ಉಡುಪಿ: ಪಕ್ಷದ ವಿಚಾರಧಾರೆಗಳನ್ನು ನೆನಪಿಸಿಕೊಳ್ಳುವ ಜೊತೆಗೆ ಹೊಸ ಆಯಾಮಗಳ ಬಗ್ಗೆ ಪಡೆಯುವ ಶಿಕ್ಷಣವೇ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗದ ಪ್ರಮುಖ ಉದ್ದೇಶವಾಗಿದೆ. ಪಕ್ಷದ ವಿಶಿಷ್ಟ ಕಾರ್ಯ ಪದ್ಧತಿ, ಕಾರ್ಯಕರ್ತರ ಶ್ರಮ ಬಿಜೆಪಿಯನ್ನು ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವನ್ನಾಗಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ನೇತೃತ್ವದಲ್ಲಿ ಕೋಟೇಶ್ವರದ ಯುವ ಮೆರಿಡಿಯನ್ ಸಭಾಂಗಣದಲ್ಲಿ ಮಾ.11ರಿಂದ 13ರ ವರೆಗೆ 15 ಅವಧಿಯಲ್ಲಿ ನಡೆಯಲಿರುವ ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯ ಜನಸಂಘ ಯಾಕಾಗಿ ಹುಟ್ಟಿಕೊಂಡಿತು. ಅಂದಿನಿಂದ ಇಂದಿನವರೆಗೆ, ಇತ್ತೀಚಿಗಿನ ಪಂಚರಾಜ್ಯ ಚುನಾವಣೆಯ ಉತ್ತಮ ಫಲಿತಾಂಶದ ವರೆಗೆ ಬಿಜೆಪಿ ಯಾವ ರೀತಿಯಲ್ಲಿ ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿ ಬೆಳೆದಿದೆ, ದೇಶದ ರಕ್ಷಣಾ ಸಾಮರ್ಥ್ಯ, ಆಂತರಿಕ ಭದ್ರತೆ ಸಹಿತ ಹತ್ತು ಹಲವು ವಿಚಾರಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲು ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅದ್ಭುತ ಗೆಲುವು ಸಾಧಿಸುವ ಮೂಲಕ ಕಾರ್ಯಕರ್ತರಿಗೆ ಹೆಚ್ಚಿನ ಹುರುಪು ತಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಜನಪರ ಆಡಳಿತ, ಅಭಿವೃದ್ಧಿ ಹಾಗೂ ಹಿಂದುತ್ವದ ಪರ ಜನತೆ ಕೈಜೋಡಿಸಿದ್ದಾರೆ. ಪಂಚರಾಜ್ಯ ಚುನಾವಣೆಯ ಭರ್ಜರಿ ಗೆಲುವು ಕರ್ನಾಟಕ ರಾಜ್ಯದ ಮುಂದಿನ ಚುನಾವಣೆಯಲ್ಲಿಯೂ ಮರುಕಳಿಸಲು ಕಾರ್ಯಕರ್ತರು ಕಾರಣರಾಗಬೇಕು ಎಂದರು.
ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ರವರು ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಏಕಾತ್ಮ ಮಾನವ ದರ್ಶನ ವಿಚಾರದಲ್ಲಿ ಸವಿಸ್ತಾರ ಮಾಹಿತಿ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯೆ ಡಾ! ಮಂಜುಳಾ ರಾವ್, ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರಘುವೀರ್ ಶೆಣೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು, ಸಂಚಾಲಕರು, ಸಹ ಸಂಚಾಲಕರು, ಉಡುಪಿ ನಗರಸಭಾ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಉಡುಪಿ: ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಉಡುಪಿ ಜಿಲ್ಲೆಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಮಾನ್ಯ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಮಾ.9ರಂದು ಬಿಜೆಪಿ ಕರ್ನಾಟಕ ಕಛೇರಿಯಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಕಾಶನ ಪ್ರಕೋಷ್ಠದ ಸಹ ಸಂಚಾಲಕ ಅಜಿತ್ ಶೆಟ್ಟಿ ಹೆರಂಜೆ ಮತ್ತು ಉಡುಪಿ ಬಿಜೆಪಿ ಜಿಲ್ಲಾ ಸಹ ವಕ್ತಾರ ಗಿರೀಶ್ ಎಮ್. ಅಂಚನ್ ಉಪಸ್ಥಿತರಿದ್ದರು.
