ಪಿಎಫ್ಐ ಸಹಿತ ಒಂಬತ್ತು ಜಿಹಾದಿ ಸಂಘಟನೆಗಳನ್ನು ನಿಷೇಧಿಸಿ ಮಟ್ಟ ಹಾಕಿದ ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್ ಅಭಿನಂದನೀಯ: ಕುಯಿಲಾಡಿ ಸುರೇಶ್ ನಾಯಕ್

News by: ಜನತಾಲೋಕವಾಣಿನ್ಯೂಸ್

ಉಡುಪಿ: ಭಯೋತ್ಪಾದನೆ, ಆಕ್ರಮ ಹಣ ವರ್ಗಾವಣೆ ಸಹಿತ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಒಂಬತ್ತು ಮತಾಂಧ ಜಿಹಾದಿ ಸಂಘಟನೆಗಳನ್ನು ಏಕಕಾಲಕ್ಕೆ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ 5 ವರ್ಷಗಳ ಅವಧಿಗೆ ನಿಷೇಧಿಸಿ ಮಟ್ಟ ಹಾಕಿದ ಪ್ರಧಾನಿ ನರೇಂದ್ರ ಮೋದಿ ‌ನೇತೃತ್ವದ ಕೇಂದ್ರ ಸರಕಾರದ ದಿಟ್ಟ ಕ್ರಮ ಅಭಿನಂದನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಸಿಮಿ‌ ಭಯೋತ್ಪಾದಕ ಜಿಹಾದಿ ಸಂಘಟನೆಯನ್ನು ಬ್ಯಾನ್ ಮಾಡಿದ 20 ವರ್ಷಗಳ ಬಳಿಕ ಇದೀಗ ಸೆ.27ರಂದು ಅತ್ಯಂತ ಚಾಣಾಕ್ಷ ನಡೆಯೊಂದಿಗೆ ಮೋದಿ ನೇತೃತ್ವದ ಕೇಂದ್ರ ಸರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ ಜಿಹಾದಿ ಅಂಗ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ನ್ಯಾಷನಲ್ ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರೆಹಬ್ ಫೌಂಡೇಶನ್ ಕೇರಳ ಮುಂತಾದ ದೇಶದ್ರೋಹಿ ಸಂಘಟನೆಗಳನ್ನು 5 ವರ್ಷಗಳಿಗೆ ಬ್ಯಾನ್ ಮಾಡಿರುವ ಕ್ರಮ ದೇಶದ ಅಂತರಿಕ ಸುರಕ್ಷತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಸಕಾಲಿಕ ಮತ್ತು ಅತ್ಯಂತ ಮಹತ್ವಪೂರ್ಣವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಸ್ವಂತ ರಾಜಕೀಯ ದುರ್ಲಾಭಕ್ಕಾಗಿ ಪಿಎಫ್ಐ, ಎಸ್ಡಿಪಿಐ ನಂತಹ ಜಿಹಾದಿ ದೇಶ ದ್ರೋಹಿ ಸಂಘಟನೆಗಳ ಕಾರ್ಯಕರ್ಯರ ನೂರಾರು ಕೇಸ್ ಗಳನ್ನು ವಾಪಾಸು ಪಡೆದು ಸಾವಿರಾರು ಜಿಹಾದಿ ಮಾನಸಿಕತೆಯ ಕಾರ್ಯಕರ್ತರಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಸಿದ್ದು, ಇದೀಗ‌ ಪಿಎಫ್ಐ ಸಹಿತ ಒಂಬತ್ತು ದೇಶದ್ರೋಹಿ ಜಿಹಾದಿ ಉಗ್ರ ಸಂಘಟನೆಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿದ ಐತಿಹಾಸಿಕ ಕ್ರಮ ಸಿದ್ಧರಾಮಯ್ಯಗೆ ನುಂಗಲಾರದ ತುತ್ತೆನಿಸಿದೆ. ಸದಾ ಜಿಹಾದಿ ಮಾನಸಿಕತೆಯ ಮತಾಂಧರಿಗೆ ನೈತಿಕ ಬೆಂಬಲವನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್‌ ಈ ಬೆಳವಣಿಗೆಯಿಂದ ಕಂಗೆಟ್ಟಿರುವುದಂತೂ ಸತ್ಯ.

