ಕಾಂಗ್ರೆಸ್ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಅರಾಜಕತೆ ಸೃಷ್ಟಿ: ಕಿಶೋರ್ ಕುಮಾರ್ ಕುಂದಾಪುರ





ಉಡುಪಿ: ಗ್ಯಾರಂಟಿಗಳ ಆಸರೆಯಿಂದ ಅಧಿಕಾರಕ್ಕೇರಿದ ಕಾಂಗ್ರೆಸ್, ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಜಾರಿ ಮಾಡದೆ ರಾಜ್ಯದ ಜನತೆಗೆ ಮಂಕು ಬೂದಿ ಎರಚಿದೆ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿರುವ ಕಾಂಗ್ರೆಸ್ ಒಂದೇ ವರ್ಗದ ಅತಿಯಾದ ಓಲೈಕೆಯಲ್ಲಿ ತೊಡಗಿದೆ. ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಒಳಗೆ ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಯಾವುದೇ ಕಟ್ಟುನಿಟ್ಟಿನ  ಕ್ರಮ ಜರಗಿಸದೆ ದೇಶ ವಿರೋಧಿ ನೀತಿ ಅನುಸರಿಸಿರುವುದು ಸ್ಪಷ್ಟವಾಗಿದೆ.

ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿಗಳಿಗೆ ಹಾಗೂ ಜಾಹೀರಾತುಗಳಿಗೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಸರಕಾರ ಬೊಕ್ಕಸವನ್ನು ಬರಿದಾಗಿಸಿ ಆಡಳಿತ ವ್ಯವಸ್ಥೆಯಲ್ಲಿ ವೈಫಲ್ಯ ಕಂಡ ಪರಿಣಾಮವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಅರಾಜಕತೆ ಸೃಷ್ಟಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನ ವಿರೋಧಿ ನೀತಿ, ರಾಷ್ಟ್ರ ವಿರೋಧಿ ಮಾನಸಿಕತೆ ಹಾಗೂ ಆಡಳಿತ ವೈಫಲ್ಯಗಳ ವಿಸ್ತೃತ ಮಾಹಿತಿ ನೀಡಿದರು.

● ಇಡೀ ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ಬರಪರಿಹಾರ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. 875ಕ್ಕೂ ಹೆಚ್ಚು ರೈತರು ಅತ್ಮಹತ್ಯೆ ಮಾಡಿಕೊಂಡಿದ್ದು, ಜನರು ಗುಳೆ ಹೋಗುತ್ತಿದ್ದಾರೆ. ಆದರೆ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ.
● ರಾಜ್ಯ ಸರಕಾರ ಕೊಡುವ ಪರಿಹಾರ ಮೊತ್ತದ ಆಸೆಗಾಗಿ ರೈತರ ಆತ್ಮಹತ್ಯೆಗಳಾಗುತ್ತಿವೆ ಎಂದು ರಾಜ್ಯದ ಸಚಿವರಾದ ಶಿವನಾಂದ ಪಾಟೀಲ್ ಹೇಳುತ್ತಾರೆ. ಇದು ‘ರೈತವಿರೋಧಿ’ ಹೇಳಿಕೆಯಲ್ಲವೇ?
● ಕಾವೇರಿ ನೀರನ್ನು ಹರಿಯಲು ಬಿಟ್ಟು ಕಾವೇರಿ ಕೊಳ್ಳದ ರೈತರ ಬದುಕನ್ನು ದುರ್ಬರಗೊಳಿಸಿದ್ದು ಒಂದೆಡೆಯಾದರೆ ಕಾವೇರಿಯನ್ನೇ ನಂಬಿಕೊಂಡಿರುವ ಮೈಸೂರು ಬೆಂಗಳೂರಿನ ಜನರನ್ನು ನೀರಿಲ್ಲದೆ ಒದ್ದಾಡುವಂತೆ ಮಾಡಿದೆ.
