Design a site like this with WordPress.com
Get started

ಮಾ.12 : ಕುಂದಾಪುರದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಯಶಸ್ವಿಗೊಳಿಸಲು ವೀಣಾ ಎಸ್. ಶೆಟ್ಟಿ ಕರೆ

News By: ಜನತಾಲೋಕವಾಣಿನ್ಯೂಸ್

ಉಡುಪಿ:ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸೂಚನೆಯಂತೆ ಮಾ.12 ರವಿವಾರ ಮಧ್ಯಾಹ್ನ 3.00 ಗಂಟೆಗೆ ಕುಂದಾಪುರದ ನೆಹರೂ ಮೈದಾನದಲ್ಲಿ ಬೃಹತ್ ಜಿಲ್ಲಾ ಮಹಿಳಾ ಸಮಾವೇಶ ನಡೆಯಲಿದೆ. ಸುಮಾರು 15,000ಕ್ಕೂ ಮಿಕ್ಕಿ ಮಹಿಳೆಯರ ಸಮಾಗಮದೊಂದಿಗೆ ನಡೆಯಲಿರುವ ಈ ಸಮಾವೇಶವನ್ನು ಸಂಘಟಿತ ಪ್ರಯತ್ನದ ಮೂಲಕ ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಉಡುಪಿ ನಗರ ಮಹಿಳಾ ಮೋರ್ಚಾದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಿಳೆಯರ ಅಭ್ಯುದಯದ ಕಾಳಜಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ, ಎಲ್ಲ ವರ್ಗದ ಮಹಿಳೆಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು.

ಜಿಲ್ಲಾ ಮಹಿಳಾ ಸಮಾವೇಶವನ್ನು ಐತಿಹಾಸಿಕ ರೀತಿಯಲ್ಲಿ ಆಯೋಜಿಸಲು ಎಲ್ಲ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಎಲ್ಲ 6 ಮಂಡಲಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ. ಸಮಾವೇಶಕ್ಕೆ ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆಯವರು ಭಾಗವಹಿಸುವ ಸಾಧ್ಯತೆಯ ಜೊತೆಗೆ ಜಿಲ್ಲೆಯ ಸಚಿವರು, ಶಾಸಕರು, ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ. ಮಹಿಳಾ ಮೋರ್ಚಾದ ಎಲ್ಲ ಸ್ತರದ ಪದಾಧಿಕಾರಿಗಳು, ಸದಸ್ಯರ ಜೊತೆಗೆ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು ಸಮಾವೇಶದ ಯಶಸ್ಸಿಗೆ ಬದ್ಧತೆಯಿಂದ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.

ಪೂರ್ವಭಾವಿ ಸಭೆಯಲ್ಲಿ ಎಲ್ಲ ವಾರ್ಡ್ ಗಳಿಗೆ ಮತ್ತು ಪಂಚಾಯತ್ ಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಯಿತು.

ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಸರೋಜ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಗಳಾದ ಸುಧಾ ಪೈ, ಸುಜಾಲ ಸತೀಶ್ ಪೂಜಾರಿ, ಪ್ರಮುಖರಾದ ಪೂರ್ಣಿಮಾ ರತ್ನಾಕರ್, ದಯಾಶಿನಿ, ಶೈಲಜಾ, ಪ್ರೀತಿ, ಲಕ್ಷ್ಮಿ, ಸುಗುಣ, ಶಾಂತಿ ಮನೋಜ್, ಕಾವೇರಿ, ಜಯಲಕ್ಷ್ಮಿ, ಜಯಶ್ರೀ, ಶಕುಂತಲಾ ಶೆಟ್ಟಿ, ಪ್ರತಿಭಾ ನಾಯಕ್, ಜ್ಯೋತಿ ಶೇಟ್ ಮುಂತಾದವರು ಉಪಸ್ಥಿತರಿದ್ದರು.

ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ – ಜನ ಬಿಜೆಪಿ ಪರ ಎಂದು ಮತ್ತೆ ಸಾಬೀತು – ಶ್ರೀಕಾಂತ ನಾಯಕ್

ಕಾಪು: ಈಶಾನ್ಯ ರಾಜ್ಯಗಳ ಫಲಿತಾಂಶ ಬಂದಿದ್ದು ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದ್ದು ನಾಲ್ಕನೆಯ ರಾಜ್ಯದಲ್ಲಿಯೂ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಬಿಜೆಪಿ ಬಿಟ್ಟರೆ ಬೇರೆ ಕೆಲವು ಪ್ರಾದೇಶಿಕ ಪಕ್ಷಗಳು ಹಲವು ಸ್ಥಾನಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮಕಾಡೆ ಮಲಗಿದೆ. ಕೇವಲ‌ ಹತ್ತು ವರ್ಷಗಳ ಹಿಂದೆ ಈಶಾನ್ಯ ಭಾಗದಲ್ಲಿ ದರ್ಪ ಮೆರೆದು ಜನರನ್ನು ಕತ್ತಲೆಯಲ್ಲಿಟ್ಟು ಅಧಿಕಾರದ ಸವಾರಿ‌ ನಡೆಸಿತ್ತೋ ಇಂದು ಅದರ ಅಡ್ರೆಸ್ ಇಲ್ಲದಂತೆ ಜನ ಮನೆಗೆ ಕಳುಹಿಸಿದ್ದಾರೆ. ಈ ಭಾಗದಲ್ಲಿ ಬಿಜೆಪಿ ಬರಲು ಸಾಧ್ಯವೇ ಇಲ್ಲವೆಂದು ಕಾಂಗ್ರೆಸ್ ಭಾವಿಸಿತ್ತೋ ಅಲ್ಲಿ ಇಂದು ಕಮಲ ಅರಳಿದೆ. ಇದು ಜನಸಾಮಾನ್ಯರ ಗೆಲುವು. ಮೋದೀಜಿಯವರು ಜನಪರ ಆಡಳಿತವನ್ನು ಮೆಚ್ಚಿ ಜನತೆ ನೀಡಿದ ಅಧಿಕಾರವಿದು.

ಕರ್ನಾಟಕದಲ್ಲಿಯೂ ಇದೇ ಪರಿಸ್ಥಿತಿ ಕಾಂಗ್ರೆಸ್ ಗೆ ಬರಲಿದೆ.‌ ಈಗಾಗಲೇ ಜನರನ್ನು ಐನೂರು ರೂಪಾಯಿ‌ ಕೊಟ್ಟು ಕರೆಸಿಕೊಳ್ಳಬೇಕು ಎನ್ನುನ ದೌರ್ಭಾಗ್ಯದ ಹೇಳಿಕೆ ನೀಡಿ ಅವರ ಕಾರ್ಯಕ್ರಮಕ್ಕೆ ಹಾಜರಾಗುವವರ ಮರ್ಯಾದೆ ಹರಾಜು ಮಾಡಿದ್ದಾರೆ. ಇನ್ನು ಮುಖ್ಯ ಮಂತ್ರಿ ಗಾದಿಗಾಗಿ ಹೋದಲ್ಲೆಲ್ಲ ಕಾಂಪಿಟೇಶನ್ ತರ ನನಗೇ ಬೇಕು ಎಂದು ಡಿಕೆಶಿ ಮತ್ತು ಸಿಧ್ದರಾಮಯ್ಯ ಜನರಲ್ಲಿ ಹೇಳುತ್ತಿದ್ದು ಜನತೆ ಇವರ ನಾಟಕವನ್ನು ನೋಡಿ ಮರುಕಪಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಡಬಲ್ ಇಂಜಿನ್ ಸರಕಾರ ಉತ್ತಮ ಕೆಲಸ ಕಾರ್ಯಕಗಳನ್ನು ಮಾಡಿದ್ದು, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ ಬರುವುದು ಶತಸಿಧ್ಧ ಎಂದು ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಈಶಾನ್ಯ ರಾಜ್ಯಗಳ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಕುಯಿಲಾಡಿ ಸುರೇಶ್ ನಾಯಕ್

News By: ಜನತಾಲೋಕವಾಣಿನ್ಯೂಸ್

ಉಡುಪಿ: ಈಶಾನ್ಯ ರಾಜ್ಯಗಳ ಚುನಾವಣೆಯ ಪಲಿತಾಂಶ ಬಿಜೆಪಿಗೆ ಹೊಸ ಚೈತನ್ಯ ತುಂಬಿದೆ. ತ್ರಿಪುರ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮಗದೊಮ್ಮೆ ಸರಕಾರ ರಚಿಸಲಿದೆ. ಮೇಘಾಲಯದಲ್ಲೂ ಪಕ್ಷದ ಶಕ್ತಿ ಹೆಚ್ಚಿದೆ. ಈ ಚುನಾವಣಾ ಫಲಿತಾಂಶ ಕರ್ನಾಟಕದ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಗಳಿಸಿದ ಪ್ರಯುಕ್ತ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಸಂಭ್ರಮಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಮರೀಚಿಕೆಯಾಗಿದ್ದ ಈ 7 ರಾಜ್ಯಗಳು ಕಾಂಗ್ರೆಸ್ ನಿಂದ ದೂರ ಉಳಿದ ಪರಿಣಾಮವಾಗಿ, ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಆ ರಾಜ್ಯಗಳಲ್ಲಿ ರೈಲ್ವೆ, ವಿಮಾನ ಯಾನದಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಾಧ್ಯವಾಗಿದೆ. ಇದರ ಫಲವಾಗಿ ಬಂದಿರುವ ಉತ್ತಮ ಫಲಿತಾಂಶ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದರು.

