ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು : ‘ಭಜನಾ ತರಬೇತಿ’, ‘ಭಜನಾ ಸಮಾವೇಶ’ ಮತ್ತು ‘ಸಹಸ್ರ ಕಂಠ ಗಾಯನ’ ಪೂರ್ವಭಾವಿ ಸಭೆ


ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ, ಉಡುಪಿ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಸಹಯೋಗದೊಂದಿಗೆ ಶ್ರೀನಿವಾಸ ಉತ್ಸವ ಬಳಗ ಬೆಂಗಳೂರು ಇವರ ಸಂಯೋಜನೆಯಲ್ಲಿ ದಾಸ ಶ್ರೇಷ್ಠ ‘ಶ್ರೀ ವಿಜಯದಾಸರ’ ‘ಆರಾಧನಾ ಮಹೋತ್ಸವ’ದ ಪ್ರಯುಕ್ತ ಅ.13ರಿಂದ ನ.3ರ ತನಕ ಪ್ರತೀ ರವಿವಾರ ಮಧ್ಯಾಹ್ನ ಗಂಟೆ 2.30ರಿಂದ 5.00ರ ವರೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದಲ್ಲಿ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ ಇವರಿಂದ ನಡೆಯಲಿರುವ ಭಜನಾ ತರಬೇತಿ ಹಾಗೂ ನ.10 ರವಿವಾರ ಮಧ್ಯಾಹ್ನ ಘಂಟೆ 2.00ಕ್ಕೆ ರಾಜಾoಗಣದಲ್ಲಿ ನಡೆಯಲಿರುವ ‘ಭಜನಾ ಮಂಡಳಿಗಳ ಸಮಾವೇಶ’ ಮತ್ತು ‘ಸಹಸ್ರ ಕಂಠ ಗಾಯನ’ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.) ಉಡುಪಿ ಪ್ರಾದೇಶಿಕ ಕಛೇರಿಯಲ್ಲಿ ನಡೆಯಿತು.

ಭಜನಾ ಪರಿಷತ್ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಅವರು ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ, ಉಚಿತ ಭಜನಾ ತರಬೇತಿ, ಭಜನಾ ಮಂಡಳಿಗಳ ಸಮಾವೇಶ ಮತ್ತು ಸಹಸ್ರ ಕಂಠ ಗಾಯನದ ವಿನೂತನ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲರೂ ಸಂಘಟಿತರಾಗಿ ಕೈಜೋಡಿಸಬೇಕು ಎಂದರು.

ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಅ.13ರಿಂದ ಪ್ರತೀ ರವಿವಾರ ನಡೆಯುವ ಭಜನಾ ತರಬೇತಿಗೆ ಗರಿಷ್ಠ ಭಜನಾ ಮಂಡಳಿಗಳು ಮತ್ತು ಭಜನಾಸಕ್ತರು ಹೆಸರನ್ನು ನೊಂದಾಯಿಸಿ, ಭಜನಾ ತರಬೇತಿಯಲ್ಲಿ ಹಾಗೂ ನ.10ರಂದು ನಡೆಯುವ ಭಜನಾ ಸಮಾವೇಶ ಮತ್ತು ಸಹಸ್ರ ಕಂಠ ಗಾಯನದಲ್ಲಿ ಭಾಗವಹಿಸಿ, ಭಜನೆಯನ್ನು ಸಮಾಜದಲ್ಲಿ ಇನ್ನಷ್ಟು ಪ್ರಚಲಿತಗೊಳಿಸಲು ಅಳಿಲು ಸೇವೆ ಸಲ್ಲಿಸುವಂತಾಗಬೇಕು ಎಂದರು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ ತಾಲೂಕಿನ ಭಜನಾ ಮಂಡಳಿಗಳ ಸಹಿತ ಭಜನಾಸಕ್ತರು ಕೂಡಾ ಭಾಗವಹಿಸಲು ಅವಕಾಶವಿರುವ ಈ ಭಜನಾ ತರಬೇತಿಯ ಸದುಪಯೋಗವನ್ನು ಪಡೆಯುವ ಜೊತೆಗೆ ಭಜನಾ ಸಮಾವೇಶ ಮತ್ತು ಸಹಸ್ರ ಕಂಠ ಗಾಯನದಲ್ಲಿಯೂ ಆಸಕ್ತರು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಅವಿಸ್ಮರಣೀಯವನ್ನಾಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟದ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ, ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು, ಜತೆ ಕಾರ್ಯದರ್ಶಿ ಸತೀಶ್ ಕುಮಾರ್ ಕೇದಾರ್, ಯೋಜನೆಯ ವಲಯಗಳ ಮೇಲ್ವಿಚಾರಕರು ಮತ್ತು ಭಜನಾ ಪರಿಷತ್ ವಲಯಗಳ ಸಂಯೋಜಕರು ಉಪಸ್ಥಿತರಿದ್ದರು.

ಶಿರೂರು ಮಠದ ವತಿಯಿಂದ “ಶ್ರೀರಾಮ ತಾರಕ ಮಹಾಮಂಡಲಪೂಜೆ” ವಿಜ್ಞಾಪನಾ ಪತ್ರ ಬಿಡುಗಡೆ.


