಲಿಸಿ ಗೋಕಳ್ಳತನ ಮಾಡುವ ಕಟುಕರನ್ನು ಗಡಿಪಾರು ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಉಡುಪಿ: ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಯ ಅನುಷ್ಠಾನದ ಬಗ್ಗೆ ಯಾವುದೇ ಆಸಕ್ತಿ ವಹಿಸದೇ ವೃಥಾ ಕಾಲಹರಣ ಮಾಡಿರುವ ಕಾಂಗ್ರೆಸ್ ಕೇವಲ ತನ್ನ ವೈಫಲ್ಯವನ್ನು ಮರೆಮಾಚಲು ನಡೆಸಿರುವುದು ಮಾತ್ರ ಸುಳ್ಳಿನ ಜಾತ್ರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೃಷ್ಣೆಯ ವಿಚಾರದಲ್ಲಿ ನಾಟಕೀಯ ಪಾದಯಾತ್ರೆ ನಡೆಸಿ ಉತ್ತರ ಕರ್ನಾಟಕದ ಜನತೆಗೆ ಮಂಕು ಬೂದಿ ಎರಚಿದನ್ನು ರಾಜ್ಯದ ಜನತೆ ಮರೆತಿಲ್ಲ. ಇದರ ಮುಂದುವರಿದ ಭಾಗವಾಗಿ ಇದೀಗ ಕಾವೇರಿ ನೀರಿಗೆ ಮೇಕೆದಾಟು ಹೆಸರಲ್ಲಿ ಕಾಂಗ್ರೆಸ್ ನಡೆಸಿರುವುದು ಸ್ವಯಂ ಹಿತಾಸಕ್ತಿಯ ರಾಜಕೀಯ ಮೇಲಾಟವಲ್ಲದೆ ಮತ್ತೇನಿಲ್ಲ.
ಕೋವಿಡ್ ಸೋಂಕಿನ ತೀವ್ರತೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಪಾಡದೇ ಜನತೆಯ ಆರೋಗ್ಯದ ಹಿತವನ್ನು ನಿರ್ಲಕ್ಷಿಸಿ ಕೇವಲ ಮೋಜು ಮಸ್ತಿಯ ನಡುವೆ ತೂರಾಡುವಿಕೆಯೊಂದಿಗೆ ನಡೆದ ಸುಳ್ಳಿನ ಜಾತ್ರೆಯ ಚಿತ್ರಣದಿಂದ ರಾಜ್ಯದ ಜನತೆಗೆ ದೊರೆತಿರುವುದು ಪುಕ್ಕಟೆ ಮನೋರಂಜನೆ ಮಾತ್ರ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ತೀವ್ರತೆಯ ಸನ್ನಿವೇಶದಲ್ಲಿ ಕಾಂಗ್ರೆಸ್ ನಾಯಕರ ಸ್ವಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ರಾಜಕೀಯ ಉದ್ದೇಶದ ಪಾದಯಾತ್ರೆಗೆ ಉಚ್ಛ ನ್ಯಾಯಾಲಯ ಛೀಮಾರಿ ಹಾಕಿರುವ ಬೆನ್ನಲ್ಲೇ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಪಾದಯಾತ್ರೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕಾನೂನಾತ್ಮಕ ನಿರ್ದೇಶನವನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೊನೆಗೂ ಪಾದಯಾತ್ರೆ ರದ್ದಾಗಿದೆ.
ಕಾಂಗ್ರೆಸ್ ಕೇವಲ ಶಂಕುಸ್ಥಾಪನೆಗೆ ಸೀಮಿತಗೊಳಿಸಿದ್ದ ಅನೇಕ ಯೋಜನೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅನುಷ್ಠಾನಗೊಳಿಸುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಜನಪರ ಆಡಳಿತವನ್ನು ನೀಡುತ್ತಿರುವ ಬಿಜೆಪಿ ಮಾತ್ರ ಮೇಕೆದಾಟು ಯೋಜನೆಯನ್ನು ಸಂಪೂರ್ಣಗೊಳಿಸುವ ಬದ್ಧತೆ ಮತ್ತು ಇಚ್ಛಾ ಶಕ್ತಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯದ ಪ್ರಕ್ರಿಯೆ ಹಾಗೂ ಇನ್ನಿತರ ಅಡೆತಡೆಗಳ ನಿವಾರಣೆಯ ಬಳಿಕ ಸದ್ರಿ ಯೋಜನೆಯ ಅನುಷ್ಠಾನವು ವೇಗ ಪಡೆಯಲಿರುವುದು ನಿಶ್ಚಿತ ಎಂದು ಕುಯಿಲಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸದ ಕಾಂಗ್ರೆಸ್ ಸುಳ್ಳಿನ ಸರಮಾಲೆಯೊಂದಿಗೆ ನಡೆಸಿದ ಪಾದಯಾತ್ರೆಯು ತನ್ನ ತಪ್ಪನ್ನು ಮುಚ್ಚಿಡಲು ತಾನೇ ನಡೆಸಿದ ನಾಟಕ ಎಂಬುದು ಈಗ ಜಗಜ್ಜಾಹೀರಾಗಿದೆ. ರಾಜ್ಯ ಸರಕಾರದ ಕಾನೂನು ನಿಯಮಾವಳಿ, ಮುಖ್ಯ ಮಂತ್ರಿ ಮತ್ತು ಸಚಿವರ ಮನವಿಯನ್ನು ದಿಕ್ಕರಿಸಿ, ಸಂವಿಧಾನಕ್ಕೆ ಅಗೌರವ ತೋರುವ ರೀತಿಯಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಹಲವಾರು ಕಾಂಗ್ರೆಸ್ ಮುಖಂಡರು ಮತ್ತು ಇತರರಿಗೆ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಸೋಂಕು ತಗಲಿದೆ ಎನ್ನಲಾಗಿದ್ದು, ಇದು ಕೊರೋನಾ ಪಸರಿಸುವ ಜಾತ್ರೆಯಾಗಿ ಪರಿಣಮಿಸಿರುವುದು ಶೋಚನೀಯ. ಮೊಂಡು ಹಠವನ್ನು ಸಡಿಲಿಸಿ, ವಿವಿಧ ಕಾರಣಗಳನ್ನು ನೀಡಿ ಪಾದಯಾತ್ರೆಯನ್ನು ರದ್ದುಗೊಳಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ಮಾತ್ರ ಮುಖಭಂಗ ಅನುಭವಿಸಿದ್ದು ವಾಸ್ತವವಾದರೂ, ಈ ಪ್ರಕ್ರಿಯೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಮೇಕೆದಾಟು ಯೋಜನೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿರುವ ತಮಿಳುನಾಡಿನ ಕಾಂಗ್ರೆಸ್ ಬೆಂಬಲಿತ ಸ್ಟಾಲಿನ್ ಸರಕಾರದ ಮನ ಒಲಿಸುವ ಗೋಜಿಗೆ ಹೋಗದೇ ಸುಮ್ಮನಿದ್ದ ಕಾಂಗ್ರೆಸ್ ರಾಜ್ಯದಲ್ಲಿ ದ್ವಂದ್ವ ನೀತಿಯನ್ನು ಅನುಸರಿಸಿ ಕೇವಲ ರಾಜಕೀಯ ಅಸ್ತಿತ್ವಕ್ಕಾಗಿಯೇ ಈ ಪಾದಯಾತ್ರೆ ಪ್ರಹಸನವನ್ನು ನಡೆಸಿರುವುದು ಎಂಬ ಸತ್ಯವನ್ನು ಅರಿಯದಷ್ಟು ರಾಜ್ಯದ ಜನತೆ ಮೂರ್ಖರಲ್ಲ. ಮೇಕೆದಾಟು ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಅನಗತ್ಯ ಗೊಂದಲ ಸೃಷ್ಟಿಸಿ ಅರಾಜಕತೆ ಉಂಟುಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ಸೂಕ್ತ ಸಂದರ್ಭದಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಪ್ರಸಕ್ತ ಬಿಜೆಪಿ ಜಿಲ್ಲಾ ತಂಡವು ಜ.27ರಂದು ಯಶಸ್ವೀ ಎರಡು ವರ್ಷಗಳನ್ನು ಪೂರೈಸಲಿದೆ. ಈ ಸಂದರ್ಭದಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ಗಮನಲ್ಲಿಟ್ಟುಕೊಂಡು ಎಲ್ಲಾ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಪಕ್ಷ ಸಂಘಟನೆಗೆ ಹೆಚ್ಚಿನ ವೇಗವನ್ನು ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಮಹಾ ಶಕ್ತಿಕೇಂದ್ರ ಕೇಂದ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗುವುದು. ಪಕ್ಷದ ಸಂಘಟನಾ ಸಾಮರ್ಥ್ಯದಿಂದ ಕಾಪು ಪುರಸಭೆಯಲ್ಲಿ ಗೆಲುವು ಸಾಧಿಸಲಾಗಿದೆ. ಜ.24, 25, 26ರಂದು ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಜಿಲ್ಲಾ ಪದಾಧಿಕಾರಿಗಳ ಮತ್ತು ಪ್ರಮುಖ ಅಪೇಕ್ಷಿತರ ಪ್ರಶಿಕ್ಷಣ ವರ್ಗ ನಡೆಯಲಿದೆ ಎಂದರು.
