ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ (NH-66), ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಪ್ರದೇಶದಲ್ಲಿ ಅಂಡರ್ ಪಾಸಿನ ಅವಶ್ಯಕತೆಯಿದೆ ಎಂದು ಕ್ಷೇತ್ರದ ಜನತೆ ಹಲವಾರು ವರುಷಗಳಿಂದ ಬೇಡಿಕೆಯಿಟ್ಟಿದ್ದರು.
ಹಲವಾರು ಬಾರಿ ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿಯಾಗಿ ಕಟಪಾಡಿ ನಗರ ಪ್ರದೇಶವಾಗಿದ್ದು, ಹೆಚ್ಚಿನ ಜನ ಸಂಚಾರವಿರುವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ‘ಅಂಡರ್ ಪಾಸಿನ/ಓವರ್ ಪಾಸ್’ ಅನಿವಾರ್ಯತೆಯಿದೆ ಎಂದು ಮನದಟ್ಟು ಮಾಡಲಾಗಿತ್ತು.
ಕ್ಷೇತ್ರದ ಜನರ ಅಪೇಕ್ಷೆಯಂತೆ, ಕೇಂದ್ರ ಸರಕಾರ ಕಟಪಾಡಿಯಲ್ಲಿ ಅಂಡರ್ ಪಾಸಿನ ಬದಲು, ‘ಓವರ್ ಪಾಸ್’ ನಿರ್ಮಿಸಲು ತಾತ್ವಿಕ ಅನುಮೋದನೆಯನ್ನು ನೀಡಿರುತ್ತದೆ. ಈ ಯೋಜನೆಯು ಕಾಪು ವಿಧಾನ ಸಭಾ ಕ್ಷೇತ್ರದ ಕಟಪಾಡಿ, ಬಂಟಕಲ್, ಶಿರ್ವ, ಮಟ್ಟು, ಬೆಳ್ಮಣ್ ಪ್ರದೇಶದ ನಿವಾಸಿಗಳಿಗೆ ಸಹಕಾರಿಯಾಗಲಿದೆ.
ವಿಸ್ತೃತ ಯೋಜನಾ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರು ಮಾಡುತ್ತಿದೆ, ಮುಂದಿನ ತಿಂಗಳಲ್ಲಿ ಯೋಜನೆಯ ಪೂರ್ಣ ವಿವರಗಳು ಲಭ್ಯವಾಗಳಿವೆ.
ಜನಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಕಟಪಾಡಿಯಲ್ಲಿ ಒಟ್ಟು ರೂಪಾಯಿ. 22.72 ಕೋಟಿಗಳ ವೆಚ್ಚದಲ್ಲಿ ಓವರ್ ಪಾಸ್ ಅನ್ನು ನಿರ್ಮಿಸಲು ಅನುಮೋದನೆ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ, ಕೇಂದ್ರ ಭೂ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರಿಗೆ ಅನಂತ ಧನ್ಯವಾದಗಳು.
ಕಾಂಗ್ರೆಸ್ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಅವರು, ಕ್ಲಬ್ ಹೌಸ್ ಆಪ್ ಮೂಲಕ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಡುವ ಮಾತನ್ನಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದೇಶವಿರೋಧಿ ಮನಸ್ಥಿತಿಯ ನಿದರ್ಶನವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು ಚೀನಾ ಹಾಗೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರತಿಷ್ಠೆ ಮಣ್ಣು ಪಾಲು ಮಾಡುವುದು, ವಿಶ್ವವಂದ್ಯ ಪ್ರಧಾನಿಯವರ ಘನತೆಗೆ ಧಕ್ಕೆ ತರುವ ದುರುದ್ದೇಶ ಇದರ ಹಿಂದಿದೆ. ಟೂಲ್ಕಿಟ್ ವಿಷಯದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ಸಿಗರ ದುರುದ್ದೇಶವನ್ನು ಜನರ ಗಮನಕ್ಕೆ ತಂದಿದೆ. ಇದು ಟೂಲ್ಕಿಟ್ನ ಮುಂದುವರಿದ ಭಾಗವಷ್ಟೇ. ಇದು ಸರ್ವಥಾ ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ವಿಶ್ವದಾದ್ಯಂತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು ಮತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ದುರುದ್ದೇಶದಿಂದ ಸಮಾಜದ ಕೆಲವು ವರ್ಗಗಳನ್ನು ಓಲೈಸಲು ಈ ರೀತಿಯ ಹೇಳಿಕೆಗಳನ್ನು ಕಾಂಗ್ರೆಸ್ ಮುಖಂಡರು ಹಿಂದೆಯೂ ನೀಡಿದ್ದಾರೆ. ಆದರೆ ಈ ಕುಕೃತ್ಯದಿಂದ ಕಾಂಗ್ರೆಸ್ ಗೆ ಏನೇನೂ ಪ್ರಯೋಜನವಾಗದು ಎಂದು ಕುಯಿಲಾಡಿ ಹೇಳಿದ್ದಾರೆ.
