‘ಮಡಗಾಂವ್ ನಿಂದ ವೇಲಂಕಣಿ’ಗೆ ವಿಶೇಷ ರೈಲು ಚಾಲನೆಗೆ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಸಂಸದ ಕೋಟ ಅವರಿಗೆ ಮನವಿ ಸಲ್ಲಿಕೆ



ಪ್ರಸಕ್ತ ವಿಶೇಷ ರೈಲು ಸಂಖ್ಯೆ 01007/01008 ‘ಮಡಗಾಂವ್ ನಿಂದ ವೇಲಂಕಣಿ’ಗೆ ಹಬ್ಬದ ಸಲುವಾಗಿ ಚಾಲನೆಯಲ್ಲಿದ್ದು, ಸದ್ರಿ ರೈಲನ್ನು ವಾರಕ್ಕೊಮ್ಮೆ ಕರ್ನಾಟಕ ಕರಾವಳಿ ಮಾರ್ಗವಾಗಿ ಚಲಿಸಲು ನಿಯಮಿತಗೊಳಿಸುವಂತೆ ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಜಿಲ್ಲಾಧ್ಯಕ್ಷ ರುಡಾಲ್ಫ್ ಡಿಸೋಜ ನೇತೃತ್ವದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವಿಸ್ತೃತ ಸೇವೆಯು ಕರಾವಳಿ ವಲಯದ ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ಜೋಡಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಸಾಂಸ್ಕೃತಿಕ ವಿನಿಮಯ ಮತ್ತು ಆರ್ಥಿಕತೆಗೆ ವಿಶೇಷ ಒತ್ತು ನೀಡಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮನವಿಯನ್ನು ಸ್ವೀಕರಿಸಿದ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿ, ತಕ್ಷಣ ರೈಲ್ವೆ ಇಲಾಖೆಯನ್ನು ಸಂಪರ್ಕಿಸಿ ರೈಲ್ವೆ ಸಚಿವರಿಗೆ ಪತ್ರ ಬರೆದು, ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಡುಪಿ ನಗರಾಧ್ಯಕ್ಷ ಡೇನಿಸ್ ಮಸ್ಕರೇನಸ್, ಜಿಲ್ಲಾ ಪದಾಧಿಕಾರಿಗಳಾದ ನವೀನ್ ಡಿಸೋಜ, ಗ್ಲೆನ್ ಮೌನೀಸ್, ಓಲಿವರ್ ಪೆರಂಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started