ಅಭಿವೃದ್ಧಿಯೇ ಬಿಜೆಪಿಯ ಮೂಲ ಮಂತ್ರವಾಗಿದೆ. ಕೇಂದ್ರದ ಸಹಯೋಗದೊಂದಿಗೆ ರಾಜ್ಯದ ಡಬಲ್ ಇಂಜಿನ್ ಸರಕಾರ ರಾಜ್ಯದಲ್ಲಿ ವಿಮಾನ ನಿಲ್ದಾಣ, ರೈಲ್ವೆ ಸೇವೆ, ಶುದ್ಧ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ ಸಹಿತ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬದ್ಧತೆ ಮೆರೆದು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಸದಾ ಹುರುಳಿಲ್ಲದ ಅಪಪ್ರಚಾರದಲ್ಲಿ ತೊಡಗಿದೆ. ಜನತೆಯ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ಸಿನ ಸಭೆಗಳಿಗೆ 500 ರೂಪಾಯಿ ಕೊಟ್ಟು ಜನರನ್ನು ಕರೆ ತರುವ ಪರಿಸ್ಥಿತಿಯನ್ನು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಮಾತಿನ ಮೂಲಕ ದೃಢೀಕರಿಸಿರುವುದು ಕಾಂಗ್ರೆಸ್ಸಿನ ಅಧ:ಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಾಗ ನೈಜ ಸ್ಥಿತಿ ಸಾಬೀತಾಗಿ, ಕಾಂಗ್ರೆಸ್ಸಿನ ಅಧಿಕಾರ ಹಿಡಿಯುವ ಹಗಲು ಕನಸು ಭಗ್ನಗೊಳ್ಳಲಿದೆ. ಕಾಂಗ್ರೆಸ್ ಕನಿಷ್ಠ 75 ಸ್ಥಾನ ಗಳಿಸಲೂ ಸಾಧ್ಯವಿಲ್ಲ.

ವಿಧಾನಸಭಾ ಚುನಾವಣಾ ಪೂರ್ವಸಿದ್ಧತೆಗಾಗಿ ನಡೆದ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ ಮುಂತಾದ ಕಾರ್ಯ ಚಟುವಟಿಕೆಗಳಿಂದ ಜನತೆಯ ನಾಡಿಮಿಡಿತ ರುಜುವಾತಾಗಿದೆ. ಮಗದೊಮ್ಮೆ ರಾಜ್ಯದ ಜನತೆ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಐದೂ ಸ್ಥಾನಗಳ ಗೆಲುವಿನ ಜೊತೆಗೆ ಪೂರ್ಣ ಬಹುಮತದ ಬಿಜೆಪಿ ನೇತೃತ್ವದ ಸರಕಾರ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಕುಯಿಲಾಡಿ ಹೇಳಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ದೊರೆತ ಅಭೂತಪೂರ್ವ ಗೆಲುವು ಅಭಿವೃದ್ಧಿ ಪರ ದೊರೆತ ಗೆಲುವು, ಪಕ್ಷದ ಕಾರ್ಯಕರ್ತರಿಗೆ ದೊರೆತ ವಿಜಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅಭಿವೃದ್ಧಿಯ ನಾಗಾಲೋಟವನ್ನು ಸಹಿಸದ ಕಾಂಗ್ರೆಸ್ ಯಾವುದೇ ಅಭಿವೃದ್ಧಿಯ ವಿಚಾರಗಳಿಲ್ಲದೆ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಇತರ ರಾಜ್ಯಗಳಲ್ಲಿ ಈ ಹಿಂದೆ ನೀಡಿರುವ ಭರವಸೆಗಳನ್ನೇ ಈಡೇರಿಸದ ಕಾಂಗ್ರೆಸ್, ವಿರೋಧ ಪಕ್ಷದ ಸ್ಥಾನಕ್ಕೂ ಹೆಣಗಾಡುವ ಸ್ಥಿತಿಯಲ್ಲಿದ್ದು, ಭರವಸೆಯ ಗ್ಯಾರಂಟಿ ಕಾರ್ಡ್ ವಿತರಿಸುವುದು ಹಾಸ್ಯಾಸ್ಪದವಾಗಿದೆ. ಜನತೆ ಪ್ರಬುದ್ಧರಾಗಿದ್ದು ಕಾಂಗ್ರೆಸ್ಸಿನ ಸುಳ್ಳಿನ ಜಾಲಕ್ಕೆ ಮರುಳಾಗದೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆ ಸಹಿತ ರಾಜ್ಯದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಕೈ ಜೋಡಿಸಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ.ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಪ್ರಧಾನ ಕಾರ್ಯದರ್ಶಿ ಅಲ್ವಿನ್ ಡಿಸೋಜ, ಪ್ರಮುಖರಾದ ಶ್ಯಾಮಲಾ ಎಸ್. ಕುಂದರ್, ದಿನಕರ ಶೆಟ್ಟಿ ಹೆರ್ಗ, ವಿಜಯ ಕೊಡವೂರು, ವೆಂಕಟರಮಣ ಕಿದಿಯೂರು, ಸುಂದರ್ ಜೆ. ಕಲ್ಮಾಡಿ, ಚಂದ್ರಶೇಖರ ಪ್ರಭು, ಕೃಷ್ಣಪ್ಪ ಜತ್ತನ್, ದುರ್ಗಾದಾಸ್, ದಯಾಶಿನಿ, ಸುಜಾಲ ಸತೀಶ್, ಸುಧಾ ಪೈ, ಶಕುಂತಳಾ ಶೆಟ್ಟಿ, ಕಾವೇರಿ, ಶಾಂತಿ, ಶೈಲಜಾ ಮತ್ತಿತರರು ಉಪಸ್ಥಿತರಿದ್ದರು.

ಕಾಪು ವಿಧಾನಸಭಾ ಕ್ಷೇತ್ರ: ಚುನಾವಣಾ ಪೂರ್ವಭಾವಿ ಸಭೆ

News By: ಜನತಾಲೋಕವಾಣಿನ್ಯೂಸ್

ಕಾಪು: ಚುನಾವಣಾ ಪೂರ್ವಭಾವಿಯಾಗಿ ಕಾಪು ಕ್ಷೇತ್ರದಲ್ಲಿ ಎಲ್ಲ ಪದಾಧಿಕಾರಿಗಳ ಸರಣಿ ಸಭೆ ನಡೆಯಿತು. ಪದಾಧಿಕಾರಿಗಳ, ಮೋರ್ಚಗಳ, ಮಹಾಶಕ್ತಿಕೇಂದ್ರಗಳ, ಹಾಗು ಹಲವು ಅಪೇಕ್ಷಿತ ಪದಾಧಿಕಾರಿಗಳ ಸಭೆಗಳು ಪತ್ಯೇಕವಾದ ಅವಧಿಗಳೊಂದಿಗೆ ನಡೆಯಿತು. ಸುಮಾರು ಮುನ್ನೂರರಷ್ಟು ಸಂಖ್ಯೆ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ದ್ರಢ ಸಂಕಲ್ಪ ಹೊತ್ತು ತೆರಳಿದರು.

ಈ ಅವಧಿಗಳಲ್ಲಿ ಆಯಾ ಪದಾಧಿಕಾರಿಗಳ ಜವಾಬ್ದಾರಿಗಳು, ಹಾಗೂ ಚುನಾವಣೆ ಗೆಲ್ಲಬೇಕಾದ ಅನಿವಾರ್ಯತೆ ಹಾಗೂ ಕಾರ್ಯಕತಂತ್ರಗಳ ಬಗ್ಗೆ ವಿಮರ್ಶೆ ಹಾಗೂ ಚರ್ಚೆ ನಡೆಯಿತು. ಯಾವುದೇ ಭಾಷಣಗಳಿಗೆ ಸೀಮಿತವಾಗದೆ ಜೇವಲ ಸಂಘಟನಾತ್ಮಕವಾಗಿ‌ ಚುನಾವಣೆ ಎದುರಿಸಿ ಗೆಲ್ಲುವ ಕುರಿತು ಚರ್ಚಿಸಲಾಯಿತು.

ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರ ಮಾರ್ಗದರ್ಶನ ನೀಡಿದರು. ಸರಣಿ ಸಭೆಗಳಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಯನ ಗಣೇಶ್, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ವಿಭಾಗ ಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಕುಮಾರ್, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಟ್ಟಾರು ರತ್ನಾಕರ ಹೆಗ್ಡೆ, ಶ್ಯಾಮಲ ಕುಂದರ್, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಅನಿಲ್ ಶೆಟ್ಟಿ , ಜಿಲ್ಲಾ ಸಹಕಾರಿ ಪ್ರಕೋಷ್ಠ ಸಂಚಾಲಕರಾದ ಮುರಳೀಧರ ಪೈ, ಮಂಡಲ ಪದಾಧಿಕಾರಿಗಳು ಭಾಗವಹಿಸಿದ್ದರು. ಮಂಡಲ ಹಾಗೂ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ರೇಲ್ವೆ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ

News By: ಜನತಾಲೋಕವಾಣಿನ್ಯೂಸ್

ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗದ ಜನರ ಬೇಡಿಕೆಯನ್ನು ಕೇಂದ್ರ ಸರ್ಕಾರದ ರೇಲ್ವೆ ಇಲಾಖೆ ಈಡೇರಿಸಿದೆ. ಈ ಕೆಳಗಿನ ರೈಲುಗಳ ನಿಲುಗಡೆಗೆ ಬಹುದಿನಗಳಿಂದ ಜನರ ಬೇಡಿಕೆಯಿದ್ದು ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ರೇಲ್ವೆ ಸಚಿವರಿಗೆ ಪತ್ರ ಬರೆದು, ಸಭೆ ನಡೆಸಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ರೇಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಕೆಳಗಿನ ರೈಲುಗಳಿಗೆ, ಕೆಳಕಂಡ ರೇಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಆದೇಶವನ್ನು ಹೊರಡಿಸಿದ್ದಾರೆ.

1. ಕುಂದಾಪುರದಲ್ಲಿ ನೇತ್ರಾವತಿ ಎಕ್ಸಪ್ರೆಸ್ (Train 13645/46) ನಿಲುಗಡೆ ಬಗ್ಗೆ ಸಾರ್ವಜನಿಕರಿಂದ ಬಹಳ ಒತ್ತಾಯವಿತ್ತು, ಈ ಬಗ್ಗೆ ಕುಂದಾಪುರದ ರೇಲ್ವೆ ಹೋರಾಟ ಸಮಿತಿ ಮತ್ತು ಸಾರ್ವಜನಿಕರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಲ್ಲಿ ಮನವಿ ಮಾಡಿ ಒತ್ತಾಯಿಸಿತ್ತು. ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರೊಂದಿಗೆ ಸಭೆ ನಡೆಸಿ ನೇತ್ರಾವತಿ ಎಕ್ಸಪ್ರೆಸ್‍ನ್ನು ಕುಂದಾಪುರದಲ್ಲಿ ನಿಲುಗಡೆಗೊಳಿಸಲು ಕ್ರಮ ಜರುಗಿರುಸುವಂತೆ ಮನವಿ ಮಾಡಿದ್ದರು. ಕರೋನಾ ಸಮಯದಲ್ಲಿ ತಿರುವನಂತಪುರ ಮುಂಬಯಿ ಎಕ್ಸಪ್ರೆಸ್‍ಗೆ (ನೇತ್ರಾವತಿ ಎಕ್ಸಪ್ರೆಸ್) ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ರದ್ದಾಗಿತ್ತು. ತದನಂತರ ನಿಲುಗಡೆ ಪ್ರಾರಂಭವಾಗದೆ ಕುಂದಾಪುರದಿಂದ ಮುಂಬಯಿ ಮತ್ತು ಗೋವಾಕ್ಕೆ ತೆರಳುವ ಮತ್ತು ಮುಂಬಯಿ ಮತ್ತು ಗೋವಾದಿಂದ ಕುಂದಾಪುರಕ್ಕೆ ಸಂಚರಿಸುವ ಹಲವಾರು ಪ್ರಯಾಣಿಕರಿಗೆ ಅನಾನುಕೂಲತೆಯಾಗಿತ್ತು. ಪ್ರಯಾಣಿಕರ ಈ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಈ ಭಾಗದ ಸಂಸದೆ ಹಾಗೂ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಸಕರಾತ್ಮಕವಾಗಿ ಸ್ಪಂದಿಸಿ ಪ್ರಯಾಣಿಕರಿಗೆ ಅನುಕೂಲ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಕುರಿತು ಕೇಂದ್ರ ರೇಲ್ವೆ ಸಚಿವರಲ್ಲಿ ಮನವಿ ಮಾಡಿ, ಪ್ರಯಾಣಿಕರ ಸಮಸ್ಯೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಪರಿಹರಿಸಿದ್ದಾರೆ. ನೇತ್ರಾವತಿ ಎಕ್ಷಪ್ರೆಸ್‍ಗೆ ಕುಂದಾಪುರದಲ್ಲಿ ನಿಲುಗಡೆಗೆ ನೀಡಿ ಕೇಂದ್ರ ರೇಲ್ವೆ ಸಚಿವಾಲಯ ಆದೇಶಿಸಿದೆ.

2. ಯಶವಂತಪುರ- ವಾಸ್ಕೋ-ಡಾ-ಗಾಮಾ ಎಕ್ಸಪ್ರೆಸ್‍ಗೆ (17309/10) ಕಡೂರು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಲು, ಚಿಕ್ಕಮಗಳೂರ ಮತ್ತು ಕಡೂರಿನ ಭಾಗದ ಪ್ರಯಾಣಿಕರು ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಲ್ಲಿ ಒತ್ತಾಯ ಮಾಡಿದ್ದರು. ಬೆಂಗಳೂರಿನಿಂದ ಗೋವಾಕ್ಕೆ /ಗೋವಾದಿಂದ ಬೆಂಗಳೂರಿಗೆ ತೆರಳುವ ಈ ರೈಲಿಗೆ ಕಡೂರಿನಲ್ಲಿ ನಿಲುಗಡೆ ನೀಡುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆಯೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕೇಂದ್ರದ ರೇಲ್ವೆ ಸಚಿವರಿಗೆ ಮನವರಿಕೆ ಮಾಡಿದ್ದರು. ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ ಕೇಂದ್ರದ ರೇಲ್ವೆ ಸಚಿವರು ರೈಲು ಸಂಖ್ಯೆ 17309/10 (ಯಶವಂತಪುರ- ವಾಸ್ಕೋ-ಡಾ-ಗಾಮಾ ಎಕ್ಪಪೆಸ್)ಗೆ ಕಡೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಆದೇಶಿಸಿದ್ದಾರೆ.

3. ಮಂಗಳೂರಿನಿಂದ ಮುಂಬೈ/ಮುಂಬೈನಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ – ಮಂಗಳೂರು ಮತ್ಯಗಂದ ಎಕ್ಸಪ್ರೆಸ್‍ಗೆ (12616/20) ಉಡುಪಿ ಜಿಲ್ಲೆಯ ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡುವ ಬಗ್ಗೆಯೂ ಪ್ರಯಾಣಿಕರಿಂದ ಬೇಡಿಕೆಯಿತ್ತು. ಕರಾವಳಿ ಭಾಗದ ಪ್ರಯಾಣಿಕರಿಗೆ ಮತ್ಸ್ಯಗಂದ ರೈಲು ಬಾರ್ಕೂರು ನಿಲುಗಡೆಗೊಳ್ಳವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ಹೋಟೆಲ್ ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಈ ನಿಲುಗಡೆ ಬಹಳ ಉಪಯುಕ್ತವಾಗಲಿವೆ. ಇವೆಲ್ಲವನ್ನು ಪರಿಗಣಿಸಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರ ಪ್ರಯತ್ನದಿಂದಾಗಿ ರೇಲ್ವೆ ಇಲಾಖೆ ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಅನುಮತಿಯನ್ನು ಹೊರಡಿಸಿದೆ.

