ಉಜ್ವಲ ಸಂಜೀವಿನಿ ಒಕ್ಕೂಟ ಅಂಬಲಪಾಡಿ : ಕೃಷಿ ಮತ್ತು ಹೈನುಗಾರಿಕೆ ಮಾಹಿತಿ ಕಾರ್ಯಾಗಾರ



ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ಮಟ್ಟದ ಉಜ್ವಲ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಕೃಷಿ ಮತ್ತು ಹೈನುಗಾರಿಕೆ ಮಾಹಿತಿ ಕಾರ್ಯಗಾರವು ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರಗಿತು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್ ಮತ್ತು ಆತ್ಮ ಅನುಷ್ಠಾನ ಸಮಿತಿಯ ತಾಲೂಕು ಸಂಯೋಜಕಿ ಸಂಜನಾ ಶೆಟ್ಟಿಯವರು ಹಡಿಲು ಭೂಮಿ ಕೃಷಿ ಹಾಗೂ ಕೃಷಿ ಇಲಾಖೆಯಿಂದ ಲಭ್ಯವಿರುವ ವಿವಿಧ ಸವಲತ್ತುಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಉದಯ ಶೆಟ್ಟಿಯವರು ಹೈನುಗಾರಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.

ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಪ್ರಭಾರ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಸಭೆಯನ್ನುದ್ದೇಶಿಸಿ ಮಾತನಾಡಿ, ಕೃಷಿ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ ನೀಡಿರುವ ಉಪಯುಕ್ತ ಮಾಹಿತಿಯನ್ನು ಒಕ್ಕೂಟದ ಇತರ ಸದಸ್ಯರೊಂದಿಗೆ ಹಂಚಿಕೊಂಡು, ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆಯಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾ.ಪಂ. ಮಟ್ಟದ ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಹಾಗೂ ಕೃಷಿ ಸಖಿ ಸವಿತಾ ಸಂತೋಷ್, ಬಿಲ್ಲವ ಸೇವಾ ಸಂಘದ ಮಹಿಳಾ ಘಟಕದ ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಉಜ್ವಲ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಗೀತಾ ಹರೀಶ್ ಪಾಲನ್, ಎಮ್ಬಿಕೆ ಸುಪ್ರಿಯಾ, ಎಲ್ಸಿಆರ್ಪಿ ಇಂದಿರಾ, ಪುಷ್ಪಲತಾ, ಶಮಿತಾ, ಕೃಷಿ ಉದ್ಯೋಗ ಸಖಿ ವಾಣಿಶ್ರೀ ಅರುಣ್, ಪಶು ಸಖಿ ಪ್ರಮೀಳಾ ಶಶಿಕಾಂತ್ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started