
ಉಡುಪಿ: ಮೋಸ ಜಾಲದ ಗ್ಯಾರಂಟಿ ಕಾರ್ಡ್ ಗಳನ್ನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ಹಂಚಿ ಮತದಾರರ ದಾರಿ ತಪ್ಪಿಸಿ, ಉಚಿತ ಖಚಿತ ಖಂಡಿತ ನಿಶ್ಚಿತ ಎಂದು ಬೊಬ್ಬಿರಿದ ಕಾಂಗ್ರೆಸ್ ಮುಖಂಡರು ಇದೀಗ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗದೆ ನಿದ್ದೆ ಬಿಟ್ಟು ತೊಳಲಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಲೇವಡಿ ಮಾಡಿದ್ದಾರೆ.
ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ 5 ಗ್ಯಾರಂಟಿಗಳನ್ನು ಯಾವುದೇ ಷರತ್ತು ಇಲ್ಲದೆ ಜಾರಿ ಮಾಡುತ್ತೇವೆ ಎಂದು ಪುಂಗಿ ಊದುತ್ತಾ ಬಂದಿರುವ ಕಾಂಗ್ರೆಸ್ ಮುಖಂಡರು ಇದೀಗ ಭಿನ್ನರಾಗ ಎಳೆಯುತ್ತಿರುವುದು ಸಂಶಯಕ್ಕೆಡೆಮಾಡಿದೆ.
ಕಾಂಗ್ರೆಸ್ ಪ್ರಾಯಶ: ತಾವು ಖಂಡಿತವಾಗಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿಯಿಂದ ಬೇಕಾಬಿಟ್ಟಿ ಉಚಿತಗಳ ಗ್ಯಾರಂಟಿಗಳನ್ನು ಘೋಷಿಸಿರಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.
ಮತದಾರರೇ ಕಾಂಗ್ರೆಸ್ ಪಕ್ಷದ ಉಚಿತಗಳ ಗ್ಯಾರಂಟಿ ಜಾರಿಯ ಬಗ್ಗೆ ಮಾತನಾಡುತ್ತಿಲ್ಲ ಎಂದಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರು ರಾಜ್ಯದಾದ್ಯಂತ ಜನತೆ ವಿದ್ಯುತ್ ಬಿಲ್ ಕಲೆಕ್ಟರ್, ಬಸ್ ಕಂಡೆಕ್ಟರ್ ಗಳನ್ನು ಉಚಿತಗಳ ಬಗ್ಗೆ ಯಾವ ರೀತಿ ಹಿಗ್ಗಾಮುಗ್ಗಾ ದಬಾಯಿಸಿ ಜಗಳವಾಡುತ್ತಿದ್ದಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಈ ಪ್ರಕ್ರಿಯೆ ವಿಪರೀತ ಹಂತಕ್ಕೆ ತಲುಪುವ ಮೊದಲು ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಗಿರುವ 5 ಉಚಿತ ಖಚಿತ ಖಂಡಿತಗಳ ಗ್ಯಾರಂಟಿಯನ್ನು ಶೀಘ್ರ ಜಾರಿಗೊಳಿಸುವುದು ಉತ್ತಮ.
ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್. ಇದಕ್ಕೆ ಉದಾಹರಣೆ ಎಂಬಂತೆ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹಿತ ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಇವರೆಲ್ಲರೂ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಾ ಪ್ರಸ್ತುತ ಬೇಲ್ ಮೇಲೆ ಹೊರಗಡೆ ಇದ್ದಾರೆ ಎಂಬುದು ಜಗಜ್ಜಾಹೀರಾಗಿದೆ.
ಸುದೀರ್ಘ ಅವಧಿಗೆ ದುರಾಡಳಿತ ನಡೆಸಿ ದೇಶ ಲೂಟಿಗೈದ ಇತಿಹಾಸವಿರುವ ಕಾಂಗ್ರೆಸ್ಸಿಗೆ ಅಪಪ್ರಚಾರವೇ ಜೀವಾಳವಾಗಿದೆ. ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಮುಖಂಡರಿಗಿಲ್ಲ. ಪ್ರಧಾನಿ ಮೋದಿಯವರು ಕಪ್ಪು ಹಣವನ್ನು ವಾಪಾಸು ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಾಗಿ ‘ಈ ಕಳ್ಳರು, ಲೂಟಿಕೋರರು ವಿದೇಶಿ ಬ್ಯಾಂಕ್ ಗಳಲ್ಲಿ ಜಮಾ ಮಾಡಿರುವ ಹಣವನ್ನು ತಂದರೆ ಭಾರತದ ಒಂದೊಂದು ಬಡವರಿಗೂ ಹದಿನೈದು ಇಪ್ಪತ್ತು ಲಕ್ಷ ಹಂಚುವಷ್ಟಿದೆ’ ಎಂದಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿತ್ವದ ಚಿಂತನೆಯಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳು ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿವೆ.
ಈ ಹಿಂದೆ ರಾಜಸ್ಥಾನ, ಛತ್ತೀಸ್ಗಡ, ಹಿಮಾಚಲ ಪ್ರದೇಶ, ಮಣಿಪುರ ಮುಂತಾದ ರಾಜ್ಯಗಳಲ್ಲಿ ಉಚಿತ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ ಯಾವುದನ್ನೂ ಸಮರ್ಪಕವಾಗಿ ನೆರವೇರಿಸದೇ ಪಂಗನಾಮ ಹಾಕಿದೆ. ರಾಜ್ಯದ ಜನತೆ ಕಾಂಗ್ರೆಸ್ಸಿನ ಗೋಸುಂಬೆತನದ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಉಚಿತ ಗ್ಯಾರಂಟಿಗಳನ್ನು ಘೋಷಿಸಿದಂತೆಯೇ ಯಥಾವತ್ತಾಗಿ ಜಾರಿಗೊಳಿಸದೇ ಇದ್ದಲ್ಲಿ ತಕ್ಕ ಶಾಸ್ತಿ ಮಾಡುವುದಂತೂ ಗ್ಯಾರಂಟಿ ಎಂದು ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.