ಇದೇ ದಿಗ್ವಿಜಯ್ ಸಿಂಗ್ ಅವರು ಈ ಹಿಂದೆ ಪುಲ್ವಾಮಾ ದಾಳಿ ಇದೇನೂ ಗಂಭೀರ ವಿಚಾರವಲ್ಲ ಎಂದು ಹೇಳಿ ಪಾಕಿಸ್ತಾನದ ಕ್ರಮವನ್ನೇ ಸಮರ್ಥಿಸಲು ಮುಂದಾಗಿದ್ದರು. ಇದು ಭಯೋತ್ಪಾದಕರ ದಾಳಿ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ, ದೇಶದ ಬಗ್ಗೆ ಗೌರವ ಇದ್ದಲ್ಲಿ ಇಂತಹ ಕಪಟ ನಾಯಕರನ್ನು ಪಕ್ಷದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ ಎಂದು ಕುಯಿಲಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾಟೆ ಶಿಕ್ಷಕರಿಗೆ ಕಿಟ್ ವಿತರಣೆ:
ಇಡೀ ವಿಶ್ವವೇ ಕೊರೋನಾ ಮಹಾಮಾರಿಯಿಂದ ತತ್ತರಿಸಿರುವ ಈ ಕಾಲ ಘಟ್ಟದಲ್ಲಿ ಅನೇಕ ಸಂಘ- ಸಂಸ್ಥೆಗಳು, ದಾನಿಗಳು ಜನತೆಯ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು ಪ್ರಶಂಸನೀಯ. ಕೋವಿಡ್ ನಿಯಮ ಪಾಲನೆಯ ಜೊತೆಗೆ ಸಂಕಷ್ಟಕ್ಕೆ ಸ್ಪಂದಿಸುವ ಉದಾರತೆ ಇಂದಿನ ಅಗತ್ಯತೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.
ಅವರು ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಸಹಯೋಗದೊಂದಿಗೆ ದಾನಿಗಳ ನೆರವಿನಿಂದ ದೇವಳದ ವಠಾರದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾಟೆ ಶಿಕ್ಷಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.
ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಕೇವಲ ಕರಾಟೆ ಅಭ್ಯಾಸಕ್ಕೆ ಮಾತ್ರ ಸೀಮಿತವಾಗಿರದೆ, ಸಮಾಜದ ಮುಂಚೂಣಿಯಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅನುಕರಣೀಯ. ಅಂಬಲಪಾಡಿ ದೇವಳದ ವತಿಯಿಂದಲೂ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಗಿದೆ. ಸರಕಾರ ಮತ್ತು ಜನತೆಯ ಸಂಘಟಿತ ಪ್ರಯತ್ನದಿಂದ ಅತೀ ಶೀಘ್ರವಾಗಿ ಕೊರೋನಾ ಮುಕ್ತ ಸಮಾಜ ನಿರ್ಮಾಣವಾಗಲಿ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರ ಆರಕ್ಷಕ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್, ದಾನಿಗಳಾದ ಕೆ.ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್(ರಿ.) ಪ್ರವರ್ತಕ ಕೆ.ಉದಯ ಕುಮಾರ್ ಶೆಟ್ಟಿ, ಸಾಫಲ್ಯ ಟ್ರಸ್ಟ್(ರಿ.) ಪ್ರವರ್ತಕಿ ನಿರುಪಮಾ ಶೆಟ್ಟಿ, ಶ್ರೀ ನಾರಾಯಣ ಗುರು ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ. ಉಪಾಧ್ಯಕ್ಷೆ ವಿಜಯ ಜಿ. ಬಂಗೇರ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಚೈತನ್ಯ ಸೋಷಿಯಲ್ ವೆಲ್ಫೇರ್ ಫೌಂಡೇಶನ್(ರಿ.) ಪ್ರವರ್ತಕ ಸುನಿಲ್ ಸಾಲ್ಯಾನ್, ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಸಾಲ್ಯಾನ್ ಕಟಪಾಡಿ, ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಮನ್ ಪಾಲನ್, ಗೌರವ ಸಲಹೆಗಾರ ಪ್ರಕಾಶ್ ಮಲ್ಪೆ, ಉಡುಪಿ ನಗರ ಆರಕ್ಷಕ ಠಾಣೆಯ ಬೀಟ್ ಸಿಬ್ಬಂದಿ ಚೇತನ್ ಎಸ್., ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಬಾಳಿಗಾ ಫಿಶ್ನೆಟ್ಸ್ ಜನರಲ್ ಮೆನೇಜರ್ ಚಂದ್ರಶೇಖರ್ ಸುವರ್ಣ, ಯುವಕ ಮಂಡಲ ಅಂಬಲಪಾಡಿ ಅಧ್ಯಕ್ಷ ಹರೀಶ್ ಪಾಲನ್ ಕಪ್ಪೆಟ್ಟು, ಸ್ವಸ್ತಿ ಕ್ರಿಕೆಟರ್ಸ್ ಅಂಬಲಪಾಡಿ ಅಧ್ಯಕ್ಷ ಅಜಿತ್ ಕಪ್ಪೆಟ್ಟು, ಕೋವಿಡ್ ಹೆಲ್ಪ್ ಡೆಸ್ಕ್ ಸೇವಾ ಕಾರ್ಯಕರ್ತ ಹರೀಶ್ ಅಂಬಲಪಾಡಿ, ಬಿ.ಕೆ.ಎಸ್.ಎ. ಉಪಾಧ್ಯಕ್ಷೆ ನಿಖಿತಾ, ಪ್ರಧಾನ ಕಾರ್ಯದರ್ಶಿ ಮೇಘ, ಸಂಘಟನಾ ಕಾರ್ಯದರ್ಶಿ ಪವನ್ ಕುಮಾರ್ ಮತ್ತು ಜಿಲ್ಲಾ ವ್ಯಾಪ್ತಿಯ ಕರಾಟೆ ಶಿಕ್ಷಕರು ಉಪಸ್ಥಿತರಿದ್ದರು.
ಅಂಬಲಪಾಡಿ ಗ್ರಾಮದಲ್ಲಿ 20 ಎಕ್ರೆ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ:
ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಬಿಟ್ಟಿರುವ ಕೃಷಿ ಭೂಮಿಗಳಲ್ಲಿ ಕೃಷಿ ಮಾಡುವ ಸಂಕಲ್ಪದೊಂದಿಗೆ ಆರಂಭಿಸಿರುವ “ಹಡಿಲು ಭೂಮಿ ಕೃಷಿ ಅಭಿಯಾನ” ಇಂದು ಬೃಹತ್ ಆಂದೋಲನವಾಗಿ ಮಾರ್ಪಾಡಾಗಿದೆ. ಕ್ಷೇತ್ರದ ವಾರ್ಡ್ ವಾರ್ಡ್ ಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಜನಪ್ರತಿನಿಧಿಗಳು, ಯುವಕರು, ಕೃಷಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅತ್ಯಂತ ಕ್ರಿಯಾಶೀಲತೆಯಿಂದ ಸಂಪೂರ್ಣವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಈ ಆಂದೋಲನದ ಫಲಶ್ರುತಿ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಅವರು ಹಡಿಲು ಭೂಮಿ ಕೃಷಿ ಅಭಿಯಾನದಡಿ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ಗ್ರಾಮದಲ್ಲಿ 20 ಎಕ್ರೆ ಹಡಿಲು ಭೂಮಿ ಕೃಷಿಯ ನಾಟಿ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿಯನ್ನು ಹಡಿಲು ಭೂಮಿ ಮುಕ್ತವನ್ನಾಗಿಸುವುದು ನಮ್ಮ ಈ ಅಭಿಯಾನದ ಸದುದ್ದೇಶ. ಇಲ್ಲಿ ಲಾಭ ನಷ್ಟದ ಲೆಕ್ಕಾಚಾರವಿರುವುದಿಲ್ಲ. ಯಾವುದೇ ಕ್ರಿಮಿನಾಶಕ ರಾಸಾಯನಿಕ ಸಿಂಪಡಿಕೆ ಬಳಸದೆ ವಿಷಮುಕ್ತ ಸಾವಯವ ಕೃಷಿ ಮಾಡಲಾಗುವುದು. ದೊರೆಯುವ ಇಳುವರಿಗೆ ದೇಶದಾದ್ಯಂತ ಹೊಸ ಮಾದರಿಯ ವ್ಯಾಪಾರ ನೀತಿಯನ್ನು ಸೃಷ್ಟಿಸಿ ಮಾರಾಟ ಮಾಡುವ ಉದ್ದೇಶವಿದೆ. ಈ ಪ್ರಕ್ರಿಯೆಯಿಂದ ಮುಂದಿನ ದಿನಗಳಲ್ಲಿ ಎಲ್ಲಾ ರೈತರಿಗೂ ಅನುಕೂಲವಾಗಬೇಕು ಎಂದು ಹೇಳಿದ ಅವರು ಮುಂದಿನ ವರ್ಷದಿಂದ ರೈತರೇ ಅವರ ಕೃಷಿ ಭೂಮಿಗಳಲ್ಲಿ ಕೃಷಿ ಮಾಡಲು ಬೇಕಾದ ಸಹಕಾರವನ್ನು ಟ್ರಸ್ಟ್ ಮುಖಾಂತರ ನೀಡಲಾಗುವುದು ಎಂದರು.
ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹಾಗೂ ಶಾಸಕ ಕೆ.ರಘುಪತಿ ಭಟ್ ಭೂ ಮಾತೆಗೆ ಹಾಲನ್ನು ಎರೆಯುವ ಮೂಲಕ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಶುಭಾಂಶನೆಗೈದು ಮಾತನಾಡಿ, ಇಂದು ಅಳಿದುಳಿದು ಹಡಿಲು ಬಿದ್ದಿರುವ ಕೃಷಿ ಭೂಮಿಯಲ್ಲಿ ಕೃಷಿ ಕಾರ್ಯ ಮಾಡುವ ಉದಾತ್ತ ಯೋಜನೆ ಸಕಾಲಿಕ ಮತ್ತು ಅರ್ಥಪೂರ್ಣ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸ್ವಾವಲಂಬನೆಯ ಪ್ರತೀಕವಾಗಿದೆ. ಕೃಷಿಯು ಜೀವನೋಪಾಯದ ಜೊತೆಗೆ ಆರೋಗ್ಯ ಸಂವರ್ಧನೆಗೂ ಪೂರಕ. ಕೃಷಿ ಕ್ರಾಂತಿಗೆ ನಾಂದಿ ಹಾಡಿರುವ ಹಡಿಲು ಭೂಮಿ ಕೃಷಿ ಆಂದೋಲನ ಯಶಸ್ವಿಯಾಗಿ ಮುಂದುವರಿಯಲಿ. ಶಾಸಕರ ನೇತೃತ್ವದ ಈ ಅಭಿಯಾನದಲ್ಲಿ ಸಕ್ರಿಯವಾಗಿ ಕೈ ಜೋಡಿಸಿರುವ ಎಲ್ಲರ ಸಮರ್ಪಣಾಭಾವದ ಸೇವೆ ಪ್ರಶಂಸನೀಯ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಮ್. ಅಂಚನ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಪಿಡಿಒ ವಸಂತಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ಕೇದಾರೋತ್ಥಾನ ಟ್ರಸ್ಟ್(ರಿ.) ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿ ಶಂಕರ್, ಅಂಗನವಾಡಿ ಕಾರ್ಯಕರ್ತೆ ಇಂದಿರಾ ರತ್ನಾಕರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಗೌರವ ಸಲಹೆಗಾರರಾದ ರಾಜೇಂದ್ರ ಪಂದುಬೆಟ್ಟು, ಕೇಳು ನಾರಾಯಣ, ಸಹ ಸಂಚಾಲಕರಾದ ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್, ಹರೀಶ್ ಆಚಾರ್ಯ, ಸುನಿಲ್ ಕುಮಾರ್, ವಿನೋದ್ ಪೂಜಾರಿ, ಅನಿಲ್ ರಾಜ್ ಅಂಚನ್, ಸುರೇಶ್ ಶೆಟ್ಟಿ, ಶರತ್ ಶೆಟ್ಟಿ ಹಾಗೂ ಸ್ಥಳೀಯ ಕಾರ್ಯಕರ್ತರಾದ ಗಿರೀಶ್ ಅಮೀನ್, ಶಿವಾಜಿ ಸನಿಲ್, ನಿತಿನ್ ಕುಮಾರ್, ರಾಧಾಕೃಷ್ಣ, ಕುಸುಮ, ಕೀರ್ತನ, ವಾಣಿ, ರಂಜಿತಾ ಹಾಗೂ ಗದ್ದೆಗಳ ಮಾಲಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಜೂನ್ 14 ರಿಂದ ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್ ಆದೇಶ ಮುಂದುವರಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಉಸ್ತುವಾರಿ ಸಚಿವರ ಜೊತೆಗಿನ ಸಭೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಶಿವಮೊಗ್ಗ, ಕೊಡಗು, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಳಗಾವಿ, ದಾವಣಗೆರೆ ಜಿಲ್ಲೆಗಳಲ್ಲಿ ಲಾಕ್ಡೌನ್ ಆದೇಶದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಹೇಳಿದ್ದಾರೆ. ಈ ಜಿಲ್ಲೆಗಳನ್ನ ಹೊರತುಪಡಿಸಿ ಉಳಿದ 19 ಜಿಲ್ಲೆಗಳಲ್ಲಿ ಜೂನ್ 14 ರ ಬೆಳಗ್ಗೆ 6 ಗಂಟೆಯ ಬಳಿಕ ಲಾಕ್ಡೌನ್ ಸಡಿಲಿಕೆ ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಜೂನ್ 21ರ ಬೆಳಗ್ಗೆ 6 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿ ಇರಲಿದೆ.
ಜಿಲ್ಲಾವಾರು ಲಾಕ್ಡೌನ್ ಆದೇಶದ ವಿಚಾರವಾಗಿ ಹೊರಡಿಸಲಾದ ಮಾರ್ಗಸೂಚಿಗಳ ಬಗ್ಗೆಯೂ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ ಈಗಾಗಲೇ ಇರುವ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಅಂದರೆ ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರ ಜೊತೆ ಸಮಾಲೋಚಿಸಿ ಹೆಚ್ಚಿನ ಕ್ರಮ ಕೈಗೊಳ್ಳಬಹುದು.
ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಕಾರ್ಖಾನೆಗಳಲ್ಲಿ 50 ಪ್ರತಿಶತ ಸಿಬ್ಬಂದಿ ಹಾಜರಾತಿಗೆ ಮಾತ್ರ ಅವಕಾಶ ನೀಡಲಾಗುವುದು. ಗಾರ್ಮೆಂಟ್ಗಳಿಗೆ 30 ಪ್ರತಿಶತ ಸಿಬ್ಬಂದಿ ಹಾಜರಾತಿಗೆ ಅವಕಾಶ ನೀಡಲಾಗಿದೆ. ಅಗತ್ಯ ಸಾಮಗ್ರಿ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗುವುದು.
ನಿರ್ಮಾಣ ಕಾಮಗಾರಿಗೆ ಅವಕಾಶ ಹಾಗೂ ಅದಕ್ಕೆ ಸಂಬಂಧಿಸಿದ ಅಂಗಡಿಗಳಾದ ಸ್ಟೀಲ್ ಹಾಗೂ ಸಿಮೆಂಟ್ ವ್ಯಾಪಾರ ಮಳಿಗೆಗಳನ್ನ ತೆರೆಯಬಹುದು.
ಹಿರಿಯ ನಾಗರಿಕರು ವಾಕಿಂಗ್ ಮಾಡಲು ಅವಕಾಶವಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಆಟೋ ಹಾಗೂ ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಕೂರಬಹುದು. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ಅವಕಾಶ ಇರೋದಿಲ್ಲ. ಹಾಗೂ ಅಂತರ್ಜಿಲ್ಲಾ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇರೋದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನತೆಯ ಆರೋಗ್ಯ ಸಂರಕ್ಷಣೆಯ ಸತ್ಕಾರ್ಯದಲ್ಲಿ ಸೇವಾ ನಿರತರಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರಾದ ಉಡುಪಿಯ ಪ್ರವೀಣ, ಮಲ್ಪೆಯ ವಿಶಾಲ ನಾಯ್ಕ್ ಹಾಗೂ ಆಶಾ ಕಾರ್ಯಕರ್ತೆಯರಾದ ಅಂಬಲಪಾಡಿ ನಗರದ ಸರಸ್ವತಿ ಕೆ. ಶ್ರೀಯಾನ್, ಅಂಬಲಪಾಡಿ ಗ್ರಾಮಾಂತರದ ಗಾಯತ್ರಿ, ಕಪ್ಪೆಟ್ಟು ವಾರ್ಡಿನ ನಿಶಾ ಕಿದಿಯೂರು ಮತ್ತು ಉಚಿತ ಆಟೋ ಸೇವೆ ನೀಡುತ್ತಿರುವ ಆಟೋ ಚಾಲಕ ಶ್ರೀನಿವಾಸ್ ಕಪ್ಪೆಟ್ಟು ಇವರನ್ನು ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅಂಬಲಪಾಡಿ ದೇವಳಲ್ಲಿ ಶಾಲು ಹೊದೆಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಯೇಶನ್ ಅಧ್ಯಕ್ಷ ವಾಮನ್ ಪಾಲನ್, ಕಾರ್ಯದರ್ಶಿ ಮೇಘ, ಯುವಕ ಮಂಡಲ(ರಿ.) ಅಧ್ಯಕ್ಷ ಹರೀಶ್ ಪಾಲನ್, ಕೋವಿಡ್-19 ಹೆಲ್ಪ್ ಡೆಸ್ಕ್ ಅಂಬಲಪಾಡಿ ಇದರ ವಿವಿಧ ಸೇವಾ ವಿಭಾಗಗಳ ಪ್ರಮುಖರಾದ ಶಿವಕುಮಾರ್ ಅಂಬಲಪಾಡಿ, ಅಜಿತ್ ಕಪ್ಪೆಟ್ಟು, ಸತೀಶ್ ಭಂಡಾರಿ ಮತ್ತು ಹರೀಶ್ ಅಂಬಲಪಾಡಿ ಉಪಸ್ಥಿತರಿದ್ದರು.
ಬೆಂಗಳೂರು, ಜೂ.10: ಕೋವಿಡ್ ಸೋಂಕು ತೀವ್ರವಾಗಿರುವ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸುವ ಕುರಿತಂತೆ ಇಂದು(ಜೂ.10) ಸಂಜೆ ಸಚಿವರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ಇಂದು ಕೋವಿಡ್ ಸೋಂಕು ತೀವ್ರವಾಗಿರುವ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಸೋಂಕು ನಿಯಂತ್ರಣ ಕುರಿತಂತೆ ಚರ್ಚಿಸಿದರು. ಈ ವೇಳೆ ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿ, ನಿರ್ಬಂಧಗಳನ್ನು ಮುಂದುವರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗೆ ಮನವಿ ಮಾಡಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
ರಾಜ್ಯದ ಒಟ್ಟು ಪ್ರಕರಣಗಳಲ್ಲಿ 65 ಸಾವಿರ ಸಕ್ರಿಯ ಪ್ರಕರಣಗಳು ಈ ಎಂಟು ಜಿಲ್ಲೆಗಳಲ್ಲಿವೆ. ಈ ಜಿಲ್ಲೆಗಳಲ್ಲಿ ಸೋಂಕಿನ ಇಳಿಕೆಯ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಪಾಸಿಟಿವಿಟಿ ದರವನ್ನು ಶೇ. 5ಕ್ಕಿಂತ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು.
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕಠಿಣ ನಿರ್ಬಂಧಗಳಿಂದಾಗಿ ಸೋಂಕಿನ ತೀವ್ರತೆ ಇಳಿಮುಖವಾಗುತ್ತಿದೆ. ಆದರೆ ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ. ಜೊತೆಗೆ ಮೈಸೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿರುವ ಕುರಿತು ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಅತಿ ಹೆಚ್ಚು ಅಂದರೆ, ಸರಾಸರಿ ಶೇಕಡ 25.17 ಪಾಸಿಟಿವಿಟಿ ದರ ದಾಖಲಾಗಿದೆ. ಮೈಸೂರಿನಲ್ಲಿಯೂ ಶೇಕಡ 22ರಷ್ಟಿದೆ. ಇದೇ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ ಸೋಂಕಿತರಿಗೆ ಸರಾಸರಿ ಕೇವಲ 6.1 ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವುದನ್ನು ಖಾತರಿಪಡಿಸಬೇಕು. ಜನರು ನಿರ್ಬಂಧಗಳನ್ನು ಉಲ್ಲಂಘಿಸದಂತೆ ಕ್ರಮ ಕೈಗೊಳ್ಳಬೇಕು. ಮೈಕ್ರೋ ಕಂಟೇನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಒತ್ತು ನೀಡಬೇಕು. ಕೋವಿಡ್ ಪ್ರಕರಣಗಳ ಪ್ರಮಾಣ ತೀವ್ರಗತಿಯಲ್ಲಿ ಇಳಿಕೆಯಾಗುವಂತೆ ಮಾಡಿ ಪಾಸಿಟಿವಿಟಿ ರೇಟ್ ಶೇಕಡಾ 5ರ ಒಳಗಿರುವಂತೆ ಖಾತರಿ ಪಡಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಬೆಳಗಾವಿ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಜಾಸ್ತಿ ಮಾಡಲಾಗುತ್ತಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಶೇ. 30 ರಷ್ಟು ನಡೆಸಲು ಸೂಚಿಸಲಾಯಿತು. ಉಳಿದ ಶೇ. 70 ರಷ್ಟು ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ನಡೆಸಬೇಕು. ಸೋಂಕಿನ ಲಕ್ಷಣ ಇರುವವರಿಗೆ ಮಾತ್ರ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.
ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ವರದಿ 24 ಗಂಟೆಗಳ ಒಳಗೆ ನೀಡಬೇಕು, ಸೋಂಕಿತರ ಆರೋಗ್ಯ ಸ್ಥಿತಿಗನುಗುಣವಾಗಿ ವರ್ಗೀಕರಣ ಮಾಡುವ ಪ್ರಕ್ರಿಯೆ ತ್ವರಿತವಾಗಿ ನಡೆಸಬೇಕು.
ಮೈಸೂರು ಹೊರತು ಪಡಿಸಿ ಇತರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ತೀವ್ರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸುವಂತೆ ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿ, ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು ಸೂಚಿಸಿದರು.
ನವದೆಹಲಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮತ್ತೊಮ್ಮೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮಲ್ಲಿ ಅನೇಕರು ಪರಿವಾರದವರನ್ನು ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
ಕೊರೋನಾದಂತಹ ಮಹಾಮಾರಿಯನ್ನು ಎಂದೂ ನೋಡಿರಲಿಲ್ಲ. ಎರಡನೆಯ ಅಲೆ ವಿರುದ್ಧ ಹೋರಾಡುತ್ತಿದ್ದೇವೆ. ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಸಮರೋಪಾದಿಯಲ್ಲಿ ಆರೋಗ್ಯ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಜನ ಸಂಕಷ್ಟ ಎದುರಿಸಿದ್ದಾರೆ. ಜೊತೆಗೆ ಸೋಂಕು ಹೊಡೆದೋಡಿಸಲು ಹೋರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಇಡೀ ಜಗತ್ತನ್ನೇ ಕೊರೋನಾ ಸೋಂಕು ಕಂಗೆಡಿಸಿದೆ. ಭಾರತ ತನ್ನ ಶಕ್ತಿಯನ್ನು ಮೀರಿ ಹೋರಾಟ ನಡೆಸಿದೆ. ಆಧುನಿಕ ಜಗತ್ತು ಈ ಹಿಂದೆ ಇಂತಹ ಸಂಕಷ್ಟ ಅನುಭವಿಸಿರಲಿಲ್ಲ. ಕಳೆದ 100 ವರ್ಷದಲ್ಲಿ ಇಂತಹ ಸೋಂಕು ಕಾಣಿಸಿರಲಿಲ್ಲ. ಇದೊಂದು ದೊಡ್ಡ ಸಾಂಕ್ರಾಮಿಕ ರೋಗವಾಗಿದ್ದು, ಇಂತಹ ರೋಗವನ್ನು ಯಾರೂ ನೋಡಿಲ್ಲ. ಯಾರೂ ಕೇಳಿಲ್ಲ ಎಂದು ಹೇಳಿದ್ದಾರೆ.
ಲಸಿಕೆಯ ಮೂಲಕ ಕೊರೋನಾ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವ್ಯಾಕ್ಸಿನ್ ನೀಡಿಕೆ ಶೇಕಡ 70ರಿಂದ 90 ರಷ್ಟು ಏರಿಕೆಯಾಗಿದೆ. ಲಸಿಕೆಯೇ ನಮಗೆ ಸುರಕ್ಷಾ ಕವಚವಾಗಿದೆ. ಕೊರೋನಾ ರೂಪಾಂತರಿ ಅಸದೃಶ್ಯ ವೈರಿಯಾಗಿದೆ. ಭಾರತದಲ್ಲಿ ಲಸಿಕೆ ಉತ್ಪಾದನೆಯಾಗದಿದ್ದರೆ ಏನಾಗುತ್ತಿತ್ತು? ವಿದೇಶದಲ್ಲಿ ಲಸಿಕೆ ಉತ್ಪಾದನೆಯಾದರೂ ನಮಗೆ ಸಿಕ್ಕಿರಲಿಲ್ಲ. ಹೈಪಟೈಟಿಸ್ ಬಿ ಸೇರಿದಂತೆ ಅನೇಕ ಲಸಿಕೆಗಳು ನಮಗೆ ತಲುಪಲು ಬಹಳ ಸಮಯ ಬೇಕಾಗಿತ್ತು. ಲಸಿಕೆ ಉತ್ಪಾದನೆಗೆ ಮಿಷನ್ ಇಂದ್ರಧನುಷ್ ಯೋಜನೆ ರೂಪಿಸಲಾಗಿದೆ. ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದ್ದು, ದೇಶದಲ್ಲಿನ ಹೊಸ ಲಸಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾರತದ ಅತ್ಯಂತ ಕುರೂಪಿ ಭಾಷೆ’ ಎಂದು ಗೂಗಲ್ನಲ್ಲಿ ಟೈಪಿಸಿ ಸರ್ಚ್ ಮಾಡಿದರೆ ಮೊದಲು ಎದುರಾಗುವುದು ‘ಕನ್ನಡ’. ಕನ್ನಡಿಗರ ಸ್ವಾಭಿಮಾನ, ಭಾಷೆ, ನೆಲ, ಜಲದ ಕುರಿತಂತೆ ಪದೇ ಪದೇ ಕೆಣಕುವ ಪ್ರಯತ್ನಗಳು ನಡೆಯುತ್ತಲೇ ಇದೆ. ಅದಕ್ಕೆ ಇನ್ನೊಂದು ಸೇರ್ಪಡೆ ಇದು. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಕನ್ನಡ ಪ್ರೇಮಿಗಳು ಚರ್ಚೆ ನಡೆಸುತ್ತಿದ್ದರು.