● ರಾಜ್ಯದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುತ್ತಾ ಬಂದಿದೆ ಸರ್ಕಾರ. ಟ್ಯಾಂಕರ್ ನೀರಿನ ಮಾಫಿಯಾಗಳಿಗೆ ಜತೆಯಾಗಿ ನೀರಿನ ದರ ದುಪ್ಪಟ್ಟು ಮಾಡಿದೆ. ಕೈಗಾರಿಕಾ ಪ್ರದೇಶಗಳಿಗೆ ನೀರನ್ನು ಸರಬರಾಜು ಮಾಡದೇ ಉದ್ಯಮಗಳು ಬಾಗಿಲು ಮುಚ್ಚಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ಜನರ ಬದುಕನ್ನು ನರಕ ಮಾಡುತ್ತಿದೆ.
● ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಸಂಬಂಧಿಸಿದ (ಎಸ್‌ಸಿಎಸ್‌ಪಿ, ಎಸ್‌ಟಿಪಿ) 11 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ಬೇರೆ ಉದ್ದೇಶಕ್ಕೆ ಹಾಗೂ ಗ್ಯಾರಂಟಿಗಳಿಗೆ ಬಳಸಿಕೊಂಡಿದೆ. ದಲಿತರು, ಶೋಷಿತ ವರ್ಗದವರ ಕುರಿತು ಸಿದ್ದರಾಮಯ್ಯನವರ ಮೊಸಳೆ ಕಣ್ಣೀರಿಗೆ ಇದು ಸಾಕ್ಷಿ. ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳ ಮೇಲಿನ ನಿರಂತರ ಅನ್ಯಾಯ ಮುಂದುವರೆದಿದೆ. ಇದು ದಲಿತ ವಿರೋಧಿ ಸರ್ಕಾರ.
● ಸಂವಿಧಾನ ಕರ್ತೃ ಡಾ! ಬಾಬಾಸಾಹೇಬ್ ಅಂಬೇಡ್ಕರ್ ಅವರು ಬದುಕಿದ್ದಾಗ, ಮಾತ್ರವಲ್ಲದೆ ಮೃತರಾದ ಬಳಿಕವೂ ಅವರಿಗೆ ನಿರಂತರ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷ. ಅವರು ಚುನಾವಣೆಗೆ ನಿಂತಾಗ ಸೋಲಿಸಿದ್ದು ಕಾಂಗ್ರೆಸ್ ಪಕ್ಷ.
● ಬಿಜೆಪಿ ನೇತೃತ್ವದ ಕಾಂಗ್ರೆಸ್ ಸರಕಾರವು ಡಾ! ಅಂಬೇಡ್ಕರ್ ಅವರ ಜೀವನದ ಪ್ರಮುಖ ಐದು ಸ್ಥಳಗಳನ್ನು ಗುರುತಿಸಿ ಪಂಚ ಕ್ಷೇತ್ರಗಳ ಅಭಿವೃದ್ಧಿ ಮಾಡಿ ಗೌರವಿಸಿದೆ. 
● ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರವೇ ತಾಂಡವವಾಡುತ್ತಿದೆ. ಸಿಕ್ಕಲ್ಲೆಲ್ಲ ಲಂಚಕ್ಕೆ ಕಾಡು ಕೂತಿದೆ ಕಾಂಗ್ರೆಸ್. ಅಧಿಕಾರಿಗಳಿಗೆ ಇಂತಿಷ್ಟು ಎಂದು ಕಲೆಕ್ಷನ್ ಟಾಸ್ಕ್ ನೀಡಲಾಗಿದೆ. ಕಾಂಗ್ರೆಸ್ಸಿಗರ ದೆಹಲಿ ತಿಜೋರಿ ತುಂಬಲು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ.
● ಸರ್ಕಾರದ ಸಚಿವರು, ಶಾಸಕರುಗಳು ರಾಜ್ಯದ ಪ್ರವಾಸ ಮಾಡುತ್ತಿಲ್ಲ. ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ ಒಂದೇ ಒಂದು ಕಡೆ ಚರಂಡಿ, ರಸ್ತೆ ಯಾವುದೇ ಅಭಿವೃದ್ಧಿ ಕೆಲಗಳು ಆಗಿಲ್ಲ. ಇದು ಶೂನ್ಯ ಅಭಿವೃದ್ಧಿ ಸರ್ಕಾರ. ರಾಜ್ಯದ ಖಜಾನೆ ಖಾಲಿಯಾಗಿದೆ.
● ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ವಿಧಾನಸೌಧದ ಆವರಣದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಘೋಷಣೆ ಮೊಲಗಿದ್ದು ಜ್ವಲoತ ಸಾಕ್ಷಿ. ಇವೆಲ್ಲವೂ ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದ ಫಲ. ನಾಸಿರ್ ರಾಜ್ಯಸಭೆಗೆ ಆಯ್ಕೆಯಾದ ಕ್ಷಣವೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿದ್ದು ಅತ್ಯಂತ ಕೆಟ್ಟ ಬೆಳವಣಿಗೆ.
● ಕಾಂಗ್ರೆಸ್ ಎಂದೆಂದಿಗೂ ದೇಶದ್ರೋಹಿಗಳ ಪರವಾಗಿಯೇ ಇದೆ. ಕಾಂಗ್ರೆಸ್ಸಿಗರದ್ದು ಜಿನ್ನಾ ಮನಸ್ಥಿತಿ.
● ಕೇಂದ್ರ ಸರ್ಕಾರವು ಹಿಂದಿನ ಯುಪಿಎ ಸರಕಾರಕ್ಕೆ ಹೋಲಿಸಿದರೆ ಶೇ. 200ಕ್ಕೂ ಹೆಚ್ಚು ಮೊತ್ತವನ್ನು ರಾಜ್ಯಕ್ಕೆ ಕೊಟ್ಟಿದ್ದರೂ ಕೇಂದ್ರದತ್ತ ಬೊಟ್ಟು ಮಾಡುವುದು, ಕೇಂದ್ರದ ವಿರುದ್ಧ ಮಾತನಾಡುವುದನ್ನು ಸಿದ್ಧರಾಮಯ್ಯನವರು ಮುಂದುವರೆಸಿದ್ದಾರೆ. ರಾಜ್ಯದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. 
● ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯ ಒಂದು ಭಾಗ ಕೂಡ ಕಾಂಗ್ರೆಸ್ ತನ್ನ ಎಪ್ಪತ್ತು ವರ್ಷಗಳ ಆಡಳಿತದಲ್ಲಿ ಮಾಡಿಲ್ಲ.
● ಕಿಸಾನ್ ಸಮ್ಮಾನ್ ಯೋಜನೆಯಡಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು 6 ಸಾವಿರ ನೀಡುತ್ತಿದೆ. ನಮ್ಮ ರಾಜ್ಯದಲ್ಲಿ ಅಂದಿನ ಯಡಿಯೂರಪ್ಪ ಅವರ ಸರಕಾರ ಆರಂಭಿಸಿದ್ದ ಹೆಚ್ಚುವರಿ 4 ಸಾವಿರ ನೀಡುವ ವ್ಯವಸ್ಥೆಯನ್ನು ರಾಜ್ಯ ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. 
● ಮನೆ ಮನೆಗೆ ಶುದ್ಧ ಕುಡಿಯುವ ನೀರು (ಜಲ್ ಜೀವನ್), ಆಯುಷ್ಮಾನ್ ಕಾರ್ಡ್, ಜನ್‌ಧನ್ ಯೋಜನೆ, 10 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣ – ಇವೆಲ್ಲವೂ ಮೋದಿಯವರ ಸರ್ಕಾರದ ಮಹತ್ವದ ಸಾಧನೆಗಳು. ಇತ್ತೀಚಿಗೆ ಪ್ರಧಾನಿ ಮೋದಿಯವರು, ದೇಶದಾದ್ಯಂತ ಒಟ್ಟು 41,000 ಕೋಟಿ ರೂ. ವೆಚ್ಚದ ಎರಡು ಸಾವಿರಕ್ಕೂ ಅಧಿಕ ರೈಲ್ವೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಕರ್ನಾಟಕದ 31 ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳಾಗಿ ಪರಿವರ್ತಿಸಲು ಚಾಲನೆ ನೀಡಿದ್ದಾರೆ. ರೈಲ್ವೆ ಅಭಿವೃದ್ಧಿಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ.