ಶ್ರೀ ಶೀರೂರು ಮಠ ಉಡುಪಿ, ಪರಿವರ್ತನಾ ಫೌಂಡೇಶನ್ ರಿ. ಉಡುಪಿ ಹಾಗೂ ಶ್ರೀ ರಾಮತಾರಕ ಮಹಾಮಂಡಲ ಪೂಜಾ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀ ಕ್ಷೇತ್ರ ಶೀರೂರು ಮೂಲ‌ಮಠ ಶೀರೂರು ಹಿರಿಯಡ್ಕ ಇಲ್ಲಿ ಡಿಸೆಂಬರ್ 14 ಮತ್ತು 15 ನೇ ತಾರೀಕಿನಂದು ಹಿಂದೂ ಭಗಿನಿಯರ ರಕ್ಷಣೆ, ಅಖಂಡ ಹಿಂದೂ ರಾಷ್ಟ್ರದ ಸಂಕಲ್ಪ ಹಾಗೂ ರಾಮರಾಜ್ಯದ ಪರಿಕಲ್ಪನೆಯೊಂದಿಗೆ ನಡೆಯಲಿರುವ ಶ್ರೀರಾಮ ತಾರಕ‌ ಮಹಾ ಮಂಡಲ ಪೂಜೆ, ಶ್ರೀರಾಮ ತಾರಕ ಯಾಗ, ಮನು ಸೂಕ್ತ ಯಾಗ, ವಾಯುಸ್ತುತಿ ಯಾಗ, ದತ್ತಾತ್ರೇಯ ಯಾಗ  ಕಾರ್ಯಕ್ರಮದ ವಿಜ್ಞಾಪನಾ ಪತ್ರಿಕೆಯನ್ನು ಪರಮಪೂಜ್ಯ ಶ್ರೀ ಕ್ರಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರವರು, ಪರಮಪೂಜ್ಯ ಪೇಜಾವರ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸಮಿತಿಯ ಅಧ್ಯಕ್ಷರಾದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಹಾಗೂ ಕಾರ್ಯಾಧ್ಯಕ್ಷ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣರವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸಂಚಾಲಕರಾದ ಶ್ರೀಕಾಂತ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಭಟ್,  ಸಂಘಟನಾ ಕಾರ್ಯದರ್ಶಿ ಜಿತೇಶ್, ಕೋಶಾಧಿಕಾರಿ ಶ್ರೀನಿವಾಸ್ ರಾವ್ ಕಾರ್ಯದರ್ಶಿಗಳಾದ ದಿವಾಕರ್ ಹಿರಿಯಡ್ಕ,  ಸಾಂಸ್ಕೃತಿಕ ಕಾರ್ಯದರ್ಶಿ ಅರುಣ್ ಕುಂದರ್, ಪ್ರಮುಖರಾದ ಡಾ. ವಿಜಯೇಂದ್ರ,  ಶಿವಪ್ರಸಾದ್ ತಲ್ಲೂರು, ಜಗದೀಶ್ ಅಮೀನ್ ಮೂಡಬೆಟ್ಟು, ಅಶೋಕ್ ಕುಮಾರ್ ಅಲೆವೂರು ಮತ್ತಿತರು ಉಪಸ್ಥಿತರಿದ್ದರು ‌

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು : ಬಿಜೆಪಿ ಉಡುಪಿ ನಗರ ಸಂಭ್ರಮಾಚರಣೆ



ಉಡುಪಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಉಡುಪಿ ನಗರ ಮಂಡಲದ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ಗಿರೀಶ್ ಎಮ್. ಅಂಚನ್, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪೆಟ್ಟು, ನಗರ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಕರಂಬಳ್ಳಿ, ಜಯಕರ ಕಡೇಕಾರು, ಅಲ್ಪಸಂಖ್ಯಾತ ಮೋರ್ಚಾ ಮಾಜಿ ರಾಜ್ಯ ಉಪಾಧ್ಯಕ್ಷ ಸಲೀಂ ಅಂಬಾಗಿಲು, ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೇನಿಸ್ ಮಸ್ಕರೇನಸ್, ಯುವ ಮೋರ್ಚಾ ನಗರ ಉಪಾಧ್ಯಕ್ಷ ಪ್ರಜ್ವಲ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ, ನಗರಸಭಾ ಸದಸ್ಯರಾದ ಸಂತೋಷ್ ಜತ್ತನ್ ನಿಟ್ಟೂರು, ವಿಜಯಲಕ್ಷ್ಮಿ ಸರಳೇಬೆಟ್ಟು, ಸಂಪಾವತಿ ಕೊಡಂಕೂರು, ನಗರ ಕಾರ್ಯಕಾರಿಣಿ ಸದಸ್ಯೆ ಪ್ರಜ್ಞಾ ಶೆಟ್ಟಿ, ಪ್ರಮುಖರಾದ ಮಂಜುಳಾ ಶೆಟ್ಟಿ, ಧನುಷ್, ಭೂಷಣ್, ಸೌರವ್, ಸಂತೋಷ್ ಅಮೀನ್, ಜಯಂತ್, ದಯಾನಂದ್ ಮುಂತಾದವರು ಉಪಸ್ಥಿತರಿದ್ದರು.

