ಕಾಮಿಡಿ ಕಿಂಗ್ ‘ರಾಗಾ’ ಮೀರಿಸಲು ಅಸಂಬದ್ಧ ಡಯಲಾಗ್ ಹೊಡೆದು ನಗೆ ಪಾಟಲಿಗೀಡಾದ ಮಿಥುನ್ ರೈ : ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ರೋಷನ್ ಶೆಟ್ಟಿ ವ್ಯಂಗ್ಯ

News by: ಜನತಾಲೋಕನ್ಯೂಸ್

ಉಡುಪಿ: ತನ್ನ ಸ್ವಕ್ಷೇತ್ರದಲ್ಲಿ ಹೀನಾಯವಾಗಿ ಸೋತು ‌ಮೂಲೆಗುಂಪಾಗಿರುವ ಮಿಥುನ್ ರೈ‌ ನಾಯಕತ್ವವಿಲ್ಲದೆ ಕಂಗೆಟ್ಟಿರುವ ಉಡುಪಿ ಕಾಂಗ್ರೆಸ್ ನಿಂದ ನಡೆದ ನಾಮ್ ಕಾ ವಾಸ್ತೇ ಪ್ರತಿಭಟನೆಯಲ್ಲಿ‌ ರಾಜಕೀಯ ಕ್ಷೇತ್ರದ ಖ್ಯಾತ ಕಾಮಿಡಿ ಕಿಂಗ್ ಎನಿಸಿಕೊಂಡಿರುವ ರಾಹುಲ್ ಗಾಂಧಿಯವರನ್ನು ಮೀರಿಸುವ ಇರಾದೆಯಿಂದ ಅಸಂಬದ್ಧ ಡಯಲಾಗ್ ಹೊಡೆದು ನಗೆಪಾಟಲಿಗೀಡಾಗಿದ್ದಾರೆ ಎಂದು ಬಿಜೆಪಿ ಉಡುಪಿ ನಗರ ಯುವ‌ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ ವ್ಯಂಗ್ಯವಾಡಿದ್ದಾರೆ.

ದೇಶದೆಲ್ಲೆಡೆ ಅಸ್ತಿತ್ವ ಕಳೆದುಕೊಂಡಿರುವ ಭ್ರಷ್ಟ ಕಾಂಗ್ರೆಸ್ ಉಡುಪಿ ಜಿಲ್ಲೆಯಲ್ಲಿ ಯಾವುದೇ ಸಮರ್ಥ ನಾಯಕರಿಲ್ಲದೆ ಸೊರಗಿದೆ. ಅದಕ್ಕಾಗಿ ಬೇರೆ ಜಿಲ್ಲೆಗಳಿಂದ ತಿರಸ್ಕೃತವಾಗಿರುವ ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದು ಪ್ರತಿಭಟನೆ, ಕಾಮಿಡಿ ಭಾಷಣ ಮಾಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.

ವಿಶ್ವ ನಾಯಕ, ಧೀಮಂತ ವ್ಯಕ್ತಿತ್ವದ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಚಿವೆ ಶೋಭಾ ಕರಂದ್ಲಾಜೆ ಯವರ ಬಗ್ಗೆ ಸೊಲ್ಲೆತ್ತಲು ಮಿಥುನ್ ರೈ ಯವರಂತಹ ಅಪಕ್ವ ರಾಜಕಾರಿಣಿಗೆ ಯಾವ ನೈತಿಕತೆಯೂ ಇಲ್ಲ. ಸಂಸದೆ ಶೋಭಾ ಕರಂದ್ಲಾಜೆಯವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ಕ್ಷೇತ್ರದ ಜನತೆಗೆ ಲಭ್ಯವಿರುತ್ತಾರೆ. ಉಡುಪಿ ಕ್ಷೇತ್ರದ ಬಗ್ಗೆ ಏನೇನೂ ತಿಳಿಯದೆ ಗಾಢ ನಿದ್ದೆಯಿಂದ ಎಚ್ಚೆತ್ತು ಬಂದಂತೆ ವರ್ತಿಸಿರುವ ಮಿಥುನ್‌ ರೈ ಯವರಿಗೆ ಇದೆಲ್ಲ ಹೇಗೆ ತಾನೆ ತಿಳಿಯಬೇಕು.

ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಎ ಇದರ ಹೆಬ್ರಿಯಿಂದ ಮಲ್ಪೆವರೆಗಿನ ರಸ್ತೆ ಅಭಿವೃದ್ಧಿಗೆ ಈಗಾಗಲೇ ರೂ.320.00 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದು ನ್ಯಾಷನಲ್ ತೀರ್ಥಹಳ್ಳಿ ಜೆವಿ ಇವರಿಗೆ ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶ ನೀಡಲಾಗಿದ್ದು, ಇದರಲ್ಲಿ ಕರಾವಳಿ ಜಂಕ್ಷನ್ ನಿಂದ ಮಲ್ಪೆಯ ವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಭೂಸ್ವಾಧೀನ ಸೇರಿದಂತೆ ರಸ್ತೆ ಅಭಿವೃದ್ಧಿಗೆ ರೂ.80.00 ಕೋಟಿ ಮಂಜೂರಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ಪ್ರಸಕ್ತ‌ ಸುಗಮ ಸಂಚಾರಕ್ಕಾಗಿ ಸದ್ರಿ ರಸ್ತೆಯ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ಪರಿಹಾರ ಕಾಮಗಾರಿಯನ್ನು ಸದರಿ ಸಂಸ್ಥೆಯೇ ನಡೆಸುತ್ತದೆ ಎಂದು ಈಗಾಗಲೇ ಉಡುಪಿಯ ಜನಪ್ರಿಯ ಶಾಸಕ ಕೆ.ರಘುಪತಿ ಭಟ್ ರವರು ಈ ಹಿಂದೆಯೇ ಮಾಹಿತಿ ನೀಡಿದ್ದರು.

ಕೇವಲ ಚಪ್ಪಾಳೆ ಗಿಟ್ಟಿಸುವ ಗೀಳಿನಲ್ಲಿ ಕ್ಷುಲ್ಲಕ ಹೇಳಿಕೆಗಳನ್ನು ನೀಡಿ ಬಿಟ್ಟಿ ಪ್ರಚಾರ ಪಡೆಯುವ ಚಾಳಿ ಹೊಂದಿರುವ ಮಿಥುನ್ ರೈ ಯವರ ವ್ಯಕ್ತಿತ್ವ ಏನು ಎಂಬುದು ಎಲ್ಲರಿಗೂ ತಿಳಿದ ವಿಚಾರ.‌ ಪಕ್ಷದ ಯಾವುದೇ ಮುಖಂಡರ ಬಗ್ಗೆ ಇಂತಹ ಅಸಂಬದ್ಧ ಹೇಳಿಕೆಗಳು ಅಥವಾ ಕಾಮಿಡಿ ಪ್ರಹಸನ ಮುಂದುವರಿದಲ್ಲಿ ಅದನ್ನು ಸಮರ್ಪಕವಾಗಿ ಎದುರಿಸಲು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಮರ್ಥರಿದ್ದಾರೆ ಎಂದು ರೋಷನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started