
ಸಂಘಟನೆ ಮುಖಾಂತರ ಜಾಗ್ರತ ಸಮಾಜ – ಶ್ರೀಕಾಂತ ನಾಯಕ್
ಪೆರ್ಣಂಕಿಲದಲ್ಲಿ ನೂತನವಾಗಿ ಜನಜಾಗ್ರತಿ ಸಮಿತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹಾಗೂ ಕೊಡಿಬೆಟ್ಟು ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪ್ರಭು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಶ್ರೀಕಾಂತ ನಾಯಕ್, ಗ್ರಾಮೀಣ ಪ್ರದೇಶಗಳಲ್ಲಿ ಜಾಗ್ರತ ಸಮಾಜ ನಿರ್ಮಾಣಕ್ಕೆ ಇಂತಹ ಸಂಸ್ಥೆಗಳ ಅಗತ್ಯವಿದೆ, ಸಮಾಜದ ಎಲ್ಲ ಆಗು ಹೋಗುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಲ್ಲಿ ಊರಿನ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದರು. ಪ್ರಸ್ತಾವನೆ ಮಾಡಿದ ಸದಾನಂದ ಪ್ರಭು ಸಮಿತಿಯ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯರಾದ ರಾಮ ನಾಯ್ಕ್, ಆತ್ರಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಗುರುನಂದನ್ ನಾಯಕ್, ಸ್ಥಳೀಯ ಪ್ರಮುಖರಾದ ಸತೀಶ್ ಗೌಡ, ರಾಜೇಂದ್ರ ಪ್ರಭು, ಬೋವಿ ಸಮಾಜದ ತಾಲೂಕು ಅಧ್ಯಕ್ಷರಾದ ಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.