
ಉಡುಪಿ: ಅಸಂಖ್ಯಾತ ಭಾರತೀಯರ ಹೋರಾಟ ಹಾಗೂ ಬಲಿದಾನದ ಫಲವಾಗಿ ದೊರೆತ ಸ್ಥಾತಂತ್ರ ವನ್ನು ಸರ್ವಾಧಿಕಾರಿ ಧೋರಣೆಯಿಂದ ಹತ್ತಿಕ್ಕಿ ಕೇವಲ ತನ್ನ ಅಧಿಕಾರ ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಕಾಂಗ್ರೆಸ್ಸಿನ ಇಂದಿರಾ ಗಾಂಧಿಯವರು ದೇಶದ ಮೇಲೆ ಹೇರಿದ ಕರಾಳ ತುರ್ತುಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳುವ ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋರವರಿಗೆ ನಾಚಿಕೆಯಾಗಬೇಕು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿಯವರಿಗೆ ಇಂದಿರಾ ಗಾಂಧಿಯವರ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದಿರುವ ವೆರೋನಿಕಾ ಕರ್ನೆಲಿಯೋರವರು ದೇಶದಲ್ಲಿ ಅರಾಜಕತೆ, ದೊಂಬಿ, ಯುದ್ಧ, ಪ್ರವಾಹ ಅಥವಾ ಬರ ಪರಿಸ್ಥಿತಿ ಇಲ್ಲದೇ ಇದ್ದ ಕಾಲದಲ್ಲಿ ಇಂದಿರಾ ಗಾಂಧಿಯವರು ಯಾವ ಕಾರಣಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿಕೆ ಮಾಡಿದ್ದಾರೆ ಎಂದು ಮೊದಲು ಸ್ಪಷ್ಟಪಡಿಸಲಿ. ಸದಾ ನಕಲಿ ಗಾಂಧಿ ಕುಟುಂಬಕ್ಕೆ ಬಹುಪರಾಕ್ ಹೇಳುವ ವೆರೋನಿಕಾ ಸಹಿತ ಕಾಂಗ್ರೆಸ್ ನಾಯಕರಿಗೆ ಆರ್ಎಸ್ಎಸ್ ಹಾಗೂ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಹೆಸರೆತ್ತುವ ಯೋಗ್ಯತೆ ಇಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
1971ರ ಲೋಕಸಭೆಯ ಮಧ್ಯಂತರ ಚುನಾವಣಿಯಲ್ಲಿ ನಡೆಸಿದ ಆಕ್ರಮಗಳ ಕಾರಣಕ್ಕೆ 1975ರಲ್ಲಿ ತನ್ನ ಲೋಕಸಭಾ ಸದಸ್ಯತ್ವದ ಆಯ್ಕೆಯನ್ನು ರದ್ದುಗೊಳಸಿ 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನ್ಯಾಯಾಲಯ ನೀಡಿದ ತೀರ್ಪನ್ನೇ ತಿರಸ್ಕರಿಸಿದ ಇಂದಿರಾ ಗಾಂಧಿಯವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜೂನ್ 25, 1975ರಂದು ತುರ್ತು ಪರಿಸ್ಥಿತಿಯನ್ನು ಘೋಷಿಸಿ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳಿರುವುದು ಹಾಗೂ ಪತ್ರಿಕಾ ಸ್ವಾತಂತ್ರ್ಯದ ಹರಣದ ಜೊತೆಗೆ ಮಾನವ ಹಕ್ಕುಗಳನ್ನು ಮೊಟಕುಗೊಳಿಸಿರುವುದು ದೇಶದ ಕರಾಳ ಇತಿಹಾಸವಾಗಿದ್ದರೂ ಕರ್ನೆಲಿಯೋರವರು ಮಾತ್ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಧಮನಕಾರಿ ಕೆಟ್ಟ ಸಂಗತಿಗಳನ್ನು ಅಧಿಕಾರಿಗಳ ತಲೆಗೆ ಕಟ್ಟಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಹಾಗೂ ಅವರ ರಾಜಕೀಯ ಅನುಭವದ ಅಪಕ್ವತೆಯನ್ನು ಬಿಂಬಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ನಂತರ ಬ್ರಹ್ಮಾಂಡ ಭ್ರಷ್ಟಾಚಾರದೊಂದಿಗೆ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿರುವ ಕಾಂಗ್ರೆಸ್ ಒಂದೇ ಕುಟುಂಬದ ಹಿತ ಕಾಯಲು ಪಣತೊಟ್ಟು ದೇಶದ ಹಿತ ಮರೆತಿರುವುದು ಗತ ಇತಿಹಾಸ. ಇದರ ಫಲವಾಗಿ ಇಂದು ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಎರಡು ಸಾವಿರ ಕೋಟಿ ರೂಪಾಯಿಗೂ ಮಿಕ್ಕಿದ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸಿಲುಕಿ ಇ.ಡಿ. ವಿಚಾರಣೆಯನ್ನು ಎದುರಿಸುತ್ತಿರುವುದು ವಾಸ್ತವ. ದೇಶದೆಲ್ಲೆಡೆ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡು ತೀವ್ರ ಅಧ:ಪತನದತ್ತ ಸಾಗುತ್ತಿದ್ದರೂ, ದೇಶಭಕ್ತ ಸಂಘಟನೆ ಆರ್.ಎಸ್.ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸುವುದು ಹಾಗೂ ಕಾಂಗ್ರೆಸ್ಸಿನ ನಾಯಕರು ಜೈಲಿನಿಂದ ಬಿಡುಗಡೆಯಾದಾಗ ಹಾರ ತುರಾಯಿಯೊಂದಿಗೆ ವಿಜೃಂಭಿಸುವುದು; ಇ.ಡಿ. ವಿಚಾರಣೆಗೆ ಹೋಗುವಾಗ ಮೆರವಣಿಗೆ, ಪ್ರತಿಭಟನೆಯ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಕಾಂಗ್ರೆಸ್ನ ದಯನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.
ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸಿನ ದುರಾಡಳಿತ ದೇಶದ ಅಭಿವೃದ್ಧಿ ಮತ್ತು ಏಳಿಗೆಗೆ ಸ್ಪೀಡ್ ಬ್ರೇಕರ್ನಂತಾಗಿದೆ. ಹಿಂಬಾಗಿಲಿನಿಂದ ಅಧಿಕಾರ ಪಡೆದ ಜವಾಹರಲಾಲ್ ನೆಹರೂರವರಿಂದ ಪ್ರಾರಂಭಿಸಿ ರಿಮೋಟ್ ಕಂಟ್ರೋಲ್ ಪ್ರಧಾನಿಯೆಂದೇ ಬಿಂಬಿತರಾದ ಮನಮೋಹನ್ ಸಿಂಗ್ರವರ ವರೆಗೆ ದೇಶವನ್ನಾಳಿದ ಕಾಂಗ್ರೆಸ್ ದೇಶದ ಭದ್ರತೆ, ಗಡಿಗಳ ರಕ್ಷಣೆ, ಆರೋಗ್ಯ, ಮೂಲ ಸೌಕರ್ಯಗಳನ್ನು ಕಡೆಗಣಿಸಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಫಲವಾಗಿ ದೇಶದೆಲ್ಲೆಡೆ ತಿರಸ್ಕೃತಗೊಂಡು ಅವನತಿಯ ಅಂಚಿನಲ್ಲಿದೆ. ಇಂದು ಉತ್ತಮ ಆಡಳತ, ಸೇವೆ ಮತ್ತು ಬಡವರ ಕಲ್ಯಾಣಕ್ಕೆ ಒತ್ತು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಜನಪರ ಮತ್ತು ಅಭಿವೃದ್ಧಿ ಪರ ಆಡಳಿತದ ಹೊಸ ಶಕೆಗೆ ನಾಂದಿ ಹಾಡಿ ಜನಬೆಂಬಲ ಗಳಿಸುತ್ತಿದೆ ಎಂದು ಗುರುಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.