
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಬಿಜೆಪಿ ತನ್ನ ಪ್ರಜಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ನಗರದ ಶಾಂಗ್ರಿಲಾ ಹೊಟೇಲ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಜೆಪಿ ನಡ್ಡಾ ಅವರೊಂದಿಗೆ ಸಚಿವ ಡಾ ಕೆ ಸುಧಾಕರ್ (Dr K Sudhakar) ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಪ್ರಣಾಳಿಕೆ ಪ್ರಮುಖ ಅಂಶಗಳು:
🪷ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ ೩ ಅಡುಗೆ ಅನಿಲ ಸಿಲಿಂಡರ್ ಉಚಿತ ವಿತರಣೆ.
🪷ಪೋಷಣೆ ಯೋಜನೆ ಅಡಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು ೫ ಕೆ.ಜಿ. ಅಕ್ಕಿ ಮತ್ತು ೫ ಕೆ ಜಿ. ಶ್ರೀ ಅನ್ನ ಸಿರಿಧಾನ್ಯ ಒಳಗೊಂಡ ಪಡಿತರ ಕಿಟ್ ನೀಡಲಾಗುವುದು.
🪷ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರ ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆ ವಾರ್ಡ್ಗಳಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ.
🪷ರಾಜ್ಯದಾದ್ಯಂತ ನಿವೇಶನ ರಹಿತ/ ವಸತಿ ರಹಿತ ನಿವಾಸಿಗಳಿಗೆ ೧೦ ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ.
🪷ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆ ಆರಂಭಿಸಲಾಗುವುದು. ಈ ಯೋಜನೆಯಡಿ ಎಸ್ಸಿ ಎಸ್ಟಿ ಸಮುದಾಯದ ಮಹಿಳೆಯರು ೫ ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿ ಗಳ ಮೇಲೆ ₹೧೦ ಸಾವಿರ ಹೊಂದಿಕೆಯಾಗುವ ಠೇವಣಿ ನೀಡಲಾಗುವುದು.
🪷ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ ಸುಲಲಿತ ಜೀವನಕ್ಕೆ ಕರ್ನಾಟಕ ಅಪಾರ್ಟ್ಮೆಂಟ್ ಮಾಲಿಕತ್ವ ಕಾಯಿದೆಗೆ ತಿದ್ದುಪಡಿ ತಂದು ಕುಂದುಕೊರತೆಗಳ ಪರಿಹಾರಕ್ಕೆ ಆನ್ ಲೈನ್ ವ್ಯವಸ್ಥೆ ಜಾರಿ.
🪷ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸರ್ಕಾರಿ ಉದ್ಯೋಗಾಂಕಾಂಕ್ಷಿಗಳಿಗೆ ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹ ನೀಡುವ ಮೂಲಕ ವೃತ್ತಿ ಬೆಂಬಲ ಒದಗಿಸಲಾಗುವುದು.
🪷ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು₹೩೦ ಸಾವಿರ ಕೋಟಿ ಮೊತ್ತದ ಕೆ-ಅಗ್ರಿಫಂಡ್ ಸ್ಥಾಪನೆ.
🪷ಕನ್ನಡ ಚಿತ್ರೋದ್ಯಮಕ್ಕೆ ಉದ್ಯಮ ಸ್ಥಾನಮಾನ, ಅಂತರರಾಷ್ಟ್ರೀಯ ಮಟ್ಟದ ಪುನೀತ್ ರಾಜ್ ಕುಮಾರ್ ಫಿಲ್ಮ್ ಸಿಟಿ ಸ್ಥಾಪನೆ.