Ugliest Language In India (ಭಾರತದ ಅತ್ಯಂತ ಕುರೂಪಿ ಭಾಷೆ) ಎಂದು ಟೈಪ್ ಮಾಡಿದರೆ ಗೂಗಲ್ ಮೊದಲು ಪ್ರದರ್ಶಿಸುವುದು debtconsolidationsquad.com ಎಂಬ ಜಾಲತಾಣವೊಂದರಲ್ಲಿ ಪ್ರಕಟವಾದ ಅಂಶವನ್ನು. ದಕ್ಷಿಣ ಭಾರತದಲ್ಲಿ ಸುಮಾರು 40 ಮಿಲಿಯನ್ ಜನರು ಆಡುವ ಭಾಷೆ ಕನ್ನಡ. ಕನ್ನಡ ಅತ್ಯಂತ ಕನಿಷ್ಠವಾಗಿ ಪರಿಗಣಿಸಬಹುದಾದ ಭಾಷೆ. ಈ ಭಾಷೆ ಮಾತನಾಡುವ ಜನರು ಇತರರೊಂದಿಗೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆಯೇ ಹೆಚ್ಚು ಎಂದೆಲ್ಲ ಇದರಲ್ಲಿ ಬರೆಯಲಾಗಿದೆ. ಆದರೆ ಈ ವೆಬ್ಸೈಟ್ನಲ್ಲಿ ಕನ್ನಡ ಭಾಷೆಯ ಬಗ್ಗೆ ಬರೆದಿರುವ ಪೂರ್ಣ ಪಠ್ಯ ಲಭ್ಯವಾಗಿಲ್ಲ. ಇದರಲ್ಲಿ ಏನೇನು ಬರೆಯಲಾಗಿದೆ ಎಂಬ ವಿಚಾರವನ್ನು ಹುಡುಕಲು ಪ್ರಯತ್ನಿಸಿದರೂ ಆ ಕೊಂಡಿ ತೆರೆಯುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಹೇಳಿಕೊಂಡಿದ್ದಾರೆ.
ಗೂಗಲ್ನಲ್ಲಿ ಸರ್ಚ್ ಮಾಡಿದಾಗ ಮೊದಲಿಗೆ ಕಾಣಿಸುವ ಈ ವೆಬ್ಸೈಟ್ ದ್ವೇಷ ಹಾಗೂ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಅನೇಕರು ಗೂಗಲ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಸತತ ಪ್ರಯತ್ನದ ಬಳಿಕ ಈ ಮಾಹಿತಿಯನ್ನು ಈಗ ಗೂಗಲ್ನಿಂದ ಅಳಿಸಿ ಹಾಕಲಾಗಿದೆ. ಆದರೆ ಗೂಗಲ್ನ ಕೆಲವು ಕೊಂಡಿಗಳಲ್ಲಿ ಇದು ಈಗಲೂ ಲಭ್ಯವಿದೆ. ಈ ವಿಚಾರವನ್ನು ಬರೆದವರು ಯಾರು, ಯಾವ ಮಾನದಂಡದಡಿ ಅತ್ಯಂತ ಕುರೂಪಿ ಎಂಬ ಹಣೆಪಟ್ಟಿ ನೀಡಲಾಗಿದೆ, ಇಂತಹ ಆಧಾರರಹಿತ ಲೇಖನಗಳಿಗೆ ಗೂಗಲ್ ಹೇಗೆ ಅನುಮೋದನೆ ನೀಡುತ್ತದೆ ಎಂಬ ಬಗ್ಗೆ ಕೂಡ ಚರ್ಚೆಗಳಾಗುತ್ತಿವೆ.
ಬೇಸರದ ಸಂಗತಿ ನಡುವೆಯೇ, ಖುಷಿ ಸುದ್ದಿಯೊಂದನ್ನೂ ನೆಟ್ಟಿಗರು ಗೂಗಲ್ನಲ್ಲಿ ಕಂಡುಕೊಂಡಿದ್ದಾರೆ. ‘ಎಲ್ಲ ಭಾಷೆಗಳ ರಾಣಿ’ ಎಂದು ಗೂಗಲ್ನಲ್ಲಿ ಟೈಪ್ ಮಾಡಿದರೆ ‘ಕನ್ನಡ’ ಎಂಬ ಹೆಸರು ಮೂಡುತ್ತದೆ. ಸಂವಿಕ್ಷಣ.ವೀಬ್ಲಿ ಡಾಟ್ ಕಾಂ ಎಂಬ ವೆಬ್ಸೈಟ್ನಲ್ಲಿ ‘ವಿಶ್ವದ ಲಿಪಿಗಳ ರಾಣಿ’ ಎಂದು ಕನ್ನಡವನ್ನು ಗುರುತಿಸಲಾಗಿದೆ. ಭೂದಾನ ಚಳಿವಳಿಯ ಹರಿಕಾರ ಎಂದೇ ಖ್ಯಾತರಾಗಿರುವ ಮಹಾರಾಷ್ಟ್ರ ಮೂಲದ ಸ್ವಾತಂತ್ರ್ಯ ಹೋರಾಟಗಾರ ವಿನೋದಾ ಭಾವೆ ಅವರು ‘ಕನ್ನಡ ಭಾಷೆ ಲಿಪಿಗಳ ರಾಣಿ’ ಎಂದು ಕರೆದಿದ್ದರು.
