
ಶಿವಮೊಗ್ಗ: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಶಿವಮೊಗ್ಗ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ಪೊಲೀಸರು ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ 24 ಘಂಟೆಯ ಒಳಗಡೆ ಆರೋಪಿಗಳನ್ನು ಬಂಧಿಸಿದ್ದು ರಾಜ್ಯ ಗೃಹ ಇಲಾಖೆ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಹರ್ಷ ಹತ್ಯೆ ಪ್ರಕರಣದಲ್ಲಿ ಸಯ್ಯದ್ ನದೀಮ್, ಖಾಸಿಫ್, ಅಫಾನ್, ಖಾಸಿ ಅಲಿಯಾಸ್ ಸಲ್ಮಾನ್, ಚಿಕು, ಸಲ್ಮಾನ್ ಸೇರಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದ್ದು 12 ಮಂದಿಯನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದಲ್ಲಿ ಬೀಡುಬಿಟ್ಟಿರುವ ಎಡಿಜಿಪಿ ಮುರುಗನ್ ಅವರು, “ಈ ಹತ್ಯೆಯಲ್ಲಿ ನೇರವಾಗಿ ಹಾಗು ಪರೋಕ್ಷವಾಗಿ ಭಾಗಿಯಾಗಿರುವಂತಹ ಪ್ರತಿಯೊಬ್ಬರನ್ನು ಕೂಡ ಹಿಡಿದು ಕಾನೂನಿನ ಪ್ರಕ್ರಿಯೆಗಳಿಗೆ ಒಳಪಡಿಸುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ” ಎಂದು ಹೇಳಿದರು.
ಸದ್ಯಕ್ಕೆ ಭುಧವಾರ ತನಕ ಶಿವಮೊಗ್ಗ ನಗರದಲ್ಲಿ ಕರ್ಫ್ಯು ಹೇರಲಾಗಿದ್ದು ಪೊಲೀಸ್ ಭದ್ರತೆ ಗಟ್ಟಿಗೊಳಿಸಲಾಗಿದೆ. ಸೋಮವಾರ ದಿನ ಗಲಭೆಯ ಗೂಡಾಗಿದ್ದ ನಗರದ ರಸ್ತೆಗಳು ಇಂದು ಬಿಕೋ ಎನ್ನುತ್ತಿವೆ.