ಉಡುಪಿ: ದೇಶವಾಸಿಗಳ ನಿರೀಕ್ಷೆಯಂತೆಯೇ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ದಾಖಲಿಸಿದೆ. ಈ ಚುನಾವಣಾ ಫಲಿತಾಂಶವು ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎನಿಸಲಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಮಾ.10ರಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಪಂಚರಾಜ್ಯ ಚುನಾವಣಾ ಗೆಲುವಿನ ಸಂಭ್ರಮಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಚುನಾವಣೆಯಲ್ಲಿ ಜನತೆ ವಿರೋಧ ಪಕ್ಷಗಳ ಜಾತಿ ರಾಜಕಾರಣ ಮತ್ತು ಕುಟುಂಬ ರಾಜಕಾರಣವನ್ನು ತಿರಸ್ಕರಿಸಿ, ಅಭಿವೃದ್ಧಿ ಮತ್ತು ಹಿಂದುತ್ವದ ಪರ ಜನಾದೇಶವನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಳೆದ 7 ವರ್ಷಗಳ ಅಭಿವೃದ್ಧಿ ಪರ ಆಡಳಿತ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ರವರ ಜನಪರ ಆಡಳಿತ ವೈಖರಿಯನ್ನು ಮೆಚ್ಚಿ ಜನತೆ ಬಿಜೆಪಿಗೆ ಆಶೀರ್ವದಿಸಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಸರಕಾರ ರಚಿಸಲಿದ್ದು, ಮಗದೊಮ್ಮೆ ದೇಶಾದ್ಯಂತ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಲಿದೆ ಎಂದರು.
ಇತ್ತೀಚೆಗೆ ಯುದ್ಧ ಪೀಡಿತ ದೇಶ ಉಕ್ರೇನ್ ನಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಹಾಗೂ ಸಂಬಂಧಪಟ್ಟ ದೇಶಗಳು ಸಕಾರಾತ್ಮಕವಾಗಿ ಸ್ಪಂದಿಸಿದ ರೀತಿ ವಿಶ್ವ ಮಟ್ಟದಲ್ಲಿ ಭಾರತ ಮತ್ತು ಪ್ರಧಾನಿಯ ವಿಶ್ವ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಯಶಸ್ವೀ ಆಡಳಿತವೂ ಚುನಾವಣಾ ಫಲಿತಾಂಶಕ್ಕೆ ಪೂರಕವಾಗಿದೆ. ಪಂಚರಾಜ್ಯ ಚುನಾವಣಾ ಫಲಿತಾಂಶವು ಪಕ್ಷದ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮಗದೊಮ್ಮೆ ಕರ್ನಾಟಕದಲ್ಲಿ ಅಭಿವೃದ್ಧಿ ಪರ ಸರಕಾರವನ್ನು ರಚಿಸಲಿದೆ ಎಂದು ಕುಯಿಲಾಡಿ ಹೇಳಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಸಲೀಂ ಅಂಬಾಗಿಲು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಚಂದ್ರಶೇಖರ ಪ್ರಭು, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯರು ಹಾಗೂ ಜಿಲ್ಲಾ ಮೋರ್ಚಾ ಮಂಡಲ ಪದಾಧಿಕಾರಿಗಳು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 14ನೇ ವರ್ಷದ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಕಾಲಾವಧಿ ನೇಮೋತ್ಸವವು ಮಾ.10 ಮತ್ತು 11ರಂದು ನಡೆಯಲಿದೆ.
ಮಾ.10ರಂದು ಬೆಳಿಗ್ಗೆ 10.00ಕ್ಕೆ ಹಸಿರುವಾಣಿ ಗರೋಡಿ ಪ್ರವೇಶ ಹಾಗೂ ರಾತ್ರಿ 8.00ಕ್ಕೆ ಅಗೇಲ್ ಸೇವೆ ನಡೆಯಲಿದೆ. ಮಾ.11ರಂದು ಬೆಳಿಗ್ಗೆ 6.00ಕ್ಕೆ ಶ್ರೀ ಬೈದೇರುಗಳ ಮತ್ತು ಪರಿವಾರ ದೈವಗಳ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನ ಸಂತರ್ಪಣೆ, ಸಂಜೆ 6.15ಕ್ಕೆ ಶ್ರೀ ಬೈದೇರುಗಳ ನೇಮೋತ್ಸವವು ಜರಗಲಿದ್ದು, ರಾತ್ರಿ 8.30ಕ್ಕೆ ಅನ್ನ ಸಂತರ್ಪಣೆ ಹಾಗೂ ರಾತ್ರಿ 11.30ಕ್ಕೆ ಶ್ರೀ ಬೈದೇರುಗಳ ದರುಶನ ಸೇವೆ ನಡೆಯಲಿದೆ ಎಂದು ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಆಡಳಿತ ಸಮಿತಿಯ ಅಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಹಯೋಗದೊಂದಿಗೆ ನುರಿತ ಸ್ತ್ರೀ ರೋಗ ತಜ್ಞ ವೈದ್ಯರಿಂದ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರವು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಾ.8ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ನವಮಾಸ ವುಮನ್ಸ್ ಸ್ಪೆಷಾಲಿಟಿ ಕ್ಲಿನಿಕ್ ಕೋಟೇಶ್ವರ ಇದರ ವೈದ್ಯಾಧಿಕಾರಿ ಹಾಗೂ ಸ್ತ್ರೀರೋಗ ತಜ್ಞೆ ಡಾ! ಪ್ರಿಯಾಂಕ ಜೋಗಿ, ಸುನಾಗ್ ಹಾಸ್ಪಿಟಲ್ ಉಡುಪಿ ಇದರ ವೈದ್ಯಾಧಿಕಾರಿ ಹಾಗೂ ಅರವಳಿಕೆ ತಜ್ಞೆ ಡಾ! ವೀಣಾ ನರೇಂದ್ರ ಮತ್ತು ಶಿಲ್ಪಾ ರಘುಪತಿ ಭಟ್ ರವರು ಆರೋಗ್ಯ ತಪಾಸಣಾ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ವೈದ್ಯಾಧಿಕಾರಿಗಳು ಮಹಿಳೆಯರ ಆರೋಗ್ಯ ಸಂರಕ್ಷಣೆ ಮತ್ತು ಆರೋಗ್ಯ ತಪಾಸಣೆಯ ಔಚಿತ್ಯದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಆರೋಗ್ಯವಂತ ಮಹಿಳೆಯಿಂದ ಸದೃಢ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಯಾವುದೇ ಜವಾಬ್ದಾರಿಯನ್ನು ಮಹಿಳೆ ಅತ್ಯಂತ ಸಮರ್ಪಕವಾಗಿ ನಿಭಾಯಿಸುತ್ತಾಳೆ ಎಂಬುದಕ್ಕೆ ಜಿಲ್ಲಾ ಮಹಿಳಾ ಮೋರ್ಚಾದ ಅನುಕರಣೀಯ ಮಾದರಿ ಕಾರ್ಯ ಚಟುವಟಿಕೆಗಳೇ ಸಾಕ್ಷಿ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ, ವಿಶ್ವದಾದ್ಯಂತ ಮಹಿಳೆಯರು ಸಮಾಜದ ವಿವಿಧ ರಂಗಗಳ ಮುಂಚೂಣಿಯಲ್ಲಿ ಯಶಸ್ವೀ ನಾಯಕಿಯರಾಗಿ ವಿಶಿಷ್ಠ ಸಾಧನೆಗೈಯುತ್ತಿದ್ದಾರೆ. ಸಾಮಾಜಿಕ ಹಾಗೂ ಕೌಟುಂಬಿಕವಾಗಿಯೂ ಸಹನೆ ಮತ್ತು ಸಹಬಾಳ್ವೆಯ ಯಶಸ್ವೀ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಶ್ರೇಷ್ಠವಾಗಿದೆ ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಡಾ! ವಿಜಯೇಂದ್ರ ರಾವ್ ಮಾತನಾಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರಿದರು.
ವಿವಿಧ ರಂಗಗಳಲ್ಲಿ ವಿಶೇಷ ಸಾಧನೆಗೈದಿರುವ ವಿದ್ಯಾ ಸರಸ್ವತಿ ಉಡುಪಿ, ವೈದ್ಯಕೀಯ ಸಹಾಯಕಿಯಾಗಿ ವಿಶಿಷ್ಟ ಸಾಧನೆಗೈದಿರುವ ಉಜ್ವಲ ಕಿರಣ್ ಉಡುಪಿ ಮತ್ತು ಅಂತಾರಾಷ್ಟ್ರೀಯ ಈಜು ಪಟು ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವಿದ್ಯಾ ಪೈ ಕಾರ್ಕಳ ಇವರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ! ವಿದ್ಯಾಧರ್ ಶೆಟ್ಟಿ, ಡಾ! ಶಿಲ್ಪಾ ಕುಂದಾಪುರ, ಜಿಲ್ಲಾ ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಮಧುಸೂದನ್ ಹೇರೂರು, ಮಹಿಳಾ ಮೋರ್ಚಾ ಕಾಪು ಮಂಡಲ ಅಧ್ಯಕ್ಷೆ ಸುಮಾ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಬಿಜೆಪಿ ಉಡುಪಿ ನಗರ ಕಾರ್ಯದರ್ಶಿ ದಯಾಶಿನಿ, ಮಹಿಳಾ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿಗಳಾದ ಸುಜಾಲ ಸತೀಶ್, ಸುಧಾ ಪೈ ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿಗಳು, ಮಹಿಳಾ ಮೋರ್ಚಾ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು, ಉಡುಪಿ ನಗರಸಭಾ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಸುಮಾರು 150ಕ್ಕೂ ಮಿಕ್ಕಿ ಮಹಿಳಾ ಶಿಬಿರಾರ್ಥಿಗಳು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಕೇಸರಿ ಯುವರಾಜ್ ವಂದಿಸಿದರು.
