
ಉಡುಪಿ: ‘ನಾಡ ಹಬ್ಬ ಮೈಸೂರು ದಸರಾ’ದಂತೆಯೇ ‘ಕರಾವಳಿ ಕರ್ನಾಟಕದ ನಾಡ ಹಬ್ಬ’ ಎಂದೆನಿಸಿರುವ ‘ಉಡುಪಿ ಪರ್ಯಾಯ’ಕ್ಕೆ ವಿಧಾನಸಭಾ ಅಧಿವೇಶನದಲ್ಲಿ ಅನುದಾನದ ಬೇಡಿಕೆ ಇಟ್ಟಿರುವ ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣ ಅವರ ಮಾತನ್ನು ಹಗುರವಾಗಿ ಪರಿಗಣಿಸಿ, ಹಿಂದೂ ಧರ್ಮದ ಅಸ್ಮಿತೆಯ ಭಾಗವಾದ ಹರಿಕಥೆಯನ್ನು ತಿರಸ್ಕಾರ ಭಾವದಿಂದ ಉಲ್ಲೇಖಸಿ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯನ್ನುoಟುಮಾಡಿರುವ ವಿಧಾನಸಭಾ ಸ್ಪೀಕರ್ ಅಬ್ದುಲ್ ಖಾದರ್ ಅವರ ರಾಜಕೀಯ ಪ್ರೇರಿತ ಕ್ಷುಲ್ಲಕ ವರ್ತನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌರವಾನ್ವಿತವಾದ ವಿಧಾನಸಭಾ ಸ್ಪೀಕರ್ ಪೀಠದಲ್ಲಿ ಕುಳಿತು ತನ್ನ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿಭಾಯಿಸಿ ಸರ್ವ ಪಕ್ಷದ ಶಾಸಕರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುವ ಬದಲು ಖಾದರ್ ಅವರು ಒಂದು ಧರ್ಮವನ್ನು ದ್ವೇಷಿಸುವ ರೀತಿಯ ಹೇಳಿಕೆಯನ್ನು ನೀಡಿ ಜನರಿಂದ ಆಯ್ಕೆಯಾಗಿರುವ ಓರ್ವ ಜನಪ್ರತಿನಿಧಿಯ ಸಹಿತ ಕ್ಷೇತ್ರದ ಸಮಸ್ತ ಹಿಂದೂ ಸಮಾಜ ಬಾಂಧವರನ್ನು ಅವಮಾನಿಸಿರುವುದು ಖೇದಕರ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸಚಿವ ಸಂಪುಟದ ಇತರ ಕೆಲವು ಸಚಿವರಂತೆ ಖಾದರ್ ಅವರು ಕೂಡಾ ಪ್ರಚಾರದ ಗೀಳಿಗಾಗಿಯೋ ಅಥವಾ ಕಾಂಗ್ರೆಸ್ ಹೈಕಮಾಂಡನ್ನು ಮೆಚ್ಚಿಸಲಿಕ್ಕಾಗಿಯೋ ಅಥವಾ ಸಚಿವ ಸ್ಥಾನದ ಆಕಾಂಕ್ಷಿಯಾಗಿ ರಾಜ್ಯ ಸರಕಾರದ ದಿವಾಳಿತನವನ್ನು ಮುಚ್ಚಿಡಲು ಈ ರೀತಿಯಾಗಿ ವರ್ತಿಸಿದ್ದಾರೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪಾರಂಪರಿಕವಾಗಿ ಉಡುಪಿ ಪರ್ಯಾಯದ ಪೂರ್ವ ಸಿದ್ಧತೆಗಳ ಕುರಿತು ಅನುದಾನದ ಬಗ್ಗೆ ಪ್ರಶ್ನೆ ಕೇಳಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ನಡೆ ಸಮರ್ಥನೀಯವಾಗಿದೆ. ಇತರ ಧರ್ಮಗಳ ವಿಶೇಷ ಆಚರಣೆಗಳ ಕಾರ್ಯಕ್ರಮಗಳ ಕುರಿತು ಅನುದಾನ ಕೇಳಿದಾಗ ಕೂಡಾ ಸ್ಪೀಕರ್ ಖಾದರ್ ಅವರು ಸದನದಲ್ಲಿ ಇದೇ ರೀತಿಯ ಉದ್ದಟತನ ಪ್ರದರ್ಶಿಸುತ್ತಾರೋ ಎಂದು ಅವರು ಪ್ರಶ್ನಿಸಿದ್ದಾರೆ.
ಸ್ಪೀಕರ್ ಸ್ಥಾನವೆಂದರೆ ವಿರೋಧ ಪಕ್ಷದ ಶಾಸಕರನ್ನು ಹೆಣೆಯಲು ಅಥವಾ ಅವರ ಆತ್ಮ ಗೌರವವನ್ನು ಕೆಣಕಿ ಅವಮಾನಿಸಲು ಇರುವ ವೇದಿಕೆ ಎಂದು ಸ್ಪೀಕರ್ ಖಾದರ್ ಅವರು ತಿಳಿದಂತಿದೆ. ಈ ನಿಟ್ಟಿನಲ್ಲಿ ಸ್ಪೀಕರ್ ಖಾದರ್ ಅವರು ಕೂಡಲೇ ಉಡುಪಿಯ ನಾಗರಿಕರ ಹಾಗೂ ಸಮಸ್ತ ಹಿಂದೂ ಸಮಾಜದ ಬಹಿರಂಗ ಕ್ಷಮೆ ಕೋರಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಅಗ್ರಹಿಸಿದ್ದಾರೆ.