ಆಗಸ್ಟ್ 18-19: ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಗೆ ಹೆಬ್ರಿಯಲ್ಲಿ ಸ್ವಾಗತ, ಉಡುಪಿ ಪುರಭವನದಲ್ಲಿ ಸಮಾಗಮ – ಜಿಲ್ಲಾ ಬಿಜೆಪಿ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಶಯದಂತೆ ನೂತನ ಕೇಂದ್ರ ಸಚಿವರನ್ನು ಪರಿಚಯಿಸುವ ಮತ್ತು ಸರಕಾರದ ವಿವಿಧ ಜನಪರ ಯೋಜನೆಗಳನ್ನು ಪ್ರಚಲಿತಗೊಳಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಜನಾಶೀರ್ವಾದ ಯಾತ್ರೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ದೇಶದಲ್ಲಿ ಒಟ್ಟು 160 ದಿನ ವಿವಿಧ ತಂಡಗಳು ಪ್ರವಾಸ ಮಾಡಲಿವೆ. ರಾಜ್ಯದಲ್ಲಿ 5 ದಿನಗಳ ಪ್ರವಾಸದಲ್ಲಿ 2,030 ಕಿಮೀ ದೂರವನ್ನು ಕ್ರಮಿಸಲಿವೆ. 24 ಲೋಕಸಭಾ ಕ್ಷೇತ್ರಗಳು, 72 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 25 ಕಂದಾಯ ಜಿಲ್ಲೆಗಳಲ್ಲಿ 161 ಕಾರ್ಯಕ್ರಮಗಳು ನಡೆಯಲಿವೆ.

ಕೇಂದ್ರ ಸರಕಾರವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳು, ರೈತರ ಆದಾಯ ದ್ವಿಗುಣ, ದೀನದಲಿತರು, ಬಡವರ ಅಭ್ಯುದಯಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಪರಿಚಯಿಸಲಾಗುವುದು. ದೇಶದಲ್ಲಿ 55 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ. ದೀಪಾವಳಿ ವರೆಗೆ ಬಡವರಿಗೆ ಉಚಿತ ಪಡಿತರ ನೀಡುತ್ತಿದ್ದು, ಲಸಿಕಾ ಕೇಂದ್ರ, ರೇಶನ್ ಅಂಗಡಿಗಳಿಗೆ ಈ ಯಾತ್ರೆ ಭೇಟಿ ನೀಡಲಿದೆ. ರಸಗೊಬ್ಬರದ ಅಂಗಡಿಗೆ ಭೇಟಿ ನೀಡಿ ಗೊಬ್ಬರ ಸರಿಯಾಗಿ ಸಿಗುತ್ತಿದೆಯೇ ಎಂದು ಮಾಹಿತಿ ಪಡೆಯಲಾಗುವುದು. ಸಾಹಿತಿಗಳು, ಗಡಿ ಕಾಯುವ ಯೋಧರ ಮನೆ, ಗಣ್ಯ ವ್ಯಕ್ತಿಗಳ ಮನೆ, ಜನಸಂಘ ಮತ್ತು ಬಿಜೆಪಿಯ ಹಿರಿಯ ನಾಯಕರ ಮನೆಗಳಿಗೆ ಭೇಟಿ ಕೊಟ್ಟು ಅವರ ಆಶೀರ್ವಾದ ಪಡೆಯಲಾಗುವುದು.

ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯದಾದ್ಯಂತ 4 ನೂತನ ಕೇಂದ್ರ ಸಚಿವರ ನೇತೃತ್ವದಲ್ಲಿ ಆಗಸ್ಟ್ 16ರಿಂದ ಜನಾಶೀರ್ವಾದ ಯಾತ್ರೆ ನಡೆಯಲಿದೆ.

ಉಡುಪಿ ಜಿಲ್ಲೆಗೆ ಅಗಸ್ಟ್ 18ರಂದು ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಆಗಮಿಸುವ ಜನಾಶೀರ್ವಾದ ಯಾತ್ರೆಯನ್ನು ಜಿಲ್ಲಾ ಬಿಜೆಪಿ ವತಿಯಿಂದ ಹೆಬ್ರಿಯಲ್ಲಿ ಸ್ವಾಗತಿಸಲಾಗುವುದು. ಆಗಸ್ಟ್ 19ರಂದು ಬೆಳಿಗ್ಗೆ 11.00 ಗಂಟೆಗೆ ಉಡುಪಿ ಪುರಭವನದಲ್ಲಿ ಜನಾಶೀರ್ವಾದ ಯಾತ್ರೆ ಸಮಾವೇಶ ಹಾಗೂ ನೂತನ ಕೇಂದ್ರ ಸಚಿವರಿಗೆ ಅಭಿನಂದನಾ ಸಮಾರಂಭ ಸಂಪನ್ನಗೊಳ್ಳಲಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನಾಶೀರ್ವಾದ ಯಾತ್ರೆಯ ಅಂಗವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಆಗಸ್ಟ್ 18 ಮತ್ತು 19ರಂದು ನಡೆಯಲಿರುವ ವಿವಿಧ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.

ಆಗಸ್ಟ್ 18, ಬುಧವಾರ ಸಂಜೆ 5.30ಕ್ಕೆ: ಹೆಬ್ರಿಯಲ್ಲಿ ಸ್ವಾಗತ, 6.00ಕ್ಕೆ: ಪೆರ್ಡೂರಿನಲ್ಲಿ, 6.15ಕ್ಕೆ: ಹಿರಿಯಡ್ಕದಲ್ಲಿ ಸ್ವಾಗತ, ಸಂಜೆ 7.00ಕ್ಕೆ: ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ. ಸಂಜೆ 7.30ಕ್ಕೆ: ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆ, ರಾತ್ರಿ 8.30ಕ್ಕೆ: ಭೋಜನ – ಉಡುಪಿಯಲ್ಲಿ ವಾಸ್ತವ್ಯ.

ಆಗಸ್ಟ್ 19, ಗುರುವಾರ ಬೆಳಿಗ್ಗೆ 8.00ಕ್ಕೆ: ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ, 8.30ಕ್ಕೆ: ಸ್ವಾಮೀಜಿಯವರ ದರ್ಶನ, 9.00ಕ್ಕೆ: ಉಪಹಾರ, 10.00ಕ್ಕೆ: ಉಡುಪಿ ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕದಲ್ಲಿ ಪುಷ್ಪಾರ್ಚನೆ, 10.30ಕ್ಕೆ: ಪತ್ರಿಕಾ ಗೋಷ್ಠಿ (ಉಡುಪಿಯ ಹೋಟೆಲ್ ಡಯಾನಾದಲ್ಲಿ), ಬೆಳಿಗ್ಗೆ 11.00ಕ್ಕೆ: ಉಡುಪಿ ಪುರಭವನದಲ್ಲಿ ‘ಜನಾಶೀರ್ವಾದ ಯಾತ್ರೆ ಸಮಾವೇಶ’ ಮತ್ತು ‘ನೂತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಅಭಿನಂದನಾ ಸಮಾರಂಭ’, ಮಧ್ಯಾಹ್ನ 12.30ಕ್ಕೆ: ಕೋವಿಡ್ ಲಸಿಕಾ ಕೇಂದ್ರಕ್ಕೆ ಬೇಟಿ, 1.00ಕ್ಕೆ: ಪಡಿತರ ವಿತರಣಾ ಕೇಂದ್ರಕ್ಕೆ ಬೇಟಿ, 1.30ಕ್ಕೆ: ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ (ಬಿಜೆಪಿ ಜಿಲ್ಲಾ ಕಛೇರಿಯಲ್ಲಿ), ಮಧ್ಯಾಹ್ನ 2.00ಕ್ಕೆ: ಭೋಜನ

Leave a comment

Design a site like this with WordPress.com
Get started