ವಿವಿಧ ಅಭಿಯಾನಗಳ ಜೊತೆಗೆ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡಲು ಕುಯಿಲಾಡಿ ಕರೆಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆ



ಉಡುಪಿ: ರಾಜ್ಯ ಬಿಜೆಪಿ ಸೂಚನೆಯಂತೆ ಪ್ರಮುಖ 5 ಅಭಿಯಾನಗಳಾದ ಶಂಖನಾದ, ನನ್ನ ಮಣ್ಣು ನನ್ನ ದೇಶ, ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆ, ನೈಋತ್ಯ ಶಿಕ್ಷಕ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣಾ ಸಿದ್ಧತೆ ಹಾಗೂ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ ಇದರ ಯಶಸ್ವೀ ನಿರ್ವಹಣೆಯ ಜೊತೆಗೆ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಬರಲಿರುವ 2024ರ ಲೋಕಸಭಾ ಚುನಾವಣೆ ಹಾಗೂ ಸಾಮಾಜಿಕ ಜಾಲತಾಣದ ಸಾಮರ್ಥ್ಯ ಮತ್ತು ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಜಾಲತಾಣಗಳ ಜಿಲ್ಲಾ ಮಟ್ಟದ ಕಾರ್ಯಾಗಾರ ‘ಶಂಖನಾದ’ ಸೆ.14ರಂದು ಮಧ್ಯಾಹ್ನ 3.30ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ.

‘ನನ್ನ ಮಣ್ಣು ನನ್ನ ದೇಶ’ ಅಭಿಯಾನದಡಿ ಪ್ರತೀ ಗ್ರಾಮದಿಂದ ಮಣ್ಣನ್ನು ಸಂಗ್ರಹಿಸಿ, 75 ಸಸಿಗಳನ್ನು ನೆಡುವ ಮೂಲಕ ಅಮೃತ ಉದ್ಯಾನವನವನ್ನು ನಿರ್ಮಾಣ ಮಾಡುವ ಜೊತೆಗೆ ಐದು ಪ್ರತಿಜ್ಞೆಗಳ ಸಾಮೂಹಿಕ ಕಾರ್ಯಕ್ರಮವನ್ನು ಆಯೋಜಿಸುವುದು.

‘ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ’ ಸಭೆಯು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ರಾಜ್ಯ ತಂಡದ ಉಪಸ್ಥಿತಿಯಲ್ಲಿ ಸೆ.8ರಂದು ಬೆಳಿಗ್ಗೆ 10.00ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ. ಬಿಜೆಪಿ ಉಡುಪಿ ಜಿಲ್ಲಾ ನೂತನ ಕಛೇರಿಯ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಸ್ಥಿರಾಸ್ತಿಯನ್ನು ಖರೀದಿಸಲಾಗಿದ್ದು, ಸದ್ಯದಲ್ಲೇ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ.

ಜೂನ್ 2024ರಲ್ಲಿ ನಡೆಯುವ ‘ನೈಋತ್ಯ ಶಿಕ್ಷಕ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ’ಯ ಪೂರ್ವಸಿದ್ಧತೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವುದು.

ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ‘ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ’ಯನ್ನು ಸಮನ್ವಯಗೊಳಿಸಿ, ಫಲಾನುಭವಿಗಳನ್ನು ಗುರುತಿಸುವುದು.

ಈ ಎಲ್ಲಾ 5 ಅಭಿಯಾನಗಳ ಕಾರ್ಯ ಚಟುವಟಿಕೆಗಳ ಯಶಸ್ವೀ ಅನುಷ್ಠಾನಕ್ಕೆ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲರ ಸಂಘಟಿತ ಪ್ರಯತ್ನದ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕುಯಿಲಾಡಿ ತಿಳಿಸಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲಾ ಬಿಜೆಪಿ ಕೆಲವೇ ತಿಂಗಳುಗಳಲ್ಲಿ ಸುಸಜ್ಜಿತ ನೂತನ ಕಟ್ಟಡದಲ್ಲಿ ಕಾರ್ಯಾರಂಭಿಸಲಿದೆ. ಸೆ.8ರಂದು ಬಿಜೆಪಿ ರಾಜ್ಯ ತಂಡದ ಉಪಸ್ಥಿತಿಯಲ್ಲಿ ನಡೆಯುವ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆಯಲ್ಲಿ, ಜಿಲ್ಲಾ ನಿರ್ವಹಣಾ ಸಮಿತಿ ಹಾಗೂ ಸಿಬ್ಬಂದಿಗಳ ಸಭೆ, ಸ್ವಚ್ಛತೆ ಮತ್ತು ಕಾರ್ಯಾಲಯ ನಿವಾಸಿಗಳ ಸಭೆ ಹಾಗೂ ಕಾರ್ಯಾಲಯಕ್ಕೆ ನಿರಂತರ ಬೇಟಿ ನೀಡುವ ಸ್ಥಳೀಯ ಕಾರ್ಯಕರ್ತರ ಸಭೆಯನ್ನು ನಡೆಸುವ ಮೂಲಕ ಪ್ರತೀ ವಿಭಾಗದ ಅವಲೋಕನ ನಡೆಸಲಾಗುವುದು ಎಂದರು.

ಪಕ್ಷದ ಪ್ರಮುಖರು, ಎಲ್ಲ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತ ಬಂಧುಗಳು ಇನ್ನು ಕೆಲವೇ ತಿಂಗಳ ಅವಧಿಯಲ್ಲಿ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆ ಹಾಗೂ ಜಿ.ಪಂ., ತಾ.ಪಂ. ಚುನಾವಣೆಗೆ ಸರ್ವ ಸನ್ನಾದ್ದರಾಗುವ ಮೂಲಕ ಮಗದೊಮ್ಮೆ ಪಕ್ಷದ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ರೇಶ್ಮಾ ಉದಯ ಶೆಟ್ಟಿ, ಅನಿತಾ ಶ್ರೀಧರ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಪ್ರ.ಕಾರ್ಯದರ್ಶಿ ಧೀರಜ್ ಕೆ.ಎಸ್., ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಜಿಲ್ಲಾ ಒಬಿಸಿ ಮೋರ್ಚಾ ಪ್ರ.ಕಾರ್ಯದರ್ಶಿ ಅರುಣ್ ಕುಮಾರ್ ಬಾಣ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರ.ಕಾರ್ಯದರ್ಶಿ ಅಲ್ವಿನ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started