4. ಬೆಂಗಳೂರಿನಿಂದ ರಾಜಸ್ಥಾನದ ಬಾರ್ಮರ್ ಸಂಪರ್ಕಕೊಂಡಿಯಾಗಿದ್ದ ಯಶವಂತಪುರ-ಬಾರ್ಮೆರ್ ರೈಲು ಗಾಡಿಗೆ (04806/05) ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲುಗಡೆ ಇಲ್ಲದ ಕಾರಣ ಅನಾನುಕೂಲತೆಯಾಗಿತ್ತು. ಈ ರೈಲು ಗಾಡಿಗೆ ಬಿರೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸಲು ಸ್ಥಳೀಯ ಶಾಸಕರು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ರೇಲ್ವೆ ಸಚಿವರಲ್ಲಿ ಮನವಿ ಮಾಡಿದ್ದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ರೇಲ್ವೆ ಸಚಿವರು ಸದರಿ ರೈಲಿಗೆ ಬಿರೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಆದೇಶಿಸಿದ್ದಾರೆ. ಈ ಹಿಂದೆ ರೈಲುಗಾಡಿಗೆ ತುಮಕೂರು, ಅರಸಿಕೇರೆ ಮತ್ತು ದಾವಣೆಗೆರೆ ರೇಲ್ವೆ ನಿಲ್ದಾಣದಲ್ಲಿ ಮಾತ್ರ ನಿಲುಗಡೆಗೆ ಆದೇಶವಿದ್ದು, ಈಗ ಮಲೆನಾಡಿನ ಹೆಬ್ಬಾಗಿಲು ಬೀರೂರು ನಿಲ್ಲಾಣದಲ್ಲಿಯೂ ಸಹ ಈ ರೈಲು ನಿಲ್ಲಲಿದೆ. ಚಿಕ್ಕಮಗಳೂರಿಗೆ ರಾಜಸ್ಥಾನದಿಂದ ಕಾರ್ಮಿಕರು ಹಾಗೂ ಉದ್ಯಮಿಗಳು ಆಗಮಿಸುತ್ತಿದ್ದು, ಉತ್ತರಭಾರತದಿಂದ ಚಿಕ್ಕಮಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಹಾಗೂ ವ್ಯಾಪಾರೋದ್ಯಮಕ್ಕೆ ಬಹಳ ಅನುಕೂಲವಾಗಲಿದೆಯೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

• ಹೀಗೆ ಕರ್ನಾಟಕ ರಾಜ್ಯದ ಹತ್ತಾರು ಹಿತಾಸಕ್ತಿಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಕಾಲಕಾಲಕ್ಕೆ ಸಾರ್ವಜನಿಕರಿಗೆ ಅನುಕೂಲಕರವಾದ ಸವಲತ್ತುಗಳನ್ನು ಒದಗಿಸಿದೆ. ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತು ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆಯವರು ಸಮರ್ಪಕ ರೀತಿಯಲ್ಲಿ ಸ್ಪಂದಿಸಿದ್ದಾರೆ. ಈ ಎಲ್ಲಾ ರೈಲುಗಳ ನಿಲುಗಡೆ ಆದೇಶದಿಂದ ವಿಶೇಷವಾಗಿ ಕೃಷಿ ಉತ್ಪನ್ನಗಳ ಸಾಗಾಟ ಮತ್ತು ಕರಾವಳಿ ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ, ದೂರದೂರಿನ ಹೋಟೆಲ್ ಉದ್ಯಮ, ಮತ್ತು ಪ್ರವಾಸೋಧ್ಯಮಕ್ಕೆ ಉತ್ತೇಜನ ದೊರೆತಿದೆ.

• ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿದ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರಿಗೆ ಹಾಗೂ ಕೇಂದ್ರ ರೇಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಿಧನ : ಶ್ರೀಮತಿ ರಾಧು ಪೂಜಾರ್ತಿ ಅಂಬಲಪಾಡಿ


ಉಡುಪಿ: ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂದಿರದ ಬಳಿಯ ನಿವಾಸಿ ದಿ! ತೋಮ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ರಾಧು ಪೂಜಾರ್ತಿ(95 ವರ್ಷ) ಇವರು ಫೆ.27ರಂದು ಸ್ವಗೃಹದಲ್ಲಿ ನಿಧನರಾದರು.

ಸುಧೀರ್ಘ ಅವಧಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಇವರು ಭಜನಾ ಮಂದಿರದ ವಾರದ ಭಜನಾ ಪೂಜೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಜನಾನುರಾಗಿಯಾಗಿದ್ದರು.

ಇವರು ಪುತ್ರ ಟೈಲರ್ ಶಂಕರ ಪೂಜಾರಿ ಸಹಿತ ಇಬ್ಬರು ಪುತ್ರಿಯರು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.

ರಾಜ್ಯ ಬಜೆಟ್ ದಿಟ್ಟ ನಿರ್ಧಾರದ ಸಮತೋಲಿತ ಅಭಿವೃದ್ಧಿ ಪರ ಬಜೆಟ್ : ಉಡುಪಿ ಜಿಲ್ಲಾ ಬಿಜೆಪಿ

News By: ಜನತಾಲೋಕವಾಣಿನ್ಯೂಸ್


ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ 2023ನೇ ಸಾಲಿನ ರಾಜ್ಯ ಬಜೆಟ್ ಎಲ್ಲಾ ವರ್ಗದ ಜನತೆ ಹಾಗೂ ಎಲ್ಲಾ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ನೀಡಿರುವ ದಿಟ್ಟ ನಿರ್ಧಾರದ, ಸಮತೋಲಿತ, ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ ಕೆ. ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ಬಜೆಟ್ ನಲ್ಲಿ ಉಡುಪಿ ಜಿಲ್ಲೆಗೆ ನೇರವಾಗಿ ಈ ಕೆಳಗಿನಂತೆ ಹಲವಾರು ಮಹತ್ವಪೂರ್ಣ ಘೋಷಣೆಗಳು ಅನುಕೂಲಕರವಾಗಿವೆ:

* ಮೀನು ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಿ ಅದರ ಪ್ರಯೋಜನ ಮೀನುಗಾರರಿಗೆ ದೊರೆಯುವಂತೆ ಮಾಡುವುದು
* ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
* ಮೀನುಗಾರರ ಸೀಮೆ ಎಣ್ಣೆ ಬಳಕೆಯ ಬೋಟ್ ಗಳನ್ನು ಡೀಸೆಲ್ ಬೋಟ್ ಗಳನ್ನಾಗಿ ಪರಿವರ್ತಿಸಲು ರೂ.50,000 ಸಹಾಯಧನ ನೀಡುವುದು
* ರಾಜ್ಯದಾದ್ಯಂತ ಮೀನುಗಾರರಿಗೆ 10,000 ಮನೆಗಳ ನಿರ್ಮಾಣ
* ಉಡುಪಿ ಜಿಲ್ಲೆಗೊಂದು ಶ್ರೀ ನಾರಾಯಣ ಗುರು ವಸತಿ ಶಾಲೆ
* ಕುಂದಾಪುರದ ಕಂಬದಕೋಣೆಯಲ್ಲಿ ಸೀ ಫುಡ್ ಪಾರ್ಕ್ ಸ್ಥಾಪನೆ
* ಬೈಂದೂರಿನಲ್ಲಿ ಮರಿನಾ ಅಭಿವೃದ್ಧಿಗೆ ಕ್ರಮ
* ಜಿಲ್ಲೆಯಾದ್ಯಂತ ಕೆರೆ, ಬಾವಿ, ನಾಲೆಗಳನ್ನು ಅಭಿವೃದ್ಧಿ ಪಡಿಸುವುದು
* ಮಂಗಳೂರಿನಿಂದ ಮುಂಬೈಗೆ ನೇರ ಜಲ ಸಾರಿಗೆ ವ್ಯವಸ್ಥೆ
* ವಿವಿಧ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಕ್ರಮ

*ರಾಜ್ಯ ಬಜೆಟ್ 2023ರ ಪ್ರಮುಖ ಅಂಶಗಳು:*

ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಇಡುತ್ತಿರುವಂತೆ ಅದೇ ವೇಗದಲ್ಲಿ ಕರ್ನಾಟಕ ರಾಜ್ಯ ಕೂಡ ಅಭಿವೃದ್ಧಿಯಲ್ಲಿ ಮುನ್ನುಗ್ಗುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆಗಳು:

1) ಜಿ.ಎಸ್.ಟಿ. ಸಂಗ್ರಹ ಕಳೆದ ವರ್ಷದ ಬಜೆಟ್ ನಿರೀಕ್ಷೆಗಿಂತ ರೂ.11,000 ಕೋಟಿ ಹೆಚ್ಚು ಸಂಗ್ರಹವಾಗಿದೆ.

2) ಅಬಕಾರಿ ಸಂಗ್ರಹದ ನಿರೀಕ್ಷೆ ರೂ.29,000 ಇದ್ದು, ಸಂಗ್ರಹ ರೂ.32,000 ಕೋಟಿ ಆಗಿದೆ.

3) ಜಿ.ಎಸ್.ಟಿ. ಸಂಗ್ರಹದಲ್ಲಿ ದೊಡ್ಡ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ರಾಜ್ಯ ಸತತ 2ನೇ ಸ್ಥಾನದಲ್ಲಿದೆ.

4) ರಾಜ್ಯಕ್ಕೆ ಎಫ್.ಡಿ.ಐ ಹೆಚ್ಚು ಹರಿದು ಬರುತ್ತಿದೆ.

