
ಉಡುಪಿ: ಕೇರಳ ರಾಜ್ಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಕಮ್ಯೂನಿಸ್ಟ್ ಸರಕಾರದ ಲೋಪದಿಂದಾಗಿ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ವಿಶ್ವವಂಧ್ಯ ಶ್ರೇಷ್ಠ ಸಂತರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಸಿಗದಿರುವುದು ಎಲ್ಲರಿಗೂ ನಿರಾಸೆ ಮೂಡಿಸಿರುವುದು ವಾಸ್ತವ. ಆದರೆ ಸದಾ ಹಿಂದೂ ವಿರೋಧಿ ನೀತಿ ಅನುಸರಿಸುವ ಕಾಂಗ್ರೆಸ್ ಕೇವಲ ರಾಜಕೀಯ ಕಾರಣಕ್ಕಾಗಿ ಈ ವಿಚಾರವನ್ನು ವಿವಾದವನ್ನಾಗಿಸಲು ಹವಣಿಸುತ್ತಿರುವುದು ಶೋಚನೀಯ. ತನ್ನ ಆಡಳಿತಾವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಪಾಲಿಸುತ್ತಿದ್ದ ಹಿಂದೂ ಯುವಕರ ಹತ್ಯೆ ನಡೆದಾಗ ಸುಮ್ಮನಿದ್ದ, ಒಂದೇ ವರ್ಗವನ್ನು ಓಲೈಸುವ ಕಾಂಗ್ರೆಸ್ ನಿಂದ ಹಿಂದುತ್ವದ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ಅಮೃತ ವಾಣಿಯನ್ನು ನಾಡಿಗೆ ನೀಡಿರುವ, ಹಿಂದೂ ಧರ್ಮದ ಪ್ರತಿಪಾದಕರು, ಶಿಕ್ಷಣ ಮತ್ತು ಸಂಘಟನೆಯ ಸಾರವನ್ನು ನಾಡಿಗೆ ಪಸರಿಸುವ ಮೂಲಕ ಮತಾಂತರವನ್ನು ವಿರೋಧಿಸಿ, ಶೋಷಿತ ವರ್ಗದ ದೀನ ದಲಿತೋದ್ಧಾರಕರಾಗಿ, ಅಸಮಾನತೆ ಮೂಡನಂಬಿಕೆ ಅಸ್ಪ್ರಶ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರರೆನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು. ಶ್ರೀ ಗುರುವರ್ಯರ ಗೌರವಾರ್ಥವಾಗಿ ಜ.26ರಂದು ಜಿಲ್ಲೆಯಾದ್ಯಂತ ನಡೆಯುವ ಜಾಥಾವನ್ನು ಬಿಜೆಪಿ ಬೆಂಬಲಿಸಲಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಸುದೀರ್ಘ ಆಡಳಿತಾವಧಿಯಲ್ಲಿ ಒಮ್ಮೆಯಾದರೂ ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ದಿವ್ಯ ಚೇತನಗಳಿಗೆ ಗೌರವ ತಂದು ಕೊಡುವಂತಹ ಸತ್ಕಾರ್ಯವನ್ನು ಮಾಡದೇ ಇದ್ದರೂ ಪ್ರಸಕ್ತ ಪರಿಸ್ಥಿತಿಯ ದುರ್ಲಾಭ ಪಡೆಯಲು ಹರಸಾಹಸ ಪಡುತ್ತಿರುವುದು ವಿಷಾದನೀಯ. ಸರಕಾರವನ್ನು ಟೀಕಿಸಲು ಯಾವುದೇ ಅಸ್ತ್ರವಿಲ್ಲದೇ ಸೊರಗಿರುವ ಕಾಂಗ್ರೆಸ್ ಜನತೆಯ ದಾರಿ ತಪ್ಪಿಸುವ ವಿಫಲ ಯತ್ನದಲ್ಲಿ ನಿರತವಾಗಿರುವುದು ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ ಎಂದು ಬಿಂಬಿಸಲು ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರು ನೀಡಿದ ಬಾಲಿಶ ಹೇಳಿಕೆಯು ಅರ್ಥಹೀನವಾಗಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.