ಸರಕಾರ ಸಮಾನ ವಸ್ತ್ರ ಸಂಹಿತೆ ನೀತಿ ರೂಪಿಸಿ ಹಿಜಾಬ್ ವಿವಾದಕ್ಕೆ ಇತಿಶ್ರೀ ಹಾಡಲಿ; ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಪಾಠ ಅನಗತ್ಯ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಆರು ಮಂದಿ ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ಏಕಾಏಕಿ ಸೃಷ್ಟಿಸಿರುವ ಹಿಜಾಬ್ ವಿವಾದದ ಕಿಡಿ ಇಂದು ಜಿಲ್ಲೆಯಾದ್ಯಂತ ಪಸರಿಸಿರುವ ವಿಚಾರ ಇತರ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಅತ್ಯಂತ ಆತಂಕಕಾರಿ ಎನಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ, ಶಿಕ್ಷಣ ಇಲಾಖೆಯ ಮುಖಾಂತರ ಪದವಿ ಪೂರ್ವ ಕಾಲೇಜುಗಳಲ್ಲಿ ಸಮಾನ ವಸ್ತ್ರ ಸಂಹಿತೆ ನೀತಿಯನ್ನು ಜಾರಿಗೊಳಿಸುವ ಮೂಲಕ ಕೆಲವೇ ಮಂದಿ ವಿದ್ಯಾರ್ಥಿನಿಯರು ಪೂರ್ವಾಗ್ರಹಪೀಡಿತರಾಗಿ ಸೃಷ್ಟಿಸಿರುವ ಕ್ಷುಲ್ಲಕ ಹಿಜಾಬ್ ವಿವಾದಕ್ಕೆ ಇತಿಶ್ರೀ ಹಾಡುವ ಅನಿವಾರ್ಯತೆ ಇದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಈ ಮಧ್ಯೆ ‘ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು’ ಎಂದು ಪ್ರಶ್ನಿಸಿರುವ ಮಾಜಿ ಸಿ.ಎಂ. ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ಕ್ಷೇತ್ರದ ಜನತೆಯ ಸಮಸ್ಯೆಗೆ ಅಗತ್ಯ ಪರಿಹಾರ ಕಲ್ಪಿಸುವುದು ಶಾಸಕನ ಜವಾಬ್ದಾರಿ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ ಇರುವುದರಿಂದಲೇ ಪ್ರಾಯಶಃ ಸಿದ್ಧರಾಮಯ್ಯ ತನ್ನ ಸ್ವಕ್ಷೇತ್ರದ ಜನತೆಯಿಂದ ತಿರಸ್ಕೃತಗೊಂಡಿದ್ದಾರೆ. ತನ್ನ ಆಡಳಿತಾವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಯ ಸಂದರ್ಭದಲ್ಲಿ ಗಾಢ ಮೌನ ವಹಿಸಿದ್ದ ಸಿದ್ದರಾಮಯ್ಯ ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ರಾಜ್ಯದ ಜನತೆ ಮರೆತಿಲ್ಲ.

ದೇಶ ವಿರೋಧಿ ಕೃತ್ಯವನ್ನೇ ಕಾಯಕವನ್ನಾಗಿಸಿಕೊಂಡಿರುವ ವಿರೋಧಿಗಳ ಸಹಿತ ಕೇವಲ ವೋಟ್ ಬ್ಯಾಂಕಿನ ದುರಾಸೆಯಿಂದ ಸದಾ ಒಂದೇ ವರ್ಗವನ್ನು ಓಲೈಸುತ್ತಿರುವ ಸಿದ್ಧರಾಮಯ್ಯನವರಿಂದ ಇಂತಹ ಮತಾಂಧತೆಯ ದುರುದ್ದೇಶಪೂರಿತ ಹಿಜಾಬ್ ವಿವಾದದ ಬಗ್ಗೆ ಉಪದೇಶದ ಪಾಠ ಅನಗತ್ಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started