ಶಾಸಕರಾದ ಯಶ್ ಪಾಲ್ ಸುವರ್ಣ ರವರ ನೇತೃತ್ವದಲ್ಲಿ ದೇಶದ ಗಡಿ ಕಾಯುವ ಯೋಧರ ತಂದೆ-ತಾಯಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಎಸ್ ಟಿ. ಮೋರ್ಚ ಉಡುಪಿ ನಗರ  ಇದರ ಸೇವಾ ಪಾಕ್ಷಿಕ  ಕಾರ್ಯಕ್ರಮದ ಅಂಗವಾಗಿ ಶಾಸಕರಾದ ಯಶ್ ಪಾಲ್ ಸುವರ್ಣ ರವರ ನೇತೃತ್ವದಲ್ಲಿ ದೇಶದ ಗಡಿ ಕಾಯುವ ಯೋಧರ ಮಾತಾಪಿತ್ರರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮವನ್ನು ಉಡುಪಿಯ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜಿಸಲಾಯಿತು.

ರಾಜಸ್ಥಾನದ ಕೋಟಾದಲ್ಲಿ  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ  ಮಣಿಪಾಲದ ಈಶ್ವರ ನಗರ ನಿವಾಸಿ ಕಾರ್ತಿಕ್ ಕೆ ಪೂಜಾರಿಯವರ ಹೆತ್ತವರಾದ  ಜಯಂತಿ ಮತ್ತು ಕರುಣಾಕರ್ ಪೂಜಾರಿ ದಂಪತಿಗಳು, ಹಿರಿಯಡ್ಕ ನಿವಾಸಿ  ಯೋಧ ಕುಜಂಬೈಲ್ ಹರಿಕೃಷ್ಣರವರ ಹೆತ್ತವರಾದ ಸುಂದರಿ ಮತ್ತು ಉಪೇಂದ್ರ ನಾಯಕ ದಂಪತಿಗಳು, ಉಡುಪಿ ಬೈಲೂರು ಕೊಳಂಬೆಯ ಯೋಧ ಸಹೋದರರಾದ ರೋಷನ್ ಮತ್ತು ರಂಜನ್ ರವರ ಹೆತ್ತವರಾದ ಬೇಬಿ ಮತ್ತು ಕೃಷ್ಣ ಪೂಜಾರಿ ದಂಪತಿಗಳು,  ಹಿರಿಯಡ್ಕ ಒಂತಿಬೆಟ್ಟುವಿನ ಯೋಧ  ಸುರೇಶ್ ಶೆಟ್ಟಿ ಯವರ ಹೆತ್ತವರಾದ ಸುಜಾತ ಮತ್ತು ಭೋಜ ಶೆಟ್ಟಿ ದಂಪತಿಗಳನ್ನು ಅವರ ನಿವಾಸದಲ್ಲಿ  ಗೌರವಿಸಲಾಯಿತು.
ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕುಂದಾಪುರ್ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ, ಅಶೋಕ್ ನಾಯ್ಕ, ಎಸ್ ಟಿ ಮೋರ್ಚಾದ ಪದಾಧಿಕಾರಿಗಳಾದ ಸುಗುಣ ನಾಯ್ಕ, ಸುಮ ನಾಯ್ಕ,  ರಾಹುಲ್ ನಾಯ್ಕ, ಗಿರೀಶ್ ನಾಯ್ಕ, ಉಡುಪಿ ಸೈನಿಕರ ವೇದಿಕೆ ಮಾಜಿ ಅಧ್ಯಕ್ಷರಾದ ಗಣಪಯ್ಯ ಸೇರಿಗಾರ್  ಮತ್ತಿತರರು ಹಾಜರಿದ್ದರು.
ಮೋರ್ಚಾ ಅಧ್ಯಕ್ಷೆ ಸುಮಲತಾ ಕಾರ್ಯಕ್ರಮವನ್ನು ಸಂಯೋಜಿಸಿದರು.

ಕಾಂಗ್ರೆಸ್ ಸರಕಾರದ ವಿರುಧ್ದ ಪಂಚಾಯತ್ ಖೋಲೋ ಆಂದೋಲನ ಮಾಡಬೇಕೆ?  ಆಡಳಿತವೋ ಅವ್ಯವಸ್ಥೆಗಳ ಆಗರವೋ?: ಶ್ರೀಕಾಂತ ನಾಯಕ್



