
ಉಡುಪಿ: ಭಾರತೀಯ ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ! ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸಂಸ್ಮರಣೆ ಕಾರ್ಯಕ್ರಮವು ನಾಳೆ ಜೂ.23 ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ.
ಜೂ. 23ರಂದು ಜಿಲ್ಲೆಯ ಎಲ್ಲ 6 ಮಂಡಲಗಳು ಮತ್ತು 1,112 ಬೂತ್ ಗಳಲ್ಲಿ ಡಾ! ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಅವರ ದೇಶಭಕ್ತಿ, ತ್ಯಾಗ, ಬಲಿದಾನ, ಜೀವನಾದರ್ಶಗಳ ಬಗ್ಗೆ ವಿಚಾರ ಸಂಕಿರಣ ನಡೆಸುವ ಮೂಲಕ ಅವರ ಪುಣ್ಯ ಸಂಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ತಿಳಿಸಿದ್ದಾರೆ.
*’ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನ*:
ಪಕ್ಷದ ಸೂಚನೆಯಂತೆ ಜೂ.23 ರಿಂದ ಜು.6ರ ವರೆಗೆ ಜಿಲ್ಲೆಯ ಎಲ್ಲಾ ಬೂತ್ಗಳಲ್ಲಿ ‘ಏಕ್ ಪೆಡ್ ಮಾ ಕೆ ನಾಮ್’ (ಒಂದು ಗಿಡ ತಾಯಿಯ ಹೆಸರಿನಲ್ಲಿ) ಅಭಿಯಾನದ ಅಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಅವರು ಜೂ.5, 2024ರ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ದೆಹಲಿಯ ಬುದ್ಧ ಜಯಂತಿ ಪಾರ್ಕ್ನಲ್ಲಿ ಅಶ್ವತ್ಥ ಸಸಿಯನ್ನು ನೆಡುವ ಮೂಲಕ ‘ಏಕ್ ಪೆಡ್ ಮಾ ಕೆ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಸಸಿ) ಅಭಿಯಾನವನ್ನು ಪ್ರಾರಂಭಿಸಿದರು. ಪಕ್ಷದ ಕಾರ್ಯಕರ್ತರು ರಾಷ್ಟ್ರಮಟ್ಟದಿಂದ ಪೇಜ್ ಪ್ರಮುಖ್ ಮಟ್ಟದ ತನಕ ತಮ್ಮ ತಾಯಿಯೊಂದಿಗೆ ಅಥವಾ ತಾಯಿಯ ಚಿತ್ರದೊಂದಿಗೆ ನಿಂತು ಸಸಿ ನೆಡುವ ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನವನ್ನು ರಾಷ್ಟ್ರವ್ಯಾಪಿಯಾಗಿ ಪ್ರಚಲಿತಗೊಳಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶದ ಪ್ರತಿಯೊಬ್ಬ ನಾಗರಿಕರು ಸಾರ್ವಜನಿಕ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಮತ್ತು ಎನ್ಜಿಒಗಳೊಂದಿಗೆ ಈ ಅಭಿಯಾನದಲ್ಲಿ ಭಾಗವಹಿಸಬೇಕೆಂಬ ಅಪೇಕ್ಷೆ ಇದೆ. ಪರಿಸರ ಸಂರಕ್ಷಣೆಗಾಗಿ ದೊಡ್ಡ ಮಟ್ಟದಲ್ಲಿ ಸಸಿಗಳನ್ನು ನೆಡುವ ಈ ಅಭಿಯಾನದಲ್ಲಿ ಸಂಸದರು, ಶಾಸಕರು, ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಹುಮ್ಮಸ್ಸಿನಿಂದ ತೊಡಗಿಸಿಕೊಳ್ಳಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.