ಬಿಜೆಪಿ ಹಿರಿಯ ಮುಖಂಡ, ಆರ್. ಎಸ್.ಎಸ್ ಧುರೀಣ ಸೋಮಶೇಖರ ಭಟ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ





ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಧುರೀಣ, ಬಿಜೆಪಿ ಹಿರಿಯ ಮುಖಂಡ, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಸೋಮಶೇಖರ ಭಟ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿಯವರ ನಿಕಟವರ್ತಿ ಹಾಗೂ ಮಾಜಿ ಸಚಿವ ದಿ. ಡಾ! ವಿ.ಎಸ್. ಆಚಾರ್ಯ ಅವರ ಮಾರ್ಗದರ್ಶಕರಾಗಿದ್ದ ಸೋಮಶೇಖರ ಭಟ್ ಅವರು ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆ ವಾಸ, ಅಯೋಧ್ಯೆ ಶ್ರೀ ರಾಮ ಮಂದಿರದ ಕರೆಸೇವಕರಾಗಿ ಮುಂಚೂಣಿಯಲ್ಲಿ ಸೇವೆ, ಉಡುಪಿಯಲ್ಲಿ ನಡೆದ ಸಂತ ಸಮ್ಮೇಳನದ ನೇತೃತ್ವ ಮುಂತಾದ ಐತಿಹಾಸಿಕ ಸಾಧನೆಗಳ ಸರದಾರ, ಸಾವಿರಾರು ಕಾರ್ಯಕರ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಸೋಮಶೇಖರ್ ಭಟ್ ಅವರ ಅಗಲುವಿಕೆ ಭಾರತೀಯ ಜನತಾ ಪಾರ್ಟಿಗೆ ತುಂಬಲಾರದ ನಷ್ಟವೆನಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಪಕ್ಷದ ನಾಳೆಯ ಎಲ್ಲಾ ಕಾರ್ಯಕ್ರಮಗಳು ರದ್ದು:

ನಾಳೆ ನಿಗದಿಯಾಗಿರುವ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಹಿರಿಯ ಚೇತನ ಸೋಮಶೇಖರ್ ಭಟ್ ಅವರ ಗೌರವಾರ್ಥ ರದ್ದುಪಡಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started