ಉಡುಪಿ: ಯುದ್ದ ಪೀಡಿತ ದೇಶ ಉಕ್ರೇನ್ ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳ ಸಹಿತ ಭಾರತೀಯ ನಾಗರಿಕರರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ದಿಟ್ಟ ಕ್ರಮ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
ವಿಶ್ವದ ಮಹಾನ್ ರಾಷ್ಟ್ರಗಳು ಉಕ್ರೇನ್ ನಲ್ಲಿ ಸಿಲುಕಿರುವ ತಮ್ಮ ನಾಗರಿಕರನ್ನು ರಕ್ಷಿಸಲಾಗದೇ ಪರದಾಡುತ್ತಿದ್ದ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆ ತರುವ ನಿಟ್ಟಿನಲ್ಲಿ ರಷ್ಯಾ ಜೊತೆ ನಡೆಸಿರುವ ಮಾತುಕತೆಯ ಫಲವಾಗಿ ಕೆಲವು ಗಂಟೆಗಳ ಕಾಲ ಯುದ್ಧವೇ ಸ್ಥಗಿತಗೊಂಡ ಪ್ರಕ್ರಿಯೆ ಹಾಗೂ ಭಾರತೀಯ ರಾಯಭಾರಿ ಕಛೇರಿಯ ತ್ವರಿತ ಸೇವೆಯ ಜೊತೆಗೆ ನಾಲ್ಕು ಪ್ರಭಾವಿ ಕೇಂದ್ರ ಸಚಿವರನ್ನು ನಿಯೋಜಿಸಿ, ಸಶಕ್ತ ತಂಡದೊಂದಿಗೆ ಭಾರತೀಯ ವಿದ್ಯಾರ್ಥಿಗಳ ಹಾಗೂ ನಾಗರಿಕರ ರಕ್ಷಣಾ ಕಾರ್ಯದಲ್ಲಿ ಸಮರೋಪಾದಿಯಲ್ಲಿ ತೊಡಗಿರುವುದು ದೇಶವಾಸಿಗಳಿಗೆ ಹೆಮ್ಮೆ ತಂದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಮತ್ತು ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.
ಉಕ್ರೇನ್ ನ ನೆರೆಹೊರೆಯ ದೇಶಗಳಿಂದ ಇದುವರೆಗೆ ಸುಮಾರು 15,000 ಮಂದಿ ಭಾರತೀಯರನ್ನು ಅಪರೇಷನ್ ಗಂಗಾ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಜ್ವಲಂತ ನಿದರ್ಶನವಾಗಿದೆ. ಯುದ್ಧ ಪೀಡಿತ ದೇಶ ಉಕ್ರೇನ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಮುಂದಕ್ಕೆ ಭಾರತದಲ್ಲೇ ಇಂಟರ್ನ್ಶಿಪ್ ಮಾಡಬಹುದು ಎಂಬ ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ಧಾರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಲಿದೆ.
ಈ ನಡುವೆ ತಮ್ಮ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಸ್ವಯಂ ನಿರ್ಧಾರವನ್ನು ಕೈಗೊಂಡು ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳಿ, ಯುದ್ಧದ ಸಂದರ್ಭದಲ್ಲಿ ಸಿಲುಕಿಕೊಂಡು ಸರಕಾರದ ಸಹಾಯದಿಂದ ಭಾರತಕ್ಕೆ ಮರಳಿರುವ ಬೆರಳೆಣಿಕೆಯ ಕೆಲವು ವಿದ್ಯಾರ್ಥಿಗಳು ದೇಶದ ವಿರುದ್ಧವೇ ಅವಹೇಳನಕಾರಿ ಹೇಳಿಕೆ ನೀಡಿರುವುದು ಅರ್ಥಹೀನವಾಗಿದೆ. ಇದರ ಜೊತೆಗೆ ಆಡಳಿತ ಪಕ್ಷವನ್ನು ದೂಷಿಸಲೆಂದೇ ಕಾದು ಕುಳಿತಿರುವ ವಿರೋಧ ಪಕ್ಷಗಳ ನಾಯಕರ ಸಂಕುಚಿತ ಮನಸ್ಥಿತಿಯೂ ಕೈಲಾಗದವನು ಮೈ ಪರಚಿಕೊಂಡಂತೆ ಎಂಬಂತಾಗಿದೆ.
