
ಅಶೋಕ ವೃಕ್ಷ ಕಂಕೇಲಿ ವಕುಳ ವೃಕ್ಷ ಅಸೋಗಂ ವಂಜುಲೇ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈ ವೃಕ್ಷಗಳು ಪಶ್ಚಿಮ ಘಟ್ಟ ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮಾತ್ರಕಾಣುತ್ತವೆ.ಔಷಧೀಯ ತಯಾರಿಕೆ ಘಟಕಗಳಿಂದ ಬಾರಿ ಬೇಡಿಕೆ ಏರ್ಪಟ್ಟು, ಅತಿ ಹೆಚ್ಚಿನ ಬಳಕೆಯಿಂದ ಈ ವೃಕ್ಷವು ಅವನತಿಯ ಅಂಚಿಗೆ ಬಂದು ತಲುಪಿದೆ.ಇದನ್ನು ಮನಗೊಂಡ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ,ಇತ್ತೀಚಿಗೆ ಉದ್ಯಾನವನಗಳಲ್ಲಿ ಅಲಂಕಾರಿಕ ವೃಕ್ಷವಾಗಿ ಬೆಳೆಸುವುದರ ಜೊತೆಗೆ ರಸ್ತೆಗಳ ಪಕ್ಕ ಸಾಲು ಮರಗಳಾಗಿಯೂ ಬೆಳೆಸುತ್ತಿದ್ದಾರೆ.ಈ ವೃಕ್ಷವು ಸುಮಾರು 25 ರಿಂದ 35 ಅಡಿ ಎತ್ತರ ಬೆಳೆಯುತ್ತದೆ.
ಅಶೋಕ ವೃಕ್ಷದ ಬಗ್ಗೆ ರಾಮಾಯಣ ಮಹಾಗ್ರಂಥದಲ್ಲೇ ಉಲ್ಲೇಖವಾಗಿರುವುದನ್ನು ನಾವು ನೋಡಬಹುದು.ಲಾಂಕಾಧಿಪತಿ ರಾವಣ, ಸೀತಾಮಾತೆಯನ್ನು ಕದ್ದು ಹೊತ್ತೊಯ್ದು ಅಶೋಕ ವನದಲ್ಲಿ ಇಟ್ಟಿದ್ದನೆಂದು ಪುರಾಣಗಳು ಹೇಳುತ್ತವೆ. ಈ ವೃಕ್ಷವು ಹಿಂದುಗಳಿಗೆ ಮಾತ್ರ ಪವಿತ್ರವಾದ ವೃಕ್ಷವಲ್ಲದೇ ಬೌಧ, ಜೈನ್ಯ ಧರ್ಮಿಯರೂ ಪೂಜನೀಯ ಭಾವದಿಂದ ನೋಡುತ್ತಾರೆ.
ಅನೇಕ ಪ್ರಾಂತ್ಯಗಳಲ್ಲಿ ಪ್ರೇಮಿಗಳು, ಅವರ ಪ್ರೀತಿ ಅಮರವಾಗಲೆಂದು ಈ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಮುಡುಪು ಕಟ್ಟಿ ಪೂಜಿಸುತ್ತಾರೆ.
ಪುರಾತನ ಕಾಲದಿಂದಲೂ ಅಶೋಕ ವೃಕ್ಷಕ್ಕೆ ಆಯುರ್ವೇದದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ.ಈ ವೃಕ್ಷದಲ್ಲಿ ಔಷಧಗಳ ಭಂಡಾರವೇ ತುಂಬಿದೆ.ಎಲೆ ಹೂ ಕಾಯಿ ತೊಗಟೆ ಬೇರು ಪಂಚಾಂಗ ಸಹಿತ ಔಷಧಿಯಾಗಿ ಉಪಯೋಗಿಸುತ್ತಾರೆ.ಅದರಲ್ಲೂ ಸ್ತ್ರೀಗೆ ಸಂಬಂಧಿಸಿದ ವ್ಯಾಧಿಗಳಿಗೆ ಬಹಳಷ್ಟು ವಿಶೇಷವಾಗಿ ಉಪಯೋಗಿಸುತ್ತಾರೆ.
ಅಶೋಕ ವೃಕ್ಷದ ತೊಗಟೆಯ ಕಷಾಯ ಸೇವನೆಯಿಂದ, ಅತಿಸಾರ ಭೇದಿ, ಆಂತರಿಕ ಗಡ್ಡೆ, ಹುಣ್ಣುಗಳು,ಮೂತ್ರನಾಳಕ್ಕೆ ಸಂಬಂಧಿಸಿದ ವ್ಯಾಧಿಗಳು ಗುಣವಾಗುತ್ತೆ.