ಉಡುಪಿ: ರಾಜ್ಯದಲ್ಲಿ ಸರಕಾರ ಸರಕಾರ ಅಸ್ಥಿತ್ವದಲ್ಲಿ ಇದೆಯೋ ಅಥವಾ ಸತ್ತು ಹೋಗಿದೆಯೋ ಎನ್ನುವ ಅನುಮಾನ ರಾಜ್ಯದ ಜನರನ್ನು ಕಾಡುತ್ತಿದೆ. ಸರಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ.‌ ಈ ಮಧ್ಯೆ ಕಳೆದ ನಾಲ್ಕೈದು ದಿನಗಳಿಂದ ತಮ್ಮ ವಿವಿಧ ಬೇಡಿಕೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟ ಅವಧಿಯ ಮುಷ್ಕರದಿಂದಾಗಿ ಗ್ರಾಮೀಣ ಪ್ರದೇಶದ ಜನ ದಿನ ನಿತ್ಯದ ಕೆಲಸಗಳಿಗೆ ಪಂಚಾಯತ್ ಗೆ ಹೋಗಿ ಅಲೆದಾಡಿ ಸರಕಾರಕ್ಕೆ ಹಿಡಿಶಾಪ ಹಾಕಿ ಹಿಂತಿರುಗುತ್ತಿದ್ದಾರೆ. ಅದಲ್ಲದೆ ಇದೇ ತಿಂಗಳ ನಾಲ್ಕನೇ ತಾರೀಕಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭವಾಗಲಿದೆ. ಏಕ ಕಾಲದಲ್ಲಿ ಇವರಿಬ್ಬರ ಮುಷ್ಕರ ನಡೆದರೆ ಆಡಳಿತ ಯಂತ್ರ ಸಂಪೂರ್ಣ ಕುಸಿದಂತಾಗುತ್ತದೆ. ಹೀಗಾದರೆ ಜನರೇ ದಂಗೆ ಎದ್ದು ಪಂಚಾಯತ್ ಎದುರು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದೀತು. ಈಗಾಗಲೇ ಈ ಸರಕಾರದಿಂದಾಗಿ ಗ್ರಾಮೀಣ ಪ್ರದೇಶದ ಜನರ ಜೀವನ ಹದಗಟ್ಟು ಹೋಗಿದೆ. ಬೆಲೆ ಏರಿಕೆಯಿಂದಾಗಿ ಜನ ಹೈರಾಣಾಗಿದ್ದಾರೆ. ವಿದ್ಯುತ್ ಫ್ರೀ ಎನ್ನುವ ಕಾಲದಿಂದ ಇಂದು ಮತ್ತೆ ಅಧಿಕ ಬಿಲ್ ಕಟ್ಟುವ ಕಾಲಕ್ಕೆ ಬಂದಾಗಿದೆ. ಗ್ರಾಮೀಣ ರೈತಾಪಿ ವರ್ಗದ ಜನರ ಹಾಲಿನ ಸಬ್ಸಿಡಿ ಕೊಡದೆ ಅದೆಷ್ಟು ತಿಂಗಳುಗಳಾದವೋ. ಈಚೆ ಪ್ಯಾಕೇಟ್ ಹಾಲಿನ ದರ ಮಾತ್ರ ನಿರಂತರ ಹೆಚ್ಚುತ್ತಿದೆ‌. ಗ್ರಹಲಕ್ಷ್ಮಿಗೆ ಗರಬಡಿದಿದೆ. ನಿರುದ್ಯೋಗ ಭತ್ಯೆಗೆ ಗ್ರಹಣ ಹಿಡಿದಿದೆ. ಯಾವುದೇ ಸಬ್ಸಿಡಿಗಳು ಬರುತ್ತಿಲ್ಲ. ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನವಿಲ್ಲ. ಈ ಮಧ್ಯೆ ಬಡವರ ಬಿಪಿಎಲ್  ಪಡಿತರ ಚೀಟಿ ರದ್ಧತಿ, ಇಷ್ಟೆಲ್ಲ ಆದರೂ ರಾಜ್ಯ ಸರಕಾರ ದೊಂಬರಾಟ ಆಡುತ್ತಾ ಕಾಲಹರಣ ಮಾಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಯಾವುದೇ ಒಬ್ಬ ಸಚಿವರೂ ಸಮಯ ಕೊಡುತ್ತಿಲ್ಲ. ಕೂಡಲೇ ಸರಕಾರ ಮುಷ್ಕರ ನಡೆಸುವ ಅಧಿಕಾರಿಗಳೊಂದಿಗೆ ಮಾತನಾಡಿ ಅವರ ಪ್ರಾಮಾಣಿಕ ಬೇಡಿಕೆಗಳಿದ್ದರೆ ಅದನ್ನು ಪೂರೈಸಿ ಆಡಳಿತ ಯಂತ್ರ ಸಾಂಗವಾಗಿ‌ ನಡೆಸುವಂತಾಗಬೇಕು. ಪಿಡಿಒ ಗಳೂ ಮುಷ್ಕರ ನಡೆಸುವ ಮೊದಲು ಸರಕಾರ ಎಚ್ಚೆತ್ತುಕೊಂಡರೆ ಅವರಿಗೇ ಒಳಿತು. ಇಲ್ಲದಿದ್ದರೆ ಜನ ಖಂಡಿತವಾಗಿಯೂ ಪಂಚಾಯತ್ ಮುಂದೆ ತಮ್ಮ ಕೆಲಸಗಳಿಗಾಗಿ‌ ಪ್ರತಿಭಟನೆ ಮಾಡುವ ಅನಿವಾರ್ಯ ಬಂದೀತು. ಆಡಳಿತ ಮಾಡಲು ಬರದಿದ್ದರೆ ಅಧಿಕಾರ ಬಿಟ್ಟು ತೊಲಗಿ ಜನಸಾಮಾನ್ಯರಿಗೆ ತೊಂದರೆ ನೀಡಬೇಡಿ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಕಾಪು ಮಂಡಲದ ನಿಕಟಪೂರ್ವ ಅಧ್ಯಕ್ಚರೂ ಆದ ಶ್ರೀಕಾಂತ ನಾಯಕ್ ಹೇಳಿಕೆ ನೀಡಿರುವರು.

ಸೇವಾ ಪಾಕ್ಷಿಕ, ಸದಸ್ಯತ್ವ ಅಭಿಯಾನ, ಮನ್ ಕೀ ಬಾತ್ ವೀಕ್ಷಣೆಗೆ ವೇಗ ನೀಡಲು ಕಿಶೋರ್ ಕುಮಾರ್ ಕುಂದಾಪುರ ಕರೆ



ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಸೆ.17ರಿಂದ ಅ.2 ಗಾಂಧಿ ಜಯಂತಿ ಆಚರಣೆಯ ವರೆಗೆ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ನಡೆಯುತ್ತಿರುವ ಸೇವಾ ಪಾಕ್ಷಿಕ ಮತ್ತು ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ವೇಗ ನೀಡುವ ಜೊತೆಗೆ ಸೆ.29ರಂದು ಬೆಳಿಗ್ಗೆ 11.00 ಗಂಟೆ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ಪಕ್ಷದ ಪ್ರಮುಖರು, ಜಿಲ್ಲೆ, ಮಂಡಲ, ಮೋರ್ಚಾ, ಪ್ರಕೋಷ್ಠಗಳ ಸಹಿತ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ವೀಕ್ಷಿಸಿ ತಮ್ಮ ಬೂತ್ ಸಂಖ್ಯೆಯೊಂದಿಗೆ ಫೋಟೋ ಮತ್ತು ವಿವರವನ್ನು ಸರಲ್ ಆಪ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಉಡುಪಿ ಜಿಲ್ಲೆ ಈ ಎಲ್ಲಾ ಅಭಿಯಾನಗಳಲ್ಲಿ ರಾಜ್ಯದಲ್ಲೇ ಮುಂಚೂಣಿ ಸ್ಥಾನ ಪಡೆಯುವಂತೆ ಸಂಘಟಿತ ಶ್ರಮ ವಹಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೇವಾ ಪಾಕ್ಷಿಕದ ಅಂಗವಾಗಿ ‘ತಾಯಿಯ ಹೆಸರಲ್ಲಿ ಒಂದು ಸಸಿ’ ನೆಡುವ ಅಭಿಯಾನದ ಜೊತೆಗೆ ಉದ್ಯಾನವನ, ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಬೇಕು. ಪಕ್ಷದ ಪ್ರಮುಖರು, ಜವಾಬ್ದಾರಿಯುತ ಪದಾಧಿಕಾರಿಗಳು, ಸಮಿತಿ ಸದಸ್ಯರು, ಎಲ್ಲಾ ಜನಪ್ರತಿನಿಧಿಗಳು, ಅಭಿಯಾನಗಳ ಪ್ರಭಾರಿಗಳು, ಸಂಚಾಲಕರು ಮತ್ತು ಕಾರ್ಯಕರ್ತರು ಮನೆಮನೆ ಭೇಟಿಯ ಮೂಲಕ ಸದಸ್ಯತಾ ಮಹಾ ಅಭಿಯಾನದಲ್ಲಿ ತೊಡಗಿಸಿಕೊಂಡು, ಸ್ವಯಂ 100 ಮೇಲ್ಪಟ್ಟು ಹಾಗೂ ಪ್ರತೀ ಬೂತ್ ನಲ್ಲಿ ಕನಿಷ್ಠ 300 ಸಂಖ್ಯೆಯ ಸದಸ್ಯತನವನ್ನು ನೊಂದಾಯಿಸುವ ಮೂಲಕ ಎಲ್ಲಾ ಅಭಿಯಾನಗಳನ್ನು ಯಶಸ್ವಿಗೊಳಿಸಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಮಾತನಾಡಿ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಸದಸ್ಯತಾ ಅಭಿಯಾನ, ಮನ್ ಕೀ ಬಾತ್ ವೀಕ್ಷಣೆ ಮತ್ತು ವರದಿ ಅಪ್ಲೋಡ್ ಹಾಗೂ ಸೇವಾ ಪಾಕ್ಷಿಕ ಅಭಿಯಾನದಲ್ಲಿ ರಾಜ್ಯಕ್ಕೇ ಮಾದರಿಯಾಗಬೇಕು ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕ ಮಟ್ಟಾರ್ ರತ್ನಾಕರ ಹೆಗ್ದೆ ಮಾತನಾಡಿ ದೇಶವನ್ನು ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ 5ನೇ ಸ್ಥಾನಕ್ಕೇರಿಸಿ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ಸದಸ್ಯತನವನ್ನು  ಪಡೆಯುವುದು ಸುಯೋಗ. ಈ ನಿಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪ್ರಯತ್ನದಿಂದ ಗರಿಷ್ಠ ಸದಸ್ಯತನ ನೊಂದಾವಣೆಯೊಂದಿಗೆ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸೇವಾ ಪಾಕ್ಷಿಕ ಅಭಿಯಾನದ ಕಾರ್ಯಕ್ರಮಗಳ ಕುರಿತು ಹಾಗೂ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕುಂದರ್ ಬೂತ್ ಶಹ ಮನ್ ಕೀ ಬಾತ್ ವೀಕ್ಷಣೆ ಮತ್ತು ವರದಿ ಅಪ್ಲೋಡ್ ಮಾಡುವ ಕುರಿತು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪೆರಣoಕಿಲ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಕ್ಯಾತ್ ಶೆಟ್ಟಿ ಸಹಿತ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು, ರಾಜ್ಯ ಪ್ರಕೋಷ್ಠಗಳ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಬಿಜೆಪಿ ಉಡುಪಿ ಮಾಜಿ ಜಿಲ್ಲಾಧ್ಯಕ್ಷ, ಬೈಂದೂರು ಮಾಜಿ ಶಾಸಕ ಲಕ್ಷ್ಮೀನಾರಾಯಣ ನಿಧನಕ್ಕೆ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಸಂತಾಪ



ಬಿಜೆಪಿ ಉಡುಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಬೈಂದೂರು ಮಾಜಿ ಶಾಸಕ ಲಕ್ಷ್ಮೀನಾರಾಯಣ ಅವರ ನಿಧನಕ್ಕೆ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾಗಿ, ಪಕ್ಷವನ್ನು ತಳ ಮಟ್ಟದಿಂದ ಸದೃಢವಾಗಿ ಕಟ್ಟುವ ಜೊತೆಗೆ ಬೈಂದೂರು ಶಾಸಕರಾಗಿ ಜನಪರ ಕೆಲಸ ಕಾರ್ಯಗಳ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಲಕ್ಷ್ಮೀನಾರಾಯಣ ಬೈಂದೂರು ಅವರ ಸೇವಾ ಮನೋಭಾವ ಪ್ರೇರಣಾದಾಯಕ.

ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಆಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಉದಯ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸುವ ಮೂಲಕ  ಕಾಂಗ್ರೆಸ್ ಸರಕಾರ ಬಡವರ ಬದುಕನ್ನು‌ ಬುಡಮೇಲು ಮಾಡುತ್ತಿದೆ – ಶ್ರೀಕಾಂತ ನಾಯಕ್


ಉಡುಪಿ: ರಾಜ್ಯ ಸರಕಾರ ಸುಮಾರು ಹತ್ತು ಲಕ್ಷ ಬಡವರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲು ಪ್ರಾರಂಭ‌ಮಾಡಿದ್ದು ಕಾಂಗ್ರೆಸ್ ಆಡಳಿತದ ದುಬಾರಿ ದುನಿಯಾದಲ್ಲಿ  ಬಡವರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುತ್ತಿದೆ.‌ ತನ್ನ ಗ್ಯಾರಂಟಿಗಳಿಗಾಗಿ ಹಣ ಹೊಂದಿಸಲು‌ ಪರಿಪಾಟಲು‌ ಪಡುತ್ತಿರುವ ಸರಕಾರ ಎಲ್ಲದರ ದರ ಏರಿಸಿಯೂ ಸಾಕಾಗುತ್ತಿಲ್ಲ ಎನ್ನುವ ದ್ರಷ್ಟಿಯಿಂದ ಇದೀಗ ಬಡ ಹಾಗೂ ಮಧ್ಯಮ ವರ್ಗದ ಬಿಪಿಎಲ್ ಪಡಿತರ ಚೀಟಿಯ ಮೇಲೆ ಕಣ್ಣು ಹಾಯಿಸಿದೆ. ರಾಜ್ಯದ ಸುಮಾರು ಹತ್ತು ಲಕ್ಷ ಪಡಿತರ ಚೀಟಿ ರದ್ದುಗೊಳಿಸಿದರೆ ಒಂದಷ್ಟು ಗ್ಯಾರಂಟಿಯ ಹಣ ಉಳಿಯಬಹುದು ಎನ್ನುವ ಲೆಕ್ಕಾಚಾರ ಇರಬಹುದು.‌ ಆದರೆ ಬಿಪಿಎಲ್ ರದ್ದುಗೊಳಿಸಿದರೆ ಎಷ್ಟೊಂದು ನಷ್ಟವಾಗುತ್ತದೆ ಎನ್ನುವ ಅರಿವು ಅವರಿಗಿದೆಯೇ? ಯಾವುದೇ ಸರಕಾರಿ ಸವಲತ್ತು ಪಡೆಯಲು ಇಂದು ಬಿಪಿಎಲ್ ಬೇಕು.‌ ಪಡಿತರ ಚೀಟಿ ರದ್ದಾದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಬಹುದು, ಅಕ್ಕಿ ಸಿಗಲಿಕ್ಕಿಲ್ಲ,  ಮಕ್ಕಳಿಗೆ ಸ್ಕಾಲರ್ಶಿಪ್ ಇರಬಹುದು, ಆರೋಗ್ಯ ಸಂಬಂದಿತ ಆಯುಷ್ಮಾನ್ ಇತ್ಯಾದಿ ಉಚಿತ ಚಿಕಿತ್ಸೆ ಇಂತಹ ಹಲವಾರು ಯೋಜನೆಗಳನ್ನು‌ ಪಡೆಯುವ ಅವಕಾಶ ಇರಿವುದಿಲ್ಲ. ಈಗಾಗಲೇ ಎಲ್ಲದರ ದರ ಏರಿಸಿ ಜನರಿಗೆ ಜೀವನ‌ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಗ್ಯಾರಂಟಿಗಳು ಯಾವ ತಿಂಗಳಲ್ಲಿ ಬರುತ್ತೋ ಬರಲ್ವೋ ದೇವರೇ ಬಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಡಿತರ ಚೀಟಿಯೂ ರದ್ದಾದರೆ ಬಡವರು ಜೀವನ ಕಟ್ಟಿಕೊಳ್ಳುವುದು ಹೇಗೆ? ತಾನು ಹಿಂದುಳಿದ, ಬಡವರ ಶೋಷಿತರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಇವರಿಗೆ ಹಿಂದುಳಿದವರ, ಬಡವರ, ಶೋಷಿತರ ಶಾಪ ತಟ್ಟದೆ ಇರದು.‌ ಸರಕಾರಗಳು‌ ಜನರ ಹಿತವನ್ನು ಬಯಸಬೇಕೇ ಹೊರತ ಸದಾ ಜನರಿಗೆ ತೊಂದರೆ ನೀಡುವುದಾದರೆ ಯಾವ ಪುರುಷಾರ್ಥಕ್ಕೆ ಈ ಸರಕಾರ ಬೇಕಿದೆ. ಜನಸಾಮಾನ್ಯರು ರಸ್ತೆಗಿಳಿದು ನಿಮಗೆ ಬುಧ್ಧಿ ಕಲಿಸುವ ದಿನಕ್ಕಾಗಿ ಕಾಯದೆ ಕೂಡಲೇ ಸರಕಾರದ ಈ ಆದೇಶ‌ ಪುನರ್ಪರಿಶೀಲನೆ ಮಾಡಿ, ಗ್ಯಾರಂಟಿಗಾಗಿ ಕಾಸು ಉಳಿಸಲು ಪಡಿತರ ಚೀಟಿ ರದ್ದುಗೊಳಿಸುವ ಯೋಜನೆಯನ್ನು ಬಿಟ್ಟುಬಿಡಿ ಇಲ್ಲದಿದ್ದರೆ ನಾವೂ ಜನರೊಂದಿಗೆ ಸೇರಿ ಬೀದಿಗಿಳಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾದೀತು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯಕ್ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ : ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ



ಉಡುಪಿ: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಗ್ರಹಿಸಿದ್ದಾರೆ.

ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಇತರರ ವಿಚಾರದಲ್ಲಿ ರಾಜೀನಾಮೆ ಕೇಳಲು ಬಹಳ ಆಸಕ್ತಿ ವಹಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸರದಿ ಬಂದಾಗ ರಾಜಿನಾಮೆ ನೀಡದೆ ವೃಥಾ ಕಾಲಹರಣ ಮಾಡುತ್ತಿರುವುದು ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಎಸಗಿದ ಘೋರ ಅಪಚಾರವಾಗಿದೆ.

ರಾಜ್ಯದ ಸಂಪತ್ತನ್ನು ಲೂಟಿಗೈದವರನ್ನು ಜೈಲಿಗೆ ಅಟ್ಟಬೇಕು, ನಮ್ಮದು ನುಡಿದಂತೆ ನಡೆವ ಸರಕಾರ ಎಂದೆಲ್ಲಾ ಬೊಗಳೆ ಬಿಡುತ್ತಿದ್ದ ಸಿದ್ದರಾಮಯ್ಯ ಅವರಿಗೆ ತನ್ನ ಮಾತನ್ನು ಉಳಿಸಿಕೊಳ್ಳುವ ಅವಕಾಶ ಒದಗಿ ಬಂದಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಡಿನೋಟಿಫಿಕೇಷನ್ ಪ್ರಕರಣ, ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ ಸಹಿತ ಸಾಲು ಸಾಲು ಹಗರಣಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನಿನ ಕುಣಿಕೆಯಿಂದ ಪಾರಾಗಲು ಸಾಧ್ಯವೇ ಇಲ್ಲ ಎಂಬುದನ್ನು ರಾಜ್ಯದ ಜನತೆಗೆ ಚೆನ್ನಾಗಿಯೇ ಅರಿತುಕೊಂಡಿದ್ದಾರೆ.

ಅಧಿಕಾರದ ದಾಹದಿಂದ ಜನರ ಭಾವನೆಯೊಂದಿಗೆ ಚೆಲ್ಲಾಟವಾಡಿ, ರಾಜ್ಯವನ್ನು ದಿವಾಳಿಯ ಅಂಚಿಗೆ ನೂಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಶೀಘ್ರ ರಾಜೀನಾಮೆಯನ್ನು ನೀಡಿ ಮುಂದಿನ ಪ್ರಕ್ರಿಯೆಗೆ ಸಹಕರಿಸಿ ಈ ನೆಲದ ಕಾನೂನನ್ನು ಗೌರವಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಹೈ ಕೋರ್ಟ್ ತೀರ್ಪು ಸಂವಿಧಾನವನ್ನು ತನ್ನ ಮೂಗಿನ ನೇರಕ್ಕೆ ಉಪಯೋಗಿಸುವವರಿಗೆ ಬೆತ್ತದೇಟು ನೀಡಿದಂತಿದೆ – ಶ್ರೀಕಾಂತ ನಾಯಕ್


