ದೇಶದ ಪ್ರಧಾನಿಗೆ ಭದ್ರತೆ ನೀಡದ ಪಂಜಾಬ್ ಕಾಂಗ್ರೆಸ್ ಸರಕಾರ; ಜನ ಸಾಮಾನ್ಯರ ಪಾಡೇನು?: ಉಡುಪಿ ಜಿಲ್ಲಾ ಬಿಜೆಪಿ ಖಂಡನೆ

ಉಡುಪಿ: ಪಂಜಾಬಿನ ಫಿರೋಜ್ ಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸುವ ಸಲುವಾಗಿ ಹಾಗೂ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಜ.5ರಂದು ಪಂಜಾಬಿಗೆ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಸರಕಾರ ಪ್ರಧಾನಿಯವರಿಗೆ ಅಗತ್ಯ ಭದ್ರತೆಯ ಸುವ್ಯವಸ್ಥೆಯನ್ನು ನೀಡದೇ ಸಂವಿಧಾನ ವಿರೋಧಿಯಾಗಿ ವರ್ತಿಸಿ ಕೀಳು ಮಟ್ಟದ ರಾಜಕೀಯ ನಡೆ ಪ್ರದರ್ಶಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಅನಿರೀಕ್ಷಿತ ಮಳೆಯ ಕಾರಣದಿಂದಾಗಿ ಅನಿವಾರ್ಯವಾಗಿ ರಸ್ತೆ ಮೂಲಕ ಹುಸೇನಿವಾಲಾದ ರಾಷ್ಟ್ರೀಯ ಸ್ಮಾರಕಕ್ಕೆ ತೆರಳುತ್ತಿದ್ದ ಪ್ರಧಾನಿ ಮೋದಿ ಯವರ ಪ್ರಯಾಣಕ್ಕೆ ರೈತ ಪ್ರತಿಭಟನೆಯ ಸೆಪದಲ್ಲಿ ಕೃತಕ ಟ್ರಾಫಿಕ್ ಜಾಮ್ ಸೃಷ್ಠಿಸಿದ ಪರಿಣಾಮವಾಗಿ ಪ್ರಧಾನಿಯವರ ಕಾರು 20 ನಿಮಿಷ ಫ್ಲೈಓವರ್ ಮೇಲೆಯೇ ನಿಲ್ಲುವಂತಾಗಿದೆ. ಆದರೂ ಪ್ರತಿಭಟನಾಕಾರರು ದಾರಿ ಬಿಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತನ್ನೆಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಬಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿರುವುದು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಕರಾಳ ಅಧ್ಯಾಯವೆನಿಸಿದೆ. ದೇಶದ ಪ್ರಧಾನಿಗೇ ಭದ್ರತಾ ವೈಫಲ್ಯವಾದರೆ ಇನ್ನು ಜನ ಸಾಮಾನ್ಯರ ಪಾಡೇನು? ಇದಕ್ಕೆ ಮುಖ್ಯ ಹೊಣೆಗಾರರಾಗಿರುವ ಪಂಜಾಬ್ ಮುಖ್ಯಮಂತ್ರಿ, ಭದ್ರತಾ ಮುಖ್ಯಸ್ಥರು ಮತ್ತು ಕೀಳು ರಾಜಕೀಯವನ್ನು ಪ್ರದರ್ಶಿಸಿದ ಕಾಂಗ್ರೆಸ್ ಪಕ್ಷ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.

ತನ್ನ ದೇಶ ವಿರೋಧಿ ಕೃತ್ಯಗಳಿಂದ ದೇಶದೆಲ್ಲೆಡೆ ಜನತೆಯಿಂದ ತಿರಸ್ಕರಿಸಲ್ಪಟ್ಟ ಕಾಂಗ್ರೆಸ್ ನಿಂದ ಇಂತಹ ನೀಚ ಕೃತ್ಯವನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ತನ್ನ ವಿರೋಧಿಗಳಿಗೆ ಮತ್ತು ದೇಶಕ್ಕೆ ಕಾಂಗ್ರೆಸ್ ಯಾವ ರೀತಿಯಲ್ಲಿ ಕಂಟಕವಾಗಿದೆ ಎಂಬುದನ್ನು ನೇತಾಜಿ ಸುಭಾಷ್ ಚಂದ್ರಬೋಸ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರೊಂದಿಗೆ ನಡೆದ ಘೋರ ಅನ್ಯಾಯದ ಮೂಲಕ ದೇಶದ ಜನತೆ ಅರಿತುಕೊಂಡಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿರದ ಕರ್ನಾಟಕದಲ್ಲಿ ಮುಖ್ಯ ಮಂತ್ರಿ ಕಾರ್ಯಕ್ರಮದಲ್ಲಿ ಗೂಂಡಾ ವರ್ತನೆ; ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ನಲ್ಲಿ ಪ್ರಧಾನ ಮಂತ್ರಿಗೆ ಭದ್ರತಾ ವೈಫಲ್ಯದ ದುರ್ವರ್ತನೆ ಇದು ಕಾಂಗ್ರೆಸ್ ಜಾಯಮಾನ.

‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ದೇಶಕ್ಕೆ ಎಷ್ಟು ಅಪಾಯಕಾರಿಯೋ, ಅಧಿಕಾರ ಕಳೆದುಕೊಂಡಾಗ ಮತ್ತಷ್ಟು ಅಪಾಯಕಾರಿ’ ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಾತನ್ನು ಇಂತಹ ಕುಕೃತ್ಯಗಳ ಮೂಲಕ ಕಾಂಗ್ರೆಸ್ ಸಾಬೀತುಪಡಿಸಿದೆ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿನ ನಾಗಾಲೋಟದಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿನ ಷಡ್ಯಂತ್ರಗಳನ್ನು ಸೂಕ್ಮವಾಗಿ ಗಮನಿಸಿ ಅರ್ಥೈಸಿಕೊಂಡಿರುವ ದೇಶದ ಜನತೆ ದೇಶ ವಿರೋಧಿ ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started