ನಿಷೇಧಿತ ದೇಶದ್ರೋಹಿ ಜಿಹಾದಿ ಸಂಘಟನೆ ಸಿಮಿ ಕಾರ್ಯಕರ್ತರಿಂದಲೇ ಆರಂಭಗೊಂಡಿರುವ ಪಿಎಫ್ಐ ಜಿಹಾದಿ ಉಗ್ರ ಸಂಘಟನೆಗೆ ವಿದೇಶಗಳಿಂದ ಕೋಟಿ ಕೋಟಿ ಹಣ ವರ್ಗಾವಣೆ, ಕರ್ನಾಟಕದ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ನೇರ ಪಾತ್ರ, ದೇಶದಾದ್ಯಂತ ಹಿಂದೂ ನಾಯಕರ ಹತ್ಯೆಗೆ ಸ್ಕೆಚ್, ಲವ್ ಜಿಹಾದ್,‌ ದೇಶದ ಹಲವೆಡೆ ಉಗ್ರ ತರಬೇತಿ ಕೇಂದ್ರ, 2047ಕ್ಕೆ ಮುಸ್ಲಿಂ ರಾಷ್ಟ್ರದ ಕನಸು, ದೇಶದಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ಮುಂತಾದ ದುಷ್ಕೃತ್ಯದ ಬಗ್ಗೆ ಸಮಗ್ರ ಸಾಕ್ಷ್ಯಾಧಾರವನ್ನು ಕ್ರೋಡೀಕರಿಸಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೋಡಿ ಸದ್ದಿಲ್ಲದೆ ಜಿಹಾದಿ ಉಗ್ರ ಸಂಘಟನೆ ಪಿಎಫ್ಐ ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದೆ.

ಮಾಜಿ ಸಿ.ಎಂ. ಸಿದ್ದರಾಮಯ್ಯ ಸಹಿತ‌ ಅನೇಕ ಕಾಂಗ್ರೆಸ್ ನಾಯಕರು ಉಡುಪಿಯಲ್ಲಿ ವಿಲಕ್ಷಣಕಾರಿಯಾಗಿ ನಡೆದಿದ್ದ ಹಿಜಾಬ್ ವಿವಾದವನ್ನು ಕೂಡಾ ಸಮರ್ಥಿಸಿಕೊಂಡಿದ್ದು, ಇದೀಗ ಈ ಪ್ರಕರಣದ ಹಿಂದೆಯೂ ಇಂತಹ ಜಿಹಾದಿ ಉಗ್ರ ಸಂಘಟನೆಗಳ ಬಹಳ ದೊಡ್ಡ ಪಾತ್ರವಿದೆ ಎಂಬ ಗುಮಾನಿ ಜಗಜ್ಜಾಹೀರಾಗಿದೆ. ಜೊತೆಗೆ ಕಾಂಗ್ರೆಸ್ ನ ಒಂದೇ ವರ್ಗದ ಅತಿಯಾದ ಓಲೈಕೆ ತಂತ್ರದ ಮುಖವಾಡವೂ ಕಳಚಿ ಬಿದ್ದಿದೆ.

ದೇಶದ ಏಕತೆ, ಸಮಗ್ರತೆ ಮತ್ತು ಅಖಂಡತೆಗೆ ಧಕ್ಕೆ ತರುವಂತಹ ಯಾವುದೇ ದೇಶ ವಿರೋಧಿ ಚಟುವಟಿಕೆಗಳಿಗೆ ಇನ್ನು ಎಳ್ಳಷ್ಟೂ ಅಸ್ಪದವಿಲ್ಲ ಎಂಬ ಸ್ಪಷ್ಟ ಸಂದೇಶವು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ರವರ ದಿಟ್ಟ ನಡೆಯಿಂದ ಸಾಬೀತಾಗಿದೆ. ಇದನ್ನೂ ಮೀರಿ ಯಾವುದೇ ಮತಾಂಧ ದೇಶದ್ರೋಹಿ ಸಂಘಟನೆಗಳು ಬಾಲ ಬಿಚ್ಚಲು ಪ್ರಯತ್ನಿಸಿದಲ್ಲಿ ಅಂತಹ ಜಿಹಾದಿ ಮಾನಸಿಕತೆಯ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸರ್ವಶಕ್ತವಾಗಿದ್ದು, ಇದರ ಪರಿಣಾಮವಾಗಿ ಅಂತಹ ಜಿಹಾದಿ ಸಂಘಟನೆಗಳು ಇದೇ ಮಾದರಿಯಲ್ಲಿ ಒಂಬತ್ತರ ನಂತರದ ಸ್ಥಾನವನ್ನು ಪಡೆಯುವುದರಲ್ಲಿ‌ ಯಾವುದೇ ಸಂದೇಹವಿಲ್ಲ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started