

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ, ಉಡುಪಿ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಸಹಯೋಗದೊಂದಿಗೆ ಶ್ರೀನಿವಾಸ ಉತ್ಸವ ಬಳಗ ಬೆಂಗಳೂರು ಇವರ ಸಂಯೋಜನೆಯಲ್ಲಿ ದಾಸ ಶ್ರೇಷ್ಠ ‘ಶ್ರೀ ವಿಜಯದಾಸರ’ ‘ಆರಾಧನಾ ಮಹೋತ್ಸವ’ದ ಪ್ರಯುಕ್ತ ಅ.13ರಿಂದ ನ.3ರ ತನಕ ಪ್ರತೀ ರವಿವಾರ ಮಧ್ಯಾಹ್ನ ಗಂಟೆ 2.30ರಿಂದ 5.00ರ ವರೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದಲ್ಲಿ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ ಇವರಿಂದ ನಡೆಯಲಿರುವ ಭಜನಾ ತರಬೇತಿ ಹಾಗೂ ನ.10 ರವಿವಾರ ಮಧ್ಯಾಹ್ನ ಘಂಟೆ 2.00ಕ್ಕೆ ರಾಜಾoಗಣದಲ್ಲಿ ನಡೆಯಲಿರುವ ‘ಭಜನಾ ಮಂಡಳಿಗಳ ಸಮಾವೇಶ’ ಮತ್ತು ‘ಸಹಸ್ರ ಕಂಠ ಗಾಯನ’ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.) ಉಡುಪಿ ಪ್ರಾದೇಶಿಕ ಕಛೇರಿಯಲ್ಲಿ ನಡೆಯಿತು.
ಭಜನಾ ಪರಿಷತ್ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಅವರು ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ, ಉಚಿತ ಭಜನಾ ತರಬೇತಿ, ಭಜನಾ ಮಂಡಳಿಗಳ ಸಮಾವೇಶ ಮತ್ತು ಸಹಸ್ರ ಕಂಠ ಗಾಯನದ ವಿನೂತನ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲರೂ ಸಂಘಟಿತರಾಗಿ ಕೈಜೋಡಿಸಬೇಕು ಎಂದರು.
ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಅ.13ರಿಂದ ಪ್ರತೀ ರವಿವಾರ ನಡೆಯುವ ಭಜನಾ ತರಬೇತಿಗೆ ಗರಿಷ್ಠ ಭಜನಾ ಮಂಡಳಿಗಳು ಮತ್ತು ಭಜನಾಸಕ್ತರು ಹೆಸರನ್ನು ನೊಂದಾಯಿಸಿ, ಭಜನಾ ತರಬೇತಿಯಲ್ಲಿ ಹಾಗೂ ನ.10ರಂದು ನಡೆಯುವ ಭಜನಾ ಸಮಾವೇಶ ಮತ್ತು ಸಹಸ್ರ ಕಂಠ ಗಾಯನದಲ್ಲಿ ಭಾಗವಹಿಸಿ, ಭಜನೆಯನ್ನು ಸಮಾಜದಲ್ಲಿ ಇನ್ನಷ್ಟು ಪ್ರಚಲಿತಗೊಳಿಸಲು ಅಳಿಲು ಸೇವೆ ಸಲ್ಲಿಸುವಂತಾಗಬೇಕು ಎಂದರು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ ತಾಲೂಕಿನ ಭಜನಾ ಮಂಡಳಿಗಳ ಸಹಿತ ಭಜನಾಸಕ್ತರು ಕೂಡಾ ಭಾಗವಹಿಸಲು ಅವಕಾಶವಿರುವ ಈ ಭಜನಾ ತರಬೇತಿಯ ಸದುಪಯೋಗವನ್ನು ಪಡೆಯುವ ಜೊತೆಗೆ ಭಜನಾ ಸಮಾವೇಶ ಮತ್ತು ಸಹಸ್ರ ಕಂಠ ಗಾಯನದಲ್ಲಿಯೂ ಆಸಕ್ತರು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಅವಿಸ್ಮರಣೀಯವನ್ನಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟದ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ, ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು, ಜತೆ ಕಾರ್ಯದರ್ಶಿ ಸತೀಶ್ ಕುಮಾರ್ ಕೇದಾರ್, ಯೋಜನೆಯ ವಲಯಗಳ ಮೇಲ್ವಿಚಾರಕರು ಮತ್ತು ಭಜನಾ ಪರಿಷತ್ ವಲಯಗಳ ಸಂಯೋಜಕರು ಉಪಸ್ಥಿತರಿದ್ದರು.






