
ಕರ್ನಾಟಕ ರಾಜ್ಯ ಸರಕಾರ ಹೀನಾಯ ಪರಿಸ್ಥಿತಿಗೆ ತಲುಪಿದೆ. ಎಲ್ಲದರ ಮೇಲೂ ದರ ಏರಿಕೆಯ ಸವಾರಿ ಮಾಡಿ ಇದೀಗ ಬಡವರ ಪಿಂಚಣಿ ಮೇಲೆ ಕಣ್ಣು ಹಾಕಿ ಇನ್ನು ಬಡವರು ಪಿಂಚಣಿ ಯೋಜನೆಗೆ ಅರ್ಜಿ ಹಾಕದಂತೆ ಯೋಜನೆ ರೂಪಿಸಿರುವರು. ವಯೋವ್ರಧ್ಧರು ದುಡಿಯಲು ಅಸಾಧ್ಯವಾದಾಗ ಅವರಿಗೂ ಗೌರವಯುತ ಜೀವನ ನಡೆಸಲು ಕಿಂಚಿತ್ ರೂಪದ ಸಹಾಯಧನ ನೀಡಲು ಪಿಂಚಣಿ ಯೋಜನೆ ಪ್ರಾರಂಭಗೊಂಡಿತ್ತು. ಅದರಲ್ಲೂ ಯಡಿಯೂರಪ್ಪರವರ ಸರಕಾರ ಇದ್ದಾಗ ಸಂಧ್ಯಾಸುರಕ್ಷಾ ಎನ್ನುವ ಹೊಸ ಯೋಜನೆಯನ್ನೇ ಘೋಷಿಸಿ ಅದೆಷ್ಟೋ ಬಡ ಕುಟುಂಬಗಳಿಗೆ ಗೌರವಯುತ ಜೀವನ ನೀಡಿದುದನ್ನು ಇಂದಿಗೂ ಜನ ನೆನೆಯುತ್ತಿರುವರು. ಅಂತಹ ಯೋಜನೆಗೆ ಈಗಿನ ರಾಜ್ಯ ಸರಕಾರ ಸಂಪೂರ್ಣ ಎಳ್ಳು ನೀರು ಬಿಡುವ ಹಂತಕ್ಕೆ ಬಂದಿರುವುದು ಬಹಳ ಶೋಚನೀಯ ಮತ್ತು ಕಾಂಗ್ರೆಸ್ ಪಕ್ಷದ ದಯನೀಯ ಪರಿಸ್ಥಿತಿ ಇದು. ಪಾಪ ಬಡವರು ವಯಸ್ಸಾದ ಮೇಲೆ ಅದೇನೋ ಸರಕಾರದಿಂದ ಸ್ವಲ್ಪವಾದರೂ ಸಹಾಯಧನ ಸಿಗುವುದೆಂದು ಅರ್ಜಿ ರೆಡಿ ಮಾಡಿ, ಅದಕ್ಕೆ ವೈದ್ಯರ ಸಹಿಗಾಗಿ, ಗ್ರಾಮಕರಣಿಕರ ಸಹಿಗಾಗಿ, ಅಫಿದವಿತ್ ಮಾಡಿಸಲು ಹೀಗೆ 400-500 ರೂ ಖರ್ಚು ಮಾಡಿ ವಿ ಎ ವರದಿ ಮಾಡಿಸಿ ನಾಡಕಛೇರಿಯಲ್ಲಿ ಎಂಟ್ರಿ ಮಾಡಿಸಲು ತಂದರೆ, ನೀವು ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುವಿರಿ, ನಿಮ್ಮ ಆದಾಯ (ಇಂತಹ ಆರ್ ಡಿ ನಂಬರ್ ಪ್ರಕಾರ) 98000/- ಆಗಿರುತ್ತದೆ ಎಂದು ಬರುತ್ತಿದೆ. ಪಾಪ ಸರಕಾರವೇ ಕೊಟ್ಟ ಎರಡು ಮುಕ್ಕಾಲು ಸೆಂಟ್ಸ್ ಜಾಗದಲ್ಲಿ ಬಹಳಕಷ್ಟದ ಜೀವನ ನಡೆಸುತ್ತಿರುವರೊಬ್ಬರು ಅದು ಹೇಗೆ ಅಂತ ಅವರು ಕೇಳಿದಾಗ ನಿಮ್ಮ ಮನೆಯ ರೇಶನ್ ಕಾರ್ಡ್ ನಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳು ಆದಾಯ ಪ್ರಮಾಣ ಪತ್ರ ಮಾಡಿರಬೇಕು ಅದರ ಆದಾಯ ನಿಮಗೂ ತೋರಿಸುತ್ತದೆ ಎನ್ನುವ ವಿಷಯ ಹೇಳಿದಾಗ ಆ ಅಜ್ಜಿಗೆ ಅರ್ಥವಾಗಲೇ ಇಲ್ಲ.