ಉಕ್ರೇನ್ ಯುದ್ಧ ಪೀಡಿತ ಪ್ರದೇಶದಿಂದ ವಿವಿಧ ಮಾರ್ಗಗಳಲ್ಲಿ ನಿಗದಿತ ತಾಣವನ್ನು ತಲುಪಿರುವ ಭಾರತೀಯ ವಿಧ್ಯಾರ್ಥಿಗಳು ಮತ್ತು ನಾಗರಿಕರನ್ನು ಭಾರತಕ್ಕೆ ಕರೆ ತರುತ್ತಿರುವ ಕೇಂದ್ರ ಸರಕಾರದ ಪ್ರಕ್ರಿಯೆಗೆ ಸ್ವತಃ ಉಚ್ಛ ನ್ಯಾಯಾಲಯವೇ ಪ್ರಶಂಸೆ ವ್ಯಕ್ತಪಡಿಸಿದೆ. ಭಾರತದ ರಾಷ್ಟ್ರ ಧ್ವಜದ ಅಸರೆಯಿಂದ ಸಾಗಿಬಂದು ಸರಕಾರದ ಸಹಾಯದಿಂದ ಸುರಕ್ಷಿತವಾಗಿ ತಾಯ್ನಾಡನ್ನು ತಲುಪಿರುವ ಭಾರತೀಯ ವಿದ್ಯಾರ್ಥಿಗಳು ಭಾರತೀಯ ರಾಯಭಾರಿ ಕಛೇರಿ, ವ್ಯವಸ್ಥೆಗಳು ಮತ್ತು ಭಾರತದ ಬಗ್ಗೆ ಹೆಮ್ಮೆಯ ಮಾತನಾಡುತ್ತಿರುವುದು ಶ್ಲಾಘನೀಯ. ಉಕ್ರೇನ್ ನಲ್ಲಿ ಯುದ್ಧದ ವಿಷಮ ಪರಿಸ್ಥಿತಿಯ ನಡುವೆಯೂ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆ ತರುವಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಇಡೀ ತಂಡದ ಅವಿರತ ಸೇವೆ ಅಭಿನಂದನೀಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಈ ಬಾರಿಯ ಬಜೆಟ್ ವಿದ್ಯಾಭ್ಯಾಸ, ಉದ್ಯೋಗ ಮತ್ತು ಸಬಲೀಕರಣಕ್ಕೆ ಒತ್ತು ನೀಡಿರುವ ಸರ್ವ ಸ್ಪರ್ಶಿ ಸರ್ವ ವ್ಯಾಪಿ ಬಜೆಟ್ ಆಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಜೆಟ್ ನಲ್ಲಿ ಯಾವುದೇ ಹೆಚ್ಚುವರಿ ತೆರಿಗೆ ಭಾರ ಹೊರಿಸದೆ ಇದ್ದುದರಲ್ಲೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ.
ಆಡಳಿತ ಸುಧಾರಣೆಗೆ ಹೆಚ್ಚಿನ ವೆಚ್ಚ, ಕಾಶಿ ಯಾತ್ರೆಗೆ ಸಬ್ಸಿಡಿ, ಪವಿತ್ರ ಯಾತ್ರೆ ಯೋಜನೆ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಯೋಜನೆ, ನೀಟ್ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಲ, ಕರ್ನಾಟಕ ಕಲಾ ಗ್ರಾಮ ಯೋಜನೆ, ನಮ್ಮ ಕ್ಲಿನಿಕ್ ಯೋಜನೆ, ಉಡುಪಿ ಮತ್ತು ದ.ಕ. ಜಿಲ್ಲೆಗೆ ತಲಾ ಒಂದು ಶ್ರೀ ನಾರಾಯಣ ಗುರು ವಸತಿ ಶಾಲೆ ಯೋಜನೆ, ಕಾರ್ಮಿಕ ಕ್ಷೇಮಾಭಿವೃದ್ಧಿ ಯೋಜನೆ, ನೀರಾವರಿಗೆ ಆದ್ಯತೆ, ಕುರಿ ಮತ್ತು ಮೇಕೆಗಳಿಗೆ ಪರಿಹಾರ ಧನ ನೀಡುವ ಅನುಗ್ರಹ ಯೋಜನೆ, ಗೋ ಸಂತತಿಯ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪುಣ್ಯಕೋಟಿ ದತ್ತು ಯೋಜನೆ ಮುಂತಾದ ಅಭಿವೃದ್ಧಿ ಪರ ಯೋಜನೆಗಳೊಂದಿಗೆ ಜನ ಮಾನಸದಲ್ಲಿ ಭರವಸೆ ಮೂಡಿಸಿರುವ ಪ್ರಗತಿಪರ ಬಜೆಟ್ ಇದಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಫೆ.2ರಂದು ಉಡುಪಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಶ್ರೀಶ ನಾಯಕ್, ಸುಪ್ರಸಾದ್ ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಹಾಗೂ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಪ್ರಮುಖರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಉಡುಪಿ: ಮಾ.2ರಂದು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭಾಗವಹಿಸಿ ಸದೃಢ ಪಕ್ಷ ಸಂಘಟನೆ ಮತ್ತು ಮುಂಬರಲಿರುವ ಚುನಾವಣಾ ದೃಷ್ಠಿಯಿಂದ ಯುವ ಮೋರ್ಚಾ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಯುವ ಕಾರ್ಯಕರ್ತರು ಬದ್ಧತೆಯಿಂದ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ವಿಚಾರ ವಿನಿಮಯ ನಡೆಸಿದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಶ್ವೇತ ಪೂಜಾರಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ, ವಿನೋದ್ ಪೂಜಾರಿ ಕುಂದಾಪುರ ಹಾಗೂ ಯುವ ಮೋರ್ಚಾ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಉಡುಪಿ: ಕೇವಲ ವೋಟ್ ಬ್ಯಾಂಕಿಗಾಗಿ ಒಂದೇ ವರ್ಗವನ್ನು ಓಲೈಸುತ್ತಾ ಸಂವಿಧಾನ ವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾ ಜಿಹಾದಿಗಳಿಗೆ ನೈತಿಕ ಬೆಂಬಲ ನೀಡುತ್ತಾ ಬಂದಿರುವ ಕಾಂಗ್ರೆಸ್ಸಿಗೆ ಹಿಂದೂಗಳ ಬಗ್ಗೆ ಕಾಳಜಿ ಯಾಕಿಲ್ಲ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.
ಅವರು ಕಾಂಗ್ರೆಸ್ಸಿನ ಪ್ರಜಾಪ್ರಭುತ್ವ ವಿರೋಧಿ ನೀತಿ ಮತ್ತು ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ಫೆ.26ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿ ಈ ಬಗ್ಗೆ ವಿಸ್ತೃತ ವಿವರಣೆ ನೀಡಿದರು.
ನಿರ್ಧಿಷ್ಟ ಕೋಮಿನ ಜನತೆ ನನ್ನ ಸಹೋದರರು ಎಂದು ರಾಜಾರೋಷವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಅವರ ಅಮಾನುಷ ಹತ್ಯೆಯ ಬಗ್ಗೆ ಗಾಢ ಮೌನ ವಹಿಸಿರುವ ಹಿಂದಿನ ಮರ್ಮವೇನು? ಮತಾಂಧರಿಂದ ಬರ್ಬರ ಹತ್ಯೆಗೀಡಾಗಿರುವ ಹರ್ಷರವರ ಮನೆಗೆ ಕನಿಷ್ಠ ಬೇಟಿ ನೀಡುವ ಸೌಜನ್ಯವಿಲ್ಲದ ಡಿಕೆಶಿ, ಸಿದ್ದರಾಮಯ್ಯ ಮುಂತಾದ ಕಾಂಗ್ರೆಸ್ ನಾಯಕರು ಬರೇ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಸಾಮಾಜದ ಸ್ವಾಸ್ಥ್ಯ ಕೆಡಿಸಲು ಹೆಣಗಾಡುತ್ತಿರುವುದು ಶೋಚನೀಯವಾಗಿದೆ.
ಉಭಯ ಸದನಗಳ ಕಲಾಪವನ್ನು ವಿನಾಕಾರಣ ವ್ಯರ್ಥಗೊಳಿಸಿರುವ ಕಾಂಗ್ರೆಸ್ಸಿನ ಸಂವಿಧಾನ ವಿರೋಧಿ ನಡೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.
ಶಿವಮೊಗ್ಗದಲ್ಲಿ ಜಿಹಾದಿಗಳಿಗೆ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಆರೋಪಿಗಳನ್ನು ಕೂಡಲೇ ಬಂಧಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ಜನರಲ್ಲಿ ವಿಶ್ವಾಸ ಮೂಡಿಸಿದೆ.
ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಲ್ಲದೆ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳನ್ನು (ಎಡಿಜಿಪಿ) ತಕ್ಷಣವೇ ಸ್ಥಳದಲ್ಲಿ ನಿಯೋಜಿಸಿ ಅಪರಾಧಿಗಳ ಬಂಧನ ಸಾಧ್ಯವಾಗುವಂತೆ ಮಾಡಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗಲಭೆಗೆ ಆಸ್ಪದವಾಗದಂತೆ, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ.
