
ಉಡುಪಿ: ಅಂತಾರಾಷ್ಟ್ರೀಯ ಮತಾಂಧ ಶಕ್ತಿಗಳ ದೇಶ ವಿರೋಧಿ ಸಂಚಿನ ಭಾಗವಾಗಿ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲವೇ ಮುಸ್ಲಿಂ ವಿದ್ಯಾರ್ಥಿನಿಯರು ಸೃಷ್ಟಿಸಿರುವ ಹಿಜಾಬ್ ವಿವಾಧ ಇಂದು ರಾಜ್ಯಾದ್ಯಂತ ಉಗ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದೀಗ ಹಿಜಾಬ್ ಪ್ರಕರಣದಲ್ಲಿ ತಾಲಿಬಾನ್ ನಂಟು ಬೆಸೆದಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಬೇಡಿಕೆಯೊಂದಿಗೆ ವಿವಾಧವನ್ನು ಹುಟ್ಟುಹಾಕಲು ಮೂಲ ಕಾರಣರಾಗಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಮತ್ತು ಅವರಿಗೆ ಕುಮ್ಮಕ್ಕು ನೀಡಿರುವ ದೇಶ ವಿರೋಧಿ ಸಂಘಟನೆಯಾದ ಸಿಎಫ್ಐ ಪದಾಧಿಕಾರಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳದ (ಐಎನ್ಎ) ಮೂಲಕ ತುರ್ತು ತನಿಖೆಯನ್ನು ನಡೆಸಬೇಕು ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಮಧ್ಯೆ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಕರ್ನಾಟಕ ಉಚ್ಛ ನ್ಯಾಯಾಲಯವು ವಿಚಾರಣೆ ಪೂರ್ಣಗೊಳ್ಳುವವರೆಗೆ ಸಮವಸ್ತ್ರ ನಿಗದಿಪಡಿಸಿರುವ ಶಿಕ್ಷಣ ಸಂಸ್ಥೆಗಳ ವಿಧ್ಯಾರ್ಥಿಗಳು ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಪ್ರವೇಶಿಸುವಂತಿಲ್ಲ ಎಂದಿರುವ ಮಧ್ಯಾಂತರ ಆದೇಶವನ್ನು ಎಲ್ಲ ವಿದ್ಯಾರ್ಥಿಗಳೂ ಗೌರವಿಸಿ ಅದರಂತೆ ನಡೆದುಕೊಳ್ಳಬೇಕಾಗಿದೆ.
ಹಿಜಾಬ್ ವಿವಾಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆದ ವಿವಿಧ ಘಟನೆಗಳಲ್ಲಿ ಮಂಡ್ಯದ ಮತಾಂಧ ಮುಸ್ಲಿಂ ವಿದ್ಯಾರ್ಥಿನಿಯೋರ್ವಳ ಅನಪೇಕ್ಷಿತ ವರ್ತನೆಗೆ ದೇಶದೊಳಗಿನ ದೇಶ ವಿರೋಧಿ ಶಕ್ತಿಗಳು ಮತ್ತು ವಿಧ್ವಂಸಕ ಕೃತ್ಯಕ್ಕೆ ಹೆಸರುವಾಸಿಯಾಗಿರುವ ವಿಚಿದ್ರಕಾರಿ ಮತಾಂಧ ಸಂಘಟನೆ ತಾಲಿಬಾನ್ ಕೂಡಾ ಪ್ರೋತ್ಸಾಹ ನೀಡಿ ಟ್ವೀಟ್ ಮೂಲಕ ಬೆಂಬಲವನ್ನು ಘೋಷಿಸಿರುವುದು ಈ ಹಿಜಾಬ್ ವಿವಾಧ ಸೃಷ್ಠಿಸಿದ ಇಡೀ ಮತಾಂಧ ಗುಂಪಿನ ಮುಖವಾಡವನ್ನು ಬಯಲು ಮಾಡಿದೆ.
ಈ ಎಲ್ಲ ಸಂಗತಿಗಳ ಮೂಲಕ ಉಡುಪಿಯಲ್ಲಿ ಹೊತ್ತಿಕೊಂಡು ರಾಜ್ಯವ್ಯಾಪಿ ಹಬ್ಬಿರುವ ಹಿಜಾಬ್ ವಿವಾಧದ ಕಿಡಿಯ ಹಿಂದೆ ಸಿಎಫ್ಐ ನಂತಹ ದೇಶ ವಿರೋಧಿ ಮತಾಂಧ ಸಂಘಟನೆಗಳ ಮತ್ತು ಅಂತಾರಾಷ್ಟ್ರೀಯ ಮೂಲಭೂತವಾದಿ ದುಷ್ಟ ಶಕ್ತಿಗಳ ಸಂಚಿರುವುದು ಜಗಜ್ಜಾಹೀರಾಗಿದೆ. ಇಂತಹ ದ್ವೇಷ ಹರಡುವ, ವಿಧ್ವಂಸಕ ದುಷ್ಟ ಶಕ್ತಿಗಳ ದೇಶ ವಿರೋಧಿ ಕುಕೃತ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ ಮತ್ತು ರಾಜ್ಯ ಗೃಹ ಇಲಾಖೆ ತಕ್ಷಣ ಜಾಗೃತವಾಗಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿ ಹಿಜಾಬ್ ವಿವಾಧದ ಸಂಚನ್ನು ಬಯಲುಗೊಳಿಸುವ ಮೂಲಕ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರನ್ನು ಕಾನೂನಾತ್ಮಕ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.