ಕಣ್ಣೀರು ಮಾತ್ರ ಉಕ್ಕಿ ಉಕ್ಕಿ ಬರುತ್ತಿತ್ತು. ಅಲ್ಲಿ ಇಲ್ಲಿ ತಿರುಗಾಡಿ ಕೊನೆಗೂ ನಮ್ಮ ಪಾಲಿಗೆ ಯಾರೂ ಇಲ್ಲ. ಸರಕಾರವೂ ಇಲ್ಲ ಅಂತ ಕಣ್ಣೀರು ಒರೆಸುತ್ತಾ ಹೋಗುವಾಗ ನೋಡಿದವರಿಗೂ ಕಣ್ಣಾಲಿ ಒದ್ದೆಯಾಗದೇ? ಸರಕಾರವೊಂದು ಬಡವರಿಗೆ ಪಿಂಚಣಿಯನ್ನೂ ಕೊಡದೆ ಇಂತಹ ದರಿದ್ರ ಪರಿಸ್ಥಿತಿಗೆ ಬರಬಹುದೇ? ಹಾಗಾದರೆ ವಿಎ ವರದಿಗೆ ಬೆಲೆಯೇ ಇಲ್ಲವೇ?
ಇಂದಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಜಾತಿ ಆದಾಯ ಪ್ರಮಾಣಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ಹಾಗೆಯೇ ಯಾವುದೇ ಗ್ರಾಮಕರಣಿಕರು ಕುಟುಂಬದ ವಾರ್ಷಿಕ ಆದಾಯ ರೂ. 32000/- ಕ್ಕಿಂತ ಕಡಿಮೆ ಹಾಕುವುದಿಲ್ಲ. ಪಿಂಚಣಿಗೆ ಆದಾಯ ಮಿತಿ ಮೂವತ್ತೆರಡು ಸಾವಿರವಂತೆ. ಹಾಗೆ ಜಾತಿ ಆದಾಯ ಪ್ರಮಾಣ ಪತ್ರ ಮಾಡಿಸಿದವರು ಯಾರೂ ಇನ್ನು ಮೇಲೆ ಪಿಂಚಣಿಗೆ ಅರ್ಜಿ ಹಾಕುವಂತಿಲ್ಲ. ಹಾಕುವಾಗ ಇಂತಹ ಆರ್ ಡಿ ನಂಬರ್ ಪ್ರಕಾರ ನಿಮ್ಮ ಆದಾಯ ಇಷ್ಟು ಅಂತ ಬರ್ತದೆ. ಆ ಆದಾಯ ಪ್ರಮಾಣಪತ್ರ ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರುವರು. ಹೆಚ್ಚಿನ ಎಲ್ಲರ ಮನೆಯಲ್ಲೂ ಮಕ್ಕಳಿರುತ್ತವೆ. ಮತ್ತು ಅವರಿಗೆ ಜಾತಿ ಆದಾಯವೂ ಮಾಡಿರುತ್ತಾರೆ. ಹಾಗಾದರೆ ಯಾರಾದರೂ ಪಿಂಚಣಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅಂದರೆ ಇದರರ್ಥ ಸರಕಾದ ಬಳಿ ಬಡವರಿಗೆ ನೀಡಲು ಹಣವಿಲ್ಲ. ಪಿಂಚಣಿ ಯೋಜನೆ ಬಂದ್. ಈ ಸರಕಾರ ಆರ್ಥಿಕವಾಗಿ ಮಾತ್ರವಲ್ಲದೇ ಬೌಧ್ದಿಕವಾಗಿಯೂ ದಿವಾಳಿಯಾಗಿದೆ.
