ದೇಶವಿರೋಧಿ ಕಾಂಗ್ರೆಸ್ ಟೂಲ್ ಕಿಟ್ : ಕುಯಿಲಾಡಿ ಸುರೇಶ್ ನಾಯಕ್ ಖಂಡನೆ

ದೇಶ ವಿರೋಧಿ ಕಾಂಗ್ರೆಸ್ ಟೂಲ್ ಕಿಟ್ ಕುಕೃತ್ಯ ಬಹಿರಂಗಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿ ಬಿದ್ದಿದೆ. ಇಡೀ ದೇಶವು ಕೋವಿಡ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ದುರ್ಲಾಭ ಪಡೆದು ದೇಶದ ವಿರುದ್ಧ ಅವಮಾನಕರ ಸನ್ನಿವೇಶವನ್ನು ಸೃಷ್ಟಿಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ದೇಶದಲ್ಲಿನ ಸಾವು ನೋವುಗಳ ವೈಭವೀಕರಣದ ಜೊತೆಗೆ ಉತ್ತರಾಖಂಡದ ಕುಂಭ ಮೇಳದ ಕುರಿತು ಸೂಪರ್ ಸ್ಪ್ರೆಡರ್ ಎಂದು ಬಿಂಬಿಸಿರುವುದು, ಆಸ್ಪತ್ರೆಗಳಲ್ಲಿ
ಹಾಸಿಗೆಗಳ ಕೃತಕ ಕೊರತೆ ಸೃಷ್ಟಿಸುವ ಜೊತೆಗೆ ಅಗತ್ಯ ಮೂಲಸೌಕರ್ಯಗಳನ್ನು ಸಂಗ್ರಹಿಸಿಡುವ ಆಘಾತಕಾರಿ ಕುಕೃತ್ಯ ಕಾಂಗ್ರೆಸ್ ಸಾಧನೆಯೇ. ದೇಶದ ಪ್ರಧಾನಿ ಮತ್ತು ಬಿಜೆಪಿ ನೇತೃತ್ವದ ಸರಕಾರದ ಮೇಲೆ ಅಪನಂಬಿಕೆಯನ್ನು ಪ್ರಚೋದಿಸುವ ಷಡ್ಯಂತ್ರದ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು ಕುಗ್ಗಿಸಲು ಕಾಂಗ್ರೆಸ್ ಸಂಚು ರೂಪಿಸಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.

ಪ್ರಧಾನಿ ಮೋದಿಯವರ ಅದ್ವಿತೀಯ ಸಾಧನೆಯನ್ನು ಸಹಿಸದೆ ಸದಾ ದೂಷಿಸಿಕೊಂಡು ತೇಜೋವಧೆಗೈಯಬೇಕೆನ್ನುವ ಹಪಾಹಪಿಯಲ್ಲಿ ದೇಶವನ್ನೇ ವಿರೋಧಿಸುವ ಕಾಂಗ್ರೆಸ್ ಕೀಳು ಮನಸ್ಥಿತಿ ಅತ್ಯಂತ ದೌರ್ಭಾಗ್ಯದ ಸಂಗತಿ. ಕಾಂಗ್ರೆಸ್ ಕೇವಲ ತನ್ನ ರಾಜಕೀಯ ಹಿತಾಸಕ್ತಿಗಾಗಿ ದೇಶವಾಸಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಶೋಚನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started