● ಭಾರತ್ ಬ್ರಾಂಡ್ ಅಡಿಯಲ್ಲಿ ಕೇoದ್ರ ಸರಕಾರ ಭಾರತ್ ಅಕ್ಕಿಯನ್ನು ಕೆಜಿಗೆ 29 ರೂ.ಗಳಂತೆ ದೇಶಾದ್ಯಂತ ಬಡವರಿಗೆ ನೀಡುತ್ತಿದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮೂಲಕ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಈಗ ಅತೀ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
● ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ನಿರಾಳ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನಿರಂತರ ಪ್ರಯತ್ನ ನಡೆಸುತ್ತಿದ್ದು, ಕೆ.ಜಿಗೆ ಕೇವಲ 27.50 ರೂ. ದರದಲ್ಲಿ ಗೋಧಿ ಹಿಟ್ಟನ್ನು ವಿತರಿಸುತ್ತಿದೆ ಕೇಂದ್ರ ಸರ್ಕಾರ.
● ‘ಭಾರತ್ ದಾಲ್’ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಕಡಲೆಬೇಳೆ ಮಾರಾಟವನ್ನು ಕೂಡ ಪ್ರಾರಂಭಿಸಿದೆ.
● ‘ಭಾರತ್’ ಲೇಬಲ್ ಅಡಿಯಲ್ಲಿ ಮಾರಾಟವಾದ ಈ ಎಲ್ಲ ವಸ್ತುಗಳೂ ಶೀಘ್ರವಾಗಿ ಗ್ರಾಹಕರಲ್ಲಿ ಜನಪ್ರಿಯತೆಯನ್ನು ಗಳಿಸಿದೆ.
● ವಿಕಸಿತ ಭಾರತದ ಸಂಕಲ್ಪ ನಮ್ಮ ಮೋದಿ ಅವರದು. 2047ರ ವೇಳೆಗೆ ಭಾರತವನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವಾಗಿ ಮಾಡುವ ಚಿಂತನೆ ಮತ್ತು ಸಂಕಲ್ಪವನ್ನು ನಮ್ಮ ಮೋದಿ ಸರ್ಕಾರ ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ 2023-24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ದೇಶದ ಜಿ.ಡಿ.ಪಿ. 8.4ರಷ್ಟು ಭರ್ಜರಿ ಪ್ರಗತಿ ಕಂಡಿದೆ.
● ಕೇವಲ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ಹಿಂದೂ ವಿರೋಧಿ ನೀತಿ ಕಾಂಗ್ರೆಸ್ ಸರಕಾರದ್ದು. ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆಗೆ ಗೈರು ಹಾಜರಿ, ಹುಬ್ಬಳ್ಳಿಯಲ್ಲಿ ಕರಸೇವಕರ ಮೇಲೆ ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸಿದ್ದು. ಮಂಡ್ಯದ ಕೆರೆಗೋಡಿನಲ್ಲಿ ಹನುಮಧ್ವಜ ಹಾರಿಸಿದ್ದಕ್ಕೆ ಅವರ ಮೇಲೆ ಕ್ರಮ ಇವೆಲ್ಲವೂ ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮನಸ್ಥಿತಿಗೆ ಒಂದೆರಡು ಉದಾಹರಣೆಗಳಷ್ಟೇ. ಹಿಂದೂ ದೇವಸ್ಥಾನಗಳ ಹುಂಡಿಯಿಂದ ಹಣ ಕಿತ್ತುಕೊಂಡು ಅದನ್ನು ಅನ್ಯ ಉದ್ದೇಶಕ್ಕೆ ಬಳಸುವ ಹುನ್ನಾರ ಕಾಂಗ್ರೆಸ್ ಸರಕಾರದ್ದು.
● ಬೆಲೆ ಏರಿಕೆಯ ಕೊಡುಗೆ ಕಾಂಗ್ರೆಸ್ ಸರಕಾರದ ದೊಡ್ಡ ಸಾಧನೆ. ವಿದ್ಯುತ್ ದರ ಏರಿಕೆ, ಹಾಲಿನ ದರ ಏರಿಕೆ ಮಾತ್ರವಲ್ಲದೆ, ಅಬಕಾರಿ ಸುಂಕ, ಆಸ್ತಿ ನೋಂದಣಿ ದರ, ವಾಹನ ನೋಂದಣಿ ದರವನ್ನು ಹೆಚ್ಚಿಸಿದೆ ಸರ್ಕಾರ.
