
ಕಾಪು: ಅಲೆವೂರು ಗ್ರಾಮ ಪಂಚಾಯತ್ ಕೊರಂಗ್ರಪಾಡಿ ಮೂರನೇ ವಾರ್ಡ್ ನ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶಂಕರ್ ಪಾಲನ್ ರವರು ಎದುರಾಳಿ ಅಭ್ಯರ್ಥಿಯ ಎದುರು 67 ಮತಗಳಿಂದ ಜಯಗಳಿಸಿದ್ದು ಇದು ಜನತೆ ಇಂದು ಬಿಜೆಪಿಯ ಪರ ಇದೆ ಎಂದು ಮತ್ತೆ ಸಾಬೀತುಪಡಿಸಿದೆ. ಅದರಲ್ಲೂ ವಿನಯ್ ಕುಮಾರ್ ಸೊರಕೆಯವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವೂರು ಹಾಗೂ ನೂರಾರು ಕಾರ್ಯಕರ್ತರು, ಘಟಾನುಘಟಿ ನಾಯಕರೊಡನೆ ಮನೆ ಮನೆ ಭೇಟಿ ಮಾಡಿ ಇದು ನಮ್ಮ ಪ್ರಸ್ಟೀಜ್ ದಯವಿಟ್ಟು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಶತಪ್ರಯತ್ನ ಮಾಡಿದರೂ ಯಶಸ್ವಿಯಾಗಿಲ್ಲ. ಅಲ್ಲದೆ ಈ ಹಿಂದೆ ದಿವಂಗತರಾದ ಪ್ರವೀಣ್ ಶೆಟ್ಟಿ ಯವರು ಬ್ಲಾಕ್ ಕಾಂಗ್ರೆಸ್ ಉತ್ತರವಲಯದ ಅಧ್ಯಕ್ಷರಾಗಿದ್ದವರು. ಅಲ್ಲದೆ ಚುನಾವಣೆಗೆ ನಿಂತವರು ಅವರ ತಮ್ಮ ಪ್ರಸಾದ್ ಶೆಟ್ಟಿ, ಸರಳ ಸಜ್ಜನಿಕೆಯ ವ್ಯಕ್ತಿ. ಅಂತಹ ವರ್ಚಸ್ಸಿನ ನಾಯಕರೆದುರು ನಮ್ಮ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಇದು ಎಲ್ಲ ಕಾಂಗ್ರೆಸ್ಸಿಗರಿಗೆ ಸ್ಪಷ್ಟವಾದ ಸೂಚನೆ ಜನ ಕಾಂಗ್ರೆಸ್ ಪರವಾಗಿಲ್ಲವೆಂಬುದು. ಅಲ್ಲದೆ ಅಲೆವೂರು ಪಂಚಾಯತ್ ಆಡಳಿತ ಎಷ್ಟು ಜನರನ್ನು ಎಷ್ಟರ ಮಟ್ಟಿಗೆ ತಲುಪಿದೆ ಎನ್ನುವುದು ಇದರಿಂದ ತಿಳಿಯುತ್ತಿದೆ. ಅಲೆವೂರು ಪಂಚಾಯತ್ ಆಡಳಿತ ಜನಮರುಳು ಮಾಡುತ್ತ ವ್ಯರ್ಥ ಕಾಲಹರಣ ಮಾಡುತ್ತಿದೆ. ಜನತೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡೆಸುವುದು ಬಿಟ್ಟು ಜನವಿರೋಧಿ ಆಡಳಿತ ನಡೆಸಿದುದರ ಪರಿಣಾಮವೂ ಈ ಫಲಿತಾಂಶಕ್ಕೆ ಸ್ವಲ್ಪ ಮಟ್ಟಿನ ಕಾರಣವಾಗಿದೆ. ಒಟ್ಟಾರೆ ಕಾಂಗ್ರೆಸ್ ಮುಳುಗುವ ಹಡಗು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೂ ಇದು ದಿಕ್ಸೂಚಿಯಾಗಿದೆ.
ಶ್ರೀಕಾಂತ ನಾಯಕ್
ಅಧ್ಯಕ್ಷರು ಬಿಜೆಪಿ ಕಾಪು ಕ್ಷೇತ್ರ