

ಕೇದಾರೋತ್ಥಾನ ಟ್ರಸ್ಟ್ ಮೂಲಕ ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಸಹಯೋಗದೊಂದಿಗೆ ಅಂಬಲಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 20 ಎಕರೆ ಹಾಗೂ ಸ್ಥಳೀಯ ಕೃಷಿಕರ ಮೂಲಕ ಸುಮಾರು 15 ಎಕರೆ ಒಟ್ಟು 35 ಎಕರೆ ಹಡಿಲು ಭೂಮಿಯ ಕೃಷಿ ನಾಟಿ ಕಾರ್ಯ ಮುಕ್ತಾಯಗೊಂಡಿದೆ.
ಈ ನಿಟ್ಟಿನಲ್ಲಿ ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ನೇತೃತ್ವದಲ್ಲಿ ಕುಂಜಗುಡ್ಡೆ ಬೈಲಿನ ಸುಮಾರು 1 ಎಕರೆ ಗದ್ದೆಯಲ್ಲಿ ಕೈ ನೇಜಿ ನೆಡುವ ಕಾರ್ಯಕ್ರಮವು ಕುಂಜಗುಡ್ಡೆ ಫ್ರೆಂಡ್ಸ್ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ನಡೆಯಿತು.
ಶಾಸಕ ಕೆ.ರಘುಪತಿ ಭಟ್ ಜು.11ರಂದು ಅಂಬಲಪಾಡಿ ಗ್ರಾಮದ ಹಡಿಲು ಗದ್ದೆಗಳ ನೇಜಿ ನಾಟಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಬಳಿಕ ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ಕೆ.ರಾಘವೇಂದ್ರ ಕಿಣಿ, ಉಡುಪಿ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಸ್ಥಳೀಯ ಹಿರಿಯ ಕೃಷಿಕ ಸಂಜೀವ ಶೆಟ್ಟಿ, ಕುಂಜಗುಡ್ಡೆ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮೋತ್ಥಾನ ಸಮಿತಿಯ ಪದಾಧಿಕಾರಿಗಳು, ಕುಂಜಗುಡ್ಡೆ ಫ್ರೆಂಡ್ಸ್ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.