● ಕಾಂಗ್ರೆಸ್ಸಿನ ಶಾಸಕ ಬಿ.ಆರ್ ಪಾಟೀಲ್ ಸಿದ್ದರಾಮಯ್ಯನವರಿಗೆ 18 ಶಾಸಕರಿಂದ ಸಹಿ ಹಾಕಿದ ಪತ್ರದಲ್ಲಿ, ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗುವುದಕ್ಕೆ ಮಧ್ಯವರ್ತಿಗಳಿಗೆ ಕಮಿಷನ್ ಹಣ ಕೇಳುತ್ತಿದ್ದಾರೆಂದು ಹೇಳಿದ್ದರು.
● ಬಿ.ಬಿ.ಎಂ.ಪಿ. ಗುತ್ತಿಗೆದಾರರು ತಮ್ಮ ಬಾಕಿ ಹಣ ನೀಡದ ಕಾರಣ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದ್ದರು, ತಮಗೆ ನೀಡಬೇಕಾದ ಬಾಕಿ ಹಣ ನೀಡದ ಕಾರಣ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದರು.
● ಬೆಂಗಳೂರಿನ ಸುತ್ತಮುತ್ತಲಿನ ಹಲವು ಬಡಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ನೂತನ ಸೈಟುಗಳಿಗೆ ಖಾತೆಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ.
● ಕಾಂಗ್ರೆಸ್ ಪಕ್ಷ ಎಂದರೆ ಅದು ಒಂದು ಕುಟುಂಬದ ಪಕ್ಷ, ಒಂದು ಸಮುದಾಯದ ತುಷ್ಟೀಕರಣದ ಪಕ್ಷ, ಭ್ರಷ್ಟರ ಪಕ್ಷ. ಕಮಿಷನ್ ಹೊಡೆಯುವ ಪಕ್ಷ, ಚುನಾವಣೆಗಳಲ್ಲಿ ಅಕ್ರಮ ಎಸಗುವ ಪಕ್ಷ.
● ಕಾಂಗ್ರೆಸ್ ಕೇವಲ ಮೋದಿಯವರನ್ನು ಸೋಲಿಸಲೆಂದೇ ಐಎನ್ಡಿಐಎ ಮೈತ್ರಿಕೂಟ ರಚನೆ ಮಾಡಿಕೊಂಡಿತು. ಆದರೆ ಚುನಾವಣೆಗೆ ಮೊದಲೇ ಈ ಮೈತ್ರಿಕೂಟ ಛಿದ್ರವಾಗಿದೆ.
● ಕಾಂಗ್ರೆಸ್ ಪಕ್ಷ ಒಕ್ಕೂಟ ವ್ಯವಸ್ಥೆಯನ್ನು ತಿರಸ್ಕರಿಸುತ್ತದೆ. ಭಾರತವನ್ನು ತುಕಡೇ ತುಕಡೇ ಮಾಡುವ ಆಶಯ ಹೊಂದಿದ ಪಕ್ಷ ಕಾಂಗ್ರೆಸ್. ಭಾರತವನ್ನು ದಕ್ಷಿಣ ಭಾರತ-ಉತ್ತರ ಭಾರತ ಎಂದು ಒಡೆಯುವ ಕುರಿತು ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದರು. ಆದರೆ ಅದನ್ನು ಖಂಡಿಸಿ ದೇಶ ಒಂದು ಎನ್ನುವ ಮಾತನ್ನು ಕಾಂಗ್ರೆಸ್ಸಿಗರು ಯಾರೂ ಆಡಲಿಲ್ಲ. ಕಾಂಗ್ರೆಸ್ಸಿಗೆ ದೇಶ ಒಂದಾಗುವುದು ಬೇಕಿಲ್ಲ, ಒಡೆಯುವುದಷ್ಟೇ ಬೇಕು. 
● ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಯಾವುದೇ ಜನಪರ ಚರ್ಚೆಗಳನ್ನು ಮಾಡದೇ ಸಮಯವನ್ನು ವ್ಯರ್ಥ ಮಾಡಿ ಕರ್ನಾಟಕದ ಜನತೆಯ ತೆರಿಗೆ ಹಣವನ್ನು ಪೊಲು ಮಾಡಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ವಕ್ತಾರರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ, ವಿಜಯಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a comment

Design a site like this with WordPress.com
Get started