ಜನವಿರೋಧಿ, ಸದನ ವಿರೋಧಿ, ಭಯೋತ್ಪಾದಕರ ಪರ ಇರುವ ಕಾಂಗ್ರೆಸ್ ವಿರುದ್ಧ ಫೆ.27 ಮತ್ತು 28ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟವನ್ನು ಬಿಜೆಪಿ ಹಮ್ಮಿಕೊಂಡಿದೆ.
ಎಸ್ಡಿಪಿಐ, ಪಿಎಫ್ಐ ಸಂಘಟನೆಗಳು ಕಾಂಗ್ರೆಸ್ ಕೂಸು. ಕಾಂಗ್ರೆಸ್ನ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಂ ಸಿದ್ದರಾಮಯ್ಯ ಈ ಸಂಘಟನೆಗಳ ವಿರುದ್ಧ ಇದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಇದರಿಂದ ಈ ಸಂಘಟನೆಗಳು ಹೆಚ್ಚು ಸಕ್ರಿಯವಾಗಿವೆ.
ಕಾಂಗ್ರೆಸ್ ಪಕ್ಷವು ಎಸ್ಡಿಪಿಐ, ಪಿಎಫ್ಐ ಜೊತೆಗೂಡಿ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಿದೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು ಸದನದ ಕಲಾಪ ವ್ಯರ್ಥವಾಗುವಂತೆ ಮಾಡಿದ್ದಾರೆ. ಅವರು ಡಾ! ಅಂಬೇಡ್ಕರ್ ವಿರೋಧಿ, ಸಾವರ್ಕರ್ ವಿರೋಧಿ, ಜನವಿರೋಧಿ, ಹಿಂದೂ ವಿರೋಧಿ, ಶಿಕ್ಷಣ ದ್ರೋಹಿ, ಮಹಿಳಾ ವಿರೋಧಿ ಅಲ್ಲದೇ ಮತಾಂತರದ ಪರವಾಗಿದ್ದಾರೆ.
ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷ ಅವರ ಮನೆಗೆ ಹೋಗಲು ಕಾಂಗ್ರೆಸ್ನವರಿಗೆ ಸಮಯ ಇಲ್ಲ. ದೆಹಲಿಗೆ ಹೋಗಲು ಸಮಯ ಇದೆ. ಇದು ಅವರ ಹಿಂದೂ ವಿರೋಧಿ ಮತ್ತು ಭಯೋತ್ಪಾದನಾ ಪರ ಮಾನಸಿಕತೆಗೆ ಸಾಕ್ಷಿಯಾಗಿದೆ.
ಹಿಜಾಬ್ ಪರವಾಗಿ ನಿಂತ ಮತಾಂಧರ ಕೃತ್ಯದಿಂದ ಶಿವಮೊಗ್ಗದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಅವರ ಹತ್ಯೆಯಾಗಿದೆ. ಇದೊಂದು ಪೂರ್ವಯೋಜಿತ ದುಷ್ಕೃತ್ಯ; ಗೋಮುಖ ವ್ಯಾಘ್ರರ ಕೃತ್ಯವಾಗಿದೆ.
ಸುಳ್ಳು ಹೇಳಿಕೆ ನೀಡುತ್ತಿರುವ ಡಿ.ಕೆ. ಶಿವಕುಮಾರ್ ಸುಳ್ಳಿನ ಕುಮಾರ್ ಆಗಿದ್ದಾರೆ. ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾಗಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಗೂಂಡಾಗಿರಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಯುವ ಘಟಕಕ್ಕೂ ಗೂಂಡಾಗಿರಿ ಹಿನ್ನೆಲೆಯ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಪೈಪೋಟಿ, ವೈಮನಸ್ಸು, ಒಳಜಗಳ ರಾಜ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಧಿಕಾರದಲ್ಲಿ ಇಲ್ಲದ ಹತಾಶೆ, ಆಡಳಿತ ಕಳೆದುಕೊಂಡ ನೋವನ್ನು ಅವರು ಕೋಮು ಗಲಭೆಗಳಿಗಾಗಿ ಬಳಸುತ್ತಿದ್ದಾರೆ.
ಸದನದಲ್ಲಿ ಸಚಿವ ಈಶ್ವರಪ್ಪ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ನೈಜ ಗೂಂಡಾ ಪ್ರವೃತ್ತಿಯನ್ನು ಮೆರೆದಿದ್ದಾರೆ. ಈ ರೀತಿಯ ದುರ್ವರ್ತನೆ ವಿಧಾನಸಭೆಯಲ್ಲಿ ಮೊದಲನೇ ಬಾರಿಗೆ ನಡೆದಿದೆ. ಜೊತೆಗೆ ಕಾಂಗ್ರೆಸ್ಸಿನ ವಿನಾಕಾರಣ ಧರಣಿಯಿಂದ ಕಲಾಪಗಳು ಬಲಿ ಆಗಿವೆ.