5) ಕಳೆದ ವರ್ಷದ ಬಜೆಟ್‌ನ ಆದಾಯದ ನಿರೀಕ್ಷೆ ರೂ.1.89 ಲಕ್ಷ ಕೋಟಿ ಆಗಿದ್ದು, ರೂ.2.12 ಲಕ್ಷ ಕೋಟಿ ಸಂಗ್ರಹವಾಗುವ ಮೂಲಕ 12% ಹೆಚ್ಚುವರಿ ಆದಾಯವಾಗಿದೆ.

ಇದೆಲ್ಲದರ ಅರ್ಥ ನಮ್ಮ ದೇಶದಂತೆಯೇ ನಮ್ಮ ರಾಜ್ಯವೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಜನತೆಯ ಖರೀದಿ ಸಾಮರ್ಥ್ಯ ವೃದ್ಧಿಯಾಗುತ್ತಿದೆ.

ಈ ಅಭಿವೃದ್ಧಿ ವೇಗಕ್ಕೆ ಪೂರಕವಾಗಿ ಎಲ್ಲಿಯೂ ಕೊರತೆ ಆಗದ ರೀತಿ ಅತ್ಮವಿಶ್ವಾಸದಿಂದ ಈ ಬಜೆಟ್ ಮಂಡಿಸಲಾಗಿದೆ.

ಈ ಕೆಳಗಿನ ಹೊಸ ಭರವಸೆಗಳನ್ನು ಈ ಬಜೆಟ್‌ ಹೊಂದಿದೆ:

1) ಬಜೆಟ್ ಗಾತ್ರ ರೂ.3,09,182 ಕೋಟಿ ಅಂದರೆ ಕಳೆದ ವರ್ಷಕ್ಕಿಂತ 16.03% ಹೆಚ್ಚು.
2) ಈ ಬಾರಿ ಆದಾಯ ವಿತ್ತೀಯ ಕೊರತೆ ಇಲ್ಲದೆ ರೂ.402 ಕೋಟಿ ರೂಪಾಯಿಗಳ ಆದಾಯ ವಿತ್ತೀಯ ಮಿಗತೆ ಬಜೆಟ್ ಮಂಡಿಸಲಾಗಿದೆ. ಇದು ಕೋವಿಡ್ ನಂತರದ ಬಜೆಟ್‌ಗಳಲ್ಲಿ ಪ್ರಥಮವಾಗಿದೆ.
3) ಕೇಂದ್ರ ಸರಕಾರದ ಬಜೆಟ್‌ನಂತೆ ರಾಜ್ಯದಲ್ಲಿಯೂ 20% ಹಣವನ್ನು ಅಂದರೆ ರೂ.58,327 ಕೋಟಿಯನ್ನು ಬಂಡವಾಳ ವೆಚ್ಚಕ್ಕಾಗಿ ಉಪಯೋಗಿಸಲಾಗಿದೆ.
4) ನಮ್ಮ ಜಿ.ಎಸ್.ಡಿ.ಪಿ. ರೂ.23.34 ಲಕ್ಷ ಕೋಟಿ ಆಗಿದ್ದು, 7% ದಲ್ಲಿ ಅಭಿವೃದ್ಧಿಯಾಗಲಿದೆ.
5. ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ. ಯ 2.6% ಇರಿಸಲಾಗಿದೆ. ವಿತ್ತೀಯ ಕೊರತೆ 3% ಕ್ಕಿಂತ ಕಡಿಮೆ ಇದ್ದರೆ ಉತ್ತಮ.
6) ಇದು ಒಂದು ಸಮತೋಲನ ಕಾಯ್ದುಕೊಂಡಿರುವ ಬಜೆಟ್ ಆಗಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಎಷ್ಟು ಪ್ರಾಮುಖ್ಯತೆ ಕೊಡಲಾಗಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಹಳ್ಳಿಗಳಿಗೂ ಕೊಡಲಾಗಿದೆ.

ಆರ್ಥಿಕ ಸಮತೋಲನ, ಪ್ರಾದೇಶಿಕ ಸಮತೋಲನ, ಸಾಮಾಜಿಕ ಸಮತೋಲನ ಕಾಪಾಡುವ ಉದ್ದೇಶದಿಂದ ಬಜೆಟ್ ಹೂಡಿಕೆಗಳನ್ನು ಈ ಕೆಳಗಿನ 6 ವಲಯಗಳನ್ನಾಗಿ ವಿಂಗಡಿಸಿ ವಿತರಿಸುವ ಪ್ರಯತ್ನ ಮಾಡಲಾಗಿದೆ:

1) ಕೃಷಿ ಮತ್ತು ಪೂರಕ ಚಟುವಟಿಕೆ : ರೂ.39,031 ಕೋಟಿ
2) ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ : ರೂ.80,318 ಕೋಟಿ
3) ಆರ್ಥಿಕ ಅಭಿವೃದ್ಧಿಗೆ ಉತ್ತೇಜನ : ರೂ.61,498 ಕೋಟಿ
4) ಬೆಂಗಳೂರು ಸಮಗ್ರ ಅಭಿವೃದ್ಧಿ : ರೂ.9,698 ಕೋಟಿ
5) ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂರಕ್ಷಣೆ : ರೂ.3,458 ಕೋಟಿ
6) ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ : ರೂ.68,585 ಕೋಟಿ.

*1. ಕೃಷಿ ಮತ್ತು ಪೂರಕ ಚಟುವಟಿಕೆ* :

* ಕೃಷಿಗೆ ಬಡ್ಡಿ ರಹಿತ ಸಾಲ ರೂ.5 ಲಕ್ಷಕ್ಕೆ ಏರಿಕೆಯಿಂದ 30 ಲಕ್ಷ ರೈತರಿಗೆ ಲಾಭ
* ಸಿರಿ ದಾನ್ಯಕ್ಕೆ ರೂ.10 ಸಾವಿರ ಸಬ್ಸಿಡಿ.
* ಬಡ್ಡಿ ಸಬ್ಸಿಡಿಗೆ ಸಾಲ ಮಿತಿ ರೂ.10 ಲಕ್ಷಕ್ಕೆ ಏರಿಕೆ.
* ತಿಪಟೂರಿನಲ್ಲಿ ತೋಟಗಾರಿಕಾ ವಿಶ್ವವಿದ್ಯಾನಿಲಯ ಸ್ಥಾಪನೆ
* ಜಲ ಹೊಂಡ ವಿಸ್ತರಿಸುವ ಜಲನಿಧಿ ಯೋಜನೆ
* ಶಿಡ್ಲ ಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ
* ಬಳ್ಳಾರಿ ಜಿಲ್ಲೆಯಲ್ಲಿ ಮೆಗಾ ಡೈರಿ ಸ್ಥಾಪನೆ
* ಕರಾವಳಿಯ ಸೀಮೆಎಣ್ಣೆ ಬೋಟ್‌ಗಳನ್ನು ಡಿಸೀಲ್‌ಗೆ ಪರಿವರ್ತನೆ, ರೂ.50,000 ಸಬ್ಸಿಡಿ
* ಡಿಸೀಲ್ ಸಬ್ಸಿಡಿ ರೂ.4 ಲಕ್ಷ ಖರೀದಿ ತನಕ ವಿಸ್ತರಣೆ
* 10,000 ಮೀನುಗಾರರಿಗೆ ವಸತಿ
* ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಮೀನು ಮಾರುಕಟ್ಟೆ
* ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ.5,000 ಕೋಟಿ
* ಕಳಸ ಬಂಡೂರಿ ಯೋಜನೆಗೆ ರೂ.1,000 ಕೋಟಿ
* ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ

*2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ*:

* ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ
* 9,556 ಹೊಸ ಶಾಲಾ ಕೊಠಡಿ ನಿರ್ಮಾಣ
* ಶಾಲೆಗಳಲ್ಲಿ 5,581 ಶೌಚಾಲಯ ನಿರ್ಮಾಣ
* ಹಳ್ಳಿ ಮುತ್ತು ಯೋಜನೆ – ಸಿ.ಇ.ಟಿ. ಪಾಸಾಗಿ ಬರುವ 5 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ
* 7 ಇಂಜಿನಿಯರಿಂಗ್ ಕಾಲೇಜುಗಳನ್ನು ಕೆ.ಐ.ಟಿ. ಗಳಾಗಿ ಪರಿವರ್ತನೆ
* 2 ಬಾರಿ ಆರೋಗ್ಯ ತಪಾಸಣೆಯ ಮನೆ ಮನೆಗೆ ಆರೋಗ್ಯ ಯೋಜನೆ
* 7 ತಾಲೂಕು ಕೇಂದ್ರಗಳಲ್ಲಿ 100 ಹಾಸಿಗೆಯ ಆಸ್ಪತ್ರೆಗಳು
* ನಗು-ಮಗು ಯೋಜನೆ
* ಸಾವಣೂರಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆ
* ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
* ಭೂ ರಹಿತ ಕೃಷಿ ಕಾರ್ಮಿಕರಿಗೆ ರೂ.1,000 ತಿಂಗಳ ಸಹಾಯಧನ
* 1 ಲಕ್ಷ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ.
* ದುಡಿಯುವ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್
* 8 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
* ವಿದೇಶ ವ್ಯಾಸಾಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ರೂ.20 ಲಕ್ಷ
* 5 ಲಕ್ಷ ಮನೆ ನಿರ್ಮಾಣದ ಗುರಿ

*3. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ* :

* ಗ್ರಾಮ ಪಂಚಾಯತ್‌ಗಳಿಗೆ ಅನುದಾನ ಹೆಚ್ಚಳ : ರೂ.24 ಲಕ್ಷದಿಂದ ರೂ.60 ಲಕ್ಷ ತನಕ
* 5 ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆ ನಿರ್ಮಾಣ.
* 2 ಸಾವಿರ ಕೆರೆಗಳ ಅಭಿವೃದ್ಧಿ
* 330 ಗ್ರಾಮಗಳಲ್ಲಿ ಗ್ರಂಥಾಲಯ
* 1,700 ಕಿಲೋಮೀಟರ್ ರಾಜ್ಯ ಹೆದ್ದಾರಿ ನಿರ್ಮಾಣ
* ದಾವಣಗೆರೆ, ಕೊಪ್ಪಳದಲ್ಲಿ ವಿಮಾನ ನಿಲ್ದಾಣ
* ಹಳೆ ಮಂಗಳೂರು ಬಂದರಿನಲ್ಲಿ ಶಿಪ್‌ಯಾರ್ಡ್
* ಬೈಂದೂರಿನಲ್ಲಿ ಮರಿನಾ ಅಭಿವೃದ್ಧಿ
* ಜಿಲ್ಲೆಯ ಗುರುಪುರ ಮತ್ತು ನೇತ್ರಾವತಿ ನದಿ ಸೇರಿ ಇತರೆಡೆ ಬಾರ್ಜ್‌ಗಳ ಸೇವೆ

*4. ಬೆಂಗಳೂರು ಸಮಗ್ರ ಅಭಿವೃದ್ಧಿ :*

* ಸಂಚಾರ ದಟ್ಟಣೆ ನಿವಾರಣೆಗೆ 75 ಜಂಕ್ಷನ್‌ಗಳ ನಿರ್ಮಾಣ
* ಹೆಚ್ಚುವರಿ 40.15 ಕಿ.ಮೀ ಮೆಟ್ರೋ ಸೇವೆ.
* ಮಹಿಳೆಯರಿಗಾಗಿ 250 ‘She Toilet’ ನಿರ್ಮಾಣ

*5. ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂರಕ್ಷಣೆ :*

* ಬೆಂಗಳೂರಿನಲ್ಲಿ ಶ್ರೀ ಭುವನೇಶ್ವರಿ ತಾಯಿಯ ಮೂರ್ತಿ ಪ್ರತಿಷ್ಠಾಪನೆ
* ಪ್ರತೀ ಗ್ರಾಮ ಪಂಚಾಯತ್‌ಗಳಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ
* ಕರ್ನಾಟಕ ಒಲಂಪಿಕ್ ಕನಸಿನ ಯೋಜನೆ ನಿಧಿ ಸ್ಥಾಪನೆ
* ಅಂಜನಾದ್ರಿ ಬೆಟ್ಟ, ಚಾಮುಂಡಿ ಬೆಟ್ಟ, ಹಂಪಿ ಸ್ಮಾರಕಗಳ ಅಭಿವೃದ್ಧಿ
* ಹೊನ್ನಾವರದಲ್ಲಿ ಚೆನ್ನಭೈರವ ದೇವಿ ಸ್ಮಾರಕ ಉದ್ಯಾನ ನಿರ್ಮಾಣ
* ರಾಮನಗರದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ

*6. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ :*

* ಗ್ರಾಮ ಸಹಾಯಕರ ಹುದ್ದೆಯನ್ನು ಜನಸೇವಕ ಎಂದು ಮರುನಾಮಕರಣ
* ಧಾರ್ಮಿಕ ದೇವಸ್ಥಾನ ಮತ್ತು ಮಠಗಳ ಅಭಿವೃದ್ಧಿಗಾಗಿ ರೂ.1 ಸಾವಿರ ಕೋಟಿ ನಿಯೋಜನೆ
* ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಲಾರಿ ಚಾಲಕರು, ಇ-ಕಾಮರ್ಸ್ ಸೇವೆ ನೀಡುವವರಿಗೆ ರೂ.4 ಲಕ್ಷ ವಿಮಾ ಸೌಲಭ್ಯ
* ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1,000 ಹೊಸ ಬಸ್‌ಗಳ ವ್ಯವಸ್ಥೆ

*ತೆರಿಗೆ ಪ್ರಸ್ತಾವನೆ :*

* ವೇತನದಾರರ ವೃತ್ತಿ ತೆರಿಗೆ ಮಿತಿ ರೂ.15,000ದಿಂದ ರೂ.25,000ಕ್ಕೆ
* ಜಿ.ಎಸ್.ಟಿ ಪೂರ್ವ ಬಾಕಿ ತೆರಿಗೆಗಳಿಗೆ ಕರಸಮಾಧಾನ ಯೋಜನೆ

*ಮಾ.13ರಿಂದ 15ರ ವರೆಗೆ ಜಿಲ್ಲೆಯಲ್ಲಿ ಬಿಜೆಪಿ ‘ವಿಜಯ ಸಂಕಲ್ಪ ಯಾತ್ರೆ’ :*

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರಿಂದ ಚಾಲನೆಗೊಂಡು ರಾಜ್ಯದಾದ್ಯಂತ ನಡೆಯಲಿರುವ ‘ವಿಜಯ ಸಂಕಲ್ಪ ಯಾತ್ರೆ’ ಮಾ.13 ರಿಂದ 15ರ ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಈ ಕೆಳಗಿನಂತೆ ನೆರವೇರಲಿದೆ:

* ಮಾರ್ಚ್ 13, ಮಧ್ಯಾಹ್ನ 3.30ಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಆಗಮನ, ಪ್ರಮುಖ ಸ್ಥಳಗಳಲ್ಲಿ ಸ್ವಾಗತ, ರೋಡ್ ಶೋ. ಸಂಜೆ 5.30ಕ್ಕೆ ಸಾರ್ವಜನಿಕ ಸಭೆ

* ಮಾರ್ಚ್ 14, ಬೆಳಿಗ್ಗೆ 9.00ಕ್ಕೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಧಾರ್ಮಿಕ ಸ್ಥಳ ಹಾಗೂ ಪ್ರಮುಖ ವ್ಯಕ್ತಿಗಳ ಬೇಟಿ, ಪತ್ರಿಕಾ ಗೋಷ್ಠಿ, ರೋಡ್ ಶೋ.

* ಮಾರ್ಚ್ 14, ಮದ್ಯಾಹ್ನ 2.30ಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಆಗಮನ. ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಮತ್ತು ರೋಡ್ ಶೋ.

* ಮಾರ್ಚ್ 14, ಸಂಜೆ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮನ. ಪ್ರಮುಖ ಸ್ಥಳಗಳಲ್ಲಿ ಸ್ವಾಗತ, ಸಂಜೆ 5.30ಕ್ಕೆ ಸಾರ್ವಜನಿಕ ಸಭೆ

* ಮಾರ್ಚ್ 15, ಬೆಳಿಗ್ಗೆ 9.00ಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಧಾರ್ಮಿಕ ಸ್ಥಳ ಹಾಗೂ ಪ್ರಮುಖ ವ್ಯಕ್ತಿಗಳ ಬೇಟಿ. ಪತ್ರಿಕಾ ಗೋಷ್ಠಿ. ರೋಡ್ ಶೋ. ಬಳಿಕ ಶೃಂಗೇರಿ ವಿಧಾನಸಭಾ ಕ್ರೇತ್ರಕ್ಕೆ ತೆರಳಲಿದೆ.

‘ವಿಜಯ ಸಂಕಲ್ಪ ಯಾತ್ರೆ’ಯ ರಾಜ್ಯ ಸಹ ಸಂಚಾಲಕರಾಗಿ ಕಿಶೋರ್ ಕುಮಾರ್ ಕುಂದಾಪುರ ಹಾಗೂ ಜಿಲ್ಲಾ ಸಂಚಾಲಕರಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಹ ಸಂಚಾಲಕರಾಗಿ ಗಿರೀಶ್ ಎಮ್. ಅಂಚನ್ ಮತ್ತು ಅನಿತಾ ಶ್ರೀಧರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಕ್ರಿಯವಾಗಿ ಭಾಗವಹಿಸಿ ‘ವಿಜಯ ಸಂಕಲ್ಪ ಯಾತ್ರೆ’ಯನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ವಿನಂತಿಸಿದರು.

*ಫೆ.26 ಬೆಳಿಗ್ಗೆ 11.00ಕ್ಕೆ ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ:*

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಚಲಿತ ವೈಶಿಷ್ಟ್ಯಪೂರ್ಣ ವಿದ್ಯಮಾನಗಳಿಗೆ ಬೆಳಕು ಚೆಲ್ಲುವ ವಿಚಾರಗಳೊಂದಿಗೆ ಪ್ರತೀ ತಿಂಗಳ ಕೊನೆಯ ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ನಡೆಸಿಕೊಡುವ ಮನ್ ಕೀ ಬಾತ್ ಕಾರ್ಯಕ್ರಮ ಫೆ.26ರಂದು ನಡೆಯಲಿದೆ.

ಪಕ್ಷದ ಸೂಚನೆಯಂತೆ, ಫೆ.26 ರವಿವಾರ ಬೆಳಿಗ್ಗೆ 11.00 ಗಂಟೆಗೆ ಪ್ರಸಾರವಾಗುವ ಪ್ರಧಾನಿ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಬೂತ್ ಅಧ್ಯಕ್ಷರ ಸಹಿತ ಬೂತ್ ಸಮಿತಿ ಸದಸ್ಯರು, ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತ ಬಂಧುಗಳು ಮತ್ತು ಪಕ್ಷದ ಹಿತೈಷಿಗಳು ವೀಕ್ಷಿಸುವ ಜೊತೆಗೆ 2 ಫೋಟೋ ಮತ್ತು ವಿವರವನ್ನು ಕಾರ್ಯಕ್ರಮ ಮುಗಿದ ತಕ್ಷಣ ಬೂತ್ ಅಧ್ಯಕ್ಷರು ನಿಗದಿತ ಲಿಂಕ್ ಮೂಲಕ ಅಪ್ಲೋಡ್ ಮಾಡುವಂತೆ ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ವಿನಂತಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಮತ್ತು ಜಿಲ್ಲಾ ಸಹ ವಕ್ತಾರ ಪ್ರತಾಪ್ ಶೆಟ್ಟಿ ಚೇರ್ಕಾಡಿ ಉಪಸ್ಥಿತರಿದ್ದರು.

ಕಾಂಗ್ರೆಸ್ಸಿನ ಅಪಪ್ರಚಾರಗಳಿಗೆ ಕಡಿವಾಣದ ಜೊತೆಗೆ ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಸ್ಥಾನದ ಗೆಲುವಿಗೆ ಶ್ರಮಿಸಿ: ಕುಯಿಲಾಡಿಬಿಜೆಪಿ ಮಂಗಳೂರು ವಿಭಾಗ ಮಟ್ಟದ ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರ

News By: ಜನತಾಲೋಕವಾಣಿನ್ಯೂಸ್

ಉಡುಪಿ: 2014ರ ಚುನಾವಣೆಯನ್ನು ಅವಲೋಕಿಸಿದರೆ ಸಾಮಾಜಿಕ ಜಾಲತಾಣದ ಅಗತ್ಯತೆ ಮತ್ತು ಅನಿವಾರ್ಯತೆಯ ಮಹತ್ವ ತಿಳಿಯುತ್ತದೆ. ಇಂದು ಸಾಮಾಜಿಕ ಜಾಲತಾಣದ ಮೂಲಕ ಯಾವುದೇ ಕ್ಷಣದ ಘಟನೆಗಳನ್ನು ಗಮನಿಸಿ ಅದೇ ಕ್ಷಣಕ್ಕೆ ಸ್ಪಂದಿಸುವ ಪ್ರಕ್ರಿಯೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಪ್ರಮುಖರು ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳ ಅಪಪ್ರಚಾರ ಹಾಗೂ ಸುಳ್ಳಿನ ಜಾಲವನ್ನು ಭೇದಿಸಿ ಕಡಿವಾಣ ಹಾಕುವ ಜೊತೆಗೆ ಸರಕಾರದ ಅಭಿವೃದ್ಧಿ ಕೆಲಸ ಕಾರ್ಯಗಳು ಹಾಗೂ ಜನಪರ ಯೋಜನೆಗಳನ್ನು ಪ್ರಚುರಪಡಿಸಿ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ 13 ಸ್ಥಾನಗಳನ್ನು ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲಲು ಅತ್ಯಮೂಲ್ಯ ಕೊಡುಗೆ ನೀಡಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಮಂಗಳೂರು ವಿಭಾಗ ಮಟ್ಟದ ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ, ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಸಂಯೋಜಕ ಪಂಕಜ್ ಶುಕ್ಲಾರವರನ್ನು ಶಾಲು ಹೊದೆಸಿ ಗೌರವಿಸಿ ಮಾತನಾಡಿದರು.

ಇಂದಿನ ರಾಜಕೀಯ ವಿದ್ಯಮಾನಗಳ ಸಹಿತ ದೇಶ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳು ಹಾಗೂ ವಿವಿಧ ಯೋಜನೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಜನತೆಯ ನಡುವೆ ಪ್ರಚಲಿತಗೊಳಿಸಿ, ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಪರ ಜನಾಭಿಪ್ರಾಯ ಮೂಡಿಸಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ಯಲು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು.

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ನಿಯುಕ್ತಿಗೊಂಡಿರುವ ಬಿಜೆಪಿ ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಸಂಯೋಜಕ ಪಂಕಜ್ ಶುಕ್ಲಾರವರು ಸಾಮಾಜಿಕ ಜಾಲತಾಣದ ವಿವಿಧ ಆಯಾಮಗಳನ್ನು ವಿವರಿಸಿ, ವಿಸ್ತೃತ ಉಪಯುಕ್ತ ಮಾಹಿತಿಯ ಮೂಲಕ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಸಾಮಾಜಿಕ ಜಾಲತಾಣ ರಾಜ್ಯ ಸಹ ಸಂಚಾಲಕ ನರೇಂದ್ರ ಮೂರ್ತಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಸಮಯದ ಬದ್ಧತೆಯೊಂದಿಗೆ ವಿರೋಧ ಪಕ್ಷಗಳ ನಕಾರಾತ್ಮಕ ಸುದ್ಧಿಗಳಿಗೆ ತಕ್ಕ ಉತ್ತರ ನೀಡುವ ಜೊತೆಗೆ ಸರಕಾರದ ಸಕಾರಾತ್ಮಕ ವಿಚಾರಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ರಾಜ್ಯ ಸಮಿತಿ ಸದಸ್ಯ ಮಹೇಶ್ ಪೂಜಾರಿ ಕುಂದಾಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿಗಳಾದ ನಳಿನಿ ಪ್ರದೀಪ್ ರಾವ್, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಸುದೀಪ್ ಶೆಟ್ಟಿ ನಿಟ್ಟೆ, ದ.ಕ. ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಅಜಿತ್ ಕುಮಾರ್ ಉಲ್ಲಾಳ್, ಸಹ ಸಂಚಾಲಕ ದೀರೇಶ್ ಕೆ., ದ.ಕ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಸೂರಜ್ ಜೈನ್ ಮಾರ್ನಾಡ್, ದ.ಕ. ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ್, ಉಡುಪಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳಾದ ಅಭಿರಾಜ್ ಸುವರ್ಣ, ಪ್ರವೀಣ್ ಪೂಜಾರಿ, ಸತೀಶ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ರಜನಿ ಹೆಬ್ಬಾರ್, ಅಶ್ವಿನಿ ಆರ್. ಶೆಟ್ಟಿ, ಪೂರ್ಣಿಮಾ ಶೆಟ್ಟಿ ಹಾಗೂ ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಜಿಲ್ಲಾ, ಮೋರ್ಚಾ, ಮಂಡಲ ತಂಡಗಳ ಪ್ರಮುಖರು ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ವಂದಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ರಾಜ್‌ಕುಮಾರ್‌ ಬಹರೈನ್, ಅಂಬಲಪಾಡಿ ಇವರಿಗೆ ಹುಟ್ಟೂರ ಸನ್ಮಾನ ‘ರಾಜಾಭಿನಂದನೆ’

News By: ಜನತಾಲೋಕವಾಣಿನ್ಯೂಸ್

ಉಡುಪಿ, ಫೆ.21: ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ರಾಜ್ ಕುಮಾರ್‌ ಬಹರೈನ್, ಅಂಬಲಪಾಡಿ ಇವರಿಗೆ ಹುಟ್ಟೂರ ಸಮ್ಮಾನ ‘ರಾಜಾಭಿನಂದನೆ’ ಉಡುಪಿ ಪುರಭವನದಲ್ಲಿ ನಡೆಯಿತು.

ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಂ ಧರ್ಮಸ್ಥಳ ಇದರ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರು ಮಾತನಾಡಿ, ಅಂಬಲಪಾಡಿ ನಿವಾಸಿ ದಿ। ಭಾಸ್ಕರ್ ಪಾಲನ್, ಸುಂದರಿ ಪೂಜಾರ್ತಿಯವರ ಜೇಷ್ಠ ಪುತ್ರರಾಗಿ ಸಮಾಜ ಸೇವೆ ಹಾಗೂ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯ ಕಂಪನ್ನು ಅರಬ್ ರಾಷ್ಟ್ರದಲ್ಲಿ ಪಸರಿಸಲು ಅಹರ್ನಿಶಿ ತೊಡಗಿಸಿಕೊಂಡು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವುದು ಪ್ರಶಂಸನೀಯ ಎಂದರು.

ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್‌ ಕುಮಾರ್ ರವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ‘ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ; ಸಂಘಟನೆಯಿಂದ ಬಲಯುತರಾಗಿರಿ’ ಎನ್ನುವ ಉದಾತ್ತ ಸಂದೇಶಕ್ಕೆ ಅನುಗುಣವಾಗಿ ಬಹರೈನ್ ನಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿ ನಡೆಸುವುದರ ಜತೆಗೆ ಕನ್ನಡ ಕಲಿಕೆ ತರಗತಿಯನ್ನೂ ಪ್ರಾರಂಭಿಸಿದ ಮತ್ತು ಅರಬ್ ರಾಷ್ಟ್ರದಲ್ಲಿ ಕನ್ನಡ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದ ರಾಜ್‌ಕುಮಾರ್ ಅವರಿಗೆ ಅರ್ಹವಾಗಿಯೇ 2022ನೇ ಸಾಲಿನ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ ಎಂದರು.

ಅಭಿನಂದನಾ ಭಾಷಣಗೈದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್‌ಸಾ‌ರ್ ಅವರು, ಮೇರು ನಟರಾದ ಕೀರ್ತಿಶೇಷ ಡಾ| ಪುನೀತ್ ರಾಜ್‌ ಕುಮಾರ್ ಹಾಗೂ ಡಾ| ಶಿವರಾಜ್‌ ಕುಮಾರ್ ಅವರನ್ನು ಬಹರೈನ್‌ಗೆ ಕರೆಸಿರುವುದು, ‘ಪುನೀತ್ ಗಾನ ನಮನ’ ಕಾರ್ಯಕ್ರಮವನ್ನು ಆಯೋಜಿಸಿರುವುದು ರಾಜ್ ಕುಮಾರ್ ಅವರ ಕನ್ನಡಾಭಿಮಾನ, ನಾಡಿನ ಜತೆ ಇರುವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಹಲವು ಕಲಾವಿದರನ್ನು ಬಹರೈನ್‌ಗೆ ಕರೆಸಿ ಪ್ರೋತ್ಸಾಹಿಸಿದ್ದರು ಎಂದರು.

ರಾಜ್ ಕುಮಾರ್ ರವರು ಅಂಬಲಪಾಡಿಯ ಹೆಸರನ್ನು ವಿದೇಶದಲ್ಲಿ ತನ್ನ ಸಾಧನೆಯ ಮೂಲಕ ಪಸರಿಸಿ ಅಂಬಲಪಾಡಿಯ ಗೌರವ ಹೆಚ್ಚಿಸಿದ್ದಾರೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ರವರು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್ ಅವರು, ರಾಜ್ ಕುಮಾರ್ ಅವರ ವೈಶಿಷ್ಟ್ಯಪೂರ್ಣ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.

ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಟ ದೇವದಾಸ್ ಕಾಪಿಕಾಡ್, ಉಡುಪಿ ಮತ್ತು ದ.ಕ. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ನಮ್ಮ ಕುಡ್ಲ ಸುದ್ಧಿ ವಾಹಿನಿಯ ಪ್ರವರ್ತಕ ಲೀಲಾಕ್ಷ ಕರ್ಕೇರ, ನ್ಯೂ ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ರಮೇಶ್ ನಾಯ್ಕ್, ಯಕ್ಷಗಾನ ಕಲಾರಂಗ ಉಡುಪಿ ಕಾರ್ಯದರ್ಶಿ ಮುರಳಿ ಕಡೆಕಾರ್, ಬಹರೈನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಆಸ್ಟಿನ್ ಸಂತೋಷ್, ರಾಜಾಭಿನಂದನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಮ್. ಪೂಜಾರಿ, ಕೋಶಾಧಿಕಾರಿ ಅಣ್ಣು ಪದ್ಮನಾಭ ಜತ್ತನ್ ಉಪಸ್ಥಿತರಿದ್ದರು.

ರಾಜ್ ಕುಮಾರ್ ರವರ ಅಭಿಮಾನಿಗಳು, ರಾಜಾಭಿನಂದನಾ ಸಮಿತಿಯ ಪದಾಧಿಕಾರಿಗಳು, ಸಮಿತಿ ಸದಸ್ಯರು ಭಾಗವಹಿಸಿದ್ದರು.

ರಾಜಾಭಿನಂದನಾ ಸಮಿತಿಯ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ್ ಆಚಾರ್ಯ ವಂದಿಸಿದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ಉಡುಪಿಯ ಎಕ್ಸ್ಟ್ರೀಮ್ ಡಾನ್ಸ್ ಅಕಾಡೆಮಿ ಇವರಿಂದ ನೃತ್ಯಾವಳಿಗಳು, ‘ಪ್ರಸಂಶಾ ಕಾಪು’ ತಂಡ ಹಾಗೂ ಚಂದ್ರಕಾಂತ್ ಪಡುಬಿದ್ರಿ ಅವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ವಿವಿಧ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ರಾಜ್ ಕುಮಾರ್ ರವರಿಗೆ ಗೌರವಾರ್ಪಣೆ ನಡೆಯಿತು.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ ಸ್ಥಾಪಿಸಿ ಆದೇಶ ಬಿಡುಗಡೆ; ನುಡಿದಂತೆ ನಡೆದ ರಾಜ್ಯ ಸರಕಾರಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಭಿನಂದನೆ

News By: ಜನತಾಲೋಕವಾಣಿನ್ಯೂಸ್

ಉಡುಪಿ: ಈಡಿಗ-ಬಿಲ್ಲವ ಸೇರಿ 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ‘ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿ ಆದೇಶ ಹೊರಡಿಸುವ ಮೂಲಕ ನುಡಿದಂತೆ ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಭಿನಂದನೆ ಸಲ್ಲಿಸಿದೆ.

‘ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ’ ಸ್ಥಾಪಿಸಿ ಆದೇಶ ದೊರಕಿರುವ ಹಿನ್ನೆಲೆಯಲ್ಲಿ ಬಿಲ್ಲವ, ಈಡಿಗ ಸಹಿತ 26 ಜಾತಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಸವಲತ್ತುಗಳ ಜೊತೆಗೆ ಈ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಅನೇಕ ವರ್ಷಗಳಿಂದ ಕೇಳಿ ಬಂದಿರುವ ನಿಗಮದ ಬೇಡಿಕೆ ಈಡೇರಿದಂತಾಗಿದೆ.

ಈ ಪ್ರಕ್ರಿಯೆಯಿಂದ ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ‘ಸಂಘಟನೆಯಿಂದ ಬಲಯುತರಾಗಿರಿ; ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ’ ಎಂಬ ದಿವ್ಯ ಸಂದೇಶವನ್ನು ಸಮಾಜದಲ್ಲಿ ಇನ್ನಷ್ಟು ಪ್ರಚಲಿತಗೊಳಿಸಲು ಹೊಸ ಚೈತನ್ಯ ತುಂಬಿದಂತಾಗಿದೆ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ಗಾಣಿಗ ಮತ್ತಿತರ ಸಂಬಂಧಿತ ಸಮುದಾಯಗಳ ಅಭಿವೃದ್ಧಿಗಾಗಿ ‘ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ’ ಸ್ಥಾಪನೆೆಗೂ ಆದೇಶಿಸಿರುವುದು ಸ್ವಾಗತಾರ್ಹ. ಈ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಸಹಿತ ವಿವಿಧ ಸಮುದಾಯಗಳ ಸಮಗ್ರ ಅಭಿವೃದ್ಧಿಯ ಕಾಳಜಿಯ ಬದ್ಧತೆಯನ್ನು ಪ್ರದರ್ಶಿಸಿದೆ ಎಂದಿದ್ದಾರೆ.

ಅಭಿವೃದ್ದಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕರಾವಳಿಯ ಸಚಿವರುಗಳು, ಸಂಸದರು, ಶಾಸಕರು, ಸಮುದಾಯಗಳ ಸ್ವಾಮೀಜಿಗಳು, ಪ್ರಮುಖರು ಹಾಗೂ ಸಮುದಾಯದ ಅವಿರತ ಪ್ರಯತ್ನ ಪ್ರಶಂಸನೀಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.