ಒಂದು ಮಣ್ಣಿನ ಮಡಿಕೆಯಲ್ಲಿ 100 ಗ್ರಾಂ ಅಶೋಕ ವೃಕ್ಷದ ತೊಗಟೆಯನ್ನು ಹಾಕಿ, ಅದಕ್ಕೆ 1 ಲೀಟರ್ ನೀರನ್ನು ಹಾಕಿ,ಒಲೆಯಮೇಲಿಟ್ಟು ಮಂದದ ಹುರಿಯಲ್ಲಿ ಚೆನ್ನಾಗಿ ಕುದಿಸಿ,1/4 ಭಾಗವಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, 1 ಲೋಟ ಹಾಲಿನಲ್ಲಿ 50ml ನಂತೆ ಕಲಸಿ ಮುಟ್ಟಾದ ಸಮಯದಲ್ಲಿ, ಬೆಳಿಗ್ಗೆ ಸಂಜೆ ಕ್ರಮ ತಪ್ಪದೆ ಮುಟ್ಟು ನಿಲ್ಲುವವರಿಗೂ ತೆಗೆದುಕೊಂಡರೆ, ಅತಿ ಋತಸ್ರಾವ ಗುಣವಾಗುತ್ತೆ.ರಕ್ತ ಪ್ರದರ, ಶ್ವೇತ ಪ್ರದರ ಸಹಾ ವಾಸಿಯಾಗುತ್ತೆ.ಬೇಕಾದಲ್ಲಿ ಕಷಾಯ ಹಾಲಿನೊಡನೆ ಕಲ್ಲು ಸಕ್ಕರೆ ಉಪಯೋಗಿಸಬಹುದು.
ಇದೆ ರೀತಿಯಾಗಿ ಹೂವಿನಲ್ಲೂ ಕಷಾಯ ಮಾಡಿ ಸೇವಿಸಿಬಹುದು.ಹಾಲಿನ ಜೊತೆ ಅಥವಾ ಜೇನುತುಪ್ಪ
ದಲ್ಲಿ ತೆಗೆದುಕೊಳ್ಳಬಹುದು.
ಅಶೋಕ ವೃಕ್ಷದ ಎಲೆಗಳ ರಸ ಒಂದು ವಾರ, ಬೆಳಿಗ್ಗೆ ಸಂಜೆ 2 ಚಮಚದಂತೆ ಊಟಕ್ಕೆ ಮುಂಚೆ ಒಂದು ವಾರ ತೆಗೆದುಕೊಂಡರೆ, ಗರ್ಭಾಶಯದ ಸಮಸ್ಯೆಗಳು ದೂರವಾಗಿ, ಸಂತಾನ ಪ್ರಾಪ್ತಿಯಾಗುತ್ತೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಇದರ ತೊಗಟೆಗೆ ಅಪಾರ ಬೇಡಿಕೆಯಿದ್ದು, ಇದರಿಂದ ಅಶೋಕಾರಿಷ್ಠ, ಅಶೋಕ ಘ್ರುತಾ, ಅಶೋಕ ವಟಿ ಇನ್ನು ಮುಂತಾದ ಔಷಧಿಗಳನ್ನು ತಯಾರಿಸುತ್ತಾರೆ.
ಅಶೋಕ ವೃಕ್ಷದ ತೊಗಟೆ ಚೂರ್ಣ ಹಾಗೂ ಬೀಜದ ಚೂರ್ಣವನ್ನು ಸ್ತ್ರೀ ಜನನೇಂದ್ರಿಯ ಸಮಸ್ಯೆಗಳಿಗೆ ಉಪಯೋಗಿಸುವುದರಿಂದ ರಾಮಭಾಣದಂತೆ ಕೆಲಸ ಮಾಡುತ್ತೆ.
ಅತಿಸಾರ ಭೇದಿ ಹಾಗೂ ರಕ್ತ ಶುದ್ಧಿಗೆ ಎಲೆ, ಹೂ, ತೊಗಟೆ ಚೂರ್ಣವನ್ನು ಔಷಧಿಯಾಗಿ ಬಳಸುತ್ತಾರೆ.
ಅಶೋಕ ವೃಕ್ಷ ಬೀಜದ ಚೂರ್ಣವನ್ನು ಸೇವಿಸುವುದರಿಂದ ಮೂತ್ರ ಪಿಂಡದಲ್ಲಿನ ಕಲ್ಲು ಕರಗಿ, ಮೂತ್ರ ಸಂಬಂಧಿಸಿದ ವ್ಯಾಧಿಗಳು ಅತಿ ತ್ವರಿತವಾಗಿ ನಿವಾರಣೆಯಾಗುತ್ತವೆ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು