ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಸರ್ವಿಸ್ ರಸ್ತೆ ಅಗಲೀಕರಣ ಸಹಿತ ವಿವಿಧ ಬೇಡಿಕೆಗಳೊಂದಿಗೆ ರಾ.ಹೆ.66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯಿಂದ ಸಂಸದರಿಗೆ ಮನವಿ ಸಲ್ಲಿಕೆ




ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಇದರ ಸರ್ವಿಸ್ ರಸ್ತೆಯ ಅಗಲೀಕರಣ ಮತ್ತು ಸಂಬಂಧಿತ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆ ಇದರ ವತಿಯಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ರಾ.ಹೆ.66 ಅಂಬಲಪಾಡಿ ಇದರ ಅಗಲ ಕಿರಿದಾಗಿರುವ ಸರ್ವಿಸ್ ರಸ್ತೆಯನ್ನು ಮಳೆ ನೀರು ಹರಿಯುವ ಚರಂಡಿ ಸಹಿತ ಅಗಲೀಕರಣಗೊಳಿಸುವಂತೆ, ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಉಡುಪಿ ನಗರವನ್ನು ಸಂಪರ್ಕಿಸುವ ಉಡುಪಿ ನಗರಸಭೆಯ ಸ್ವಾಧೀನದಲ್ಲಿರುವ ರಸ್ತೆಯನ್ನು ಅಂಡರ್ ಪಾಸ್ ದ್ವಾರಕ್ಕೆ ಸಮನಾಗಿ ರಾ.ಹೆ.66ರ ಪ್ಯಾಕೇಜ್ ರಸ್ತೆಯಾಗಿ ಅಗಲೀಕರಣಗೊಳಿಸುವ ಪ್ರಕ್ರಿಯೆಯನ್ನು ಪ್ರಸಕ್ತ ಪ್ರಗತಿಯಲ್ಲಿರುವ ಅಂಬಲಪಾಡಿ ರಾ.ಹೆ.66ರ ಕಾಮಗಾರಿಯ ಜೊತೆಗೆ ಕಾರ್ಯಗತಗೊಳಿಸುವಂತೆ, ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ನ ಜಂಕ್ಷನ್ ರಸ್ತೆಯನ್ನು ರಾ.ಹೆ. ಪ್ರಾಧಿಕಾರದ ನಿಯಮದಂತೆ ಅಂಡರ್ ಪಾಸ್ ಮಧ್ಯದಿಂದ 30 ಮೀಟರ್ ವಿಸ್ತೀರ್ಣದ ಸುತ್ತಳತೆಯಲ್ಲಿ ಅಗಲೀಕರಣಗೊಳಿಸಿ ಲಘು ಮತ್ತು ಘನ ವಾಹನಗಳ ಸುಗಮ, ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಾಗೂ ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ ವಿನ್ಯಾಸದಲ್ಲಿರುವಂತೆ ಫೂಟ್ ಪಾತ್ ನಲ್ಲಿ ಸುರಕ್ಷಿತ ಜನ ಸಂಚಾರಕ್ಕಾಗಿ ಸರ್ವಿಸ್ ರಸ್ತೆಗೆ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಮನವಿಯಲ್ಲಿ ಉಲ್ಲೇಖಿಸಿರುವ ಬಗ್ಗೆ ವಿಸ್ತೃತ ವಿಚಾರ ವಿನಿಮಯ ನಡೆಸಲಾಯಿತು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಕೋಟ ಅವರು ಮನವಿಯನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಗರಿ ಅವರಿಗೆ ಸಲ್ಲಿಸಿ ಮನವಿಯಲ್ಲಿ ಉಲ್ಲೇಖಿಸಿರುವ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಜಿಲ್ಲೆಯಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿಯ ಕುರಿತು ಸಂಸದರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಭಾಸ್ಕರ್ ಶೆಟ್ಟಿ ಕಡೆಕಾರು, ಕಾರ್ಯಕಾರಿ ಸಮಿತಿ ಸದಸ್ಯರಾದ ಅಂಬಲಪಾಡಿ ವಾರ್ಡ್ ನಿಕಟಪೂರ್ವ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಶ್ರೀಕಾಂತ್ ಶೆಟ್ಟಿ ಅಂಬಲಪಾಡಿ ಮತ್ತಿತರರು ಉಪಸ್ಥಿತರಿದ್ದರು.

‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ವಿರೋಧ ರಾಜಕೀಯ ಪ್ರೇರಿತ ಹಾಗೂ ಹಾಸ್ಯಾಸ್ಪದ : ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು




ಉಡುಪಿ: ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕೃತಿ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ‌ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜಯನ್ ಮಲ್ಪೆ ಅವರ ನಡೆ ರಾಜಕೀಯ ಪ್ರೇರಿತ ಹಾಗೂ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಜಯನ್ ಮಲ್ಪೆ ಅವರು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾಗೆ ಏನೂ ತಿಳಿದಿಲ್ಲವೆಂಬಂತೆ ಹೇಳಿಕೆ ನೀಡಿರುವುದು ದುರದೃಷ್ಟಕರವಾಗಿದೆ. ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯವಾದಕ್ಕೆ ಗೌರವ, ಮನ್ನಣೆ ನೀಡುವ ತಂಡವಾಗಿದೆ. ಈ‌ ಹಿಂದೆ ಕಾಂಗ್ರೆಸ್ ಸರಕಾರಗಳು ಆಡಳಿತದಲ್ಲಿದ್ದಾಗ ಡಾ! ಬಿ.ಆರ್. ಅಂಬೇಡ್ಕರ್ ಅವರಿಗೆ ಎಷ್ಟೆಲ್ಲ ಅನ್ಯಾಯ ಮಾಡಿತ್ತು ಎಂಬುದು ಜಗತ್ತಿಗೇ ತಿಳಿದಿದೆ.

ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಸ್ವತಃ ನೆಹರೂರವರೇ ಅವರ ವಿರುದ್ದ ಪ್ರಚಾರ ಕಾರ್ಯ ನಡೆಸಿ ಸೋಲಿಸಿದರು. ಅವಕಾಶ ಸಿಕ್ಕಲ್ಲೆಲ್ಲ ಅವಮಾನ‌ ಮಾಡಿದ್ದರು. ಅವರು ನಿಧನ ಹೊಂದಿದಾಗ ದೆಹಲಿಯಲ್ಲಿ ಅವರ ಶವ ಸಂಸ್ಕಾರಕ್ಕೂ ಕನಿಷ್ಠ ಜಾಗವನ್ನೂ ನೀಡಲಿಲ್ಲ ಎನ್ನುವುದನ್ನು ನಮ್ಮ ಸಮಾಜ ಮರೆಯಲು ಸಾಧ್ಯವೇ?  ಗಾಂಧಿ ಕುಟುಂಬಕ್ಕೆ ಎಕ್ರೆಗಟ್ಟಲೆ ಜಾಗ ಕೊಟ್ಟವರು ಅಂಬೇಡ್ಕರ್ ಅವರಿಗೆ ಕೊಡದಿರುವದನ್ನು ನಾವು ಮರೆಯಲುಂಟೆ? ಎಂದು ದಿನಕರ ಬಾಬು ಪ್ರಶ್ನಿಸಿದ್ದಾರೆ.

ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯೊಂದಿಗೆ ಗರಿಷ್ಠ ಗೌರವ ನೀಡಿದ್ದು ನಮ್ಮ ಭಾರತಿಯ ಜನತಾ ಪಾರ್ಟಿ. ಅಂಬೇಡ್ಕರ್ ಅವರ ಜೀವಿತಾವಧಿಯ ಐದು ಪ್ರಮುಖ ಸ್ಥಳಗಳನ್ನು ‘ಪಂಚತೀರ್ಥ’ಗಳ ಹೆಸರಿನಲ್ಲಿ ಅಭಿವೃದ್ಧಿಪಡಿಸಿ ಅವರ ಸ್ವಾಭಿಮಾನ, ಆತ್ಮಗೌರವವನ್ನು ಬಾನೆತ್ತರಕ್ಕೇರಿಸಿರುವುದು ನಮ್ಮ ಹೆಮ್ಮೆಯ ಪ್ರಧಾನಿ‌ ನರೇಂದ್ರ ಮೋದಿಯವರು.

ಬಿಜೆಪಿ ಮೀಸಲಾತಿ ವಿರೋಧಿ ಎಂದು ಎಷ್ಟೇ ಅಪಪ್ರಚಾರ ಮಾಡಿದರೂ ಮೀಸಲಾತಿಯನ್ನು ಇನ್ನೂ ಹತ್ತು ವರ್ಷಕ್ಕೆ ಏರಿಸಿದವರು ವಿಶ್ವ ನಾಯಕರೆನಿಸಿದ ಪ್ರಧಾನಿ ಮೋದಿಯವರು. ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲೇ ಎಸ್.ಸಿ. ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಿಸಿರುವುದು.

ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಅಂಬೇಡ್ಕರ್ ಅವರು ಸಂವಿಧಾನಬದ್ದವಾಗಿ ನಮಗೆ ಕೊಟ್ಟ ಹಕ್ಕು. ಅದರ ಅರಿವಿದ್ದರೂ ನಾಟಕ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸುವ ನಿಮ್ಮ ಉದ್ದೇಶವೇನು? ಈ ನಾಟಕದಲ್ಲಿ ಕಾಂಗ್ರೆಸ್ ನವರು ಮುಚ್ಚಿಟ್ಟ ಅಪ್ಪಟ ಸತ್ಯಗಳ ಅನಾವರಣವಿದೆ. ಅದನ್ನು ಜನರಿಗೆ ತಿಳಿಸಿದರೆ ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಗೆ ತೊಂದರೆಯಾಗುವುದು ಎಂಬ ಭಯ ಅವರಿಗಿರಬೇಕೇ ಹೊರತು ನಿಮಗ್ಯಾಕೆ ಎಂಬುದು ತಿಳಿಯುತ್ತಿಲ್ಲ. ಅಲ್ಲದೇ ಇದರಲ್ಲಿ ಸುಳ್ಳು ಅಂಶಗಳಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ. ಕೇವಲ ಪ್ರಚಾರದ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸುವುದು ಸರಿಯೇ?  ಆರ್ಟಿಕಲ್ 370ಕ್ಕೆ ಅಂಬೇಡ್ಕರ್ ಅವರು ಎಷ್ಟು ವಿರೋಧ ವ್ಯಕ್ತಪಡಿಸಿದರೂ ಕಾಂಗ್ರೆಸ್ ಅದನ್ನು ಸಂವಿಧಾನದಲ್ಲಿ ಅಳವಡಿಸಿ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ‌ ನೀಡಿತ್ತು.‌ ಇದನ್ನು ನಾವು ಎಲ್ಲಿ ಮಾತನಾಡಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.

ಇಷ್ಟೆಲ್ಲ ಸತ್ಯ ವಿಚಾರಗಳು ಜಗಜ್ಜಾಹೀರಾಗಿದ್ದರೂ ನೀವು ಇದರ ಬಗ್ಗೆ ಸ್ವಲ್ಪವೂ ಮಾತನಾಡದಿರಲು ಕಾರಣವೇನು? ಎಂದು ದಿನಕರ ಬಾಬು ಪತ್ರಿಕಾ ಪ್ರಕಟಣೆಯ ಮೂಲಕ ಪ್ರಶ್ನಿಸಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳಾ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮ ಜರಗಿಸುವಂತೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಕೆ




ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳಾ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮ ಜರಗಿಸುವಂತೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರು ಉಗ್ಗೇಲ್ ಬೆಟ್ಟು ನಿವಾಸಿ ಅಕ್ಷತಾ ಪೂಜಾರಿ ಅವರ ಮನೆಗೆ ಮುಂಜಾನೆ ಸುಮಾರು 4.00 ಗಂಟೆಗೆ 5 ಮಂದಿ ಆಕ್ರಮವಾಗಿ ಪ್ರವೇಶಿಸಿ ತಾವು ಪೊಲೀಸ್ ಎಂದು ಹೇಳಿಕೊಂಡು ದಾಂದಲೆ ನಡೆಸಿ, ಕುಮಾರಿ ಅಕ್ಷತಾ ಅವರ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಕೃತ್ಯವನ್ನು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ.

ಈ ಕುರಿತು ಅಕ್ಷತಾ ಪೂಜಾರಿ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದಾಗ ಅವರಿಗೆ ನ್ಯಾಯ ದೊರಕಿಸುವ ಬದಲು ಅವರ ಮೇಲೆಯೇ ಎಫ್.ಐ.ಆರ್. ದಾಖಲಿಸಿರುವುದು ಅತ್ಯಂತ ವಿಚಿತ್ರ ನಡೆಯಾಗಿದೆ. ಹಲ್ಲೆಗೊಳಗಾಗಿರುವ ಅಕ್ಷತಾ ಪೂಜಾರಿ ಅವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಈ ಕೆಳಗಿನ ಬೇಡಿಕೆಗಳನ್ನು ಮಂಡಿಸಲಾಗಿದೆ

* ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಮಹಿಳೆಯರಿದ್ದ ಮನೆಗೆ ಬೆಳಿಗ್ಗೆ 4.30ರ ಸುಮಾರಿಗೆ ಆಕ್ರಮವಾಗಿ ನುಗ್ಗಿ ಯುವತಿಗೆ ಹಲ್ಲೆ ನಡೆಸಿರುವ ಪೊಲೀಸ್ ಸಿಬ್ಬಂದಿಗಳನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಬೇಕು.
* ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಗೆ ಸುಳ್ಳು ಹೇಳಿಕೊಂಡು ಮಹಿಳಾ ಪೋಲಿಸರು ಇಲ್ಲದೇ ಕೇವಲ ಪುರುಷ ಪೋಲಿಸರು ನುಗ್ಗಿ ಅಕ್ಷತಾ ಪೂಜಾರಿಗೆ ಹಲ್ಲೆ ನಡೆಸಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಪರಿಗಣಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ತಕ್ಷಣ ಎಫ್.ಐ.ಆರ್. ದಾಖಲಿಸಿ ಕಾನೂನಾತ್ಮಕ ಕ್ರಮ ಜರಗಿಸಬೇಕು.
* ಸಂತ್ರಸ್ತರು ನೀಡಿದ ದೂರನ್ನು ದಾಖಲಿಸದೆ ಪೊಲೀಸರನ್ನು ರಕ್ಷಿಸುವ ಸಲುವಾಗಿ ಅಕ್ಷತಾ ಪೂಜಾರಿ ಮತ್ತು ಆಕೆಯ ತಾಯಿಯ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಕೇಸು ದಾಖಲಿಸಿರುವ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿಗಳ ವಿರುದ್ಧ ಅಗತ್ಯ ಶಿಸ್ತು ಕ್ರಮ ಜರಗಿಸಬೇಕು ಹಾಗೂ ಸಂತ್ರಸ್ತರ ವಿರುದ್ಧ ದಾಖಲಾದ ಸುಳ್ಳು ಎಫ್.ಐ.ಆರ್. ಅನ್ನು ಪರಿಶೀಲಿಸಿ ರದ್ದುಗೊಳಿಸಬೇಕು.

ಬುದ್ದಿವಂತರ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ಉಡುಪಿ ಜಿಲ್ಲೆಯಲ್ಲಿ ರಕ್ಷಕರೇ ಭಕ್ಷಕರಾಗಿ ವರ್ತಿಸಿದ ಈ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಪ್ರಕರಣದಿಂದ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ನ್ಯಾಯಕ್ಕಾಗಿ ಮಹಿಳೆಯರು ಯಾರನ್ನು ಮೊರೆ ಹೋಗಬೇಕು ಎಂಬ ಸಂದಿಗ್ದ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸದ್ರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಪೊಲೀಸರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ, ಅವರ ವಿರುದ್ಧ ಕೇಸು ದಾಖಲಿಸಿ ನೊಂದ ಯುವತಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಜಿಲ್ಲೆಯ ಸಮಸ್ತ ಮಹಿಳೆಯರ ಸಹಿತ ನಾಗರಿಕ ಸಮಾಜಕ್ಕೆ ಪೋಲಿಸ್ ಇಲಾಖೆಯ ಮೇಲೆ ವಿಶ್ವಾಸ, ಗೌರವ ಉಳಿಯುವಂತೆ ಶೀಘ್ರ ದಿಟ್ಟ ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂದ್ಯಾ ರಮೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸುಮಾ ಶೆಟ್ಟಿ, ಸುಜಲಾ ಸುವರ್ಣ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಶ್ಯಾಮ್ ಸುಂದರ್, ಕಾಪು ಮಂಡಲ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಡುಪಿ ನಗರ ಅಧ್ಯಕ್ಷೆ ನೀತಾ ಪ್ರಭು, ಉಡುಪಿ ಗ್ರಾಮಾಂತರ ಅಧ್ಯಕ್ಷೆ ರಮ್ಯಾ ರಾವ್, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುಮನಾ ಪೂಜಾರಿ, ಕವಿತಾ ನವೀನ್ ಉಪಸ್ಥಿತರಿದ್ದರು.

ಸ್ಪೀಕರ್ ಖಾದರ್ ಮೆಚ್ಚಿಸಲು ಶಾಸಕರ ವಿರುದ್ಧ ಪ್ರಸಾದ್ ಕಾಂಚನ್ ಹತಾಶ ಹೇಳಿಕೆ : ದಿನೇಶ್ ಅಮೀನ್




ಉಡುಪಿ: ಕಾಂಗ್ರೆಸ್ ಪಕ್ಷದಲ್ಲಿ ಅಪ್ರಬುದ್ಧ ಹೇಳಿಕೆಯ ಮೂಲಕ ಪ್ರಸಾದ್ ಕಾಂಚನ್ ಇದೀಗ ಕಾಂಗ್ರೆಸ್ ಪಕ್ಷದಲ್ಲೇ ಮೂಲೆಗುಂಪಾಗಿದ್ದು, ಸದಾ ಶಾಸಕ ಯಶ್ಪಾಲ್ ಸುವರ್ಣರನ್ನು ಟೀಕಿಸುವ ಮೂಲಕ ಸ್ಪೀಕರ್ ಖಾದರ್ ರವರನ್ನು  ಮೆಚ್ಚಿಸಲು ಪ್ರಯತ್ನ ಮಾಡುತ್ತಿದ್ದು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಬಿಟ್ಟಿ ಉಪದೇಶ ನೀಡುವ ಅಗತ್ಯವಿಲ್ಲ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.

ಸದನದಲ್ಲಿ ಶಾಸಕರು ತನ್ನ ಕ್ಷೇತ್ರದ ಸಮಸ್ಯೆ ಬಗ್ಗೆ ಕೇವಲ 3 ನಿಮಿಷ ಮಾತ್ರ ಮಾತಾಡಿದ್ದು, 30 ಸೆಕೆಂಡ್ ಮಾತಾಡುವಾಗಲೇ ಸ್ಪೀಕರ್ ತಾಳ್ಮೆ ಕಳೆದುಕೊಂಡಿದ್ದಾರೆ. ಹಿಂದೂ ಧಾರ್ಮಿಕತೆಯ ಭಾಗವಾಗಿರುವ ಹರಿಕಥೆಯ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಶಾಸಕರ ಹಕ್ಕನ್ನು ಮೊಟಕುಗೊಳಿಸಿ ಸದನದಲ್ಲಿ ಅಪಮಾನ ಮಾಡಲು ಹೊರಟ ಸ್ಪೀಕರ್ ಖಾದರ್ ವಿರುದ್ಧ ಸಹಜವಾಗಿಯೇ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಡುಪಿ ಪರ್ಯಾಯ ಮಹೋತ್ಸವದ ಬಗ್ಗೆ ಕಾಮಗಾರಿಗೆ ವಿಶೇಷ ಅನುದಾನ ಬೇಡಿಕೆಯ ಬಗ್ಗೆಯೂ ಸ್ಪೀಕರ್ ರವರು ತಾಳ್ಮೆ ಕಳೆದುಕೊಂಡಿದ್ದಾರೆ.

ಪ್ರಸಾದ್ ಕಾಂಚನ್ ಇದೀಗ ತಮ್ಮ ಅಲ್ಪಸಂಖ್ಯಾತ ವೋಟ್ ಬ್ಯಾಂಕಿಗಾಗಿ ಶಾಸಕರ ವಿರುದ್ಧ ಹೇಳಿಕೆ ನೀಡುವ ಮೂಲಕ ಸ್ಪೀಕರ್ ಖಾದರ್ ರನ್ನು ಮೆಚ್ಚಿಸಲು ಹೊರಟಿದ್ದಾರೆ.

ತಮ್ಮದೇ ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಲತಾಯಿ ಧೋರಣೆ ಮಾಡಿ ಅನುದಾನ ಬಿಡುಗಡೆಗೆ ತಾರತಮ್ಯ ಮಾಡುತ್ತಿದ್ದೆ, ಜಿಲ್ಲಾ ಉಸ್ತುವಾರಿ ಸಚಿವರು ಅತಿಥಿ ಸಚಿವರಾಗಿ ಸರಕಾರಿ ದಿನಾಚರಣೆ ಕಾರ್ಯಕ್ರಮಕ್ಕೆ ಸೀಮಿತರಾಗಿದ್ದಾರೆ. ಗೃಹಲಕ್ಮೀ ಯೋಜನೆಯ ಹಣ ಬಿಡುಗಡೆಯ ಬಗ್ಗೆ ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದ ಉಸ್ತುವಾರಿ ಸಚಿವರನ್ನು ಪ್ರಶ್ನಿಸುವ ಧೈರ್ಯ ಈವರೆಗೂ ತೋರಿಸಿಲ್ಲ.

ಜಿಲ್ಲಾಸ್ಪತ್ರೆ ಕಾಮಗಾರಿ, ರಸ್ತೆ ಗುಂಡಿ ಮುಚ್ಚಲು ಹಣ ನೀಡದ ರಾಜ್ಯ ಸರಕಾರದ ಬಗ್ಗೆ ತುಟಿ ಬಿಚ್ಚಲು ಹೆದರುವ ಪ್ರಸಾದ್ ಕಾಂಚನ್ ಚುನಾವಣೆ ಸಂದರ್ಭದಲ್ಲಿ ಮಸೀದಿಗೆ ತೆರಳಿ ಮತಯಾಚಿಸಿದ ಋಣಕ್ಕಾಗಿ ಇದೀಗ ಹಿಂದುತ್ವದ ವಿಚಾರದಲ್ಲಿ ದಿಟ್ಟತನ ತೋರುವ ಶಾಸಕರ ವಿರುದ್ಧ ಅಸಂಬದ್ಧ ಟೀಕೆ ಮಾಡುತ್ತಾ ಸ್ಪೀಕರ್ ಪಕ್ಷಪಾತಿ ಧೋರಣೆಯನ್ನು ಮುಚ್ಚಿಸಲು ಮುಂದಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ಅನುಮತಿ ಕೋರಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಕೆ


ಉಡುಪಿ: ಡಿ.23ರಂದು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಭವನದಲ್ಲಿ ಹಮ್ಮಿಕೊಂಡಿರುವ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸದ್ರಿ ನಾಟಕ ಪ್ರದರ್ಶನವನ್ನು ವಿರೋಧಿಸಿ ದಸಂಸ ಜಿಲ್ಲಾ ನಾಯಕ ಜಯನ್ ಮಲ್ಪೆ ಅವರು ಆಕ್ಷೇಪಣೆ ಸಲ್ಲಿಸಿರುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಲಭ್ಯವಾಗಿದ್ದು, ಈ ಆಕ್ಷೇಪಣೆಗೆ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾದ ಸಂಪೂರ್ಣ ವಿರೋಧ ಇರುತ್ತದೆ. ಈ ನಾಟಕದಲ್ಲಿ ಯಾವುದೇ ಸುಳ್ಳು ಅಂಶಗಳನ್ನು ಸೇರಿಸಲಾಗಿಲ್ಲ. ಈ ನಾಟಕವು ರಾಜ್ಯಾದ್ಯಂತ ಈಗಾಗಲೇ 22 ಪ್ರದರ್ಶನಗಳನ್ನು ಕಂಡಿದ್ದು ಇದು 23ನೇ ಪ್ರದರ್ಶನವಾಗಿದೆ. ಇಲ್ಲಿಯವರೆಗೆ ಯಾವುದೇ ಸ್ಥಳಗಳಲ್ಲಿ ಜಯನ್ ಮಲ್ಪೆ ಅವರು ಅಂದುಕೊಂಡಿರುವ ಹಾಗೆ ಯಾವುದೇ ಗಲಭೆಗಳಾಗಿಲ್ಲ. ಈ ನಾಟಕದಲ್ಲಿನ ಎಲ್ಲ ವಿಷಯಗಳು ಇತಿಹಾಸದಲ್ಲಿ ದಾಖಲಾಗಿರುವಂತಹ ವಿಷಯಗಳೇ ಆಗಿವೆ. ಬೇಕಾದಲ್ಲಿ ಈ ನಾಟಕ ವೀಕ್ಷಣೆಗೆ ಜಯನ್ ಮಲ್ಪೆ ಅವರೂ ಆಗಮಿಸಿ ವೀಕ್ಷಿಸಿ ಅದರಲ್ಲಿ ಏನಾದರೂ ಅಂಶಗಳು ಸುಳ್ಳೆಂದು ಕಂಡುಬಂದಲ್ಲಿ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಮೊಕದ್ದಮೆ ದಾಖಲಿಸುವ ಎಲ್ಲ ಅವಕಾಶಗಳು ಅವರಿಗಿದೆ. ಅದಲ್ಲದೆ ಈ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡಿದಲ್ಲಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಬಹುದೆಂಬ ಅವರ ದೂರು ಅತ್ಯಂತ ಬಾಲಿಷವಾದುದು. ಇಡೀ ರಾಜ್ಯದಲ್ಲಿ ಆಗದ ಗಲಭೆ ಇಲ್ಲಿ ಆಗುವುದೆಂಬ ಅವರ ಹೇಳಿಕೆಯ ಹಿಂದೆ ಯಾವ ದುರುದ್ದೇಶ ಇದೆಯೋ ನಮಗೆ ತಿಳಿಯದು. ಅಲ್ಲದೆ ಇದು ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯಾಗಿರುತ್ತದೆ ಎನ್ನುವುದು ನಮ್ಮ ಭಾವನೆಯಾಗಿದೆ.

ಜಯನ್ ಮಲ್ಪೆ ಅವರ ಆಕ್ಷೇಪಣೆಯನ್ನು ತಿರಸ್ಕರಿಸಿ, ಸತ್ಯ ವಿಚಾರಗಳನ್ನು ಹೊಂದಿರುವ ಈ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರ ಪಂಚವಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಜಿಲ್ಲಾ ಎಸ್.ಸಿ. ಮೋರ್ಚಾ ಉಪಾಧ್ಯಕ್ಷರಾದ ಸದಾನಂದ ಕಾಪು, ಸೋಮನಾಥ್ ಕಟ್ಟೆಗುಡ್ಡೆ, ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯದರ್ಶಿಗಳಾದ ಜಯರಾಜ್, ಧನರಾಜ್ ಕಾಪು ಉಪಸ್ಥಿತರಿದ್ದರು.

ಇತಿಹಾಸ ಪ್ರಸಿದ್ಧ ಉಡುಪಿ ಪರ್ಯಾಯಕ್ಕೆ ಅನುದಾನದ ಬೇಡಿಕೆಗೆ ಸ್ಪೀಕರ್ ಖಾದರ್ ಪೂರ್ವಾಗ್ರಹ ಪೀಡಿತ ಮನಸ್ಥಿತಿಯ ವರ್ತನೆ ಖಂಡನೀಯ : ಕುತ್ಯಾರು ನವೀನ್ ಶೆಟ್ಟಿ



ಉಡುಪಿ: ‘ನಾಡ ಹಬ್ಬ ಮೈಸೂರು ದಸರಾ’ದಂತೆಯೇ ‘ಕರಾವಳಿ ಕರ್ನಾಟಕದ ನಾಡ ಹಬ್ಬ’ ಎಂದೆನಿಸಿರುವ ‘ಉಡುಪಿ ಪರ್ಯಾಯ’ಕ್ಕೆ ವಿಧಾನಸಭಾ ಅಧಿವೇಶನದಲ್ಲಿ ಅನುದಾನದ ಬೇಡಿಕೆ ಇಟ್ಟಿರುವ ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣ ಅವರ ಮಾತನ್ನು ಹಗುರವಾಗಿ ಪರಿಗಣಿಸಿ, ಹಿಂದೂ ಧರ್ಮದ ಅಸ್ಮಿತೆಯ ಭಾಗವಾದ ಹರಿಕಥೆಯನ್ನು ತಿರಸ್ಕಾರ ಭಾವದಿಂದ ಉಲ್ಲೇಖಸಿ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯನ್ನುoಟುಮಾಡಿರುವ ವಿಧಾನಸಭಾ ಸ್ಪೀಕರ್ ಅಬ್ದುಲ್ ಖಾದರ್ ಅವರ ರಾಜಕೀಯ ಪ್ರೇರಿತ ಕ್ಷುಲ್ಲಕ ವರ್ತನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೌರವಾನ್ವಿತವಾದ ವಿಧಾನಸಭಾ ಸ್ಪೀಕರ್ ಪೀಠದಲ್ಲಿ ಕುಳಿತು ತನ್ನ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿಭಾಯಿಸಿ ಸರ್ವ ಪಕ್ಷದ ಶಾಸಕರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುವ ಬದಲು ಖಾದರ್ ಅವರು ಒಂದು ಧರ್ಮವನ್ನು ದ್ವೇಷಿಸುವ ರೀತಿಯ ಹೇಳಿಕೆಯನ್ನು ನೀಡಿ ಜನರಿಂದ ಆಯ್ಕೆಯಾಗಿರುವ ಓರ್ವ ಜನಪ್ರತಿನಿಧಿಯ ಸಹಿತ ಕ್ಷೇತ್ರದ ಸಮಸ್ತ ಹಿಂದೂ ಸಮಾಜ ಬಾಂಧವರನ್ನು ಅವಮಾನಿಸಿರುವುದು ಖೇದಕರ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸಚಿವ ಸಂಪುಟದ ಇತರ ಕೆಲವು ಸಚಿವರಂತೆ ಖಾದರ್ ಅವರು ಕೂಡಾ ಪ್ರಚಾರದ ಗೀಳಿಗಾಗಿಯೋ ಅಥವಾ ಕಾಂಗ್ರೆಸ್ ಹೈಕಮಾಂಡನ್ನು ಮೆಚ್ಚಿಸಲಿಕ್ಕಾಗಿಯೋ ಅಥವಾ ಸಚಿವ ಸ್ಥಾನದ ಆಕಾಂಕ್ಷಿಯಾಗಿ ರಾಜ್ಯ ಸರಕಾರದ ದಿವಾಳಿತನವನ್ನು ಮುಚ್ಚಿಡಲು ಈ ರೀತಿಯಾಗಿ ವರ್ತಿಸಿದ್ದಾರೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಪಾರಂಪರಿಕವಾಗಿ ಉಡುಪಿ ಪರ್ಯಾಯದ ಪೂರ್ವ ಸಿದ್ಧತೆಗಳ ಕುರಿತು ಅನುದಾನದ ಬಗ್ಗೆ ಪ್ರಶ್ನೆ ಕೇಳಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ನಡೆ ಸಮರ್ಥನೀಯವಾಗಿದೆ. ಇತರ ಧರ್ಮಗಳ ವಿಶೇಷ ಆಚರಣೆಗಳ ಕಾರ್ಯಕ್ರಮಗಳ ಕುರಿತು ಅನುದಾನ ಕೇಳಿದಾಗ ಕೂಡಾ ಸ್ಪೀಕರ್ ಖಾದರ್ ಅವರು ಸದನದಲ್ಲಿ ಇದೇ ರೀತಿಯ ಉದ್ದಟತನ ಪ್ರದರ್ಶಿಸುತ್ತಾರೋ ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಪೀಕರ್ ಸ್ಥಾನವೆಂದರೆ ವಿರೋಧ ಪಕ್ಷದ ಶಾಸಕರನ್ನು ಹೆಣೆಯಲು ಅಥವಾ ಅವರ ಆತ್ಮ ಗೌರವವನ್ನು ಕೆಣಕಿ ಅವಮಾನಿಸಲು ಇರುವ ವೇದಿಕೆ ಎಂದು ಸ್ಪೀಕರ್ ಖಾದರ್ ಅವರು ತಿಳಿದಂತಿದೆ. ಈ ನಿಟ್ಟಿನಲ್ಲಿ ಸ್ಪೀಕರ್ ಖಾದರ್ ಅವರು ಕೂಡಲೇ ಉಡುಪಿಯ ನಾಗರಿಕರ ಹಾಗೂ ಸಮಸ್ತ ಹಿಂದೂ ಸಮಾಜದ ಬಹಿರಂಗ ಕ್ಷಮೆ ಕೋರಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಅಗ್ರಹಿಸಿದ್ದಾರೆ.

ಗುಂಡು ಶೆಟ್ಟಿ ಕಪ್ಪೆಟ್ಟು ನಿಧನ





ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಗುಂಡು ಶೆಟ್ಟಿ ಕಂಬಳ ಮನೆ ಕಪ್ಪೆಟ್ಟು (88 ವರ್ಷ) ಅವರು ಡಿ.4ರಂದು ಸ್ವಗೃಹದಲ್ಲಿ ನಿಧನರಾದರು.

ಕಳೆದ ಐದು ದಶಕಗಳಿಂದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಪ್ಪೆಟ್ಟು ಇದರ ಶೆಟ್ಟಿ ಬಾಲೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಗುಂಡು ಶೆಟ್ಟಿ ಕಪ್ಪೆಟ್ಟು ಅವರು ತನ್ನ ನೇರ ನಡೆ-ನುಡಿಗಳಿಂದ ಜನಾನುರಾಗಿಯಾಗಿದ್ದು, ದೈವಾರಾಧನೆ ಸಹಿತ ದೈವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು.

ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರ ಸಹಿತ ಬಂಧು ವರ್ಗ ಮತ್ತು ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.

ನ.30 : ರಾಜಾoಗಣದಲ್ಲಿ ‘ಗೀತಾ ಭಜನೋತ್ಸವ’, ಜೋಡುಕಟ್ಟೆಯಿಂದ ‘ಕುಣಿತ ಭಜನೋತ್ಸವ’


ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ಗೀತಾ ಮಾಸೋತ್ಸವ’ದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಸಮಿತಿಯ ಸಹಯೋಗದೊಂದಿಗೆ ನ.30 ರವಿವಾರ ಬೆಳಿಗ್ಗೆ ಗಂಟೆ 9.30ರಿಂದ ಉಡುಪಿ ರಾಜಾoಗಣದಲ್ಲಿ ‘ಗೀತಾ ಭಜನೋತ್ಸವ’ ಹಾಗೂ ಮಧ್ಯಾಹ್ನ ಗಂಟೆ 2.30ರಿಂದ ಜೋಡುಕಟ್ಟೆಯಿಂದ ರಾಜಾoಗಣದ ವರೆಗೆ ‘ಕುಣಿತದ ಭಜನೋತ್ಸವ’ ನಡೆಯಲಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದ್ದಾರೆ.

ನ.30ರ ಬೆಳಿಗ್ಗೆ ಗಂಟೆ 9.00ರಿಂದ ರಾಜಾoಗಣದಲ್ಲಿ ‘ಸಾಮೂಹಿಕ ಗೀತಾ ಪಾರಾಯಣ’ ನಡೆಯಲಿದೆ. ಬೆಳಿಗ್ಗೆ ಗಂಟೆ 10.00ಕ್ಕೆ ಪರ್ಯಾಯ ಶೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇoದ್ರ ತೀರ್ಥ ಶ್ರೀಪಾದರು ‘ಗೀತಾ ಭಜನೋತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ.

ಭಜನಾ ಪರಿಷತ್ ಕೇಂದ್ರ ಸಮಿತಿಯ ಭಜನಾ ತರಬೇತುದರೆ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಮಧ್ಯಾಹ್ನ ಗಂಟೆ 2.00ರಿಂದ ರಾಜಾoಗಣದಲ್ಲಿ ‘ಸಾಮೂಹಿಕ ಭಜನೆ’ಯ ಮೂಲಕ ‘ಗೀತಾ ಭಜನೋತ್ಸವ’ ನಡೆಯಲಿದೆ.

ಮಧ್ಯಾಹ್ನ ಗಂಟೆ 2.30ಕ್ಕೆ ಉಡುಪಿ ಜೋಡುಕಟ್ಟೆಯಿಂದ ಸುಮಾರು 3,000 ಮಂದಿ ಭಜಕರ ಪಾಲ್ಗೊಳ್ಳುವಿಕೆಯಿಂದ ಪ್ರಾರಂಭಗೊಳ್ಳುವ ಬೃಹತ್ ‘ಕುಣಿತದ ಭಜನೋತ್ಸವ’ಕ್ಕೆ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಉಪಸ್ಥಿತಿಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಚಾಲನೆ ನೀಡಲಿದ್ದಾರೆ.

‘ಕುಣಿತದ ಭಜನೋತ್ಸವ’ದ ಮೆರವಣಿಗೆಯು ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್ ಮಾರ್ಗವಾಗಿ ಸಂಸ್ಕೃತ ಕಾಲೇಜ್ ಬಳಿಯಿಂದ ರಥ ಬೀದಿ ಮೂಲಕ ರಾಜಾoಗಣದಲ್ಲಿ ಸಮಾಪನಗೊಳ್ಳಲಿದೆ.

ಸಂಜೆ ಗಂಟೆ 4.30ಕ್ಕೆ ರಾಜಾoಗಣದಲ್ಲಿ ಸಂತರು ಮತ್ತು ಗಣ್ಯರ ಸಮಾಗಮದೊಂದಿಗೆ ‘ಗೀತಾ ಭಜನೋತ್ಸವ’ದ ಸಮಾರೋಪ ನಡೆಯಲಿದೆ ಎಂದು ನಾಗರಾಜ ಆಚಾರ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.28ರ ‘ಲಕ್ಷ ಕಂಠ ಗೀತೋತ್ಸವ’ ಯಶಸ್ವಿಗೊಳಿಸಲು ನಾಗರಾಜ ಆಚಾರ್ಯ ಕರೆ


ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ವಿಶ್ವ ಗೀತಾ ಪರ್ಯಾಯ’ದ ವಿಶಿಷ್ಟ ಕಾರ್ಯಕ್ರಮವಾಗಿ ನ.28ರಂದು ಉಡುಪಿ ರಾಜಾoಗಣದ ಪಾರ್ಕಿಂಗ್ ಸ್ಥಳದ ಬಳಿ ನಡೆಯಲಿರುವ ‘ಲಕ್ಷ ಕಂಠ ಗೀತೋತ್ಸವ’ದ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿಶ್ವ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಭಗವದ್ಗೀತೆಯ 15ನೇ ಅಧ್ಯಾಯವನ್ನು ನೆರೆದ ಎಲ್ಲರೊಂದಿಗೆ ಸಾಮೂಹಿಕ ಪಠಣ ಮಾಡಲಿದ್ದಾರೆ. ಈ ಅಪೂರ್ವ ಕ್ಷಣಗಳಲ್ಲಿ ಶ್ರೀ ಕೃಷ್ಣ ಭಕ್ತರು, ಸಮಸ್ತ ಭಜನಾ ಮಂಡಳಿಗಳ ಸದಸ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಹಿತ ಜಿಲ್ಲೆಯ ಮಹಾ ಜನತೆ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ, ‘ಲಕ್ಷ ಕಂಠ ಗೀತೋತ್ಸವ’ವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀ ಮಠದ ದಿವಾನ ನಾಗರಾಜ ಆಚಾರ್ಯ ಕರೆ ನೀಡಿದರು.

ಅವರು ಶ್ರೀ ಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಪೂರ್ವಸಿದ್ದತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಲಕ್ಷ ಕಂಠ ಗೀತೋತ್ಸವ ಸಮಿತಿಯ ಪ್ರಮುಖರಾದ ವಿಕ್ರಂ ಕುಂಟಾರು ನ.28ರ ಕಾರ್ಯಕ್ರಮದ ಕುರಿತು ವಿಸ್ತ್ರತ ಮಾಹಿತಿ ನೀಡಿ, ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಳ್ಳುವವರು ನ.28ರಂದು ಬೆಳಿಗ್ಗೆ 9.00 ಗಂಟೆಗೆ ಸಮವಸ್ತ್ರ ಹಾಗೂ ನಿಗದಿತ ಪಾಸ್ ನೊಂದಿಗೆ ಪಾರಾಯಣದ ಸ್ಥಳದಲ್ಲಿ ಉಪಸ್ಥಿತರಿರುವಂತೆ ಕೋರಿದರು.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಮಾತನಾಡಿ, ಶ್ರೀ ಮಠದ ವತಿಯಿಂದ ನ.28ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಮತ್ತು ನ.30ರಂದು ನಡೆಯುವ ಭಜನೋತ್ಸವದ ಬಗ್ಗೆ ಭಜನಾ ಪರಿಷತ್ ಕೇಂದ್ರ ಸಮಿತಿಯ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಅನೇಕ ಕಡೆಗಳಲ್ಲಿ ತರಬೇತಿಗಳು ಯಶಸ್ವಿಯಾಗಿ ನಡೆದಿವೆ. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸಮಸ್ತ ಭಜನಾ ಮಂಡಳಿಗಳ ಸದಸ್ಯರು ಮತ್ತು ಭಜಕರು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದಿವ್ಯಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ವಿನಂತಿಸಿದರು.

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರ ಮಹತ್ವಾಕಾಂಕ್ಷೆಯಂತೆ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಯೋಜನೆಯ ಸಂಪೂರ್ಣ ಸಹಕಾರವಿದೆ. ಎಲ್ಲರೂ ಸಂಘಟಿತರಾಗಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಲಕ್ಷ ಕಂಠ ಗೀತಾ ಪಾರಾಯಣ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಲಕ್ಷ ಕಂಠ ಗೀತಾ ಪಾರಾಯಣದ ಮುಖ್ಯಸ್ಥೆ ವಿದುಷಿ ಉಷಾ ಹೆಬ್ಬಾರ್, ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್. ಸಹಿತ ವಲಯಗಳ ಸಂಚಾಲಕರು, ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು, ಸದಸ್ಯರು, ಭಜಕರು ಉಪಸ್ಥಿತರಿದ್ದರು.

ನ. 28 : ಉಡುಪಿ ಬನ್ನಂಜೆಯಿಂದ ಕಲ್ಸoಕ ಜಂಕ್ಷನ್ ವರೆಗೆ ಪ್ರಧಾನಿ ಮೋದಿ ‘ರೋಡ್ ಶೋ’ : ಕುತ್ಯಾರು ನವೀನ್ ಶೆಟ್ಟಿ


ಉಡುಪಿ: ನ.28 ಶುಕ್ರವಾರ ಬೆಳಿಗ್ಗೆ ಗಂಟೆ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ‘ರೋಡ್ ಶೋ’ ಉಡುಪಿ-ಬನ್ನಂಜೆಯ ಡಾ! ವಿ.ಎಸ್. ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್ ನಿಂದ ಪ್ರಾರಂಭಗೊಂಡು ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸoಕ ಜಂಕ್ಷನ್ ವರೆಗೆ ಸಾಗಲಿದೆ. ಕಲ್ಸoಕ ರಸ್ತೆಯಿಂದ ನೇರವಾಗಿ ಪಾರ್ಕಿಂಗ್ ಏರಿಯಾ-ರಥಬೀದಿ ಮೂಲಕ ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ಕೃಷ್ಣ ಮಠವನ್ನು ತಲುಪಿ, ಶ್ರೀ ಕೃಷ್ಣ ದರ್ಶನ ಪಡೆಯಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಅವರು ಪ್ರಧಾನಿ ನರೇಂದ್ರ ಮೋದಿ ಅವರ ನ.28ರ ‘ಉಡುಪಿ ರೋಡ್ ಶೋ’ ಮತ್ತು ‘ಶ್ರೀ ಕೃಷ್ಣ ಮಠ ಬೇಟಿ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮೂಹಿಕ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಪಾಲ್ಗೊಂಡು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಮಧ್ಯಾಹ್ನ ಗಂಟೆ 1.35ಕ್ಕೆ ಸಮಾರಂಭದ ಸ್ಥಳದಿಂದ ಹೊರಟು 1.40ಕ್ಕೆ ಆದಿಉಡುಪಿ ಹೆಲಿಪ್ಯಾಡ್ ತಲುಪಿ 1.45ಕ್ಕೆ ಎಂಐ-17 ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಿ, ಮಧ್ಯಾಹ್ನ 2.15ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಗೋವಾಕ್ಕೆ ಪ್ರಯಾಣ ಮಾಡಲಿದ್ದಾರೆ.

ಉಡುಪಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಭವ್ಯವಾಗಿ ಸ್ವಾಗತಿಸಲು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ಅವರ ‘ರೋಡ್ ಶೋ’ ಮಾರ್ಗದ ಮೂರು ಕಡೆಗಳಲ್ಲಿ ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ ವೇಷ, ಹುಲಿ ವೇಷ, ಶ್ರೀ ಕೃಷ್ಣ ವೇಷದಾರಿಗಳ ಪ್ರದರ್ಶನ ಇತ್ಯಾದಿ ಇರಲಿವೆ. ರಸ್ತೆ ಮಾರ್ಗದ ಒಂದು ಕಡೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದ್ದು, ಆ ರಸ್ತೆಯ ಇಕ್ಕೆಲಗಳಲ್ಲಿ 30 ಸಾವಿರಕ್ಕೂ ಅಧಿಕ ಜನರು ನಿಂತು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ರೋಡ್ ಶೋ ವೀಕ್ಷಣೆ ಮಾಡುವ ಸಮಸ್ತ ನಾಗರಿಕರು ನ.28 ಶುಕ್ರವಾರ ಬೆಳಿಗ್ಗೆ ಗಂಟೆ 10.30ರೊಳಗೆ ಬನ್ನಂಜೆ-ಕಲ್ಸoಕ ರಸ್ತೆಯ ಇಕ್ಕೆಲಗಳಲ್ಲಿ ಉಪಸ್ಥಿತರಿರುವಂತೆ ಕೋರಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ 1,112 ಮತಗಟ್ಟೆಗಳ ಪ್ರತೀ ಬೂತ್‌ಗಳಿಂದ ತಲಾ 12 ಮಂದಿಯ ತಂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಬಿಜೆಪಿಯಿಂದ ಆದೇಶಿಸಲಾಗಿದೆ. ಉಡುಪಿ ನಗರ ಭಾಗದಿಂದ ಗರಿಷ್ಠ ಸಂಖ್ಯೆಯ ಜನತೆ ಭಾಗವಹಿಸಲಿದ್ದಾರೆ.

2018ರ ಬಳಿಕ ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ತಿರದಿಂದ ನೋಡುವ ಸದವಕಾಶ ಜಿಲ್ಲೆಯ ಜನತೆಗೆ ಲಭಿಸುತ್ತಿದೆ. ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಕ್ಯಾ. ಬ್ರಿಜೇಶ್ ಚೌಟ ಸಹಿತ ಜಿಲ್ಲೆಯ ಶಾಸಕರು, ರಾಜ್ಯದ ಪ್ರಮುಖ ನಾಯಕರು ಈ ಭಾವನಾತ್ಮಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು, ಮೋದಿ ಅಭಿಮಾನಿಗಳ ಸಹಿತ ಜಿಲ್ಲೆಯ ಮಹಾ ಜನತೆ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶ್ವ ನಾಯಕ, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಭ್ರಮದಿಂದ ಸ್ವಾಗತಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ನೇಕಾರ ಪ್ರಕೋಷ್ಠ ಸಮಿತಿ ಸದಸ್ಯ ರತ್ನಾಕರ್ ಇಂದ್ರಾಳಿ, ಜಿಲ್ಲಾ ವಕ್ತಾರ ಕೆ.ದಿವಾಕರ ಶೆಟ್ಟಿ ಕಲ್ಯಾ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಸ್ವಾಗತಿಸಿ, ಶಿವಕುಮಾರ್ ಅಂಬಲಪಾಡಿ ವಂದಿಸಿದರು.

Design a site like this with WordPress.com
Get started