ಈ ಎಲ್ಲದರ ನಡುವೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬುದು ಗಮನಕ್ಕೆ ಬರುತ್ತಿದ್ದಂತೆ ಗೂಗಲ್ ಟ್ವೀಟ್ ಮೂಲಕ ಕ್ಷಮೆಯಾಚಿಸಿದೆ.
ಪ್ರಾರಂಭದ ದಿನಗಳಿಂದಲೂ ಕೋವಿಡ್ ಲಸಿಕೆಯ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸಿಗರು ತಾವು ಮಾತ್ರ ಗುಟ್ಟಾಗಿ ಲಸಿಕೆ ಪಡೆದುಕೊಂಡು ಜನಸಾಮಾನ್ಯರ ದಾರಿತಪ್ಪಿಸಿ ವಂಚಿಸುವ ಕಾಯಕದಲ್ಲಿ ನಿರತರಾಗಿರುವ ಜೊತೆಗೆ ಇದೀಗ ಲಸಿಕೆ ಕೊಡಿಸಲು ಒತ್ತಾಯಿಸುವ ನಾಟಕವಾಡುತ್ತಿರುವುದು ಹಾಸ್ಯಾಸ್ಪದ. ಕೇವಲ ಅಪಪ್ರಚಾರವೇ ಕಾಂಗ್ರೆಸಿಗರ ಮೂಲ ಉದ್ದೇಶ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಹೇಳಿದ್ದಾರೆ.
ಅವರು ಲಸಿಕೆ ಹೆಸರಲ್ಲಿ ಬಿಜೆಪಿ ಸ್ವಜನ ಹಿತಾಸಕ್ತಿ ಎಂಬ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆಯವರ ಆರೋಪವನ್ನು ಖಂಡಿಸಿ, ಕಾಂಗ್ರೆಸಿಗರಿಗೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಕೇವಲ ಕೀಳು ರಾಜಕೀಯದ ಗೀಳು ಮಾತ್ರ ಮುಖ್ಯವೆನಿಸಿದೆ ಎಂದಿದ್ದಾರೆ.
ಸ್ವಾತಂತ್ರ್ಯಾ ನಂತರದ ದಶಕಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ಕೇವಲ ಒಂದು ಕುಟುಂಬದ ಕಲ್ಯಾಣಕ್ಕಾಗಿ ಹೋರಾಟ ನಡೆಸಿರುವುದು ಕಾಂಗ್ರೆಸ್ ಇತಿಹಾಸ. ಹಗರಣಗಳ ಸರಮಾಲೆ, ಕಾಳಸಂತೆ ದಂಧೆ, ಸ್ವಜನ ಪಕ್ಷಪಾತ, ಒಂದೇ ವರ್ಗದ ತುಷ್ಟೀಕರಣ, ಬ್ಲಾಕ್ ಮೇಲ್ ರಾಜಕಾರಣ, ಅಪಪ್ರಚಾರದ ಜೊತೆಗೆ ದೇಶ ವಿರೋಧಿ ಚಟುವಟಿಕೆಗಳು ಕಾಂಗ್ರೆಸ್ ನ ನೈಜ ಮುಖವಾಗಿದೆ.
ಕೊರೋನಾ 1ನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಬಿಜೆಪಿ ಕಾರ್ಯಕರ್ತರು ಅವಿರತವಾಗಿ ಕೊರೋನಾ ಪೀಡಿತರ ಸಂಕಷ್ಟಕ್ಕೆ ರಾಜಕೀಯ ರಹಿತವಾಗಿ ಸ್ಪಂದಿಸಿರುವುದು ಲೋಕಕ್ಕೇ ತಿಳಿದ ವಿಚಾರ.
ಈ ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲೂ ಜನಸೇವೆಗೈಯದೇ ಕೇವಲ ತಪ್ಪುಗಳನ್ನು ಹುಡುಕುವ ವಿಫಲ ಯತ್ನವನ್ನು ಮಾಡುವುದು, ನಿರಂತರ ಅಪಪ್ರಚಾರದಲ್ಲಿ ತೊಡಗುವುದು, ಟೂಲ್ ಕಿಟ್ ನಂತಹ ಕೀಳು ಮಟ್ಟದ ದೇಶ ವಿರೋಧಿ ವಿಚಾರಗಳನ್ನು ಸೃಷ್ಠಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದು ಕಾಂಗ್ರೆಸ್ ಕಾಯಕವಾಗಿದೆ. ಕಮಲ್ ನಾಥ್ ರಂತಹ ಹಿರಿಯ ಕಾಂಗ್ರೆಸ್ ನಾಯಕರು ಕೂಡಾ ಪರಿಸ್ಥಿತಿಯ ಲಾಭ ಪಡೆದು ಹೆಣಗಳ ಮೇಲೆ ರಾಜಕೀಯ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿರುವ ವಿಕೃತ ಸನ್ನಿವೇಶದಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಯವರಂತವರಿಂದ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಸಹಜವೆನಿಸುತ್ತದೆ ಎಂದು ಗುರುಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.