ಉಡುಪಿ: ರಾಜ್ಯಪಾಲರ ಪ್ರಾಸಿಕ್ಯೂಶನ್ ಆದೇಶವನ್ನು ಪ್ರಶ್ನಿಸಿ ತಡೆ ನೀಡಬೇಕೆಂದು ಸಿ ಎಂ ಸಿಧ್ಧರಾಮಯ್ಯರವರು ಸಲ್ಲಿಸಿದ ಅರ್ಜಿ ವಜಾಗೊಳಿಸಿ ರಾಜ್ಯಪಾಲರ‌ ನಡೆ ಸರಿ ಇದೆ ಎಂದು ಆದೇಶಿಸಿರುವುದು ಸ್ವಾಗತಾರ್ಹವಾಗಿದೆ. ಮೊದಲಿನಿಂದಲೂ ಇದು ದಲಿತರ ಭೂಮಿಯಾಗಿದ್ದು ಅಕ್ರಮವಾಗಿ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಹೆಂಡತಿ ಹೆಸರಲ್ಲಿ ಸೈಟು ನೋಂದಣಿ ಮಾಡಿರುವರೆಂದು ದೂರು  ಇದ್ದು ದಾಖಲೆಗಳೂ ಇದಕ್ಕೆ ಪೂರಕವಾಗಿದ್ದು ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರೆ ಕಾಂಗ್ರೆಸ್ ನವರು ತಮ್ಮ ಹೀನ ಮನಸ್ಥಿತಿಯಿಂದ ಅತ್ಯಂತ ಗೌರವಾನ್ವಿತ ಹುದ್ದೆಯ ರಾಜ್ಯಪಾಲರನ್ನು ಅವಮಾನಿಸಿ ಇನ್ನಿಲ್ಲದಂತೆ ಹೀಯಾಳಿಸಿದರು. ಬಾಂಗ್ಲಾದಂತೆ ನಾವು ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕುವೆವು ಎನ್ನುವ ಮಟ್ಟಿನ ಇವರ ಬೌಧ್ದಿಕ ದಿವಾಳಿತನದ ಹೇಳಿಕೆಗಳು‌ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಸಿಗೆ ಹುಟ್ಟಿಸುವಂತೆ ಮಾಡಿದ್ದು ಸುಳ್ಳಲ್ಲ. ಆದರೆ ಭಾರತದ ನ್ಯಾಯಾಂಗ ವ್ಯವಸ್ಥೆ ಎನ್ನುವುದು ಎಷ್ಟು ಬಲಿಷ್ಠವಾಗಿದೆ ಹಾಗೂ‌ ಪರಿಶುಧ್ಧವಾಗಿದೆ ಎನ್ನುವುದಕ್ಕೆ ಇಂದಿನ ತೀರ್ಪು ಸಾಕ್ಷಿಯಾಗಿದೆ. ರಾಜ್ಯಪಾಲರು ಯಾವುದಾದರೂ ನಿರ್ಣಯ ತೆಗೆದುಕೊಳ್ಳುವಾಗ ಕಾನೂನಿನ ಎಲ್ಲ ಪರಿಧಿಗಳ ಬಗ್ಗೆ ವಿಮರ್ಶೆ ಮಾಡಿ ಕಾನೂನು ಪಂಡಿತರೊಡನೆ ಚರ್ಚೆ ಮಾಡಿ ಕೈಗೊಳ್ಳುವರು ಎನ್ನುವ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸುವ ಇವರು ತಾವೇ ಸಂವಿಧಾನ ರಕ್ಷಕರಂತೆ ಬೊಬ್ಬೆ ಹೊಡೆಯವುದು ನಾಚಿಕೆಗೇಡಲ್ಲವೇ? ರಾಜ್ಯಪಾಲರು ದೂರುಗಳನ್ನು ಲಿಖಿತವಾಗಿ ಸ್ವೀಕರಿಸಿದಾಗ ಅದರ ಎಲ್ಲ ಗುಣಾವಗುಣಗಳನ್ನು ಪರಿಶೀಲಿಸಿ ಸ್ಬಲ್ಪವಾದರೂ‌ಅನುಮಾನ ಕಂಡಲ್ಲಿ ತನಿಖೆಗೆ ಆದೇಶಿಸುವುದು ಸಾಮಾನ್ಯ ಪ್ರಕ್ರಿಯೆ. ಇದನ್ನೇ ಅಪರಾಧ ಎಂದರೆ ರಾಜ್ಯಪಾಲರು ಇವರು ಹೇಳಿದಂತೆ ಇವರ ದರ್ಪದೌರ್ಜನ್ಯಕ್ಕೆ ತಲೆ ಅಲ್ಲಾಡಿಸಬೇಕೇ? ಸಿಧ್ಧರಾಮಯ್ಯರವರ ಬಗ್ಗೆ ತನಿಖೆ ಆಗಲೇ ಬೇಕು. ನಿಷ್ಪಕ್ಚಪಾತದ ತನಿಖೆಯಾಗಬೇಕಾದರೆ ಕೂಡಲೇ ಅವರು ರಾಜೀನಾಮೆ ನೀಡಬೇಕು.  ಅವರು ನಿರಪರಾಧಿ ಅಂತಾದರೆ ಮತ್ತೆ ಮುಖ್ಯಮಂತ್ರಿಯಾಗಲಿ ಬೇಕಾದರೆ. ಒಟ್ಟಿನಲ್ಲಿ ಸಂವಿಧಾನದ ವ್ಯವಸ್ಥೆ ಯನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸುವರಿಗೆ ಇಂದಿನ ತೀರ್ಪು ಬೆತ್ತದೇಟು ನೀಡಿದ್ದಂತೂ ಸುಳ್ಳಲ್ಲ. ಕಾಂಗ್ರೆಸ್ಸಿಗರು ನಿಜವಾದ ಸಂವಿಧಾನ ಅರ್ಥೈಸಿಕೊಂಡರೆ ಕೂಡಲೇ ಸಿಧ್ಧರಾಮಯ್ಯರವರ ರಾಜೀನಾಮೆ ಪಡೆಯಲಿ.‌ ಸಂವಿಧಾನ ಗೆದ್ದಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಜನಸಾಮಾನ್ಯರಿಗೆ ಮತ್ತಷ್ಟು ಗೌರವ ಹೆಚ್ಚಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟರಿಗೆ ಮಣೆ ಹಾಕಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started