
ಕಾಪು: ಕಳೆದ ಸುಮಾರು 7-8 ವರ್ಷದ ಹಿಂದೆ ಅಲೆವೂರು ಪಂಚಾಯತ್ ವ್ಯಾಪ್ತಿಯ ಮನೆ ಮನೆಯ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದ ಹನುಮಂತ ಆಡಿನ್ ಇದೀಗ ಇತಿಹಾಸ ಪ್ರಸಿಧ್ದ ಐಹೊಳೆ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅಲೆವೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅಭಿನಂದಿಸಿದ್ದಾರೆ. ಅಲೆವೂರಿನ ಹಲವಾರು ವರ್ಷಗಳ ನಿವಾಸಿಯಾದ ಇವರು ಕಷ್ಟ ಪಟ್ಟು ದುಡಿದು ನಂತರದಲ್ಲಿ ಉಡುಪಿಯ ನಿವಾಸಿಯಾಗಿದ್ದರು. ಕಳೆದ ಬಾರಿ ನಡೆದ ಪಂಚಾಯತ್ ಚುನಾವಣೆಯಲ್ಲಿ ತನ್ನ ಮೂಲ ಊರಾದ ಐಹೊಳೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಆಯ್ಜೆಯಾಗಿದ್ದರು. ಇದೀಗ ಮೊನ್ನೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವರು. ಅಲೆವೂರು ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಶ್ರೀಕಾಂತ ನಾಯಕ್ ಇವರ ಆಡಳಿತ ಸಂದರ್ಭದಲ್ಲಿ ಅಲೆವೂರು ಪಂಚಾಯತ್ ನಲ್ಲಿ ತ್ಯಾಜ್ಯ ವಿಲೇವಾರಿಯ ವಿಪರೀತ ಸಮಸ್ಯೆ ಕಂಡು ಬಂದಾಗ ಇದೆ ಹನುಮಂತ ಅವರು ಅಲೆವೂರಿನ ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಿ ಅಲೆವೂರು ಪಂಚಾಯತ್ ನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಸ್ವಚ್ಚ ಅಲೆವೂರನ್ನಾಗಿಸಲು ಶ್ರಮಿಸಿದ್ದರು.
ಅವರನ್ನು ಮಾತನಾಡಿಸಲು, ಅಲೆವೂರು ಪಂಚಾಯತ್ ನಲ್ಲಿ ಅಧ್ಯಕ್ಷರಾಗಿದ್ದ ಶ್ರೀಕಾಂತ ನಾಯಕ್ ರವರೇ ನನಗೆ ಆದರ್ಶ. ಅವರೊಂದಿಗೆ ಪಂಚಾಯತ್ ನಲ್ಲಿ ಅವರೊಂದಿಗಿದ್ದು ಒಬ್ಬ ಪಂಚಾಯತ್ ಅಧ್ಯಕ್ಷರಾಗಿ ಯಾವೆಲ್ಲ ರೀತಿಯಲ್ಲಿ ಜನಸೇವೆ ಮಾಡಬಹುದು ಎಂದು ತಿಳಿಸಿಕೊಟ್ಟವರು ಅವರು. ಒಬ್ಬ ಪರಿಪೂರ್ಣ ರಾಜಕಾರಣಿ, ಸದಾ ಜನಸೇವೆಯೇ ಕಾಯಕ ಎಂದು ತಿಳಿದು ಪಕ್ಷಭೇದ ಮರೆತು ಕೆಲಸ ಮಾಡುತ್ತಿದ್ದ ಅವರನ್ನು ಕಂಡು ನನಗೆ ಪ್ರೇರಣೆಯಾಯಿತು. ನಾನು ಕಾಂಗ್ರೆಸ್ ಬೆಂಬಲಿತ ಎಂದು ಗೊತ್ತಿದ್ದರೂ ಒಂದು ದಿನವೂ ನನ್ನ ಬಳಿ ಪಕ್ಷಭೇದ ಮಾಡಿಲ್ಲ. ಇದರಿಂದ ನಾನೂ ನಮ್ಮ ಊರಲ್ಲಿ ಏನಾದರೂ ಜನಸೇವೆ ಮಾಡಬೇಕೆಂಬ ಬಯಕೆ ಬಂದು ಚುನಾವಣೆಗೆ ನಿಂತೆ. ಗೆದ್ದು ಇದೀಗ ಅಧ್ಯಕ್ಷನಾಗಿಯೂ ಆಯ್ಕೆಯಾಗಿದ್ದೇನೆ. ಜನ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಎಲ್ಲರ ಸಹಯೋಗದೊಂದಿಗೆ ಜನಸೇವೆ ಮಾಡುವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.