ಸದನಕ್ಕೆ ರಾಷ್ಟ್ರ ಧ್ವಜವನ್ನು ತಂದು ಧ್ವಜ ನೀತಿಯನ್ನು ಕಾಂಗ್ರೆಸ್ ಪಕ್ಷ ಉಲ್ಲಂಘಿಸಿದೆ. ಪಕ್ಷದ ನಾಯಕರ ದುರ್ವರ್ತನೆಗೆ ಇದು ಜ್ವಲಂತ ಸಾಕ್ಷಿಯಾಗಿದೆ.
ಬಿಜೆಪಿ ಸ್ಥಾಪನೆಯಾದಂದಿನಿಂದ ಇಂದಿನವರೆಗೂ ದೇಶಭಕ್ತಿ, ರಾಷ್ಟ್ರದ ಸಂಸ್ಕೃತಿ, ಪುನರುತ್ಥಾನಕ್ಕೆ ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಶ್ರಮಿಸಿದ ಪಕ್ಷ. ಕಾಂಗ್ರೆಸ್ ಪಕ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ನೀತಿ ಮತ್ತು ಭಾರತದ ಇತರ ಭಾಗಗಳಿಗೆ ಇನ್ನೊಂದು ನೀತಿಯನ್ನು ಜಾರಿಗೊಳಿಸಿದ್ದರೆ ಅದನ್ನು ಜನಸಂಘ ಮತ್ತು ಬಿಜೆಪಿ ಸದಾ ಖಂಡಿಸಿದ್ದವು. ಈ ಹೆಮ್ಮೆ ನಮ್ಮ ಕಾರ್ಯಕರ್ತರು ಮತ್ತು ಮುಖಂಡರಿಗೆ ಸಲ್ಲುತ್ತದೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸದಂತೆ ಕಾಂಗ್ರೆಸ್ ಗೋಲಿಬಾರ್ ನಡೆಸಿರುವುದು ಇತಿಹಾಸ.
ವಿಧಾನಸಭೆ ಸದನದಲ್ಲಿ ವಿಷಯ ಇಲ್ಲದೇ ಇದ್ದರೂ ಕಾಂಗ್ರೆಸ್ ವೃಥಾ ಗದ್ದಲವೆಬ್ಬಿಸಿ ಕಲಾಪವನ್ನು ವ್ಯರ್ಥಗೊಳಿಸಿದೆ. ಇದರಿಂದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಗಿದೆ. ರಾಜ್ಯದ ಅಭಿವೃದ್ಧಿ, ಬಜೆಟ್ ಪೂರ್ವಭಾವಿ ಚರ್ಚೆ, ಕೋವಿಡೋತ್ತರ ಬೆಳವಣಿಗೆ ಸೇರಿದಂತೆ ಮಹತ್ವದ ವಿಚಾರಗಳ ಚರ್ಚೆಗೆ ಕಾಂಗ್ರೆಸ್ ಅವಕಾಶವನ್ನೇ ನೀಡಲಿಲ್ಲ.
ಸದನ ನಡೆಯದಂತೆ ಪೂರ್ವನಿಯೋಜಿತವಾಗಿ ಧರಣಿ ನಡೆಸಿರುವ ಕಾಂಗ್ರೆಸ್ ಪಕ್ಷವು ಹಿಜಾಬ್ ಕುರಿತ ಚರ್ಚೆಗೆ ಅವಕಾಶವಾಗದಂತೆ ನೋಡಿಕೊಂಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಿವಮೊಗ್ಗದಲ್ಲಿ ನಡೆದ ಹತ್ಯೆಯ ಸಂಬಂಧ ಸುಳ್ಳು ಮಾಹಿತಿಯ ಟ್ವೀಟ್ಗಳ ಮೂಲಕ ಜನರ ದಾರಿ ತಪ್ಪಿಸಿ ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ. ಮಾತ್ರವಲ್ಲದೆ ಪರಿಸ್ಥಿತಿಯ ಉದ್ವಿಗ್ನತೆಗೆ ಕಾರಣವಾಗುವಂತೆ ವರ್ತಿಸಿದ್ದಾರೆ.
ನಿಗದಿತ ಶಾಲಾ ಕಾಲೇಜಿನಲ್ಲಿ ತ್ರಿವರ್ಣ ಧ್ವಜವನ್ನು ಕೆಳಕ್ಕಿಳಿಸಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂಬ ಅಪ್ಪಟ ಸುಳ್ಳಿನ ಮೂಲಕ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ವಿಷಬೀಜ ಬಿತ್ತುವ ಕುಕೃತ್ಯ ಮಾಡಿದ್ದಾರೆ ಎಂದು ಕುಯಿಲಾಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಶ್ರೀಶ ನಾಯಕ್, ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.