ಮಾನ್ಯ ಸೊರಕೆಯವರೇ ಎಲ್ಲ ಪಂಚಾಯತ್ ಗಳ ಮುಂದೆ ಜನರನ್ನು ಕರೆದುಕೊಂಡು ಹೋಗಿ ಪ್ರತಿಭಟನೆಯ ನಾಟಕ ಆಡುತ್ತಿದ್ದೀರಲ್ವೇ, ಈ ವಿಷಯ ನಿಮಗೆ ಯಾಕೆ ತಿಳಿಯುತ್ತಿಲ್ಲ. ಬಿಜೆಪಿಯವರು ರಾಜ್ಯ ಸರಕಾರದ ವಿರುಧ್ಧ ಸುಳ್ಳು ಆಪಾದನೆ ಮಾಡುತ್ತಿದೆಯೆಂದು ನಾಟಕ ಆಡುತ್ತಿರುವಿರಲ್ಲ. ಇದು ಸುಳ್ಳಾ? ನಿಮ್ಮ ಸರಕಾರದ ಗತಿಗೆಟ್ಟ ನಿಯಮದಿಂದ ಬಡಜನತೆ ಪಿಂಚಣಿ ಯೋಜನೆಯಿಂದ ವಂಚಿತರಾಗುತ್ತಿದ್ದಾರಲ್ವಾ, ಸಾಧ್ಯವಾದರೆ ಅದನ್ನು ಪರಿಹರಿಸಿ. ಸರಕಾರ ನಿಮ್ಮದೇ ಇದೆ. ನಾಡಕಚೇರಿಯ ಅಪ್ಲಿಕೇಶನ್ ನಲ್ಲಿ ಪಿಂಚಣಿಯ ಆದಾಯ ಮಿತಿ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೆ ಹೆಚ್ಚಿಸಿ. ಜನ ನಿಮ್ಮನ್ನು ನೆನೆಸಿಕೊಂಡಾರು. ಅದು ಬಿಟ್ಟು ಸುಮ್ಮನೆ ಪ್ರತಿಭಟನೆಯ ನಾಟಕ ಮಾಡಿ ಚೀಪ್ ರಾಜಕಾರಣ, ವರ್ಗಾವಣೆ ಧಂದೆ, ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವುದು ಬಿಟ್ಟುಬಿಡಿ. ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತ್ತೆ ನಮ್ಮ ಪ್ರತಿಭಟನೆ ಅನಿವಾರ್ಯವಾದೀತು.
ರಾಜ್ಯ ಸರಕಾರ ತನ್ನ ಗ್ಯಾರಂಟಿ ಯೋಜನೆಗಾಗಿ ಜನರನ್ನು ಲೂಟಿಗೈದು ಬಡ ಜನರ ಬದುಕು ಹೈರಾಣಾಗಿಸಿದೆ. ಅರ್ಹ ವಯೋವ್ರಧ್ಧರ ಶಾಪ ಈ ಸರಕಾರಕ್ಕೆ ತಟ್ಟದೆ ಇರದು. ಅವರ ಗೌರವಯುತ ಬದುಕಿಗೆ ಕೊಳ್ಳಿ ಇಟ್ಟ ಸರಕಾರಕ್ಕೆ ಜನರೇ ಬುಧ್ಧಿ ಕಲಿಸುವ ದಿನ ದೂರವಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ, ಕಾಪು ಮಂಡಲದ ನಿಕಟಪೂರ್ವ ಅಧ್ಯಕ್ಷರೂ ಆದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆ ನೀಡಿರುವರು.