ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಲವ್ ಜಿಹಾದ್’ಗೆ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ತೀವ್ರ ಖಂಡನೆ



ಉಡುಪಿ: ಇತ್ತೀಚೆಗೆ ಉಡುಪಿಯಲ್ಲಿ ಬ್ಲಾಕ್ ಮೇಲ್ ತಂತ್ರದ ಮೂಲಕ ಹುಡುಗಿಯ ಅಪಹರಣ ನಡೆದಿರುವ ಕುರಿತು ಸ್ವತಃ ಹುಡುಗಿಯ ಹೆತ್ತವರು ಪ್ರಕರಣ ದಾಖಲಿಸಿದ್ದರೂ ಆರೋಪಿಯನ್ನು ಬಂಧಿಸಲು ಮೀನ ಮೇಷ ಎಣಿಸುತ್ತಾ ವಿಳಂಬ ಧೋರಣೆ ಅನುಸರಿಸುತ್ತಿರುವ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರ ವರ್ತನೆಗೆ ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಸಮಾಜದಲ್ಲಿ ಯಾವುದೇ ಹೆಣ್ಣು ಮಕ್ಕಳಿಗೆ ತೊಂದರೆ ಸಂಭವಿಸಿದಾಗ ಅದನ್ನು ಧರ್ಮಾತೀತವಾಗಿ ತೀವ್ರವಾಗಿ ಖಂಡಿಸಿರುವುದನ್ನು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಸ್ವಾಗತಿಸಿದೆ.

ಪೊಲೀಸ್ ಇಲಾಖೆ ವೃಥಾ ಕಾಲಹರಣ ಮಾಡದೆ ಸದ್ರಿ ಪ್ರಕರಣದ ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಸತ್ಯಾಸತ್ಯತೆಯನ್ನು ಅರಿತುಕೊಂಡು  ಆರೋಪಿ ಮತ್ತು ಇದರ ಹಿಂದೆ ಇರುವ ಕಾಣದ ಕೈಗಳ ಜಾಡು ಹಿಡಿದು ತನಿಖೆಯನ್ನು ಚುರುಕುಗೊಳಿಸಬೇಕು ಹಾಗೂ ಅಪರಾಧಿಗೆ ಕಾನೂನಾತ್ಮಕ ಸೂಕ್ತ ಶಿಕ್ಷೆಯನ್ನು ವಿಧಿಸಬೇಕು ಎಂದು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಪ್ ಡಿಸೋಜ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

Leave a comment

Design a site like this with WordPress.com
Get started