ಕಾಶೀ ನಗರಿಯ ಪುನರುತ್ಥಾನ ಸನಾತನ ಹಿಂದೂ ಪರಂಪರೆಯ ಪುನಶ್ಚೇತನಕ್ಕೆ ನಾಂದಿ: ಶಿವಾನಂದ ಸರಸ್ವತಿ ಸ್ವಾಮೀಜಿ

ಉಡುಪಿ: ಭರತ ಖಂಡವು ಪುಣ್ಯ ಕ್ಷೇತ್ರಗಳ ನೆಲೆವೀಡು. ಪ್ರಾಚೀನ ದೇವಳಗಳ ಅಭಿವೃದ್ಧಿಯಿಂದ ದೇಶದ ಭವ್ಯ ಸಂಸ್ಕೃತಿ, ಶ್ರೀಮಂತ ಪರಂಪರೆಯ ಗತ ವೈಭವ ಮರುಕಳಿಸಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ದಿಟ್ಟತನದ ನಿರ್ಧಾರದಿಂದ ಲೋಕಾರ್ಪಣೆಗೊಂಡಿರುವ ಪ್ರಾಚೀನ ಕಾಶೀ ನಗರದ ಪುನರುತ್ಥಾನ ಸನಾತನ ಹಿಂದೂ ಪರಂಪರೆಯ ಪುನಶ್ಚೇತನಕ್ಕೆ ನಾಂದಿ ಹಾಡಿದೆ ಎಂದು ಕೈವಲ್ಯ ಮಠಾದೀಶರಾದ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.

ಅವರು ಡಿ.13ರಂದು ಭವ್ಯ ಕಾಶೀ ದಿವ್ಯ ಕಾಶೀ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಕಾಪು ಮಂಡಲ ವತಿಯಿಂದ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯರ ದಿವ್ಯ ಸನ್ನಿದಿಯ ಆತ್ರಾಡಿ ಶಾಖಾ ಮಠದಲ್ಲಿ ನಡೆದ ಕಾಶೀ ಕಾರಿಡಾರ್ ಉದ್ಘಾಟನೆಯ ನೇರ ಪ್ರಸಾರ ವೀಕ್ಷಣೆಯನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿಯ ಜೊತೆಗೆ ದೇಶದ ಭವ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಣ ತೊಟ್ಟು ಶ್ರಮಿಸುತ್ತಿದ್ದಾರೆ. ಈ ಪುಣ್ಯ ಕಾಯಕದಲ್ಲಿ ಸಮಸ್ತ ದೇಶವಾಸಿಗಳು ಅವರೊಂದಿಗೆ ಕೈಜೋಡಿಸಬೇಕಾಗಿದೆ. ಅಯೋಧ್ಯೆ ಮತ್ತು ಕಾಶಿ ಮಾದರಿಯಲ್ಲಿ ಮಥುರಾ ಸಹಿತ ಇನ್ನೂ ಹಲವಾರು ಪುಣ್ಯ ಕ್ಷೇತ್ರಗಳ ಪುನರುಜ್ಜೀವನ ನಡೆಯಬೇಕಿದೆ. ಇದು ವಿಶ್ವವಂದ್ಯರೆನಿಸಿರುವ ಮೋದಿಜೀಯವರಿಂದ ಮಾತ್ರ ಸಾಧ್ಯ. ಅವರ ನೇತೃತ್ವದಲ್ಲಿ ಇಂತಹ ಸತ್ಕಾರ್ಯಗಳು ಶೀಘ್ರವಾಗಿ ನೆರವೇರಲಿ ಎಂದು ಹಾರೈಸುತ್ತಾ ಅವರಿಗೆ ಭಗವಂತನು ದೀರ್ಘಾಯುಷ್ಯ, ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಂಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಬಂಟಕಲ್ಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಜಯರಾಮ್ ಪ್ರಭು, ನರಸಿಂಗೆ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಂಕರ್, ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯದರ್ಶಿ ನಿತ್ಯಾನಂದ ನಾಯಕ್ ನರಸಿಂಗೆ, ಬಿಜೆಪಿ ಕಾಪು ಮಂಡಲ ಉಪಾಧ್ಯಕ್ಷ ಸುಭಾಸ್ ನಾಯ್ಕ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುರೇಶ್ ಸೆರ್ವೆಗಾರ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started