ಮಹಾ ಶಕ್ತಿಕೇಂದ್ರಗಳಲ್ಲಿ ವಿಸ್ತಾರಕರಾಗಿ ಸೇವೆ ಸಲ್ಲಿಸುವ ಜೊತೆಗೆ ಬೂತ್ ಸಶಕ್ತೀಕರಣ, ಬೂತ್ ಅಧ್ಯಕ್ಷರ ನಾಮ ಫಲಕ ವಿತರಣೆ ಮುಂತಾದ ಪ್ರಮುಖ ಕೆಲಸ ಕಾರ್ಯಗಳಿಗೆ ಆದ್ಯತೆಯನ್ನು ನೀಡಿ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಸ್ಪಷ್ಟ ಗುರಿಯೊಂದಿಗೆ ಪಕ್ಷ ಸಂಘಟನೆಯನ್ನು ಸದೃಢಗೊಳಿಸುವಲ್ಲಿ ಎಲ್ಲರೂ ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಬಿಜೆಪಿ ನೀಡುವ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಕಾರ್ಯಕ್ರಮ ಮನ್ ಕೀ ಬಾತ್ ವೀಕ್ಷಣೆಯನ್ನು ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಆಯೋಜಿಸಿ ಗರಿಷ್ಠ ವೀಕ್ಷಣೆಗೆ ಅವಕಾಶ ಮಾಡಬೇಕು. ಬೂತ್ ಮಟ್ಟದಲ್ಲಿ ಪೇಜ್ ಪ್ರಮುಖ್ ಸಮಿತಿಯನ್ನು ರಚಿಸುವ ಜೊತೆಗೆ ಬೂತ್, ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರಗಳನ್ನು ಇನ್ನಷ್ಟು ಸಕ್ರಿಯಗೊಳಿಸಬೇಕು. ಸದೃಢ ಪಕ್ಷ ಸಂಘಟನೆಯ ಮೂಲಕ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ವಿಜಯ ಯಾತ್ರೆಯನ್ನು ಮುಂದುವರಿಸಲು ಸರ್ವ ಸನ್ನದ್ಧರಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಸಂಘಟನಾತ್ಮಕ ವಿಚಾರಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಎಮ್. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಹಾಗೂ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಉಡುಪಿ: ರಾಜ್ಯ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ನಯನಾ ಗಣೇಶ್ ಉದ್ಯಾವರ ಇವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯಲ್ಲಿ ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ನಯನಾ ಗಣೇಶ್ ರವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ವಿವಿಧ ಸ್ತರದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ ರಾಜ್ಯ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಂತಸ ತಂದಿದೆ. ರಾಜ್ಯ ತಂಡದಲ್ಲಿ ಉಡುಪಿ ಜಿಲ್ಲೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿರುವ ರಾಜ್ಯ ಬಿಜೆಪಿಗೆ ಅಭಿನಂದನೆಗಳು. ಉಡುಪಿ ಜಿಲ್ಲೆಗೆ ರಾಜ್ಯ ಉಪಾಧ್ಯಕ್ಷರ ಸ್ಥಾನ ದೊರೆತಿರುವುದು ಹೆಮ್ಮೆ ತಂದಿದೆ. ನಯನಾ ಗಣೇಶ್ ರವರು ರಾಜ್ಯ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುವಂತಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನವನ್ನು ಸ್ವೀಕರಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಮಾತನಾಡಿ ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತೆಗೆ ರಾಜ್ಯ ಉಪಾಧ್ಯಕ್ಷೆಯ ಸ್ಥಾನಮಾನ ದೊರೆತಿರುವುದು ಪಕ್ಷದ ಕಾರ್ಯಕರ್ತರಿಗೆ ಸಂದ ಗೌರವ. ಇಂತಹ ಮಾದರಿ ಕ್ರಮಗಳಿಂದ ಬಿಜೆಪಿ ‘ಪಾರ್ಟಿ ವಿದ್ ಎ ಡಿಫರೆನ್ಸ್’ ಎಂದು ಕರೆಲ್ಪಡುತ್ತದೆ. ಸದವಕಾಶವನ್ನು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಂಘಟನೆಯ ಪ್ರಮುಖರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಅವಕಾಶವನ್ನು ಸದುಪಯೋಗಗೊಳಿಸಿ ಪಕ್ಷ ಸಂಘಟನೆಗೆ ಒತ್ತು ನೀಡಿ ಬದ್ಧತೆಯಿಂದ ಕಾರ್ಯ ನಿರ್ವಹಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಎಮ್. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಹಾಗೂ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.